Home / ಕವನ / ಕವಿತೆ / ಒಂದು ಬೂದುಗುಂಬಳಕಾಯಿಯ ಮೇಲೆ ನಿಂತು

ಒಂದು ಬೂದುಗುಂಬಳಕಾಯಿಯ ಮೇಲೆ ನಿಂತು

ಒಂದು ಬೂದುಗುಂಬಳಕಾಯಿಯ ಮೇಲೆ ನಿಂತು ನೋಡಿದರೆ
ಈ ಲೋಕ ಎಷ್ಟು ವಿಚಿತ್ರ-ಆದರೆ ನಿಜವಾಗುತ್ತದೆ!
ಮೊದಲು ಏರುತಗ್ಗುಗಳು ಗೋಚರಿಸುತ್ತವೆ.  ಮತ್ತೆ
ದಿಗಂತಗಳು ಬಳುಕುತ್ತವೆ, ಆಯತಗಳು
ತ್ರಿಕೋಣಗಳಾಗುತ್ತವೆ, ವೃತ್ತಗಳಾಗುತ್ತವೆ.  ಯಾರೂ
ಇದು ತನಕ ಕಲ್ಪಿಸದ ವಿನ್ಯಾಸಗಳು ಕಾಣಿಸುತ್ತವೆ.

ಒಂದು ಬೂದುಗುಂಬಳಕಾಯಿಯ ಮೇಲೆ ನಿಂತು ನೋಡಿದರೆ
ಯಾಕೆ ವಾಮನ ಮಾಸ್ತರರು ತಮ್ಮಷ್ಟಕ್ಕೇ ಮಾತಾಡುತ್ತಾರೆ
ಎಂಬುದಕ್ಕೆ ಕಾರಣ ಸಿಗುತ್ತದೆ.  ನಳನಿಯ ನಾಚಿಕೆ
ಹೇಗೆ ಒಮ್ಮೆಲೆ ನಷ್ಟವಾಯಿತು ಎಂಬುದು ಗೊತ್ತಾಗುತ್ತದೆ.
ಮುಖ್ಯ, ತಾಲೂಕಾಪೀಸು ಯಾಕೆ ತಲೂಕಾಪೀಸಾಗಿದೆ
ಎಂಬುದು ಅರ್ಥವಾಗುತ್ತದೆ.

ಒಂದು ಬೂದುಗುಂಬಳಕಾಯಿಯ ಮೇಲೆ ನಿಂತು ನೋಡಿದರೆ
ಮನುಷ್ಯರು ಯಾಕೆ ಕಾರಣವಿಲ್ಲದೆ ಭಯಪಡುತ್ತಾರೆ
ಎಂಬುದು ತಿಳಿಯುತ್ತದೆ.  ಯಾವಾಗಲೂ ಕಾಲಮೇಲೇ
ನಡೆಯುವವರು ಕೆಳಗಿನಿಂದ ಮೇಲೆ ನೋಡಲಾರರು.
ಯಾವಾಗಲೂ ಮುಂದೆ ನೋಡುವವರು ಹಿಂದೆ ಕಾಣಲಾರರು.  ಹೀಗಿದ್ದೂ
ಒಪ್ಪಿಕೊಳ್ಳದವರನ್ನು ಇಲ್ಲಿ ತಂದು ನಿಲ್ಲಿಸಿ!

ಒಂದು ಬೂದುಗುಂಬಳಕಾಯಿಯ ಮೇಲೆ ನಿಂತು ನೋಡುವುದೆಂದರೆ
ನಾವು ನಮ್ಮನ್ನು ನಿಜವಾದ ಸಂದರ್ಭದಲ್ಲಿ ನಿಲ್ಲಿಸಿದಂತೆ,
ತಕ್ಷಣ ಗುರುತಿಸಿದಂತೆ.  ಒಂದು ಬೂದುಗುಂಬಳಕಾಯಿಯ ಮೇಲೆ
ನಿಲ್ಲದಿದ್ದರು ಕೂಡ ನಿಮಗೆ ಹಾಗೆನಿಸುತ್ತಿದ್ದರೆ
ಕಾರಣ ಇಷ್ಟೆ:  ಈ ಭೂಮಿಯ ಕೆಳಗೆ ನಿಜಕ್ಕೂ
ಒಂದು ದೊಡ್ಡ ಬೂದುಗುಂಬಳಕಾಯಿ ಇದೆ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...