ಹಿಮ್ಮಾಗಿಯ ಮಾಂದಳಿರು

ರಾಜ್ಯನೀಗಿ ಪಲಿತ ಮಾಗಿ
ನಡೆದ ವಾನಪ್ರಸ್ಥನಾಗಿ;
ಹೇಽಮಂತ ತಪಸ್ಸಾರ
ಚೈತ್ರ ಗಾದಿಗಿನ್ನೂ ಬಾರ;
ಅಂಥ ಸಂಽದಿಗ್ಧ ಸಮಯ.
ಆಳ್ವರಿಲ್ಲದಿಳೆಯ ಪರಿಯ-
ನೆಂತು ಪೇಳ್ವೆ? ಬಾನೊ ಬಯಲು,
ಶಿಶಿರಶರಣವಾದ ನೆಳಲು,
ದಹನನಿಪುಣ ಕಠಿನತಪನ,
ನೀರಸತರು ನಿಬಿಡ ವಿಪಿನ,
ಹಸುರ ಹೆಸರ ಕಾಣದಿರುವ
ನೆಲವು, ಕಜ್ಜವಿಲ್ಲದಲೆವ
ಅಲಸ ತುಂಟ ಬಂಟ ಗಾಳಿ-
ಇಂತಿಳೆ ನಿರ್ವೇದ ತಾಳಿ
ಒಂದು ಬೇನೆಯೊಳಗಿರಲ್ಕೆ;
ಅಚರಜೀವ ಸೇರಿರಲ್ಕೆ
ನಿದ್ದೆ ಚಿಪ್ಪ; ತೋಪಿನೊಳಗೆ,
ರಸವಿಹೀನ ಮಾವಿನೊಳಗೆ-
ಮಧುವಿನೊಲುಮೆಗನಸು ಸುಳಿದು
ಮರದ ಜಾಡ್ಯವನ್ನು ತಿವಿದು
ತನ್ನ ಹಾಸವೊಂದನಿಳಿಸಿ
ಮಾಯವಾದ ಪರಿಯ ನೆನೆಸಿ-
ತರಳ ತಳಿರ ಗೊಂಚಲೊಂದು,
ಒಂಟಿಯಾಗಿ, ನೋಡಲೊಂದು
ಚೋದ್ಯವಾಗಿ, ಕುಣಿಯುತಿತ್ತು.
ನೋಟ ಕಟ್ಟಿತೆನ್ನನು.

ಇಂತಾ ಜಡಲೋಕದಲ್ಲಿ,
ಸುಸ್ಥಿರ ಚಿರ ಶೂನ್ಯದಲ್ಲಿ,
ತನ್ನ ಹರುಷವೊಂದನರಿತು,
ಸುತ್ತಣಂದಿನಿರವ ಮರೆತು,
ದಿಟ್ಟ ಮುಗುದ ಮಗುವಿನಂತೆ
ಭಯದ ಲೇಶವಿಲ್ಲದಂತೆ,
ವನದ ನೀರಸತ್ವ ಹರಿವ
ತೀರ ಮುನ್ನ ಎದ್ದು ನಲಿವ
ತಳಿರ ತೊಂಗಲನ್ನು ನೋಡಿ
ಮನದೊಳೊಗೆದ ಭಾವಮೋಡಿ-
ಗಿಂತು ನಾನು ರೂಪುಗೊಟ್ಟು
ನುಡಿದೆ: “ಆವ ಪಂಥ ತೊಟ್ಟು,
ಕಿಸಲಯ ಶಿಶು, ಜನ್ಮವಡೆದೆ?
ಆರ ಆಣೆಯಿಂದ ಚಿಗಿದೆ?
ಆವ ಶಿವದ ಬೇಹುಗಾರ?
ಆವ ಕಣಸಿನೋಲೆಕಾರ?
ಆವ ಜೋಯಿಸವನು ಜಗದಿ
ಸಾರ ಬಂದೆ ನೀನು ಜವದಿ?
ಸುತ್ತ ಶೂನ್ಯ ಕಾಣದೇನು?
ಶ್ರಾಂತಮೌನ ಕೇಳದೇನು?
ಇಂಥ ತಮದ ಹೊರಳಿಯಲ್ಲಿ
ಎದ್ದು ಮುದ್ದು ನಗೆಯ ಚೆಲ್ಲಿ
ನವೋದಯದ ಕಣಿಯ ನೀನು
ಸಾರೆ ವ್ಯರ್ಥವಾಗದೇನು?
ಜೋಕೆ, ಜೋಕೆ, ಚೂತಡಿಂಭ,
ನಿನ್ನ ಕಂಡರಯ್ಯೊ ಎಂಬ
ಒಬ್ಬ ಕೂಡ ಇಲ್ಲದಿಂದು
ನೀನು ನನ್ನಿ ಬೆಳಕ ತಂದು
ತಮವ ಕೆಣಕೆ ಮುಳಿವುದೇನೊ?
ನಿನ್ನ ತುತ್ತುಗೊಂಬುದೇನೊ
ವನದ ನೀರಸತ್ವ?- ಜೋಕೆ!”
ಎಂದು ಮಡಿದೊಂದು ಭಯಕೆ
ನುಡಿಯ ನೀಡಿ ನಡೆದೆನು.

ಮರುದಿನ ನಾ ತೋಪಿನೊಳಗೆ
ಹೋಗುತಿರಲು, ಮರದ ಕಡೆಗೆ
ದೃಷ್ಟಿ ಹೊರಳೆ, ಚಕಿತನಾಗಿ
ಕಂಡೆ, ಸುರುವ ಸುಂಡಿ ಹೋಗಿ
ಜೋಲು ಬಿದ್ದ ಮಾಂಽದಳಿರ.
ಹುಟ್ಟೆ, ಅರಿಯದಿದ್ದ ಸ್ಥವಿರ
ಮಾವು, ಕಂದನಳಿವನರಿತು
ಕೊರಗುವಂತೆ ತೋರುತಿತ್ತು.
ಬಂಜೆಬಾಳೆ ತನಗೆ ನಿಯತಿ-
ನಿಯಮವೆಂದು ಇದ್ದ ಪ್ರಕೃತಿ
ಇಂದು ಸತ್ವವರಿತ ಕುತ್ತು
ವನದೊಳೆದ್ದು ಕಾಣುತಿತ್ತು.
ಅರಿತ ಶೂನ್ಯ ಮರೆತ ಶೂನ್ಯ-
ಕಿಂತ ಹೆಚ್ಚು ಭೀಮಶೂನ್ಯ-
ವಾಗಿ ಭಯವ ಬೀರುತಿತ್ತು.
ನನ್ನಿತೋರೆ ತನುವ ತೆತ್ತು
ತಾರಿ ಆರಿಹೋದ ಚಿಗುರ
ಕಂಡು ನಾನು, ದುಗುಡ ಹಗುರ-
ವಾಗಲೊಂದು ಬಗೆಯ ನಗೆಯ
ನಕ್ಕು- ಭಾವವೇನೊ ಅರಿಯ-
ಲಾರೆ; ಶಕುನ ಫಲಿಸಿತೆಂದೊ,
ನಿಯತಿ ನೀತಿ ಇಂತೆ ಎಂದೊ,
ಇಂಥ ಅಳಲ ನುಡಿಯೆ ನಗೆಯೆ
ತಕ್ಕುದೆಂದೊ, ಏನೊ ಅರಿಯೆ-
ಅಂತು ನಕ್ಕು, ತಳಿರಿಗೊಂದು
ಚರಮಗೀತ ಹಾಡಲೆಂದು
ಬಯಸಿ, ಇಂತು ನುಡಿದೆ ನಾನು:

“ಹೇಽ ಮುಕ್ತ ಚೂತಸೂನು,
ಅರಿವುಗೆಟ್ಟು ಭ್ರಾಂತವಾದ,
ಕರಣವುಡುಗಿ ಶ್ರಾಂತವಾದ
ಉದಾಸೀನ ಲೋಕದಲ್ಲಿ,
ನೀರಸತ್ವದುಲ್ಬದಲ್ಲಿ
ಮಧುವು ರೂಪುಗೊಂಬ ಶುಭದ,
ನವೋದಯವು ಬೆಳೆವ ಶಿವದ,
ಸುದ್ದಿ ಸಾರೆ ತುಡಿದುಕೊಂಡು,
ಸುಪ್ತವನದಿ ಜನುಮಗೊಂಡು-

“ವಿಷಯ ಸುಖದ ಅಮಲಿನಲ್ಲೊ,
ಮುದದ ನೆಳಲ ಬೇಟೆಯಲ್ಲೊ,
ಭವದಿ ತೊಳಲಿದಳಲಿನಲ್ಲೊ,
ಅಜ್ಞಾನದ ಜಾಡ್ಯದಲ್ಲೊ,
ಬಳಲಿ ಕೆಡೆದ ಲೋಕದೊಳಗೆ –
ತಾನು ಕಂಡ ಶಿವದ ನೆಲೆಗೆ
ಪ್ರಗತಿರಥವನೆಳೆಯೆ ತುಡಿದು
ತ್ಯಾಗ ತಪದ ಹಗ್ಗ ಹಿಡಿದು
ಭೇರಿ ಹೊಡೆದು ನಿಲ್ಲುವ ಧೀರ
ಕರ್ಮಶೂರ ಕಣಸುಗಾರ
ಆತ್ಮವಂತ ಯೋಗಿಯಂತೆ,
ತಪೋವಂತ ಚಾಗಿಯಂತೆ –

“ದೂರ ದೂರ ದೂರದಲ್ಲಿ
ಪುಣ್ಯಲಬ್ಧ ದೃಷ್ಟಿಯಲ್ಲಿ
ಕಂಡ ಕಣಸ, ಮಂದಿ ಮುಂದು-
ವರಿದು ಕಾಂಬ ಮುನ್ನ, `ಇಂದು
ಭಾವಗೀತಗಳಲಿ ಹಾಡಿ
ತೋರ್ಪೆ’ನೆಂದು ಪಂಥ ಹೂಡಿ
ಭಾವಸೋಮಮತ್ತನಾಗಿ
ಬರುವ ಕವಿಗೆ ಸಾಟಿಯಾಗಿ-

“ದ್ವೇಷ ರಾಗ ರತಿಯ ನೆರೆಯ,
ಅಹಂಕಾರಕೆಸರ ಹೊರೆಯ
ಬಾಳಹೊನಲ ಸನಿಯಕಂದು
ಹಾದಿಕಾರನಾಗಿ ಬಂದು,
ತನ್ನ ತೃಷೆಯ ತಣಿಸೆ ಬಯಸಿ,
ಕೆಸರ ಕಂಡು ಕುಡಿಯ ಹೇಸಿ,
‘ಹೊನಲು ತಿಳಿದ ಮೇಲೆ ಬರುವ’
ಎಂದು ದೇವ ದಾಟಿ ನಡೆವ
ಒಂದು ಗಳಿಗೆಯೊಳಗೆ ಜಲದಿ
ಸುಳಿವ ಅವನ ನೆಳಲ ತೆರದಿ-

“ಎನ್ನ ಅರಿವ ಬಯಲಿನೊಳಗೆ
ಭಯದ ಕಾರಮುಗಿಲು ಮಸಗೆ,
ಆಸೆ ಪವನ ಬೀಸುತಿರಲು,
ಮುದದ ವಿಂಚು ಮಿಂಚುತಿರಲು,
ಅಳಲ ಗುಡುಗು ಗುಡುಗುತಿರಲು,
ಕ್ರಾಂತಿ ಶಾಂತಿಯಪ್ಪ ಮೊದಲು,
ನನ್ನ ಕವಿಯು ಹುಚ್ಚನಂತೆ
ತರುವ ಭಾವದೀಪದಂತೆ-

“ನೀರಸಾಮ್ರವನದ ಕವಿಯೆ,
ಸುಗ್ಗಿಬಿಂಬ, ಚೈತ್ರಶಿಖಿಯೆ,
ಒಂದು ಗಳಿಗೆ ಮೌನದಲ್ಲಿ
ಹಾಡುಗರೆದು, ತಿಮಿರದಲ್ಲಿ
ಬೆಳಕ ಸುಳಿಸಿ, ಶೂನ್ಯದಲ್ಲಿ
ಸುಗ್ಗಿ ಚಾಯೆ ತೋರಿ- ಇಲ್ಲಿ
ಕೊನೆಗೆ ನೊಂದು ನಂದಿಹೋದೆ,
ತಾರಿ ಆರಿ ಮಾಯವಾದೆ.
ಹೇ ರಸಾಲತರುಕಿಶೋರ,
ನನ್ನಿ ಕಾರ, ಕರ್ಮವೀರ,
ಇಂದು ನಿನ್ನ ಭೇರಿ ಹೊಳಲ
ಮುಂದೆ ಕೇಳಿ, ನಿದ್ದೆ ಇರುಳ
ಮುಸುಕನೊಗೆದು, ಜಾಡ್ಯ ಸಿಗಿದು,
ನಿನ್ನ ಗುಡಿಯನೆತ್ತಿ ಹಿಡಿದು,
ನೀನು ಕಂಡ ಕಣಸ ಕಂಡು,
ನಿನ್ನ ಹಾಡ ಹಾಡಿಕೊಂಡು,
ನವೋದಯದ ಜಯಕೆ ನಡೆವ
ವನವೆ ಇಂದು ನಿನ್ನ ಅಳಿವ
ತನ್ನ ಜಾಡ್ಯ ಮೌಢ್ಯದೊಳಗೆ
ಸಾಧಿಸಿಹುದು-ಗೊತ್ತು ನನಗೆ.
ಆದರೇನು,
ಆಮ್ರಸೂನು,
ನಿನ್ನ ಬಾಳು ಸಾರ್ಥ ಬಾಳು,
ಸಾವು ಬದುಕಿಗಿಂತ ಮೇಲು.
ನಿನ್ನ ಹುಟ್ಟಿನಿಂದ ವನದ
ಬಂಜೆಬಾಳು ಬೆಸಲೆಯಾಯ್ತು;
ನಿನ್ನ ಸಾವಿನಿಂದ ಜಗದ
ಮಾಗಿ ಸೆರೆಯು ಸಡಿಲವಾಯ್ತು;
ಇಂದು ನೀನು ಕೆಡೆದ ಇರುಳೆ
ಸುಪ್ತವನದ ಉದಯವಾಯ್ತು;
ಇಂದು ಬಿಗಿದ ನಿನ್ನ ಕೊರಳೆ
ನವೋದಯದ ಕಹಳೆಯಾಯ್ತು.
ಸೋತು ಗೆದ್ದ ಧೀರ ನೀನು!
ಸತ್ತು ಬದುಕಿದಮರ ನೀನು!
ಧನ್ಯ ನೀನು,
ಮಾನ್ಯ ನೀನು!”-

ಎಂದಾ ಜಡಲೋಕದಲ್ಲಿ
ಜಾಡ್ಯದೊಡನೆ ಸೆಣಸಿ ಹೋದ,
ಸುಸ್ಥಿರ ಚಿರ ಶೂನ್ಯದಲ್ಲಿ
ನಚ್ಚನೂಡಿ ನಂದಿಹೋದ,
ತಳಿರ ತೊಂಗಲನ್ನು ನೋಡಿ,
ಮನದೊಳೊಗೆದ ಭಾವ ಮೋಡಿ-
ಗಿಂತು ನಾನು ನುಡಿಯ ನೀಡಿ,
ಚರಮಗೀತವೊಂದ ಹಾಡಿ,

ಮನೆಗೆ ನಡೆದೆ ಮೆಲ್ಲನೆ-
ಮನದಿ ಮರುಗಿ ಮಣ್ಣನೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಸುಮಗಳಽ ನೀಲಮ್ಮ
Next post ಕ್ಷಮಾಗುಣ

ಸಣ್ಣ ಕತೆ

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

cheap jordans|wholesale air max|wholesale jordans|wholesale jewelry|wholesale jerseys