Home / ಕವನ / ಕವಿತೆ / ಹಿಮ್ಮಾಗಿಯ ಮಾಂದಳಿರು

ಹಿಮ್ಮಾಗಿಯ ಮಾಂದಳಿರು

ರಾಜ್ಯನೀಗಿ ಪಲಿತ ಮಾಗಿ
ನಡೆದ ವಾನಪ್ರಸ್ಥನಾಗಿ;
ಹೇಽಮಂತ ತಪಸ್ಸಾರ
ಚೈತ್ರ ಗಾದಿಗಿನ್ನೂ ಬಾರ;
ಅಂಥ ಸಂಽದಿಗ್ಧ ಸಮಯ.
ಆಳ್ವರಿಲ್ಲದಿಳೆಯ ಪರಿಯ-
ನೆಂತು ಪೇಳ್ವೆ? ಬಾನೊ ಬಯಲು,
ಶಿಶಿರಶರಣವಾದ ನೆಳಲು,
ದಹನನಿಪುಣ ಕಠಿನತಪನ,
ನೀರಸತರು ನಿಬಿಡ ವಿಪಿನ,
ಹಸುರ ಹೆಸರ ಕಾಣದಿರುವ
ನೆಲವು, ಕಜ್ಜವಿಲ್ಲದಲೆವ
ಅಲಸ ತುಂಟ ಬಂಟ ಗಾಳಿ-
ಇಂತಿಳೆ ನಿರ್ವೇದ ತಾಳಿ
ಒಂದು ಬೇನೆಯೊಳಗಿರಲ್ಕೆ;
ಅಚರಜೀವ ಸೇರಿರಲ್ಕೆ
ನಿದ್ದೆ ಚಿಪ್ಪ; ತೋಪಿನೊಳಗೆ,
ರಸವಿಹೀನ ಮಾವಿನೊಳಗೆ-
ಮಧುವಿನೊಲುಮೆಗನಸು ಸುಳಿದು
ಮರದ ಜಾಡ್ಯವನ್ನು ತಿವಿದು
ತನ್ನ ಹಾಸವೊಂದನಿಳಿಸಿ
ಮಾಯವಾದ ಪರಿಯ ನೆನೆಸಿ-
ತರಳ ತಳಿರ ಗೊಂಚಲೊಂದು,
ಒಂಟಿಯಾಗಿ, ನೋಡಲೊಂದು
ಚೋದ್ಯವಾಗಿ, ಕುಣಿಯುತಿತ್ತು.
ನೋಟ ಕಟ್ಟಿತೆನ್ನನು.

ಇಂತಾ ಜಡಲೋಕದಲ್ಲಿ,
ಸುಸ್ಥಿರ ಚಿರ ಶೂನ್ಯದಲ್ಲಿ,
ತನ್ನ ಹರುಷವೊಂದನರಿತು,
ಸುತ್ತಣಂದಿನಿರವ ಮರೆತು,
ದಿಟ್ಟ ಮುಗುದ ಮಗುವಿನಂತೆ
ಭಯದ ಲೇಶವಿಲ್ಲದಂತೆ,
ವನದ ನೀರಸತ್ವ ಹರಿವ
ತೀರ ಮುನ್ನ ಎದ್ದು ನಲಿವ
ತಳಿರ ತೊಂಗಲನ್ನು ನೋಡಿ
ಮನದೊಳೊಗೆದ ಭಾವಮೋಡಿ-
ಗಿಂತು ನಾನು ರೂಪುಗೊಟ್ಟು
ನುಡಿದೆ: “ಆವ ಪಂಥ ತೊಟ್ಟು,
ಕಿಸಲಯ ಶಿಶು, ಜನ್ಮವಡೆದೆ?
ಆರ ಆಣೆಯಿಂದ ಚಿಗಿದೆ?
ಆವ ಶಿವದ ಬೇಹುಗಾರ?
ಆವ ಕಣಸಿನೋಲೆಕಾರ?
ಆವ ಜೋಯಿಸವನು ಜಗದಿ
ಸಾರ ಬಂದೆ ನೀನು ಜವದಿ?
ಸುತ್ತ ಶೂನ್ಯ ಕಾಣದೇನು?
ಶ್ರಾಂತಮೌನ ಕೇಳದೇನು?
ಇಂಥ ತಮದ ಹೊರಳಿಯಲ್ಲಿ
ಎದ್ದು ಮುದ್ದು ನಗೆಯ ಚೆಲ್ಲಿ
ನವೋದಯದ ಕಣಿಯ ನೀನು
ಸಾರೆ ವ್ಯರ್ಥವಾಗದೇನು?
ಜೋಕೆ, ಜೋಕೆ, ಚೂತಡಿಂಭ,
ನಿನ್ನ ಕಂಡರಯ್ಯೊ ಎಂಬ
ಒಬ್ಬ ಕೂಡ ಇಲ್ಲದಿಂದು
ನೀನು ನನ್ನಿ ಬೆಳಕ ತಂದು
ತಮವ ಕೆಣಕೆ ಮುಳಿವುದೇನೊ?
ನಿನ್ನ ತುತ್ತುಗೊಂಬುದೇನೊ
ವನದ ನೀರಸತ್ವ?- ಜೋಕೆ!”
ಎಂದು ಮಡಿದೊಂದು ಭಯಕೆ
ನುಡಿಯ ನೀಡಿ ನಡೆದೆನು.

ಮರುದಿನ ನಾ ತೋಪಿನೊಳಗೆ
ಹೋಗುತಿರಲು, ಮರದ ಕಡೆಗೆ
ದೃಷ್ಟಿ ಹೊರಳೆ, ಚಕಿತನಾಗಿ
ಕಂಡೆ, ಸುರುವ ಸುಂಡಿ ಹೋಗಿ
ಜೋಲು ಬಿದ್ದ ಮಾಂಽದಳಿರ.
ಹುಟ್ಟೆ, ಅರಿಯದಿದ್ದ ಸ್ಥವಿರ
ಮಾವು, ಕಂದನಳಿವನರಿತು
ಕೊರಗುವಂತೆ ತೋರುತಿತ್ತು.
ಬಂಜೆಬಾಳೆ ತನಗೆ ನಿಯತಿ-
ನಿಯಮವೆಂದು ಇದ್ದ ಪ್ರಕೃತಿ
ಇಂದು ಸತ್ವವರಿತ ಕುತ್ತು
ವನದೊಳೆದ್ದು ಕಾಣುತಿತ್ತು.
ಅರಿತ ಶೂನ್ಯ ಮರೆತ ಶೂನ್ಯ-
ಕಿಂತ ಹೆಚ್ಚು ಭೀಮಶೂನ್ಯ-
ವಾಗಿ ಭಯವ ಬೀರುತಿತ್ತು.
ನನ್ನಿತೋರೆ ತನುವ ತೆತ್ತು
ತಾರಿ ಆರಿಹೋದ ಚಿಗುರ
ಕಂಡು ನಾನು, ದುಗುಡ ಹಗುರ-
ವಾಗಲೊಂದು ಬಗೆಯ ನಗೆಯ
ನಕ್ಕು- ಭಾವವೇನೊ ಅರಿಯ-
ಲಾರೆ; ಶಕುನ ಫಲಿಸಿತೆಂದೊ,
ನಿಯತಿ ನೀತಿ ಇಂತೆ ಎಂದೊ,
ಇಂಥ ಅಳಲ ನುಡಿಯೆ ನಗೆಯೆ
ತಕ್ಕುದೆಂದೊ, ಏನೊ ಅರಿಯೆ-
ಅಂತು ನಕ್ಕು, ತಳಿರಿಗೊಂದು
ಚರಮಗೀತ ಹಾಡಲೆಂದು
ಬಯಸಿ, ಇಂತು ನುಡಿದೆ ನಾನು:

“ಹೇಽ ಮುಕ್ತ ಚೂತಸೂನು,
ಅರಿವುಗೆಟ್ಟು ಭ್ರಾಂತವಾದ,
ಕರಣವುಡುಗಿ ಶ್ರಾಂತವಾದ
ಉದಾಸೀನ ಲೋಕದಲ್ಲಿ,
ನೀರಸತ್ವದುಲ್ಬದಲ್ಲಿ
ಮಧುವು ರೂಪುಗೊಂಬ ಶುಭದ,
ನವೋದಯವು ಬೆಳೆವ ಶಿವದ,
ಸುದ್ದಿ ಸಾರೆ ತುಡಿದುಕೊಂಡು,
ಸುಪ್ತವನದಿ ಜನುಮಗೊಂಡು-

“ವಿಷಯ ಸುಖದ ಅಮಲಿನಲ್ಲೊ,
ಮುದದ ನೆಳಲ ಬೇಟೆಯಲ್ಲೊ,
ಭವದಿ ತೊಳಲಿದಳಲಿನಲ್ಲೊ,
ಅಜ್ಞಾನದ ಜಾಡ್ಯದಲ್ಲೊ,
ಬಳಲಿ ಕೆಡೆದ ಲೋಕದೊಳಗೆ –
ತಾನು ಕಂಡ ಶಿವದ ನೆಲೆಗೆ
ಪ್ರಗತಿರಥವನೆಳೆಯೆ ತುಡಿದು
ತ್ಯಾಗ ತಪದ ಹಗ್ಗ ಹಿಡಿದು
ಭೇರಿ ಹೊಡೆದು ನಿಲ್ಲುವ ಧೀರ
ಕರ್ಮಶೂರ ಕಣಸುಗಾರ
ಆತ್ಮವಂತ ಯೋಗಿಯಂತೆ,
ತಪೋವಂತ ಚಾಗಿಯಂತೆ –

“ದೂರ ದೂರ ದೂರದಲ್ಲಿ
ಪುಣ್ಯಲಬ್ಧ ದೃಷ್ಟಿಯಲ್ಲಿ
ಕಂಡ ಕಣಸ, ಮಂದಿ ಮುಂದು-
ವರಿದು ಕಾಂಬ ಮುನ್ನ, `ಇಂದು
ಭಾವಗೀತಗಳಲಿ ಹಾಡಿ
ತೋರ್ಪೆ’ನೆಂದು ಪಂಥ ಹೂಡಿ
ಭಾವಸೋಮಮತ್ತನಾಗಿ
ಬರುವ ಕವಿಗೆ ಸಾಟಿಯಾಗಿ-

“ದ್ವೇಷ ರಾಗ ರತಿಯ ನೆರೆಯ,
ಅಹಂಕಾರಕೆಸರ ಹೊರೆಯ
ಬಾಳಹೊನಲ ಸನಿಯಕಂದು
ಹಾದಿಕಾರನಾಗಿ ಬಂದು,
ತನ್ನ ತೃಷೆಯ ತಣಿಸೆ ಬಯಸಿ,
ಕೆಸರ ಕಂಡು ಕುಡಿಯ ಹೇಸಿ,
‘ಹೊನಲು ತಿಳಿದ ಮೇಲೆ ಬರುವ’
ಎಂದು ದೇವ ದಾಟಿ ನಡೆವ
ಒಂದು ಗಳಿಗೆಯೊಳಗೆ ಜಲದಿ
ಸುಳಿವ ಅವನ ನೆಳಲ ತೆರದಿ-

“ಎನ್ನ ಅರಿವ ಬಯಲಿನೊಳಗೆ
ಭಯದ ಕಾರಮುಗಿಲು ಮಸಗೆ,
ಆಸೆ ಪವನ ಬೀಸುತಿರಲು,
ಮುದದ ವಿಂಚು ಮಿಂಚುತಿರಲು,
ಅಳಲ ಗುಡುಗು ಗುಡುಗುತಿರಲು,
ಕ್ರಾಂತಿ ಶಾಂತಿಯಪ್ಪ ಮೊದಲು,
ನನ್ನ ಕವಿಯು ಹುಚ್ಚನಂತೆ
ತರುವ ಭಾವದೀಪದಂತೆ-

“ನೀರಸಾಮ್ರವನದ ಕವಿಯೆ,
ಸುಗ್ಗಿಬಿಂಬ, ಚೈತ್ರಶಿಖಿಯೆ,
ಒಂದು ಗಳಿಗೆ ಮೌನದಲ್ಲಿ
ಹಾಡುಗರೆದು, ತಿಮಿರದಲ್ಲಿ
ಬೆಳಕ ಸುಳಿಸಿ, ಶೂನ್ಯದಲ್ಲಿ
ಸುಗ್ಗಿ ಚಾಯೆ ತೋರಿ- ಇಲ್ಲಿ
ಕೊನೆಗೆ ನೊಂದು ನಂದಿಹೋದೆ,
ತಾರಿ ಆರಿ ಮಾಯವಾದೆ.
ಹೇ ರಸಾಲತರುಕಿಶೋರ,
ನನ್ನಿ ಕಾರ, ಕರ್ಮವೀರ,
ಇಂದು ನಿನ್ನ ಭೇರಿ ಹೊಳಲ
ಮುಂದೆ ಕೇಳಿ, ನಿದ್ದೆ ಇರುಳ
ಮುಸುಕನೊಗೆದು, ಜಾಡ್ಯ ಸಿಗಿದು,
ನಿನ್ನ ಗುಡಿಯನೆತ್ತಿ ಹಿಡಿದು,
ನೀನು ಕಂಡ ಕಣಸ ಕಂಡು,
ನಿನ್ನ ಹಾಡ ಹಾಡಿಕೊಂಡು,
ನವೋದಯದ ಜಯಕೆ ನಡೆವ
ವನವೆ ಇಂದು ನಿನ್ನ ಅಳಿವ
ತನ್ನ ಜಾಡ್ಯ ಮೌಢ್ಯದೊಳಗೆ
ಸಾಧಿಸಿಹುದು-ಗೊತ್ತು ನನಗೆ.
ಆದರೇನು,
ಆಮ್ರಸೂನು,
ನಿನ್ನ ಬಾಳು ಸಾರ್ಥ ಬಾಳು,
ಸಾವು ಬದುಕಿಗಿಂತ ಮೇಲು.
ನಿನ್ನ ಹುಟ್ಟಿನಿಂದ ವನದ
ಬಂಜೆಬಾಳು ಬೆಸಲೆಯಾಯ್ತು;
ನಿನ್ನ ಸಾವಿನಿಂದ ಜಗದ
ಮಾಗಿ ಸೆರೆಯು ಸಡಿಲವಾಯ್ತು;
ಇಂದು ನೀನು ಕೆಡೆದ ಇರುಳೆ
ಸುಪ್ತವನದ ಉದಯವಾಯ್ತು;
ಇಂದು ಬಿಗಿದ ನಿನ್ನ ಕೊರಳೆ
ನವೋದಯದ ಕಹಳೆಯಾಯ್ತು.
ಸೋತು ಗೆದ್ದ ಧೀರ ನೀನು!
ಸತ್ತು ಬದುಕಿದಮರ ನೀನು!
ಧನ್ಯ ನೀನು,
ಮಾನ್ಯ ನೀನು!”-

ಎಂದಾ ಜಡಲೋಕದಲ್ಲಿ
ಜಾಡ್ಯದೊಡನೆ ಸೆಣಸಿ ಹೋದ,
ಸುಸ್ಥಿರ ಚಿರ ಶೂನ್ಯದಲ್ಲಿ
ನಚ್ಚನೂಡಿ ನಂದಿಹೋದ,
ತಳಿರ ತೊಂಗಲನ್ನು ನೋಡಿ,
ಮನದೊಳೊಗೆದ ಭಾವ ಮೋಡಿ-
ಗಿಂತು ನಾನು ನುಡಿಯ ನೀಡಿ,
ಚರಮಗೀತವೊಂದ ಹಾಡಿ,

ಮನೆಗೆ ನಡೆದೆ ಮೆಲ್ಲನೆ-
ಮನದಿ ಮರುಗಿ ಮಣ್ಣನೆ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...