Home / ಲೇಖನ / ಇತರೆ / ದುರ್ಗಗಳೇ!

ದುರ್ಗಗಳೇ!

ನಿಮ್ಮನ್ನು ನೋಡಿ ಕನಿಕರ ಬರುತ್ತದೆ. ಮುನ್ನೂರು ವರ್ಷಗಳಾಚೆಗೆ ಯಾರಾದರೂ ಬಂದು ಮುಂದೆ ನಿಮ್ಮ ಅವಸ್ಥೆ ಹೀಗಾಗುವದೆಂದು ಹೇಳಿದ್ದರೆ ನೀವು ನಂಬುತ್ತಿದ್ದಿರೋ? ನೀವೇ ಏಕೆ ಈ ಭವಿಷ್ಯವನ್ನು ಆ ಕಾಲದ ಮಹಾ ಮಹಾ ಮೇಧಾವಿಗಳು ಸಹ ನಂಬುತ್ತಿದ್ದಿಲ್ಲ.

ನಿಮ್ಮ ಸುತ್ತಲಿನ ಯಾವ ಕೊಳ್ಳಗಳಲ್ಲಿ ಜೀವದ ಪರಿವೆಯಿಲ್ಲದೆ ಹೋರಾಡುವ ವೀರರ ರಣಘೋಷವು ಒಂದು ಕಾಲಕ್ಕೆ ತುಂಬುತ್ತಿತ್ತೋ ಅದೇ ಕೊಳ್ಳಗಳಲ್ಲಿ ವನ್ಯಪಶುಗಳ ಚೀರಾಟದ ಹೊರ್ತು ಮತ್ತೇನೂ ಕೇಳಿಸುವದಿಲ್ಲ. ಯಾವ ಹಾದಿಗಳಲ್ಲಿ ಕುದುರೆ ಆನೆ ಪಲ್ಲಕ್ಕಿಗಳ ಸಾಲು ಹತ್ತುತ್ತಿತ್ತೋ ಆ ಹಾದಿಗಳ ಮೇಲೆ ಈಗ ಹುಲ್ಲು ಬೆಳೆದು ಅವು ನಾಮಶೇಷ ಆಗಿರುವವು. ಗುಡ್ಡದೋರೆಯಲ್ಲಿಯ ಹಳ್ಳಿಗಳಂತೂ ನೋಡಲಿಕ್ಕೇ ಬೇಡ. ಯಾವ ಹಳ್ಳಿಗಳಲ್ಲಿಯ ಪ್ರತಿಯೊಬ್ಬ ತರುಣನು ತಾನು ಸೂರ್ಯಾಜೀ ತಾನಾಜೀ ಅಥವಾ ಪ್ರತ್ಯಕ್ಷ ಶಿವಾಜಿಯಂತೆ ಶೂರನಾಗಿ ಮೆರೆಯಬಹುದೆಂದು ಆಕಾಂಕ್ಷೆ ಪಡುತ್ತಿದ್ದನೋ ಆದೇ ಹಳ್ಳಿಗಳಲ್ಲಿ ಹ್ಯಾಗಾದರೂ ದಿವಸ ಹಾಕುತ್ತ ಮರಣದ ಮಾರ್ಗ ಪ್ರತೀಕ್ಷೆ ಮಾಡುವ ಒಕ್ಕಲಿಗರನ್ನು ಕಾಣಬಹುದು.

ಗೋಡೆಗಳು; ಇವುಗಳಿಗೆ ಕೋಟೆಯ ಗೋಡೆಗಳೆಂದು ಯಾರನ್ನಬೇಕು ಸಿಕ್ಕ ಸಿಕ್ಕ ಗಿಡಗಳು ಹತ್ತಿ ಅವುಗಳ ಬೇರು ಮತ್ತು ಶಾಖೆಗಳು ಮುದಿಕೆಯ ಮೈ ಮೇಲಿನ ನರಗಳಂತೆ ಎಲ್ಲ ಕಡೆಗೂ ಹಬ್ಬಿದ್ದರಿಂದ ಗೋಡೆಗಳ ಅಂದವು ಕೆಟ್ಟು ಹೋಗಿದೆ. ಹಲವು ಸ್ಥಳಗಳಲ್ಲಿ ಗೋಡೆ ಬಿದ್ದದ್ದರಿಂದ ಆ ನಿಟ್ಟಿಗೆ ಹಲ್ಲು ಬಿದ್ದ ಬಾಯಿಯ ವಿಕೃತ ಸ್ವರೂಪ ಬಂದಿರುವದು. ಯಾವ ಗೋಡೆಗಳ ಮೇಲೆ ಎಲ್ಲ್ಯಾದರೊಂದು ಹುಲ್ಲಿನ ಕಡ್ಡಿ ಕಂಡರೆ ದುರ್ಗರಕ್ಷಕರು ಕಠಿಣ ಶಿಕ್ಷೆಗೆ ಗುರಿಯಾಗುತ್ತಿದ್ದರೋ ಅವೇ ಗೋಡೆಗಳ ಮೇಲೆ ಹಬ್ಬಿದೆ ಗಿಡಗಂಟಿಗಳಲ್ಲಿ ನಿಶ್ಯಂಕವಾಗಿ ಓಡಾಡುವವು.

ದುರ್ಗದ ಒಳಭಾಗದಲ್ಲಿ ಎಲ್ಲಿ ನೋಡಿದರೂ ಬಿದ್ದಮನೆಗಳ, ಹಾಳು ದಿಬ್ಬಗಳ ಹೊರ್ತಾಗಿ ಏನೂ ಕಾಣುವದಿಲ್ಲ. ಯಾವ ಪ್ರಾಸಾದದಲ್ಲಿ ಭೂತ ಕಾಲದ ಇತಿಹಾಸ ಬರೆಯಲ್ಪಟ್ಟಿತ್ತೊ ಯಾವ ಅರಮನೆಗಳಲ್ಲಿ ನಡೆದ ಕಾರಸ್ಥಾನಗಳಿಂದ ದೊಡ್ಡ ದೊಡ್ಡ ಸಾಮ್ರಾಜ್ಯಗಳು ಹುಟ್ಟಿದವೋ ಮತ್ತು ನಾಶ ಹೊಂದಿದವೋ ಆ ಪ್ರಸಾದದ ಕುರುಹು ಈಗ ಒಂದು ದೊಡ್ಡ ದಿಬ್ಬದ ರೂಪ ದಿಂದ ಮಾತ್ರ ಕಾಣುವದು. ತಮ್ಮ ಖುರಪುಟದ ಖಡಖಡಾಟದಿಂದ ಎಲ್ಲ ದೇಶವನ್ನು ಗದಗಮಿಸಿದ ಜಾತಿಯ ಕುದುರೆಗಳ ಲಾಯದ ಮೇಲೆ ಈಗಿನ ಕಾಲಕ್ಕೆ ಡಬಗಳ್ಳಿಯು ಬೆಳೆದಿರುತ್ತದೆ. ಗುಪ್ತ ಮಾರ್ಗಗಳೂ ಮದ್ದಿನ ಮನೆಗಳೂ ಶಸ್ತ್ರಾಗಾರಗವೂ ಕೋಶಾಗಾರವೂ ಮುಂತಾದವು ಹೇಳಹೆಸರಿಲ್ಲದೆ ಮಾಯವಾಗಿರುವವು.

ಹೆಬ್ಬಾಗಿಲಗಳ ಗತಿಯಂತೂ ಕೇಳಲಿಕ್ಕೆ ಬೇಡ. ಆನೆಗಳಿಗೆ ಸಹ ಜೋರಿನಿಂದ ಹಾಯ್ದು ಕೆಡವಲಿಕ್ಕೆ ಬರಬಾರದೆಂದು ಮಳೆಗಳಿಂದ ತುಂಬಿದ ಬಾಗಿಲಗಳನ್ನು ಒಡೆದು ಅವುಗಳ ಕಟ್ಟಿಗೆಯಿಂದ ಕೈ ಕಾಯ್ಸಿ ಕೊಂಬ ಪುಣ್ಯಾತ್ಮರಿಗೇನು ಕಡಿಮೆ? ಯಾವ ದಾರಿಗಳು ನೂರಾರು ಯುದ್ಧದ ಸಮರಾಂಗಣ ಆಗಿರಬಹುದೋ, ಎಲ್ಲಿಯ ಹಾಸುಗಲ್ಲುಗಳು ಅಸಂಖ್ಯ ಸಲ ವೀರರ ಮಾಂಸ ರಕ್ತಗಳಿಂದ ಮುಚ್ಚಿರಬಹುದು ಅವೆಲ್ಲವುಗಳು ಈಗ ಸ್ಮಶಾನ ಶಾಂತತೆಗೆ ಎಡೆಯಾಗಿರುವವು. ಒಟ್ಟಾರೆ ಈ ದುರ್ಗಗಳನ್ನು ನೋಡಿ ಚಮತ್ಕಾರ ನಿಕೇತ (Museum)ದಲ್ಲಿಯ ತಿಮಿಂಗಲ ಮೀನದ ಎಲವಿನ ಹಂದರವು ನೆನಪಾಗುವದು.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...