Home / ಕವನ / ಕವಿತೆ / ನಿದ್ದೆ ತಬ್ಬದ ಇರುಳುಗಳು

ನಿದ್ದೆ ತಬ್ಬದ ಇರುಳುಗಳು

ನಿದ್ದೆ ತಬ್ಬದ ಇರುಳುಗಳಲ್ಲಿ
ಮೇಲಿಂದಿಳಿಯುವ ಉರುಳುಗಳು;
ಅರ್ಧ ಎಚ್ಚರದ ಮಂಪರಿನಲ್ಲಿ
ಕೊರಳನು ಬಿಗಿಯುವ ಬೆರಳುಗಳು;
ಮನಸಿನ ಒಳನೆಲಮಾಳಿಗೆಯಲ್ಲಿ
ಪೇರಿಸಿದಾಸೆಯ ಮದ್ದುಗಳು;
ಮದ್ದಿನ ಮನೆಯ ಕದವ ಒದೆಯುತಿವೆ
ಕೊಳ್ಳಿ ಹಿಡಿದ ಕರಿದೆವ್ವಗಳು.

ಚಿತ್ತದ ಕತ್ತಲೆ ಮಸಣಗಳಲ್ಲಿ
ಹೆಣಗಳ ಮೇಯುವ ಬೆಂಕಿಗಳು,
ಮಸಣದ ಪಿಶಾಚಿ ಮುಖದಿಂದೇಳುವ
ವಿಕಾರ ದನಿಯ ಊಳುಗಳು;
ಅಟ್ಟಲು, ಬೆಳಗಲು, ಬಳಸಲಾಗದ
ಚಟ್ಟದ ಉರಿಗಳ ಬೆಳಕಲ್ಲಿ
ತಬ್ಬಿಕೊಳ್ಳುತಿವೆ ಶಾಕಿನಿ ಡಾಕಿನಿ
ಕರುಳನು ಧರಿಸಿ ಕೊರಳಲ್ಲಿ.

ನೆಟ್ಟು ಬೆಳೆದ ರಸಗಬ್ಬಿನ ತೋಟಕೆ
ಕೂಗಿ ನುಗ್ಗುತಿವೆ ಸಲಗಗಳು ;
ಬಂದು ಬೀಳುತಿವೆ ಹೋಮಕುಂಡಕ್ಕೆ
ರಕ್ತಮಾಂಸಗಳ ಕೊಳಗಗಳು;
ಹೊತ್ತಿ ಉರಿಯುತಿವೆ ಸುಪ್ತಕಾಮಗಳು
ಜ್ವಲಿಸುವ ಸುವರ್ಣ ಲಂಕೆಗಳು ;
ಸರಕು ಇಡಿಕಿರಿದ ಹಡಗು ಸ್ಫೋಟಿಸಿದೆ
ಚೆಲ್ಲಾಡಿವೆ ಅವಶೇಷಗಳು.
ಕಾಮದ ಬೆಕ್ಕನ್ನಟ್ಟಿ ಧಾವಿಸಿವೆ
ಕಪ್ಪನೆ ಬೇಟೆಯ ನಾಯಿಗಳು,
ಮರಗಿಡ ಸುತ್ತಿ ಸಂದಿಗೊಂದಿಗಳ
ಹೊಕ್ಕು ತಪ್ಪಿಸುವ ಆಟಗಳು
ಮುಗಿದುವೊ ಏನೋ, ಬಳಲಿದೆ ಕಾಲು
ಬಲಿಗೆ ಎರಗುತಿವೆ ಬೇಟೆಗಳು;
ಬೆರಗು ಕವಿಸುತಿವೆ ಈ ಹೊತ್ತಿನೊಳೂ
ಜಿಗಿಯುವ ಆಸೆಯ ಚಿಗರೆಗಳು!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...