Home / ಕವನ / ನೀಳ್ಗವಿತೆ / ಕುರುಬರ ಕುರಿತು ( ನೃತ್ಯ ರೂಪಕ )

ಕುರುಬರ ಕುರಿತು ( ನೃತ್ಯ ರೂಪಕ )

– ೧ –

ನಾವು ನಮ್ಮವರೆಂಬ ಭಾವವು
ನಮ್ಮ ಬಗೆಗಿನ ಹೆಮ್ಮೆ ಒಲವು
ಒಳಿತಿನತ್ತ ನಡೆವ ನಡಿಗೆಗೆ
ನಮ್ಮ ನಾವು ತಿಳಿವುದೆಂದಿಗೆ ||

ಜಾತಿವಾದವ ದೂರವಿಟ್ಟು
ಜಾತಿ ಕೀಳರಿಮೆ ಬಿಟ್ಟು
ಲೋಕ ಧೈರ್‍ಯ ಸ್ಥೈರ್‍ಯಕೆ
ಮೂಕರಾದವರ ವಾಕ್ಯಕೆ ||

ನಮ್ಮ ಹಿರಿಮೆಯ ಸ್ಮರಣೆಯು
ಮುಗ್ದ ಜನರ ಕರುಣೆಯು
ಜನದ ನಡತೆಯೆ ಕನ್ನಡಿ
ಜಗದಸ್ವಾಸ್ಥ್ಯದ ಮುನ್ನುಡಿ ||

– ೨ –

ಕುರುಬರೆನ್ನುತ್ತಾರೆ ನಮಗೆ ಕುರುಬರೆನ್ನುತ್ತಾರೆ
ಕಾಯುವವ ಕೊಲ್ವನಲ್ಲ ಕುರುಬನೆಂದರೆ ||

ಕುರಿ ಕಾಯ್ವ ಕಾರಣಕೆ ನಾವು ಕುರುಬರು
ದಡ್ಡರೆಂದು ನಮಗೆ ಹೇಳಿದವರು ಯಾರು ?
ಅಲ್ಲಣ್ಣ ನಾವು ಅದು ಖರೆ ಅಲ್ಲವಣ್ಣ
ನಮ್ಮ ಬುದ್ದಿ ಜಗದ ಹಿತಕೆ ಬೇಕೆಬೇಕಣ್ಣ ||

ಹಾಲುಮತದವರು ಎನ್ನುತಾರೆ ಹಾಲುಮತ
ಹಾಲಿನಂಥ ಮನಸು ಎಂಬುದು ಅದರರ್ಥ
ಕುರಿ ಹಾಲು ಮಂದೆ ಕಂಬಳಿ ಕೈಕಸುಬು
ಬೆವರು ಬಲ ನ್ಯಾಯ ನೀತಿ ನಮ್ಮ ಕಸುವು ||

– ೩ –

ಪುರಾಣವುಂಟು ನಮಗೆ
ಭೂಮಿಗೆ ಬಂದೆವ್ಹೇಗೆ ||

ರುದ್ರ ವಿಲಾಸ ಪ್ರೇಮೋಲ್ಲಾಸ
ಗಿರಿಜೆ ಶಂಕರರ ಮಂದಹಾಸ
ತಾಂಡವ ಮೂರುತಿ ಲಯವಂತ
ಪ್ರೇಮ ಕರುಣೆಯ ಗುಣವಂತ ||

ಗಿರಿಜೆ ಶಂಕರರ ಶುಭವಿವಾಹ
ಧಾರೆಗೆ ಕೈಕೈ ಸತಿಪತಿಯ
ನೆರೆದಿಹ ದೇವತಾ ಸಮೂಹ
ಸಾಕ್ಷಿಗೆಲ್ಲ ಕ್ಷೀರ ಸುರಿಯೆ ||

ಮದುವೆಗೆ ಎರೆದ ಹಾಲನು
ಗಿರಿಜೆ ಮೊಗ ನೋಡಿ ಮರೆತನು
ಸುರಿಯಿತು ಧಾರೆ ಭೂಮಿಗೆ
ಕಾರಣವದು ನಮ್ಮ ಹುಟ್ಟಿಗೆ ||

– ೪ –

ಮತ್ತೊಂದು ಕಥೆಯುಂಟು
ಶಿವಶಿವೆಯರ ವನದ ನಂಟು ||

ವನಬಳಲಿಕೆಯಿಂದ
ಶಿವೆಸ್ತನಗಳಿಂದ
ಸುರಿಯಿತು ಎದೆ ಹಾಲು
ಎಲ್ಲದೂ ನೆಲಪಾಲು ||

ಭೂಮಿಯ ಎದೆಹಾಲು
ಆಗದು ಮಣ್ಣಪಾಲು
ಮನ ಚಿಂತೆಯ ಶಂಕರ
ಹಿಡಿ ಮಣ್ಣಿಂದ ಚಿತ್ತಾರ ||

ಮುದ್ದಪ್ಪ ಮುದ್ದವ್ವ
ಗಂಡೆಣ್ಣು ಗೊಂಬೆರಡು
ದಿಟ್ಟಿಯಲಿ ಸೃಷ್ಟಿಸಿದ
ಭುವಿಯತ್ತ ಕಳುಹಿಸಿದ ||

ಶಂಕರ ಲೀಲಾ ವಿಲಾಸ
ನೆಲ ನೆರೆ ಹಾಲ ಮಾನಸ
ಹಾಲಾಹಲ ನುಂಗಿಬಿಟ್ಟ
ಜಗಕಮೃತವನೆ ಕೊಟ್ಟ ||

ಆ ಹಾಲು ಕುಡಿಯಲು ಬಂದೆವು
ಆ ಹಾಲು ಕಡೆಯಲು ಬಂದೆವು
ಆ ಹಾಲು ಬೆಳೆಯಲು ಬಂದೆವು
ಆ ಹಾಲು ಸಲಹಲು ಬಂದೆವು

ಕುರಿ ಕಾಯುವ ಮಂದಿ
ಹಾಲೆರೆಯಲು ಬಂದಿವಿ
ಲೋಕದಾ ಕೋಲಾಹಲ
ಮಾಡುವೆವು ಕೋಮಲ ||

– ೫ –

ಕುರುಬರೆಂಬುದಕೆ ಪರ್ಯಾಯ ಹಲವುಂಟು
ಹಾಲುಮತೆವೆಂದು ಹೆಚ್ಚು ಚಾಲ್ತಿಯುಂಟು ||

ಕುರಿ ಪಾಲನೆ, ಪಶು ಪಾಲನೆ, ಹಾಲು ಪಾಲನೆ
ಎತ್ತರದ ಬೆಟ್ಟದಲಿ ವಾಸದವನೆಂಬ ಸ್ಪಷ್ಟನೆ
ಹೆಸರುಂಟು ದೇಶ ತುಂಬ ಬೇರೆ ಬೇರೆ
ಕುರುಬರು ಕುರುಬವಾಳು ಕುರುಂಬನ್ ಇರುಳಿಗರ್‍
ಇಡೈಯರ್‍ ಕುರುಂಬರನ್ ಹಟ್ಟಿಕಾರ ಪಾಲ್ ಧನಗರ್‍ ||

ಆರ್ಯ ಪೂರ್ವದ ಜನರು ನಾವು
ಶತಮಾನದವೆರಡರಲಿ ಟಾಲೆಮಿ ಬರೆದ
ಪಾಲಿ ಗ್ರಂಥಗಳಲುಂಟು ಉಲ್ಲೇಖ
ಅಂಧ ಅಂಧಕ ಅಂಡರರೆಂದೆಲ್ಲಾ ||

ಅಂಧಕ ವೃಷ್ಟಿಯೆಂಬೊಂದು ಹೆಸರು
ಟಗರು ಸಾಕುವರೆಂದಿದರ ಬೆಡಗು
ಸಿಲಪ್ಪದಿಕಾರಂನ ಇಡೆಯರ್‍ ಅಂಡರ್‍
ನಾವೆ ನಾವಲ್ಲಿಯ ಕುರುಂಬನ್ ವಡುಗರ್‍ ||

ಶತಮಾನ ಮೂರರಲಿ ತಮಿಳು ಕಾವ್ಯಗಳ
ಹಟ್ಟಿಕಾರ ಕುಲನಿಲಮನ್ನೆಯರ್‌ಗಳು
ಇವರು ಟಂಕಿಪ ನಾಣ್ಯಗಳೆ ಪ್ರಾಚೀನವು
ದಕ್ಷಿಣದ ನಾಡವರು ಆಳರಸರವು ||

ಉತ್ತರದಿ ಆಹೀರರು ಯಾದವರು
ಗಢರಿಯಾ ಪಾಲರು ರಾಜ್ಯವಾಳಿದರು
ಪಂಜಾಬ ಬಂಗಾಲ ರಾಜಾಸ್ತಾನ
ಇಂದ್ರಪ್ರಸ್ಥ ಕನೂಜ ಹಿಂದೂಸ್ತಾನ ||

ಕನ್ನಡ ಸಿರಿ ಮುಕುಟ ವಿಜಯನಗರ
ಮೂಲ ವಂಶಜರಲ್ಲಿ ಹಕ್ಕಬುಕ್ಕರು
ಮುಂದೆ ಆಳಿದ ರಾಜರಿಗೆ ಲೆಕ್ಕವಿಲ್ಲ
ಇವರ ಬಗೆಗೆ ಖಚಿತ ಚರಿತ್ರೆಯಿಲ್ಲ ||

ಆಳರಸರ ಚರಿತೆ ಕವಿ ಕೋಗಿಲೆ
ವಿಚಾರತೆಯಲ್ಲಿ ಕುದಿ ಬಾಂಡಲೆ
ಕಾಳಿದಾಸ ಕನಕದಾಸರೀರ್ವರು
ನಮ್ಮ ಬುದ್ದಿಶಕ್ತಿಯ ಧಾತರು ||

– ೬ –

ಕವಿ ಕಾಳಿದಾಸ ಸರಸತಿಯ ಆವಾಸ
ಸಮನಾರು ಸಂಸ್ಕೃತದಿ ಸಾಹಿತ್ಯಶ್ರೀ ||

ಹೊಸದೃಷ್ಟಿ ಶಿವಶಕ್ತಿ ಬೆಸೆದ ಪ್ರತಿಭೆ
ಕಾಣದ್ದ ಕಂಡಂತೆ ಶಿವನ ಪ್ರಭೆ
ನವ ನೋನ್ಮೇಷ ಜಗದ ಬೆಳಕು
ಕಾವ್ಯ ಸೂರ್ಯನವನು ಎಲ್ಲ ದಿನಕು ||

ಹೂವು ಬೆಂಕಿಯ ಮಾಲೆಯ ಮಾಡಿ
ಪ್ರೀತಿ ಬಿತ್ತಿದ ಜಗಕೆ ನೋಡಿ
ಅಗ್ನಿಮಿತ್ರನು ಒಲಿದ ಮಾಲವಿಕೆಗೆ
ಮೋಹವೇ ಗೆದ್ದ ಕತೆಯು ಕೊನೆಗೆ ||

ದೇವತಾಶ್ರೀ ಊರ್ವಶಿ ಸುರಸುಂದರಿ
ಸಗ್ಗಕೇ ಹುಚ್ಚಿಡಿಸಿದ ಕಲಾಮಂಜರಿ ||

ಮುಗಿಲ ಕನ್ಯೆ ಪ್ರೇಮಿಸಿದಳು ಅಬ್ಬಬ್ಬಾ
ಮನುಜೇಂದ್ರ ಪುರೂವನ್ನು ಮನದಬ್ಬ
ನೆಲಮುಗಿಲ ಪ್ರೇಮದಲೆ ಬೆಸೆದನಲ್ಲ
ಇಂಥ ಕವಿಗೆ ಮತ್ತೊಬ್ಬ ಸಾಟಿಯಿಲ್ಲ ||

ಜಗದ ಮೇರು ಕೃತಿ ಶಾಕುಂತಲ
ಕಣ್ವಾಶ್ರಮದ ಮುಗುದೆಯಲ ||

ಬಂದನರಸ ದುಶ್ಯಂತ ಬೇಟೆಗೆಂದು
ಬೇಟವೇ ಬೆಸೆಯಿತು ಅವರನಂದು
ಕೊಟ್ಟನವನು ಆಹಾ! ನೆನಪಿನುಂಗುರ
ಬಾಲೆಯ ಎದೆಯೆಲ್ಲ ಕನಸಿನಂಬರ ||

ಮುನಿ ಮುನಿದ ಕಾರಣ
ಪ್ರಿಯನಲ್ಲಿ ರಾಜಕಾರಣ
ಮರೆತು ಮುಗುದೆಗೆ ಹಿಂಸೆ
ಶಾಪ ಕೂಪದಲಿ ನರಳಿಸೆ ||

ಅಮರ ಪ್ರೇಮದ ಕಾವ್ಯ
ಇಂದಿಗೂ ನವ ನವ್ಯ
ಪ್ರೇಮ ಪರಿಕಿಪ ಚಾಪ
ವಿರಹಾಗ್ನಿ ಎಸೆದ ಧೂಪ ||

ಸಕಲ ರಾಮಾಯಣದ ಮೊರೆ
ರಘುವಂಶ ಚರಿತದ ತಾರೆ
ಹಲವು ರಾಜರ ವರ್ಣನ
ಕಾವ್ಯ ಮಹತಿನ ಕರ್ಷಣ

ಸನ್ಯಾಸಿ ಶಿವನು ಸಂಸಾರಿಯಾದ
ಕಾರಣವದಕೆ ಕುಮಾರ ಸಂಭವಂ
ಮೋಹಿತರು ಶಿವ ಪಾರ್ವತಿ
ಸೃಷ್ಟಿಲಯ ಉದಯ ಜಗಕೆ ||

ತಪ್ಪು ಮಾಡಿದ ಯಕ್ಷ ಶಾಪಕೆ
ಕುಬೇರನ ತೊರೆದು ಬಹುದೂರಕೆ
ವಿರಹಿ ಯಕ್ಷ ಕಳಿಸಿ ಸಂದೇಶವ
ಮೇಘಗಳ ಕೈಲಿ ವಿರಹೋತ್ಸವ ||

ಪ್ರೇಮಿಗೆ ಕಾಮಿಗೆ ಮತ್ತೆ ವಿರಹಿಗೆ
ಋತು ಸಂಹಾರ ಚಿತ್ತ ಕೇಡ ಬಗೆ
ಸ್ತ್ರೀರೂಪವೇ ರೂಪ ಭೋಗ ಬಾಳು
ಕುಣಿದು ನಲಿದವೆಲ್ಲಾ ಋತುಗಳು ||

ಕವಿ ಕಾಳಿದಾಸ ಸರಸತಿಯ ಆವಾಸ
ಸಮನಾರು ಸಂಸ್ಕೃತದೀ ಸಾಹಿತ್ಯಶ್ರೀ ||

– ೭ –

ಸಂತಶ್ರೇಷ್ಠ ದಾಸವರೇಣ್ಯರು
ಸಿರಿ ಕನಕದಾಸರು ಜಗಮಾನ್ಯರು ||

ಗುರುವಿನ ಮೊದಲೆ ಮುಕ್ತಿಪ್ರಾಪ್ತರು
ಗುರುವಂದಿತ ಶಿಷ್ಯ ಮಹಾಮಹಿಮರು
ಸಜ್ಜನಿಕೆ ಸರಳತೆ ಯುದ್ಧತ್ಯಾಗದಿಂದ
ಕಲಿತ ಪಾಠವೆಲ್ಲ ಬಾಳ ಶಾಲೆಯಿಂದ ||

ವೇದವನೋದಿ ಜ್ಞಾನಿಯಾಗಿ
ಪುರಾಣಗಳ ಐರಾವತವನೇರಿ
ಹರಿಭಕ್ತನಾಗಿ ಊರೂರನಲೆದು
ಕಾಗಿನೆಲೆಯಾದಿಕೇಶವನೊಲಿದು ||

ವ್ಯಾಸಕೂಟದಲ್ಲೆ ದಾಸಶ್ರೇಷ್ಠ
ಉಡುಪಿ ಕೃಷ್ಣಗೆ ಪವಾಡಪುರುಷ
ತಿರುಪತಿಯಲ್ಲೇ ವೈಕುಂಠ ಕಂಡ
ಕುಲ ಕುಲಕುವೆಂದವರ ಮಿಂಡ ||

ದಾಸರಲ್ಲೆ ಮಹಿಮ ಕವಿ ತಿಲಕ
ಲೇಖನಿ ಚಿತ್ರಿಸಿತು ಸಾರ ಹರಿಭಕ್ತಿ
ಕೃಷ್ಣಮಹಿಮೆ ಮೋಹನ ತರಂಗಿಣಿ
ನಳ ಚರಿತ್ರೆಯ ಪ್ರೇಮದ ದೋಣಿ ||

ಮಹಾಕೃತಿ ರಾಮಧಾನ್ಯ ಚರಿತದೊಳು
ರಾಗಿ ಭತ್ತಗಳ ಕಸುವಿನ ಜಗಳ
ಬಡವರನುರಾಗಿ ಬಲ್ಲಿದರ ನಿಲ ಹೋಗಿ
ರಾಮ ನೀಡಿದ ಪದವಿ ರಾಗಿ ಯೋಗಿ ||

ಮತಿಗೆ ನಿಶಿತ ಕೀರುತನೆ ತಂಬೂರಿ
ಲೋಕದ ಡೊಂಕನು ತೋರಿದ ದಾರಿ
ಕನಕ ಕನಕ ಅಯ್ಯಾ ಕನಕಯ್ಯ
ಇಂದಿಗು ಕುಲ ಕುಲವೆನ್ನುತಿಹರಯ್ಯ ||

ಸಂತಶ್ರೇಷ್ಠ ದಾಸವರೇಣ್ಯರು
ಸಿರಿ ಕನಕದಾಸರು ಜಗಮಾನ್ಯರು ||

– ೮ –

ಬಿಳಿಯರ ವಿರುದ್ಧ ತಮ್ಮ ಉಳಿವಿಗೆ
ಹೋರಾಡಿ ಮಡಿದರಲ್ಲ ತಮ್ಮ ಇಂದೂರಿಗೆ ||

ಧನಗರ ರಾಜವಂಶವು ಮಧ್ಯ ಭಾರತದಿ
ಮಲಾರಿರಾವು ಅಹಲ್ಯಬಾಯಿ ಹೋಳ್ಕರ್‍ ಛಲದಿ
ದತ್ತಕ ಸಂಬಂಧಿ ಕಾನೂನು ವಿರೋಧಿ
ಬಂಡಾಯವೆದ್ದರು ಬಿಳಿಯರ ವಿರುದ್ಧದಿ ||

ಇತಿಹಾಸ ಪುಟಗಳಲಿ ಮಡಿದ ಧ್ರುವತಾರೆಗಳು
ಕರಣಿಕರ ಬರಹವಿರದ ಹಲ ಘಟನೆಗಳು
ಹೋರಾಟವನೆ ಮಾಡಿ ಜೀವ ಬಲಿ ಕೊಟ್ಟರು
ಅವರಿವರ ವಂಚನೆಗೆ ಹರಕೆ ಕುರಿಯಾದವರು ||

– ೯ –

ವೀರ ಸಂಗೊಳ್ಳಿ ರಾಯಣ್ಣನೆಂಬ ಸರದಾರ
ಅವನ ಧೀರತೆಗೆ ಬೆಚ್ಚಿತೊ ಬಿಳಿ ಸರಕಾರ ||

ಕಿತ್ತೂರ ವಶಮಾಡಿ ಕಿರಿದೊರೆಯ ಪಟ್ಟ
ಮಾಡೆ ತೀರುವೆನೆಂದು ರಾಯಣ್ಣನ ಪಟ್ಟು
ಅದಕೆ ಅವ ಮೆರೆದ ಧೀರ ಸಾಹಸವ
ರಾಯಣ್ಣನೆಂಥಾ ಶೂರ ಸಿಂಹ ಶಕ್ತಿಯವ ||

ಗೆಳೆಯ ಗಜವೀರ ಸಿದ್ಧಿ ಸೈತನಾಗಿ
ಬಿಡಿ ತಾಲ್ಲೂಕ ಖಾನಾಪುರ ಸಂಪಗಾವಿಗೆ
ಬಿಚ್ಚುಗತ್ತಿ ಚನಬಸಯ್ಯ ಜತೆಗೂಡಿ
ಮುತ್ತಿಗೆ ಹಾಕು ಸುಟ್ಟರಲ್ಲ ಕಛೇರಿ ನೋಡಿ ||

ರಾಯಣ್ಣನ ಹಿಡಿದವರಿಗೆ ಮುನ್ನೂರು ರೂಪೈ
ಮೇಜರ್‍ ಪಿಕರಿಂಗ್ನ ಘೋಷಣ ಜನಕೆ ದುರಾಸೈ
ಅಮಲ್ದಾರ ಕೃಷ್ಣರಾಯ ಮಾಡಿ ಕುತಂತ್ರ
ಪಟೇಲ ಲಿಂಗನ ವೆಂಕನ ಗೌಡರಹತ್ರ ||

ಪಟೇಲರಿಬ್ಬರೂ ನಿಷ್ಠದಿನೈದು ದಿನ ರಾಯಣ್ಣಗ
ಅಣ್ಣನ ಬಂಟ ಲಖ್ಯಾನ ಮೂಲ್ಕ ಹಿಕ್ಮತ್ತಿಗ
ಹೊಳೇಲಿ ಸ್ನಾನ ಮಾಡುವಾಗ ಹಿಡಕೊಟ್ರೊ ಹುಲಿಯ
ಪಡೆದರಲ್ಲೊ ಘನಕಾರ್‍ಯಕ್ಕೆ ಮುನ್ನೂರುಪಾಯ ||

ಹಗ್ಗದ ಮಂಚಕೆ ಧೀರನ್ನ ಕಟ್ಟಿ ಹೊಯ್ದರ
ಧಾರ್‍ವಾಡಕೆ ನಿಸ್ಬತೆಂಬ ಕಲೆಕ್ಟರ್‍ ಹತ್ತಿರ
ಕಿತ್ತೂರ ನಾಡ ಬಿಡುಗಡೆಗೆ ತೊಡಗಿದಕೆ
ರಾಯಣನ ಅಪರಾಧೀನ ಮಾಡಿದರಾ ||

ಇಂಥಾ ಸೊರಗೆ ಸಂಪಗಾವಿಲಿ ನೇಣು
ಸರಕಾರಕ್ಯಾರೂ ಎದುರಾಡದಂತೆ ಗೋಣು
ಎಚ್ಚರಿಕೆ ಕೊಟ್ಟರೊ ಜನಕೆ ಅಣ್ಣಾ
ಕಿತ್ತೂರಿನ ಸಂಸ್ಥಾನ ಆಯಿತೊ ಮಣ್ಣಾ ||

ರಾಯಣ್ಣನಂಥ ಕಲಿ ಅದೆಂಥಾ ತಲಿ
ಐರಾಣವಾತು ಬಾಳು ಕಿತ್ತೂರಿಗಾಗಲ್ರಿ
ನಮಕ್ಕ ಹರಾಮರ ಸಪೋರ್ಟದಿಂದಲಿ
ಆದಾನಲ್ಲ ಬಲಿ! ಅವನೆಂಥ ಕಲಿ ||

ವೀರ ರಾಯಣ್ಣನೆಂಥಾ ಸರದಾರ
ಮೆಚ್ಚಿ ಮಂದಿ ಹರಕೆ ಹೊರತಾರ
ಹುಟ್ಟೊ ಕಂದ ರಾಯಣನಾಗಲೆಂದು
ನಂಬೋದೆಂಗಣ್ಣ ಧೀರಾ ಸತ್ತನೆಂದು ||

– ೧೦ –

ಗಾಂಧಿ ಕಾಲಕೆ ಮತ್ತೊಬ್ಬನಿದ್ದನಣ್ಣ
ತಳ ಹಾವೇರಿ ತಾಲುಕ ಸಂಗೂರಣ್ಣ
ಹೆಸರು ಕರಿಯಪ್ಪ ಸಂಗೂರನಂತಾ
ಕೇಳಿ ಮಂದಿ ಅವನ ಕಥಾನ ಕುಂತಾ ||

ಮೂಲ್ಕಿ ಪರೀಕ್ಷೆ ಪಾಸಾದ ಯುವಕ
ಓದಹತ್ತಿದ ಪತ್ರಿಕೆ ಗಾಂಧಿ ತಿಲಕ
ಇಪ್ಪತ್ತಾರನೆ ಇಸವಿಗೆ ತೊಟ್ಟ ಖಾದಿ
ಗುಮಾಸ್ತಗಿರಿ ಬಿಟ್ಟ ಕರೆಗೆ ಗಾಂಧಿ ||

ಸಿರಸಿ ಸಿದ್ಧಾಪುರ ಕರನಿರಾಕರಣದಾಗೆ
ಸಜೆ ಬಿದ್ದ ಮೂವತ್ತು ತಿಂಗಳ ಭಾಗಿ
ಕಾರವಾರ ವಿಸಾಪುರ ಜೈಲಿನೊಳಗ
ಗಾಂಧಿ ತರ ಮಾಡಿದ ಕೆಲಸ ಭಂಗಿ ||

ಮುವತ್ನಾಲ್ಕನೆ ಇಸವಿ ಬಿಡುಗಡೆಯಾದ
ಹುಬ್ಬಳ್ಳಿ ಶಹರದ ಬಾಲಿಕಾಶ್ರಮದ
ಹರಿಜನ ಕುಂಟು ಕನ್ಯೆ ಮದಿವ್ಯಾದ
ಗಾಂಧಿ ಸನಿಹ ಹೊಂಟರಿಬ್ಬರೂ ವಾರ್ಧಾ ||

ಗಾಂಧಿ ಸಹಚರ್ಯ ಸಿಕ್ಕ ಅದೃಷ್ಟ
“ಮೂಕ ಸೇವಕ”ರೆಂದಿವರು ಗಾಂಧಿಗಿಷ್ಟ
ಜೊತೆಗೆ ಜೇಸಿ ಕುಮಾರಪ್ಪ
ಗ್ರಾಮ ಸೇವಾ ನಿರತರಾದಲ್ಲಪ್ಪ ||

ಬಂದಿತಲ್ಲ ಕ್ವಿಟ್ ಇಂಡಿಯಾ ಚಳವಳಿ
ಮಾಡು ಇಲ್ಲವೇ ಮಡಿ ಎಂಬ ಬಳುವಳಿ
ಮೈಲಾರ ಮಹಾದೇವ ತಿಮ್ಮನಗೌಡ
ಹಂಸಭಾವಿ ರಾಮಣ್ಣರ ಜೊತೆಗೂಡಿ ||

ಕಾಡುಮೇಡು ನದಿ ತೀರದಡವಿ
ಧ್ವಂಸಮಾಡಿ ಸರಕಾರವ ಕೊಡವಿ
ನಿಗದಿ ನೆಲೆ ನೆಮ್ಮದಿಲ್ಲ ಊಟ
ದಿನಬೆಳಗಾದರೆ ಪೋಲೀಸ ಕಾಟ ||

ಕರಿಯಪ್ಪ ಕೊಟ್ಟ ಬೆಲೆ ಗಾಂಧಿಗೆ
ಗ್ರಾಮೋದ್ಧಾರದ ಪಾಠದ ಮತಿಗೆ
ಮಾಡಿ ಮಡಿಯುವಾ ಉಗ್ರತೆಗೆ
ಕರಿಯಪ್ಪನಂದೆಂಥ ತ್ಯಾಗ ಜತಿಗೆ ||

ಶಾಂತಿ ಶಿಸ್ತಿನ ಸಿಪಾಯಿಗೆ
ನಿತ್ಯ ಗ್ರಾಮದ ಸಫಾಯಿಗೆ
ಸಿಟ್ಟಿಗೆ ಬಾಂಬು ಮಾಡಲೋಗಿ
ಮುಂಗೈಯೇ ಹಾರಿ ಹೋಗಿ ||

– ೧೧ –

ಸಹಕಾರ ಚಳವಳಿ ಕತೆಯು
ಕಾರಣವದಕೆ ಕಂಬಳಿಯು
ಮೊದಲಿಗೆ ಗದಗಾದಲ್ಲಿ
ಮಾದರಿಯದು ದೇಶದಲ್ಲಿ ||

ಸಿದ್ದನಗೌಡ ಪಾಟೀಲಜ್ಜ
ಸಹಕಾರಿ ಪಿತನಾದನಲ್ಲ
ಸಿರಿವಂತ ತಿಳಿದು ಬಾಳುವ
ತತ್ವವೊಂದ ಕೊಟ್ಟನಲ್ಲ ||

ಇದಕೆ ಬೇಕು ದೊಡ್ಡ ಗುಣವು
ಹಂಚಿ ಉಂಡ ಜನರು ನಾವು
ಕೂಡಿಟ್ಟು ಏನ ಒಯ್ದೆವು
ಬಡತನಕೆ ಸಾವು ತಂದೆವು ||

– ೧೨ –

ಚರಿತೆಯ ಪುಟದಾ ಹೆಮ್ಮೆಗೆ
ಬದುಕುವ ಸಂಸ್ಕೃತಿ ಹಿರಿಮೆಗೆ
ಘನತೆ ಗೌರವದ ಬಾಳಿಗೆ
ಹೆಸರಾಗಿದೆ ನಮ್ಮಯ ಒಳಿತಿಗೆ ||

ನಮ್ಮ ಜನಗಳ ಚಾರಿತ್ರ್‍ಯ
ಬದುಕಿ ಮಾದರಿ ಪಾವಿತ್ರ್‍ಯ
ಹಾಲು ಕೆಟ್ಟರೂ ಹಾಲುಮತ
ಕೆಡದೆಂಬುದು ನೋಡ ಜನಮತ ||

ಬಿತ್ತಲಿ ಬೆಳೆಯಲಿ ಕೊಯ್ಲಿಗೆ
ಕರೆದರು ಜನರೆಲ್ಲ ಬೋಣಿಗೆ
ಮೊದಲ ಪೂಜೆ ಲಾಭ ವ್ಯಾಪಾರಿಗೆ
ಎಲ್ಲೆಲ್ಲೂ ಮಾನ್ಯತೆ ಕುರುಬರಿಗೆ ||

ಮುಗ್ಧತೆ ಇದ್ದಂಥೆ ಅಂಧಶ್ರದ್ಧೆ
ಹೊಸದನು ಕಾಣದ ಮಾಯಾನಿದ್ದೆ
ಕವಿದಿದೆ ನಮ್ಮಯ ಜನರನ್ನ
ಹುಡುಕಬೇಕು ಹೊಸ ಸೂರ್ಯನ್ನ ||

ನಮ್ಮಲ್ಲೂ ಇಹರು ಕೆಟ್ಟವರು
ಕೊಳ್ಳೆ ಲೂಟಿಯಿಂದ ದೊಡ್ಡವರು
ನಮಗಿಂದು ಬೇಕು ಒಳಿತು ಕೇಡು
ಅರಿತಾಗ ಬದುಕು ಹಸನೋಡು ||

ಬೆವರಿಗೆ ಬೆಲೆಯು ಸಿಗಬೇಕು
ಸರುವರ ಸಮನಾಗಿ ನಿಲಬೇಕು
ಕುರುಬರೆಂದರೆ ದಡ್ಡರಲ್ಲ
ಮಾನ್ಯರವರು ಸಮಾಜದಲ್ಲೆಲ್ಲ ||

ನಾವು ನಮ್ಮವರೆಂಬ ಭಾವವು
ನಮ್ಮ ಬಗೆಗಿನ ಹೆಮ್ಮೆ ಒಲವು
ಒಳಿತಿನತ್ತ ನಡೆವ ನಡಿಗೆಗೆ
ನಮ್ಮ ನಾವು ತಿಳಿವುದೆಂದಿಗೆ ||

*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...