Home / ಕವನ / ಕವಿತೆ / ತೂಕಡಿಕೆಯನು ಕಳೆಯದೇಕೆ ಕುಳಿತಿಹೆ ಗೆಳೆಯ?

ತೂಕಡಿಕೆಯನು ಕಳೆಯದೇಕೆ ಕುಳಿತಿಹೆ ಗೆಳೆಯ?

ತೂಕಡಿಕೆಯನು ಕಳೆಯದೇಕೆ ಕುಳಿತಿಹೆ ಗೆಳೆಯ?
ಸಾಕು, ಸುತ್ತಲು ನೋಡು ಕಣ್ತೆರೆದು ನಿಂದು;
ಲೋಕದಲಿ ವಂದೆ ಮಾತರಮೆಂಬುದೊಂದೆ ಮಾ
ತೀ ಕಿವಿಯನೊಡೆಯುತಿರೆ ಉಚ್ಛಳಿಸಿ ಬಂದು.

ಮತಜಾಲದಲ್ಲಿ ಸಿಲುಕಿ, ಅತಿ ಜಾತಿಯಲ್ಲಿ ಕುಲುಕಿ,
ಗತಿಗೆಟ್ಟು ಸರ್‍ವರಲಿ ನೀನಾದೆ ಹಿಂದು;
ಪತಿತರಿಗೆ ಕೈಗೊಟ್ಟು ಭಾರತ ಧ್ವಜ ನೆಟ್ಟು
ಪಥದೋರಿ ಬಂಗಾಲಿ ಕಾಯುತಿರೆ ಮುಂದು.

ನುಗ್ಗು ನುಗ್ಗುತ ಪರರು ನುಗ್ಗುತ್ತೆ ಬರುತಿಹರು;
ಬಗ್ಗಿರದೆ ಬಾಗುವುದೆ ನಿನಗಾದುದಿಂದು?
ಹಗ್ಗವಿಲ್ಲದ ಕಟ್ಟು, ಬೆತ್ತವಿಲ್ಲದ ಪೆಟ್ಟು,
ಒಗ್ಗಿತೇ ಈ ಗತಿಯು ಸವಿವಿಷವ ತಿಂದು?

ಕಿತ್ತು ಬಿಡು ಸಂದೇಹ, ಇತ್ತುಬಿಡು ಧನ ದೇಹ,
ಮಾತೃಭೂಮಿಯ ಪದಾರ್ಚನೆಗೆ ಬಲವಂದು.
ಹೊತ್ತ ಕಳೆಯಲು ಬೇಡ, ಭ್ರಾಂತಿಗೊಳದಿರು ಮೂಢ!
ಸತ್ತಿರುವೆ ಏತಕೀ ಜೀವನದೊಳಿಂದು?

ಚಿತ್ತವ್ಯಸನಾಕುಲೆಯು ಕುತ್ತಿಗೆಯ ಸಂಕಲೆಯ
ಕತ್ತರಿಸಿ ತನ್ನ ಸೆರೆ ಬಿಡಿಸಬೇಕೆಂದು,
ನೆತ್ತಿಯಲಿ ಬೊಟ್ಟಿಡದೆ, ಬಿರುದುಬಾವಲಿ ತೊಡದೆ,
ಅತ್ತತ್ತು ಹಲುಬುತಿರೆ ಭೂಮಾತೆ ನೊಂದು.

ಸತ್ತಿತೇ ಸಾಹಸವು? ಬತ್ತಿತೇ ಧೃತಿರಸವು?
ಮತ್ತೆ ಮಡಿದಾ ಕರ್ಣನಾ ಬೆನ್ನ ಹಿಂದು
ಎತ್ತ ಪೋದುದು ಪರಶುರಾಮನಾ ತೋಳ್ವಿರಿಸು?
ನೆತ್ತರೊಳಗಿಲ್ಲವೇ ವಿಕ್ರಮದ ಬಿಂದು?

ಕಳವಾದ ಮೇಲ್ನೀನು ಕಳವಳಿಸಿ ಫಲವೇನು?
ಕಳೆದಪುದು ನಿನ್ನ ಸ್ವಾತಂತ್ರ್ಯಮಣಿಯೊಂದು.
ಕೆಳಕೋಟೆ ಕೈಸೋಕೆ ಕಹಳೆ ಕೂಗುವುದೇಕೆ?
ಕಳಚಿಬಿಡು ಅಧ್ಯಾತ್ಮನಿದ್ರೆ ಮಮ ಬಂಧು.

ಎದ್ದೇಳು, ಎದ್ದೇಳು! ನಿದ್ದೆಗಣ್ಣನು ಕೀಳು;
ಹೊದ್ದಿರ್ದ ವೇದಗಂಬಳಿ ಮೂಲೆಗ್ಹೊಂದು.
ಎದ್ದು ಬರುತಿಹ ಭಾನು, ಎದ್ದಿತೈ ಜಾಪಾನು?
ಬಿದ್ದುಕೊಂಡಿರುವೇಕೆ ಕತ್ತಲೆಯೊಳಿಂದು?

ತಳರು ಭರತ ಕುಮಾರ, ಕೊಳುಗುಳದಲತಿವೀರ,
ಸೆಳೆ ಮಿಂಚಿನಸಿಯ ತೆಗೆ, ರಣಕೆ ಬಳಿಸಂದು!
ಮಳೆ ರಕುತದಲ್ಲಿ ಬೀಳೆ, ಬೆಳೆ ಕಲಿಗಳಿಂದೇಳೆ,
ಭಳಿರೇ ಭಾರತವರ್ಷ ಸೌಭಾಗ್ಯಮಂದು.
*****

Tagged:

Leave a Reply

Your email address will not be published. Required fields are marked *

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...