Home / ಕವನ / ಕವಿತೆ / ತೂಕಡಿಕೆಯನು ಕಳೆಯದೇಕೆ ಕುಳಿತಿಹೆ ಗೆಳೆಯ?

ತೂಕಡಿಕೆಯನು ಕಳೆಯದೇಕೆ ಕುಳಿತಿಹೆ ಗೆಳೆಯ?

ತೂಕಡಿಕೆಯನು ಕಳೆಯದೇಕೆ ಕುಳಿತಿಹೆ ಗೆಳೆಯ?
ಸಾಕು, ಸುತ್ತಲು ನೋಡು ಕಣ್ತೆರೆದು ನಿಂದು;
ಲೋಕದಲಿ ವಂದೆ ಮಾತರಮೆಂಬುದೊಂದೆ ಮಾ
ತೀ ಕಿವಿಯನೊಡೆಯುತಿರೆ ಉಚ್ಛಳಿಸಿ ಬಂದು.

ಮತಜಾಲದಲ್ಲಿ ಸಿಲುಕಿ, ಅತಿ ಜಾತಿಯಲ್ಲಿ ಕುಲುಕಿ,
ಗತಿಗೆಟ್ಟು ಸರ್‍ವರಲಿ ನೀನಾದೆ ಹಿಂದು;
ಪತಿತರಿಗೆ ಕೈಗೊಟ್ಟು ಭಾರತ ಧ್ವಜ ನೆಟ್ಟು
ಪಥದೋರಿ ಬಂಗಾಲಿ ಕಾಯುತಿರೆ ಮುಂದು.

ನುಗ್ಗು ನುಗ್ಗುತ ಪರರು ನುಗ್ಗುತ್ತೆ ಬರುತಿಹರು;
ಬಗ್ಗಿರದೆ ಬಾಗುವುದೆ ನಿನಗಾದುದಿಂದು?
ಹಗ್ಗವಿಲ್ಲದ ಕಟ್ಟು, ಬೆತ್ತವಿಲ್ಲದ ಪೆಟ್ಟು,
ಒಗ್ಗಿತೇ ಈ ಗತಿಯು ಸವಿವಿಷವ ತಿಂದು?

ಕಿತ್ತು ಬಿಡು ಸಂದೇಹ, ಇತ್ತುಬಿಡು ಧನ ದೇಹ,
ಮಾತೃಭೂಮಿಯ ಪದಾರ್ಚನೆಗೆ ಬಲವಂದು.
ಹೊತ್ತ ಕಳೆಯಲು ಬೇಡ, ಭ್ರಾಂತಿಗೊಳದಿರು ಮೂಢ!
ಸತ್ತಿರುವೆ ಏತಕೀ ಜೀವನದೊಳಿಂದು?

ಚಿತ್ತವ್ಯಸನಾಕುಲೆಯು ಕುತ್ತಿಗೆಯ ಸಂಕಲೆಯ
ಕತ್ತರಿಸಿ ತನ್ನ ಸೆರೆ ಬಿಡಿಸಬೇಕೆಂದು,
ನೆತ್ತಿಯಲಿ ಬೊಟ್ಟಿಡದೆ, ಬಿರುದುಬಾವಲಿ ತೊಡದೆ,
ಅತ್ತತ್ತು ಹಲುಬುತಿರೆ ಭೂಮಾತೆ ನೊಂದು.

ಸತ್ತಿತೇ ಸಾಹಸವು? ಬತ್ತಿತೇ ಧೃತಿರಸವು?
ಮತ್ತೆ ಮಡಿದಾ ಕರ್ಣನಾ ಬೆನ್ನ ಹಿಂದು
ಎತ್ತ ಪೋದುದು ಪರಶುರಾಮನಾ ತೋಳ್ವಿರಿಸು?
ನೆತ್ತರೊಳಗಿಲ್ಲವೇ ವಿಕ್ರಮದ ಬಿಂದು?

ಕಳವಾದ ಮೇಲ್ನೀನು ಕಳವಳಿಸಿ ಫಲವೇನು?
ಕಳೆದಪುದು ನಿನ್ನ ಸ್ವಾತಂತ್ರ್ಯಮಣಿಯೊಂದು.
ಕೆಳಕೋಟೆ ಕೈಸೋಕೆ ಕಹಳೆ ಕೂಗುವುದೇಕೆ?
ಕಳಚಿಬಿಡು ಅಧ್ಯಾತ್ಮನಿದ್ರೆ ಮಮ ಬಂಧು.

ಎದ್ದೇಳು, ಎದ್ದೇಳು! ನಿದ್ದೆಗಣ್ಣನು ಕೀಳು;
ಹೊದ್ದಿರ್ದ ವೇದಗಂಬಳಿ ಮೂಲೆಗ್ಹೊಂದು.
ಎದ್ದು ಬರುತಿಹ ಭಾನು, ಎದ್ದಿತೈ ಜಾಪಾನು?
ಬಿದ್ದುಕೊಂಡಿರುವೇಕೆ ಕತ್ತಲೆಯೊಳಿಂದು?

ತಳರು ಭರತ ಕುಮಾರ, ಕೊಳುಗುಳದಲತಿವೀರ,
ಸೆಳೆ ಮಿಂಚಿನಸಿಯ ತೆಗೆ, ರಣಕೆ ಬಳಿಸಂದು!
ಮಳೆ ರಕುತದಲ್ಲಿ ಬೀಳೆ, ಬೆಳೆ ಕಲಿಗಳಿಂದೇಳೆ,
ಭಳಿರೇ ಭಾರತವರ್ಷ ಸೌಭಾಗ್ಯಮಂದು.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...