Home / ಲೇಖನ / ಹಾಸ್ಯ / ಕಾಶೀಬಾಯಿಯವರ ಯಾತ್ರಾಪ್ರಯಾಣ

ಕಾಶೀಬಾಯಿಯವರ ಯಾತ್ರಾಪ್ರಯಾಣ

ಕಾಶೀಬಾಯಿ- “ಟಾಂಗಾ ಬಂತು! ಎಂಥಾ ಲಗೂನ ಗಾಡೀ ಹೊತ್ತಾತಿದೂ. ಮುಂಜಾನಿಂದ ಗಡಿಬಿಡಿ ಗಡಿಬಿಡಿ ಇನ್ನೂ ಕೆಲಸ ಮುಗಿದಽ ಇಲ್ಲ. ಆಯ್ತು. ಕೈಕಾಲ ಘಟ್ಟಿ ಇರೂದ್ರೊಳಗಽ ಉಡುಪಿ ಕೃಷ್ಣನ್ನಽ ನೋಡೆರ ಬರೂಣ. ಗಂಟ ಕಟ್ಟಿದ್ದಽ ಅದ. ವೈದು ಟಾಂಗಾದಾಗ ಇಡಪಾ. ನೀ ಬ್ಯಾಡ ಮಲ್ಯಾ. ಈಗಽ ಮೈಲಿಗಿ ಮಾಡಬ್ಯಾಡ, ಗೋವಿಂದಾ ನೀ ಒಯ್ದು ಇಡ ಬಾಳಾ. ಹಿಂದಿನ ಮಗ್ಗಲ ಇಡು. ಟಾಂಗಾದ ಇಮಾಮಗ ಮುಟ್ಟಿಸ ಬ್ಯಾಡ.

ಹೋಗಿಬರ್‍ತಿನಾ ಗಂಗಾಬಾಯಿ, ಹುಡುಗುರು ಹುಪ್ಚಿ ಜ್ವಾಕೀಲೆ ಇರ್‍ಯಾಽ. ಅಂದಾಕರಾ ಉಲಳಕೋಚಿ ಹುಡುಗರು. ಭಾವಿಕಡೆ ಹೋಗ್ಗೊಡ ಬ್ಯಾಡಾ. ಭಾಂವ್ಯಾಗ ಹಣಿಕಿ ಹಾಕ್ಯಾವು ಎಲ್ಯಾರೆ. ಒಂದು ಹೋಗಿ ಒಂದು ಆದೀತು. ಹಿಂದಿನ ಬಾಗಲಾನ ಇಕ್ಕಿ ಚಿಲಕಾ ಹಾಕು. ಅಂದರ ನಿಶ್ಚಿಂತಿ ಆಗತದ. ಇಷ್ಟು ಹುಡುಗುರ್‍ನ ಕಟಿಕೊಂಡು ಹ್ಯಾಂಗ ಇರ್‍ತೀಯೋ ಏನೋ. ಇದೇ ಚಿಂತಿ ಹತ್ತೇದ ನನಗ. ಅವು ಕಿರಿಕಿರಿ ಮಾಡತಾವಂತ ಸಿಕ್ಕದ್ದ ತಿನ್ಲಿಕ್ಕೆ ಕೊಡಬ್ಯಾಡ. ಬ್ಯಾಸಿಗೆ ದಿವಸ ನೀರು ಕುಡಕುಡದು ಜಡ್ಡಾಗ್ತದ ಹುಡುಗರಿಗೆ. ಮನ್ಯಾಗೇನಾರ ಮಾಡಿದರ ಇರಿವಿ ಮುಕರಿದ್ಹಂಗ ಮುಕರತಾವ ಖೋಡಿಗೋಳು!

ಹೌದು ನೋಡು. ಮರ್ತೆ ಬಿಟ್ಟಿದ್ದೆ. ಇರವಿ ಅಂಬೋಣ ನೆನಪು ಆಯ್ತು. ಬೆಲ್ಲದ ಹರಿವಿ ಬುಡದಾಗಿನ ಪರಾತದಾಗ ನೀರು ಉಳಿದಿಲ್ಲ. ಎಲ್ಲಾ ಇರಿಬೀ ಪಾಲು ಆದೀತು. ಬೆಲ್ಲಾ ನೋಡಪಾ ರಾಮೂ. ನೀನರೆ ನೆನಪಲೆ ನೀರ್‍ಹಾಕು. ಇಲ್ದ್ರಿದ್ರ ತಟ್ಟಿನಾಗ ಕಟ್ಟಿ ನೆಲವಿನ ಮ್ಯಾಲೆ ಇಡು. ಅಂದರಽ ತಾಪೇ ತಪ್ತದ. ಅದೇನು ಹಾಲ್ಮಸರಿನ ಗಡಿಗೆಲ್ಲಾ. ಬೆಕ್ಕು ಹಾರಿ ಕೆಡವು ಹಾಂಗಿಲ್ಲ. ಅಷ್ಟು ಮಾಡಿ ಬಿಡು.

ಬೆಕ್ಕಂಬೂಣಾ ಧ್ಯಾನಕ್ಕ ಬಂತ ನೋಡು. ಈ ಗಾಡಿ ಗಡಿಬಿಡಿಯೊಳಗ ಹಾಲು ಮಸರಿನ ಕಿಡಕಿ ಬಾಗ್ಲಾನಽ ಹಾಕಿಲ್ನಾನು. ಗೋವಿಂದಾ ಹಾಕಿಬಾರಪಾ ಬಾಗಲಾ. ಮುಪ್ಪಿನಕಾಲ. ನನಗೂ ಅರವು ನುರವು ಆಗ್ಲಿಕ್ಕೆ ಹತ್ತೇದ. ಕೈಕಾಲೊಂದು ಒಣಗಿ ಹತ್ತೀಕಟಗಿ ಆಗ್ಯಾವ. ನೆನಪೊಂದು ಹಾರಲಿಕ್ಹಂತ್ಯಂದ್ರ ಆಗೇ ಹೋತು. ಕೃಷ್ಣಾ ನೀ ಮಾಡಿದ್ದೇ ಖರೇಪಾ ಇರ್‍ಲಿ! ನಂದೇನ ಯಾಕಾಗವಲ್ದು, ಹತ್ತೀ ಕಟಿಗಿ ಅಲ್ಲೇ ಬಿಟ್ಟಿರ್‍ನೋಡ್ರಿ ಬೈಲಾಗ್ಯೆ. ಎಲ್ಲಾರೆ ಒಂದು ಅಡ್ಡ ಮಳಿ ಹೊಡೀತಂದರಽ ಎಲ್ಲಾ ತೊಯ್ದು ಹೋಗ್ತಾವ, ತಂದು ಎಮ್ಮೆ ಕಟ್ಟೊ ಕೊಟ್ರ್ಯಾಗರಽ ಇಡಸು ರಾಮೂ; ಮರೆಯಬ್ಯಾಡಾ. ಅಯ್ಯಯ್ಯ. ಎಮ್ಮಿ ಕರಾ ಕಟ್ಸೂದ್ಸುದ್ದಾ ಮರ್‍ತೆ ಬಟ್ನಾನು! ಮಲ್ಯಾ ನೀನರೇ ನೆನಪ ಮಾಡಬೇಕೋ ಇಲ್ಲೋ! ಹೋಗು ಕರಾಕಟ್ಟು.

ನಾ ಬರ್‍ತೀನ್ಯಾ. ಹೂಂ. ಟಾಂಗಾ ಹೊಡೀಪಾ ಇಮಾಮಾ. ಉಡುಪಿ ಯಾತ್ರೀಯವರೆಲ್ಲಾರೂ ಟೇಸನ ತನ್ಕ ಹೋಗಿದ್ದಾರೋ ಏನೋ! ತಡಾ ಅತ! ಗಾಡೀ ಸಿಗೂದಿಲ್ಲ? ಅಯ್ಯ ನನ್ನ ಕರ್‍ಮ! ನನ್ನ ನಸೀಬ್ದಾಗಿಲ್ಲ ಉಡುಪಿ ಯಾತ್ರಿ. ದೇವರೇನ್ಮಾಡ್ಯಾನು. ಇರ್‍ಲಿ. ಹೊರಟದ್ದು ಹೊರಟೇವು ತೊರವಿಗ್ಹೋಗಿ ನರಸಿಂಹ ದೇವರಿಗೆ ಕಾಯರೇ ಒಡಿಸಿಗೊಂಡು ಬರೋಣ. ನಮ್ಮ ಪಾಲಿಗೆ ತೊರವಿ ನರಸಿಂಹ ದೇವ್ರಽ ಉಡುಪಿ ಕೃಷ್ಣಾಂಬೂಣು. ಇಂದ್ಯಾವಾರ? ಮಂಗಳವಾರ! ತೊರವಿಗ್ಹೋಗೂದಾದ್ರ ನಾಡ್ದ ಬ್ರಸ್ಪತ್ವಾರ ಹೋದರಾತು.

ಇಳಸಪಾ ಸಾಮಾನ. ನಿನ್ಮಾಡೂದು ಹರಿ! ನಿನ್ನಿಛ್ಛಾ!!
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...