ಯದುಮಣಿಯ ಜನುಮದಿನ

ಯಾದವರ ಜಿವಸುಳಿ ವುರಿಗೆರೆಯು ಮೈಸೂರು
ಆದಿಯಲಿ ತೆಂಕಣಕೆ ಅಂಕಿತವ ನಿಡಲಿಳಿದು
ಮೇದಿನಿಯ ನಾಡಿಸಿದ ನಾಡಿಯಿದು ಬೆಳೆದಿಹುದು ದ್ವಾಪರದಿ ಕಲ್ಕಿಗೆನಲು

ಆದಿಯಿಂ ರಾಜ ಕಂಠೀರವರ ದೇವಚಾ
ಮೋದಧಿಯ ಚಂದ್ರ ಕೃಷ್ಣೇಂದ್ರನೆನೆ ಜ್ಯೋತಿಗಳ
ಮೋದದಲಿ ರಾಜಸಿರಿ ಹಾದಿಯಲಿ ಎಣಿಸಿಹಳು ಮಹಿಷರ ನೆನಹಿನಲ್ಲಿ

ದಳವಿ ನ್ನೊಂದರಳುತಲಿದೆ ನೋಡಿರಿ
ತಿಳಿಹೃದಯದ ತೆರೆ ತೆಗೆಯುತಲಿರುವುದು
ತಿಳಿ! ಯಾದವ ಶಕುತಿಯ ದಳವೆದ್ದಿತು! ಈ ದಿನ ಜನುಮದಿನ

ಸುಳಿಸುಳಿ ಕಂಪಿನ ಸುಳಿಯಲಿ ಪ್ರಜೆಗಳು
ಕಳಕಳ ರವದಲಿ ಕೂಡುತ ಹರಿದರು
ಇಳೆಯೊಳು ಹೊಸದಿನ ವೊಂದುರಿಯುತಲಿದೆ ಕಾಂತಿಯ ನೋಡೆನುತ

ವನವನಾಂ ತರದಿಂದ ಹೊರಸೂಸು ತಿರಸುರಭಿ
ಘನಪಥದಲತಿಥಿ ಜನ ಮನಮರೆದು ಸುಳಿಸುಳಿಯೆ
ಸನುಮತದ ಸುಳಿಯಿಡುತ ಚಿರದಿನದ ಗೆಳೆತನವು
ಬಲು ಬಿರಿದು ಸುರಿಯೆ ಮಧುವು

ಮನವರಳಿ ಕಂಪೊಗೆಯೆ ಮಹಿಷೂರ ನಾಡೊಳಗೆ
ಜನುಮದಿನ ಜನವಿದಕೆ! ಜನುಮದಿನ ಯಾದವರ
ಘನಜೋತಿಲತೆಗಿದುವೆ! ಜನುಮದಿನ ವೈಭವಕೆ!
ಜನುಮದಿನ! ಸುಖಶಾಂತಿಗೆ

ಜಗದಲಿ ಕೋಲಾ ಹಲವಿದು ಹೊಳಲಿಡೆ
ಚಿಗುರಲು ಹೊಸದಿನ ವರಳಲು ರವಿಸುಮ
ಬಗೆಬಗೆ ನಿಧಿಗಳ ನೊಗೆದಿಡೆ ಧರಣಿಯು ಕೈಗಾಣಿಕೆಯೆನುತ

ಮಿಗೆಸವಿ ಪುರುಳನು ಪ್ರಜೆಗಳು ತರುತಿರೆ
ಸೊಗೆಯಿಪ ನೆನಹವು ಹಾರುತಬರುತಿರೆ
ಗಗನಕೆ ನೆಗೆದಿತು ಹಳದಿನದಂಚೆಯು ಹೊಸದಿನ ದನಿಗೊಡಲು

ನುಂಗುತಲಿ ಮಲಗೆದ್ದು ಹಳೆದಿನದ ದುಗುಡಗಳ
ಸಂಗಡಲೆ ಚಿಗಿದೆದ್ದು ಗಂಡಭೇರುಂಡವದು
ಕಂಗಳಿರೆ ಭರವಸೆಯ ಜೋತಿಯೆರಡೆನುವಂತೆ ಮೀಯುತಿರೆ ಆಗಸದಲಿ

ಕೆಂಗಿರುಣದಲಿ ಮಿಂದು ಯದುಮಣಿಯ ಮನವಿಂದು
ಸಿಂಗರಿಸಿ ಕೈಬಿಗಿದ ಜನವೃಂದವನು ಬಿಗಿದು
ಕಂಗಳಾಹೊಳಹಿನಲಿ! ಕಂಬನಿಯ ಮಿಡಿಯೆ! ನವ
ಜೀವಕಾದಿಯಿದು! ಎನುತ

ಮಂಜುಳ ರವವೇ ನೆನ್ನುತ ಚಿನನ
ಕಂಜಗಳರಳಲು ಕೇಶವಗವಿಯಿಂ
ದಂಜುತ ಬರುತಲೆ ಗೊಂದಲ ವೇನನೆ! ಚಂಡಿಯು ನಸುನಗಲು

“ನಂಜಿನ ಕೋರೆಯು ಸಡಲಿವೆಕಾಲಗೆ!
ಆಂಜದಿರಂಜದಿರವಮುಳಿದರೆ! ನೀ”
ನಂಜನಗೂಡಲಿ ಧೈರ್ಯದ ನುಡಿಬರೆ ಕೊಂಡಿಯು ಸಡಲಿದವು

ದಿನದೇರು ಬಹಮುಂದೆ ಬಿಳಿಗೊಳದ ಕಳಶದಲಿ
ಹನಿಸಿಡುವೆ ಸೈಕತವ ಗೋದೆಯಲಿ ನಾಮಿಂದು
ಮನವಾಜಿಯೇರುತಲಿ ತುಂಬುವೆನು ತುಂಗೆಯಲಿ
ಭದ್ರೆಯಲಿ ಶುಭಜಲವನು

ವನಪಥವ ಕಾವೇರಿ ಬಿಡುವುದರ ಮುಮ್ಮುಂದೆ
ಹನಿಸಿಡುವೆ ಕಳಶಕ್ಕೆ! ಶಿರಿಯುಗದ ಜೀವನವ!
ಘನಪಾದವೆರಡನ್ನು ತೊಳೆಯುವೆನು ಬಾ! ವಿಭುವೆ!
ಕರುನಾಡ ಹೃದಯದಲ್ಲಿ

ನಲಿದೆದ್ದು ಹಂಪೆಯಲಿ ಶಿಖಿಯೆತ್ತೆ ಕೊಳಲನ್ನು
ಜಲ! ಜೋಗ ಪಾತ್ರದಲ್ಲಿ ಜಯಘೋಷ ಮಾಡುತಿರೆ
ತಿಳಿನೆನಹ ಗಂಗರಸ ಚಾಲುಕ್ಯ ಹೊಯ್ಸಳರು
ಶುಭದಿನವು ! ಸಾಧುವೆನಲು

ಅಲೆಯೆದ್ದು ತೀರಗಳ ನಪ್ಪುತಲೆ ಬೆಳೆಯಿರೆನೆ
ಕಳಕಳವು ಕಾಳೆಯಿಡಲರಿವಿನಟಿವಿಯ ದೂರಿ
ಘಳಿರನಿದೂ! ವೈತಾಳಿ! ಮಹಿಷೂರಮಂಗಳಕೆ
ಶ್ರೀ ಕೃಷ್ಣ ಏಳೆನುತಿದೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾರದ ಬಯಕೆ
Next post ಗಾಯಗಳು

ಸಣ್ಣ ಕತೆ

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಅನಾವರಣ

    "ಹಲೋ-ಸ್ವೀಟಿ-ಗುಡ್ ಮಾರ್‍ನಿಂಗ್-" ಡಾಕ್ಟರ್ ವಿಜಯಾ ಪ್ರೊಫೆಸರ್‍ಗೆ ವಿಶ್ ಮಾಡಿದಳು. ಆತ್ಮವಿಶ್ವಾಸದ, ಧೈರ್‍ಯ-ಆಸೆ ಭರವಸೆ ಹುಟ್ಟಿಸುವ ಪುಟ್ಟ ತೀಕ್ಷ್ಣವಾದ ಕಣ್ಣುಗಳ ಸ್ವಲ್ಪವೇ ಸ್ಥೂಲಕಾಯದ ಎತ್ತರದ ನಿಲುವಿನ ಮಧ್ಯ ವಯಸ್ಸು… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ತಾಯಿ-ಬಂಜೆ

    "ಅಯ್ಯೋ! ಅಮ್ಮ!... ನೋವು... ನೋವು... ಸಂಕಟ.... ಅಮ್ಮ!-" ಒಂದೇ ಸಮನಾಗಿ ನರಳಾಟ. ಹೊಟ್ಟೆಯನ್ನು ಕಡೆಗೋಲಿನಿಂದ ಕಡದಂತಾಗುತ್ತಿತ್ತು. ಈ ಕಲಕಾಟದಿಂದ ನರ ನರವೂ ಕಿತ್ತು ಹೋದಂತಾಗಿ ಮೈಕೈಯೆಲ್ಲಾ ನೋವಿನಿಂದ… Read more…