Home / ಕವನ / ಅನುವಾದ / ನಾವು ಬಹಳ ಜನ

ನಾವು ಬಹಳ ಜನ

ನಾನು ಯಾರು ಯಾರೋ ಆಗಿ ಬಿಟ್ಟಿದ್ದೇನೆ,
ನಿಜವಾಗಿ
ಯಾರಾಗಿರಬೇಕೆಂದು ನಿರ್ಧಾರಮಾಡಲು ಆಗಿಯೇ ಇಲ್ಲ.
ನನ್ನ ಅಂಗಿಯೊಳಗೆ ಕಳೆದು ಹೋಗಿರುವ ಅವರೆಲ್ಲ
ಬೇರೆ ಬೇರೆ ಊರುಗಳಿಗೆ ಹೋಗಿಬಿಟ್ಟಿದ್ದಾರೆ.
ಹಾಂ ಈಗೆಲ್ಲ ಸರಿಯಾಗಿದೆ ಅನ್ನಿಸಿ
ನಾನು ಜಾಣನಂತೆ ಕಾಣಬೇಕೆಂದು ಸಿದ್ಧನಾದಾಗ
ನನ್ನೊಳಗಡಗಿರುವ ಒಬ್ಬ ಮೂರ್ಖ
ನನ್ನ ಬಾಯನ್ನು ತುಂಬಿ ನಾಲಗೆಯ ಮೇಲೆ ನರ್ತಿಸುತ್ತಾನೆ.
ಮತ್ತೆ ಕೆಲವೊಮ್ಮೆ ಹಲವು ಗಣ್ಯರ ನಡುವೆ
ನಾನು ತೂಕಡಿಸುತ್ತಿರುವಾಗ
ಒಳಗಿನ ಧೈರ್‍ಯವನ್ನೆಲ್ಲ ಕೂಡಿಸಿಕೊಂಡು
ಧೀರನಂತಿರಬೇಕೆಂದರೆ
ನನಗೆ ಗೊತೇ ಇರದ ಹೇಡಿ ಸಾವಿರ ಹಿಂಜರಿಕೆಗಳೊಂದಿಗೆ.
ನನ್ನ ಇಡೀ ಅಸ್ತಿಪಂಜರದ ಮೇಲೆ
ಸವಾರಿ ಮಾಡುತ್ತಾನೆ,
ನಾಲ್ಕಂತಸ್ತಿನ ಸುಂದರ ಮನೆಗೆ ಬೆಂಕಿ ಬಿದ್ದಾಗ
ಫೈರ್ ಮ್ಯಾನನ್ನು ಕರೆದರೆ
ಡಿಡಿಟಿ ಹೊಡೆಯುವವನು ಓಡಿಬರುತ್ತಾನೆ :
ನಾನೇ ಅವನು. ನಾನು ಮಾಡಬಹುದಾದ್ದು ಏನೂ ಇಲ್ಲ.
ನನ್ನನ್ನು ನಾನು ಹೇಗೆ ಒಗ್ಗೂಡಿಸಿಕೊಳ್ಳಲಿ?
ನಾನು ಓದುವ ಪುಸಕಗಳಲ್ಲಿ ಹೀರೊಗಳು
ಸಿಂಹ ಸದೃಶರು, ಆತ್ಮ ವಿಶ್ವಾಸ ಭರಿತರು.
ಅವರ ಕಥೆ ಓದಿದರೆ ನನಗೋ
ಅಸೂಯೆಯಿಂದ ಸಾಯಬೇಕೆನಿಸುತ್ತದೆ.
ಸಿನಿಮಾಕ್ಕೆ ಹೋದರೆ
ಗಾಳಿಯಲ್ಲಿ ಸುಂಯ್ ಗುಡುವ ಬುಲೆಟ್ಟುಗಳ ನಡುವೆ
ಆರಾಮವಾಗಿ ಓಡಾಡುವ ಕೌಬಾಯ್ಗಳನ್ನು ಕಂಡು ಹೊಟ್ಟೆಕಿಚ್ಚಾಗುತ್ತದೆ.
ಎಲಾ, ಅವರ ಕುದುರೆಗೂ ಎಷ್ಟೊಂದು ಧೈರ್ಯ ಅನ್ನಿಸಿಬಿಡುತ್ತದೆ.
ಒಳಗಿನ ಉತ್ಸಾಹಿಯನ್ನು ಬಾರೆಂದು ಕರೆದರೆ
ನನ್ನೊಳಗಿಂದ ಅದೇ ಮುದಿ ಸೋಮಾರಿ ಆಲಸಿ ಕಾಣಿಸಿಕೊಳ್ಳುತ್ತಾನೆ.
ಅದಕ್ಕೆಂದೇ ನಾನೆಂದರೆ ಯಾರೆಂದು ನನಗೆ ತಿಳಿಯುವುದೇ ಇಲ್ಲ.
ನಾನೆಂದರೆಷ್ಟು ಜನ? ಈಗಿರುವವರು ಯಾರು?
ಗೊತ್ತೇ ಆಗುವುದಿಲ್ಲ,
ರಾಜನಂತೆ ಕರೆಗಂಟೆಯೊತ್ತಿ, ನನ್ನನ್ನು, ನನ್ನೊಳಗಿನ ನಿಜವಾದ ನನ್ನನ್ನು
ಕರೆಯಬೇಕು ನಾನು. ನಿಜವಾದ ನಾನು ಸಿಗಬೇಕಾದರೆ
ನಾನು ಮರೆಯಾಗಿಬಿಡಬಾರದಲ್ಲ.
ಈಗ, ಬರೆಯುತಿರುವಾಗ, ನಾನು ದೂರದಲ್ಲಿದ್ದೇನೆ;
ವಾಪಸ್ಸು ಬರುವಷ್ಟು ಹೊತ್ತಿಗೆ ನಾನು ಹೊರಟುಹೋಗಿರುತ್ತೇನೆ.
ಹೀಗೆ ನನಗೆ ಆಗುವ ಹಾಗೇ ಬೇರೆಯವರಿಗೆ ಕೂಡಾ,
ಆಗುತ್ತದೆಯೇ ಎಂದು ತಿಳಿಯುವ ಆಸೆ ನನಗೆ.
ನನಗೆ ನಾನು ಕಾಣಿಸುವಂತೆ ಅವರಿಗೂ ಅವರು ಕಾಣುತ್ತಾರೆಯೋ?
ಈ ಸಮಸ್ಯೆ ತಳಮುಟ್ಟ ಶೋಧಿಸಿದ ಮೇಲೆ
ಸ್ಕೂಲಿಗೆ ಹೋಗಿ ಪಾಠ ಹೇಳುತ್ತೇನೆ.
ನನ್ನ ಸಮಸ್ಯೆ ವಿವರಿಸಲು ಹೊರಟರೆ
ನನ್ನ ಬಗ್ಗೆ ಅಲ್ಲ, ಭೂಗೋಳದ ಬಗ್ಗೆಮಾತಾಡುತ್ತೇನೆ.
*****
ಮೂಲ: ಪಾಬ್ಲೋ ನೆರುಡಾ

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...