Home / ಕವನ / ಅನುವಾದ / ಚಹರೆಪಟ್ಟಿ

ಚಹರೆಪಟ್ಟಿ

ರಿಕಾರ್ಡು ಬರೆದುಕೋ.
ನಾನು ಅರಬ.
ನನ್ನ ಕಾರ್ಡಿನ ನಂಬರು ಐವತ್ತುಸಾವಿರ.
ಎಂಟು ಮಕ್ಕಳು.
ಒಂಬತ್ತನೆಯದು ಈ ಬೇಸಗೆಯಲ್ಲಿ ಆಗಲಿದೆ.
ಇದಕ್ಕೆ ಕೋಪ ಯಾಕೆ?
ರಿಕಾರ್ಡು ಬರೆದುಕೋ.

ನಾನು ಅರಬ
ಗೆಳೆಯರೊಡನೆ ಕಲ್ಲಿನ ಕ್ವಾರಿಯಲ್ಲಿ ಕೆಲಸ.
ಎಂಟು ಮಕ್ಕಳು.
ಅವರ ಬ್ರೆಡ್ಡಿಗೆ, ಬಟ್ಟೆಗೆ, ಸ್ಕೂಲು ಪುಸ್ತಕಕ್ಕೆ
ಕಲ್ಲು ಕದಿಯುತ್ತೇನೆ.
ನಿಮ್ಮ ಮನೆ ಬಾಗಿಲಿಗೆ ಭಿಕ್ಷಕ್ಕೆ ಬಂದಿಲ್ಲವಲ್ಲ,
ನಿಮ್ಮಕಾಲಿಗೆ ಬಿದ್ದು ಬೇಡಿಲ್ಲವಲ್ಲ.
ಇದಕ್ಕೆ ಯಾಕೆ ಕೋಪ?
ರಿಕಾರ್ಡು ಬರೆದುಕೋ.

ನಾನು ಅರಬ.
ಬಿರುದಿಲ್ಲದ ಹೆಸರಿನವನು,
ಕೋಪದ ಸುಳಿಗೆ ಸಿಕ್ಕ ದೇಶದಲ್ಲಿ
ತಾಳ್ಮೆಯಿಂದ ಇರುವವನು.
ನನ್ನ ಬೇರು ಕಾಲದ ಆದಿಗಿಂತ ಹಳೆಯದು.
ಸಮುದ್ರಗಳು ಹುಟ್ಟುವ ಮುನ್ನ
ಸೈಪ್ರಸ್ಸು ಆಲಿವ್ವು ಮರಗಳು ಹುಟ್ಟುವ ಮುನ್ನ
ಜೊಂಡು ಬೆಳೆಯುವ ಮುನ್ನ
ಮುನ್ನ ಎಂಬ ಮುನ್ನ ಬೇರು ಬಿಟ್ಟಿದ್ದೆ.
ನಮ್ಮಪ್ಪ ನೇಗಿಲ ಕುಲದಿಂದ ಬಂದವನು,
ಶ್ರೀಮಂತ ಸರದಾರನಲ್ಲ,
ನಮ್ಮ ತಾತನೂ ರೈತ.
ವಂಶವೃಕ್ಷವಿಲ್ಲದವನು.
ನಮ್ಮ ಮನೆ
ಕೋಲು ಹೂತು ಹುಲ್ಲು ಹೊದಿಸಿದ ಗುಡಿಸಲು.
ನನ್ನ ಸ್ಥಿತಿಯಿಂದ ಸಮಾಧಾನವಾಯಿತೇ?
ನನ್ನ ಹೆಸರಿನ ಜೊತೆಗೆ ಮನೆತನದ ಹೆಸರು ಇಲ್ಲ.
ರಿಕಾರ್ಡು ಬರೆದುಕೋ.

ನಾನು ಅರಬ.
ಕೂದಲ ಬಣ್ಣ : ದಟ್ಟ ಕಪ್ಪು.
ಕಣ್ಣಿನ ಬಣ್ಣ : ಕಂದು.
ನನ್ನ ಗುರುತಿನ ಚಹರೆ : ನೆತ್ತಿಯ ಮೇಲೆ
ಮುಟ್ಟಿದವರ ಕೈ ಸೀಯಿಸಿಬಿಡುವ
ಮಂತ್ರಾಕ್ಷರಗಳಿವೆ ‘ಇಖಾಲ್’ ನೊಡನೆ ‘ಖೆಫಿಯೆ’
ನನ್ನವಿಳಾಸ : ದೂರದ, ಎಲ್ಲರೂ ಮರೆತ, ಹೆಸರಿಲ್ಲದ ಬೀದಿಗಳ,
ಎಲ್ಲರೂ ಕ್ವಾರಿಯಲ್ಲಿ ಹೊಲದಲ್ಲಿ ದುಡಿಯುವ
ಒಂದು ಹಳ್ಳಿ.
ಇದಕ್ಕೆ ಯಾಕೆ ಕೋಪ?
ರಿಕಾರ್ಡು ಬರೆದುಕೋ.

ನಾನು ಅರಬ.
ನೀವು ನಮ್ಮತಾತಂದಿರ ದ್ರಾಕ್ಷಿ ತೋಟ ಕದ್ದಿರಿ.
ನಾನು ದುಡಿಯುತ್ತಿದ್ದೆ
ನನ್ನಮಕ್ಕಳು ದುಡಿಯುತ್ತಿದ್ದರು.
ನನಗೆ ನನ್ನ ಮೊಮ್ಮಕ್ಕಳಿಗೆ
ಈ ಕಲ್ಲು ಬಂಡೆ ಮಾತ್ರ ಬಿಟ್ಟಿದ್ದೀರಿ.
ಸರ್ಕಾರ ಇದನ್ನೂ ತೆಗೆದುಕೊಳ್ಳುತ್ತೆಂದು ಹೇಳುತ್ತಾರೆ.
ಹೌದೆ ?

ಹೀಗೆ!
ರಿಕಾರ್ಡು ಬರೆದುಕೋ, ಮೊದಲ ಪುಟದ ಮೇಲುಗಡೆ :
ನನಗೆ ಜನರನ್ನು ಕಂಡರೆ ದ್ವೇಷವಿಲ್ಲ.
ನಾನು ಯಾರ ಜಮೀನಿನೊಳಗೂ ಕಾಲಿಡುವುದಿಲ್ಲ.
ಆದರೂ, ನನಗೆ ಹಸಿವಾದರೆ
ನನ್ನನ್ನು ಓಡಿಸಿದವರ ಮಾಂಸ ತಿನ್ನುತ್ತೇನೆ.
ಹುಷಾರು, ನನ್ನ ಹಸಿವಿನ ಬಗ್ಗೆಹುಷಾರು!
ನನ್ನ ಕೋಪದ ಬಗ್ಗೆ ಹುಷಾರು!
*****
ಮೂಲ: ಮಹಮೂದ್ ದರ್‍ವೇಶ್

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...