ಚಹರೆಪಟ್ಟಿ

ರಿಕಾರ್ಡು ಬರೆದುಕೋ.
ನಾನು ಅರಬ.
ನನ್ನ ಕಾರ್ಡಿನ ನಂಬರು ಐವತ್ತುಸಾವಿರ.
ಎಂಟು ಮಕ್ಕಳು.
ಒಂಬತ್ತನೆಯದು ಈ ಬೇಸಗೆಯಲ್ಲಿ ಆಗಲಿದೆ.
ಇದಕ್ಕೆ ಕೋಪ ಯಾಕೆ?
ರಿಕಾರ್ಡು ಬರೆದುಕೋ.

ನಾನು ಅರಬ
ಗೆಳೆಯರೊಡನೆ ಕಲ್ಲಿನ ಕ್ವಾರಿಯಲ್ಲಿ ಕೆಲಸ.
ಎಂಟು ಮಕ್ಕಳು.
ಅವರ ಬ್ರೆಡ್ಡಿಗೆ, ಬಟ್ಟೆಗೆ, ಸ್ಕೂಲು ಪುಸ್ತಕಕ್ಕೆ
ಕಲ್ಲು ಕದಿಯುತ್ತೇನೆ.
ನಿಮ್ಮ ಮನೆ ಬಾಗಿಲಿಗೆ ಭಿಕ್ಷಕ್ಕೆ ಬಂದಿಲ್ಲವಲ್ಲ,
ನಿಮ್ಮಕಾಲಿಗೆ ಬಿದ್ದು ಬೇಡಿಲ್ಲವಲ್ಲ.
ಇದಕ್ಕೆ ಯಾಕೆ ಕೋಪ?
ರಿಕಾರ್ಡು ಬರೆದುಕೋ.

ನಾನು ಅರಬ.
ಬಿರುದಿಲ್ಲದ ಹೆಸರಿನವನು,
ಕೋಪದ ಸುಳಿಗೆ ಸಿಕ್ಕ ದೇಶದಲ್ಲಿ
ತಾಳ್ಮೆಯಿಂದ ಇರುವವನು.
ನನ್ನ ಬೇರು ಕಾಲದ ಆದಿಗಿಂತ ಹಳೆಯದು.
ಸಮುದ್ರಗಳು ಹುಟ್ಟುವ ಮುನ್ನ
ಸೈಪ್ರಸ್ಸು ಆಲಿವ್ವು ಮರಗಳು ಹುಟ್ಟುವ ಮುನ್ನ
ಜೊಂಡು ಬೆಳೆಯುವ ಮುನ್ನ
ಮುನ್ನ ಎಂಬ ಮುನ್ನ ಬೇರು ಬಿಟ್ಟಿದ್ದೆ.
ನಮ್ಮಪ್ಪ ನೇಗಿಲ ಕುಲದಿಂದ ಬಂದವನು,
ಶ್ರೀಮಂತ ಸರದಾರನಲ್ಲ,
ನಮ್ಮ ತಾತನೂ ರೈತ.
ವಂಶವೃಕ್ಷವಿಲ್ಲದವನು.
ನಮ್ಮ ಮನೆ
ಕೋಲು ಹೂತು ಹುಲ್ಲು ಹೊದಿಸಿದ ಗುಡಿಸಲು.
ನನ್ನ ಸ್ಥಿತಿಯಿಂದ ಸಮಾಧಾನವಾಯಿತೇ?
ನನ್ನ ಹೆಸರಿನ ಜೊತೆಗೆ ಮನೆತನದ ಹೆಸರು ಇಲ್ಲ.
ರಿಕಾರ್ಡು ಬರೆದುಕೋ.

ನಾನು ಅರಬ.
ಕೂದಲ ಬಣ್ಣ : ದಟ್ಟ ಕಪ್ಪು.
ಕಣ್ಣಿನ ಬಣ್ಣ : ಕಂದು.
ನನ್ನ ಗುರುತಿನ ಚಹರೆ : ನೆತ್ತಿಯ ಮೇಲೆ
ಮುಟ್ಟಿದವರ ಕೈ ಸೀಯಿಸಿಬಿಡುವ
ಮಂತ್ರಾಕ್ಷರಗಳಿವೆ ‘ಇಖಾಲ್’ ನೊಡನೆ ‘ಖೆಫಿಯೆ’
ನನ್ನವಿಳಾಸ : ದೂರದ, ಎಲ್ಲರೂ ಮರೆತ, ಹೆಸರಿಲ್ಲದ ಬೀದಿಗಳ,
ಎಲ್ಲರೂ ಕ್ವಾರಿಯಲ್ಲಿ ಹೊಲದಲ್ಲಿ ದುಡಿಯುವ
ಒಂದು ಹಳ್ಳಿ.
ಇದಕ್ಕೆ ಯಾಕೆ ಕೋಪ?
ರಿಕಾರ್ಡು ಬರೆದುಕೋ.

ನಾನು ಅರಬ.
ನೀವು ನಮ್ಮತಾತಂದಿರ ದ್ರಾಕ್ಷಿ ತೋಟ ಕದ್ದಿರಿ.
ನಾನು ದುಡಿಯುತ್ತಿದ್ದೆ
ನನ್ನಮಕ್ಕಳು ದುಡಿಯುತ್ತಿದ್ದರು.
ನನಗೆ ನನ್ನ ಮೊಮ್ಮಕ್ಕಳಿಗೆ
ಈ ಕಲ್ಲು ಬಂಡೆ ಮಾತ್ರ ಬಿಟ್ಟಿದ್ದೀರಿ.
ಸರ್ಕಾರ ಇದನ್ನೂ ತೆಗೆದುಕೊಳ್ಳುತ್ತೆಂದು ಹೇಳುತ್ತಾರೆ.
ಹೌದೆ ?

ಹೀಗೆ!
ರಿಕಾರ್ಡು ಬರೆದುಕೋ, ಮೊದಲ ಪುಟದ ಮೇಲುಗಡೆ :
ನನಗೆ ಜನರನ್ನು ಕಂಡರೆ ದ್ವೇಷವಿಲ್ಲ.
ನಾನು ಯಾರ ಜಮೀನಿನೊಳಗೂ ಕಾಲಿಡುವುದಿಲ್ಲ.
ಆದರೂ, ನನಗೆ ಹಸಿವಾದರೆ
ನನ್ನನ್ನು ಓಡಿಸಿದವರ ಮಾಂಸ ತಿನ್ನುತ್ತೇನೆ.
ಹುಷಾರು, ನನ್ನ ಹಸಿವಿನ ಬಗ್ಗೆಹುಷಾರು!
ನನ್ನ ಕೋಪದ ಬಗ್ಗೆ ಹುಷಾರು!
*****
ಮೂಲ: ಮಹಮೂದ್ ದರ್‍ವೇಶ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಾವಿನ ಹಾಡು
Next post ಆರ್ಥಿಕಾಭಿವೃದ್ಧಿಯಲ್ಲಿ ಹಣದ ಪಾತ್ರ

ಸಣ್ಣ ಕತೆ

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…