Home / ಕವನ / ಕವಿತೆ / ಹಂಪೆ

ಹಂಪೆ

೧. ಹೇಮಕೂಟ ದೃಶ್ಯ

ಬನ್ನಿರಣ್ಣೋ ಬನ್ನಿರಣ್ಣೋ ಭಾರತೀಯರು ಹಂಪೆಗೆ
ಮಾಲ್ಯವಂತ ಮತಂಗರುಷಿಮುಖ ಹೇಮಕೂಟದ ಬೀಡಿಗೆ

ಕಂಡೆವದಿಗೋ ಕಂಡೆವದಿಗೋ ಅದ್ಭುತದ ದೃಶ್ಯಂಗಳ
ತುಂಗಭದ್ರೆಯ ಬದಿಗೆ ನೋಡಾ ಪರ್ವತಂಗಳ ಸಾಲ್ಗಳ

ಏನಿದಚ್ಚರಿ ಪ್ರಕೃತಿದೇವಿಯು ನೃತ್ಯಗೈದಿಹಳೀ ಎಡೆ
ಮನುಜರೆದೆಯನು ಭೇದಿಸಿ ಮುಗ್ಧಗೊಳಿಸುವುದೇ ಎಡೆ

ನಮ್ಮ ದೇಶದ ಹೆಮ್ಮೆಯನು ಪ್ರಕಟಿಸುತ ನಿಂತಿದೆ ಹಂಪೆಯು
ದಿಕ್ಕುದಿಕ್ಕಿಗು ವ್ಯಾಪಿಸಿದೆ ಗತವೈಭವದ ಈ ಕೀರ್ತಿಯು

ಲೆಕ್ಕವಿಲ್ಲದ ದೇಗುಲಂಗಳು ದಿಕ್ಕುಗಾಣದೆ ನಿಂತಿವೆ
ಮಸಣವಾಗಿದೆ ಪಟ್ಟಣವು ವಿಧಿ ಮಹಿಮೆ ತಿಳಿಯಲು ಸಾಧ್ಯವೆ?
***

೨ ವಿರೂಪಾಕ್ಷ ದರ್ಶನ

ಚಿನ್ಮಯಾತ್ಮಕ ಶ್ರೀಗುರು ಪರಮೇಶ ಪಾವನಮೂರುತಿ
ನಿಮ್ಮ ಪಾದಕೆ ನಮಿಸುವೆನು ಓ ಲೋಕಮಾತೆ ಪಾರ್ವತಿ

ಸಂತಸದಿ ನಾ ಪೊರಟು ಬಂದೆನು ನಿಮ್ಮ ಸೇವೆಯ ಗಯ್ಯಲು
ಮಾರುಹೋದೆನು ಇಲ್ಲಿ ತುಂಬಿಹ ಪ್ರಕೃತಿ ಸಿರಿಯನು ಕಾಣಲು

ದೇಗುಲದ ಸಿಂಗರದ ಚಿತ್ರದ ಶಿಲ್ಪದೊಳು ನಾ ಬರೆಯಲೆ?
ಆಗಸವ ಚುಂಬಿಸುತ ನಿಂತಿಹ ಗೋಪುರದ ಬೆಲೆ ಕಟ್ಟಲೆ

ದೇವರಾಯನ ಕಾಲವನು ನೆನೆನೆನೆದು ಕಂಬನಿಗರೆಯಲೆ?
ಭಾಗ್ಯಲಕ್ಷ್ಮಿಯ ಸೂರೆಗೊಂಡಾ ಹಂತಕರ ನಾ ಶಪಿಸಲೆ?

ಭಾರತಾಂಬೆಯ ವೀರಪುತ್ರರೆ ವಿಜಯನಗರದ ಅರಸರೇ
ರಕ್ಕಸರ ಚಂಡಾಡಿ ರಾಜ್ಯವನುಳಿಸಿಕೊಳ್ಳದೆ ಪೋದಿರೆ!
***

೩. ಕೋದಂಡ ರಾಮಸ್ವಾಮಿಯ ದೇವಸ್ಥಾನದ ಮುಂದಿನ ದೃಶ್ಯ

ಆಗದಾಗದು ನಿನ್ನ ಬಣ್ಣಿಸಲಸದಳವು ಓ ಪ್ರಕೃತಿಯೇ
ಬಾಗಿ ನಮಿಸುವೆ ಪರ್ವತಂಗಳೆ ಶರಣು ಶರಣು ತುಂಗೆಯೆ

ನಿನ್ನ ಝರಿಯದು ಕೊಚ್ಚಿತಂದಿಹ ಸಣ್ಣಮಳಲಿನ ಕಣದೊಳು
ಒಂದು ಕಣಕೂ ತೂಗಲಾರದ ಪಾಮರಳು ಏಗೈವಳು

ದಟ್ಟವಾಗಿಹ ಪರ್ವತಂಗಳೆ ವಿಜಯನಗರ ಧ್ವಜಗಳೇ
ಅಟ್ಟಹಾಸದ ನಿಮ್ಮ ಹಿರಿಮೆಯ ಬಣ್ಣಿಸಲು ನಾನಸಮಳೇ!

ಸೂರೆಗೊಂಡಿತು ಮನಸಿದೆಲ್ಲವು ಯಾರು ಕದ್ದರೊ ಕಾಣೆನು
ಮಾರುತಿ ವೈದೇಹಿ ಲಕ್ಷ್ಮಣರೊಡನೆ ಇಲ್ಲಿಹ ರಾಮನೊ?

ತುಂಗೆ ಭೋರೆಂದೆನುತ ಮೊರೆಯಲು ಎದ್ದವೆನ್ನೊಳು ಅಲೆಗಳು
ಬಂದುದೆಲ್ಲವ ಬಣ್ಣಿಸಲು ಸಾಹಸಿಗರೇ ಬಡ ಕವಿಗಳು?
***

೪ ವಿಠ್ಠಲರಾಯನ ದೇವಸ್ಥಾನದ ದೃಶ್ಯ

ಸ್ವಾಮಿ ವಿಠ್ಠಲರಾಯ ನಿನ್ನಯ ಪೆಸರಿನದೆ ಈ ದೇಗುಲ?
ಸಿಂಗರದ ಮಂಟಪವನೊಲ್ಲದೆ ಪೋದೆಯಾ ಬಿಡು ಸಾಕೆಲ!

ಶಿಲ್ಪ ಕಲೆಗಳ ಗಣಿಯ ಸೃಜಿಸಿಹ ವಿಶ್ವಕರ್ಮನದಾವನು?
ದೈವದತ್ತನೊ! ಶಿಲ್ಪದೊಳು ತುಂಬಿಹನು ಜೀವದ ಕಳೆಯನು!

ಒತ್ತಿಹನು ಸೌಂದರ್‍ಯ ಮುದ್ರೆಯ ವಸ್ತುಚಯವನು ಪೋಣಿಸಿ
ಇತ್ತ ನೋಡಿರಿ, ಕಲೆಯ ಪ್ರಿಯರೇ, ಶಿಲ್ಪಿಹೃದಯವ ಶೋಧಿಸಿ

ಸಪ್ತಸ್ವರಗಳ ವೀಣೆ ಮಿಡಿಸುತ ಶಿಲೆಯೊಳಿರುವನು ಸಾಹಸಿ
ಸುತ್ತು ಸ್ತಂಭದಿ ಹಲವುಪರಿ ಶ್ರೀರಾಮಚರಿತೆಯ ಚಿತ್ರಿಸಿ

ಎದ್ದು ಬನ್ನಿರಿ ಕಲೆಯು ಕಾಡೊಳು ವ್ಯರ್ಥವಾಗಿದೆ ಹಾ ವಿಧಿ
ಎತ್ತ ನೋಡಲು ಶಿಥಿಲ ದೃಶ್ಯವೆ, ತಾಳಲಾರೆನು ಈ ಕುದಿ!
***

೫ ವಿದ್ಯಾರಣ್ಯರಿಗೆ

ಧರ್ಮಸ್ಥಾಪಕ ಜ್ಞಾನದಾಯಕ ಏನಿದೇನಿದು ತಾತನೇ
ಕರ್ಮವಿಂತೆಸಗಲ್ಕೆ ಕಾರಣವೇನು ತಿಳಿಸೈ ತಾತನೇ!

ಕೃಷ್ಣರಾಯರು ಗೈದ ಧರ್ಮಗಳೆತ್ತ ಪೋದುವು ಸಮರದಿ
ಕುಲಗುರುವೆ, ನೀನಿಲ್ಲೆ ಕಾದಿರೆ ಉಂಟೆ ಅಪಜಯ ನಗರದಿ?

ಎಲ್ಲಿ ವಿಜಯ ಧ್ವಜಗಳೆಲ್ಲಿ? ಎಲ್ಲಿ ಭೇರಿಮೃದಂಗವು?
ಎಲ್ಲಿ ಕವಿವರರೆಲ್ಲಿ? ಪಂಡಿತರೆಲ್ಲಿ ವೇದಪುರಾಣವು?

ಅಟ್ಟಹಾಸವು ಮೂರು ದಿನಮಿದು! ದೈವಕೃತಿ ಇಂತೆಂಬೆಯ?
ಹುಟ್ಟು ಸಾವಿನ ಗುಟ್ಟು; ಸೃಷ್ಟಿಯ ಕರ್ತನನು ಕೇಳೆಂಬೆಯಾ?

ಗತಿಸಿದರಸರ ಕೀರ್ತಿ ನಿಂತಿದೆ ಸಾಲದೇ ಅದು ಎಂಬೆಯಾ?
ಇದ್ದ ರಾಜ್ಯವನುಳಿಸಿಕೊಂಡರೆ ಸಾಕು ಜನಕಜೆ ಎಂಬೆಯಾ?
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...