Home / ಕವನ / ಕವಿತೆ / ಹಂಪೆ

ಹಂಪೆ

೧. ಹೇಮಕೂಟ ದೃಶ್ಯ

ಬನ್ನಿರಣ್ಣೋ ಬನ್ನಿರಣ್ಣೋ ಭಾರತೀಯರು ಹಂಪೆಗೆ
ಮಾಲ್ಯವಂತ ಮತಂಗರುಷಿಮುಖ ಹೇಮಕೂಟದ ಬೀಡಿಗೆ

ಕಂಡೆವದಿಗೋ ಕಂಡೆವದಿಗೋ ಅದ್ಭುತದ ದೃಶ್ಯಂಗಳ
ತುಂಗಭದ್ರೆಯ ಬದಿಗೆ ನೋಡಾ ಪರ್ವತಂಗಳ ಸಾಲ್ಗಳ

ಏನಿದಚ್ಚರಿ ಪ್ರಕೃತಿದೇವಿಯು ನೃತ್ಯಗೈದಿಹಳೀ ಎಡೆ
ಮನುಜರೆದೆಯನು ಭೇದಿಸಿ ಮುಗ್ಧಗೊಳಿಸುವುದೇ ಎಡೆ

ನಮ್ಮ ದೇಶದ ಹೆಮ್ಮೆಯನು ಪ್ರಕಟಿಸುತ ನಿಂತಿದೆ ಹಂಪೆಯು
ದಿಕ್ಕುದಿಕ್ಕಿಗು ವ್ಯಾಪಿಸಿದೆ ಗತವೈಭವದ ಈ ಕೀರ್ತಿಯು

ಲೆಕ್ಕವಿಲ್ಲದ ದೇಗುಲಂಗಳು ದಿಕ್ಕುಗಾಣದೆ ನಿಂತಿವೆ
ಮಸಣವಾಗಿದೆ ಪಟ್ಟಣವು ವಿಧಿ ಮಹಿಮೆ ತಿಳಿಯಲು ಸಾಧ್ಯವೆ?
***

೨ ವಿರೂಪಾಕ್ಷ ದರ್ಶನ

ಚಿನ್ಮಯಾತ್ಮಕ ಶ್ರೀಗುರು ಪರಮೇಶ ಪಾವನಮೂರುತಿ
ನಿಮ್ಮ ಪಾದಕೆ ನಮಿಸುವೆನು ಓ ಲೋಕಮಾತೆ ಪಾರ್ವತಿ

ಸಂತಸದಿ ನಾ ಪೊರಟು ಬಂದೆನು ನಿಮ್ಮ ಸೇವೆಯ ಗಯ್ಯಲು
ಮಾರುಹೋದೆನು ಇಲ್ಲಿ ತುಂಬಿಹ ಪ್ರಕೃತಿ ಸಿರಿಯನು ಕಾಣಲು

ದೇಗುಲದ ಸಿಂಗರದ ಚಿತ್ರದ ಶಿಲ್ಪದೊಳು ನಾ ಬರೆಯಲೆ?
ಆಗಸವ ಚುಂಬಿಸುತ ನಿಂತಿಹ ಗೋಪುರದ ಬೆಲೆ ಕಟ್ಟಲೆ

ದೇವರಾಯನ ಕಾಲವನು ನೆನೆನೆನೆದು ಕಂಬನಿಗರೆಯಲೆ?
ಭಾಗ್ಯಲಕ್ಷ್ಮಿಯ ಸೂರೆಗೊಂಡಾ ಹಂತಕರ ನಾ ಶಪಿಸಲೆ?

ಭಾರತಾಂಬೆಯ ವೀರಪುತ್ರರೆ ವಿಜಯನಗರದ ಅರಸರೇ
ರಕ್ಕಸರ ಚಂಡಾಡಿ ರಾಜ್ಯವನುಳಿಸಿಕೊಳ್ಳದೆ ಪೋದಿರೆ!
***

೩. ಕೋದಂಡ ರಾಮಸ್ವಾಮಿಯ ದೇವಸ್ಥಾನದ ಮುಂದಿನ ದೃಶ್ಯ

ಆಗದಾಗದು ನಿನ್ನ ಬಣ್ಣಿಸಲಸದಳವು ಓ ಪ್ರಕೃತಿಯೇ
ಬಾಗಿ ನಮಿಸುವೆ ಪರ್ವತಂಗಳೆ ಶರಣು ಶರಣು ತುಂಗೆಯೆ

ನಿನ್ನ ಝರಿಯದು ಕೊಚ್ಚಿತಂದಿಹ ಸಣ್ಣಮಳಲಿನ ಕಣದೊಳು
ಒಂದು ಕಣಕೂ ತೂಗಲಾರದ ಪಾಮರಳು ಏಗೈವಳು

ದಟ್ಟವಾಗಿಹ ಪರ್ವತಂಗಳೆ ವಿಜಯನಗರ ಧ್ವಜಗಳೇ
ಅಟ್ಟಹಾಸದ ನಿಮ್ಮ ಹಿರಿಮೆಯ ಬಣ್ಣಿಸಲು ನಾನಸಮಳೇ!

ಸೂರೆಗೊಂಡಿತು ಮನಸಿದೆಲ್ಲವು ಯಾರು ಕದ್ದರೊ ಕಾಣೆನು
ಮಾರುತಿ ವೈದೇಹಿ ಲಕ್ಷ್ಮಣರೊಡನೆ ಇಲ್ಲಿಹ ರಾಮನೊ?

ತುಂಗೆ ಭೋರೆಂದೆನುತ ಮೊರೆಯಲು ಎದ್ದವೆನ್ನೊಳು ಅಲೆಗಳು
ಬಂದುದೆಲ್ಲವ ಬಣ್ಣಿಸಲು ಸಾಹಸಿಗರೇ ಬಡ ಕವಿಗಳು?
***

೪ ವಿಠ್ಠಲರಾಯನ ದೇವಸ್ಥಾನದ ದೃಶ್ಯ

ಸ್ವಾಮಿ ವಿಠ್ಠಲರಾಯ ನಿನ್ನಯ ಪೆಸರಿನದೆ ಈ ದೇಗುಲ?
ಸಿಂಗರದ ಮಂಟಪವನೊಲ್ಲದೆ ಪೋದೆಯಾ ಬಿಡು ಸಾಕೆಲ!

ಶಿಲ್ಪ ಕಲೆಗಳ ಗಣಿಯ ಸೃಜಿಸಿಹ ವಿಶ್ವಕರ್ಮನದಾವನು?
ದೈವದತ್ತನೊ! ಶಿಲ್ಪದೊಳು ತುಂಬಿಹನು ಜೀವದ ಕಳೆಯನು!

ಒತ್ತಿಹನು ಸೌಂದರ್‍ಯ ಮುದ್ರೆಯ ವಸ್ತುಚಯವನು ಪೋಣಿಸಿ
ಇತ್ತ ನೋಡಿರಿ, ಕಲೆಯ ಪ್ರಿಯರೇ, ಶಿಲ್ಪಿಹೃದಯವ ಶೋಧಿಸಿ

ಸಪ್ತಸ್ವರಗಳ ವೀಣೆ ಮಿಡಿಸುತ ಶಿಲೆಯೊಳಿರುವನು ಸಾಹಸಿ
ಸುತ್ತು ಸ್ತಂಭದಿ ಹಲವುಪರಿ ಶ್ರೀರಾಮಚರಿತೆಯ ಚಿತ್ರಿಸಿ

ಎದ್ದು ಬನ್ನಿರಿ ಕಲೆಯು ಕಾಡೊಳು ವ್ಯರ್ಥವಾಗಿದೆ ಹಾ ವಿಧಿ
ಎತ್ತ ನೋಡಲು ಶಿಥಿಲ ದೃಶ್ಯವೆ, ತಾಳಲಾರೆನು ಈ ಕುದಿ!
***

೫ ವಿದ್ಯಾರಣ್ಯರಿಗೆ

ಧರ್ಮಸ್ಥಾಪಕ ಜ್ಞಾನದಾಯಕ ಏನಿದೇನಿದು ತಾತನೇ
ಕರ್ಮವಿಂತೆಸಗಲ್ಕೆ ಕಾರಣವೇನು ತಿಳಿಸೈ ತಾತನೇ!

ಕೃಷ್ಣರಾಯರು ಗೈದ ಧರ್ಮಗಳೆತ್ತ ಪೋದುವು ಸಮರದಿ
ಕುಲಗುರುವೆ, ನೀನಿಲ್ಲೆ ಕಾದಿರೆ ಉಂಟೆ ಅಪಜಯ ನಗರದಿ?

ಎಲ್ಲಿ ವಿಜಯ ಧ್ವಜಗಳೆಲ್ಲಿ? ಎಲ್ಲಿ ಭೇರಿಮೃದಂಗವು?
ಎಲ್ಲಿ ಕವಿವರರೆಲ್ಲಿ? ಪಂಡಿತರೆಲ್ಲಿ ವೇದಪುರಾಣವು?

ಅಟ್ಟಹಾಸವು ಮೂರು ದಿನಮಿದು! ದೈವಕೃತಿ ಇಂತೆಂಬೆಯ?
ಹುಟ್ಟು ಸಾವಿನ ಗುಟ್ಟು; ಸೃಷ್ಟಿಯ ಕರ್ತನನು ಕೇಳೆಂಬೆಯಾ?

ಗತಿಸಿದರಸರ ಕೀರ್ತಿ ನಿಂತಿದೆ ಸಾಲದೇ ಅದು ಎಂಬೆಯಾ?
ಇದ್ದ ರಾಜ್ಯವನುಳಿಸಿಕೊಂಡರೆ ಸಾಕು ಜನಕಜೆ ಎಂಬೆಯಾ?
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...