Home / ಕವನ / ಕವಿತೆ / ಕೊಳುಗುಳದ ಮನವಿ

ಕೊಳುಗುಳದ ಮನವಿ

[Theodor Korner ಎ೦ಬ ಜರ್ಮನ್‌ ಕವಿಯ `Gebet wahrend der
Schlacht’ (Prayer during the battle) ಎಂಬ ಕವಿತೆಯಿಂದ ಪ್ರೇರಿತವಾದುದು]

ಕರೆವೆ ನಾ ನಿನ್ನನೊಡೆಯಾ!
ನಿನ್ನ ಹೆಸರಂ ಕೊಂಡು ನಿಂದೆನಿದೊ ಸಿಡಿಗುಂಡು
ನೂರ್ಮೆ ಮಾರ್ಮೊರಸೆ ಕಾರ್ಮೊಳಗನುರ್ವರೆಯಿಂ,
ಕಿಸುಬಾಯನಾಕಳಿಸಿ ದೆಸೆಗಳಂ ಬಾಗುಳಿಸಿ,
ಮಿಂಚೆರಂಚಿ ಪಳಂಚಿ ಮುಂಚೆ ದಳ್ಳುರಿಯಿಂ-
ಪ್ರೋಚ್ಚಂಡ ತಾಂಡವಮೊ ನಿನ್ನದೊಡೆಯಾ?
ನಿನಗೆ ಮಣಿಮಣಿವೆನೊಡೆಯಾ| ೭

ನಿನಗೆ ಮುಣಿಮಣಿನೆನೊಡೆಯಾ!
ಕಾಳೆಗಳ ಭೋಂಕಾರ ಢೋಲ್ಗಳ ಧಳಂಕಾರ-
ಹೊಂಗುತಿದೆ ಮಂಗಲಾಮಂಗಲಮೊ ತೂರ್ಯಂ!
ಇದೊ ನಿಶಾಂತ ತುತೂರಿಯೂದಲಿಂತೆದೆ ತೂರಿ-
‘ಪರಧುರ್ಯರಿತಿಕಾರ್ಯಮನಿವಾರ್ಯ ಶೌರ್ಯಂ!’
ಜೀವಂತ ಕೋವಿಯಾನೇವೆನೊಡೆಯಾ!
ಕಾಣಿಸಾಣತಿಯನೊಡೆಯಾ! ೧೪

ಕಾಣಿಸಾಣತಿಯನೊಡೆಯಾ!
ನಮ್ಮ ಬಾಯಿಯ ತುತ್ತ ಕಸಿವ ಹಸಿವೆಯ ಕುತ್ತ
ಮೆಂತಂತು ಸಂಗ್ರಾಮ ಸಂಭ್ರಮಾಹ್ವಾನಂ,
ಗೃಹಲಕ್ಷ್ಮಿ ಕೊರಳಾಂತು ಸುರಿದ ನೀರವಮೆಂತು
ಅಂತೀ ರಣಾಂಗಣ ಘನಾಘನ ಧ್ವಾನಂ-
ನಿನ್ನ ನಿಶ್ಶಂಕ ಸಂಕಲ್ಪಮೊಡೆಯಾ!
ನೀಡ ರಣದೀಕ್ಷೆಯೊಡೆಯಾ! ೨೧

ನೀಡ ರಣದೀಕ್ಷೆಯೊಡೆಯಾ!
ವಶಗೆಯ್ಯಲಿಳೆಯೆಲ್ಲ ಮಸಗಿ ಕಾದುವೆನಲ್ಲ-
ಸ್ವಾರಾಜ್ಯವರ್ಜ್ಯಮನ್ಯರ ರಾಜ್ಯಮೇಕೆ?
ತಾಯ ಸೆರೆಯಂ ಸವರಲೆಂದೆ ವೆರಮೀ ಬವರ-
ದಬ್ಬಾಳಿಕೆಯ ಮೆಟ್ಟಡಿಯ ತಬ್ಬಬೇಕೆ?
ವಿಸ್ಫಾರಿಸೆನ್ನೆದೆಯ ಧಮನಿಯೊಡೆಯಾ!
ತಾರ ಸಮರಾಜ್ಞೆಯೊಡೆಯಾ! ೨೮

ತಾರ ಸಮರಾಜ್ಞೆಯೊಡೆಯಾ!
ಅನ್ಯದೇಶಾಕ್ರಾಂತಿ ಸ್ವಪರನಾಶಭ್ರಾಂತಿ
ಯಿಂ ದ್ವಿಪಕ್ಷದ ರಕ್ಷೆಗೀಕ್ಷಿಸದೆ ಬಗೆಯಂ,
ರಣಮೊಂದೆ ಶರಣೆಂದೆ ಬಂದೆ ಮುಂದೆದೆಯಿಂದೆ
ತೊಳೆದು ಕಂಬನಿಯೊಳೆದುರಾಳಿಗಳ ಪಗೆಯಂ-
ಸನ್ನದ್ಧನಾಂ ಧರ್ಮಯುದ್ಧಕೊಡೆಯಾ!
ಬೆಂಬಲಿಸು ನನ್ನನೊಡೆಯಾ! ೩೫

ಬೆಂಬಲಿಸು ನನ್ನನೊಡೆಯಾ!
ಎನ್ನೆವರೆಗೀ ಪ್ರಾಣಮೆನ್ನೆವರೆಗೆ ಕೃಪಾಣ
ಮನ್ನೆಗಂ ಕಾದೆಂದು ಬೀಳ್ಕೊಡಿಂದೆನ್ನ!
ನೀನೆ ವಿಜಯಧ್ವಜಂ! ನೀನೆ ಹೃದಯಸ್ರಜಂ!
ನೀನೆ ವಿಷ್ವಕ್ಸೇನ ಸೇನಾನಿಯೆನ್ನ!
ಸೋಲಗೆಲವೆನ್ನದೇಂ? ನಿನ್ನದೊಡೆಯಾ!
ಕಾದವುದೆ ನನ್ನದೊಡೆಯಾ! ೪೨

ಕಾದುವುದೆ ನನ್ನದೊಡೆಯಾ!
ಸರ್ವಭಾರಮನಿಂದು ನಿನಗಿರಿಸಿ ತರಿಸಂದು
ನಿನ್ನ ಹೆಸರೆತ್ತುತೆತ್ತುವೆ ಕತ್ತಿಯನ್ನ!
ನಿನ್ನಿಚ್ಛೆ ಎಂತೆಂತು ನಡೆಸೆನ್ನನಂತಂತು-
ಜಯಕೆ ಮುನ್ನಡೆಯಿಸಥವಾ ಮರಣಕೆನ್ನ!
ಮರಣಮೆ ವರಂ ಪರಾಶ್ರಯದಿನೊಡೆಯಾ!
ಮುನ್ನಡೆಯಿಸೆನ್ನನೊಡೆಯಾ! ೪೯

ಮುನ್ನಡೆಯಿಸೆನ್ನನೊಡೆಯಾ!
ಇಂದು ಜೀವಮನೆನ್ನ ತೆತ್ತೆ ಕೆಯ್ಗಿದೊ ನಿನ್ನ-
ನೀನಿದಂ ನನಗಿತ್ತೆ, ನೀನೆ ಕೊಳಬಲ್ಲೆ!
ಹರಸೆನ್ನನುಳಿಯೆಂದೊ, ಹರಸೆನ್ನನಳಿಯೆಂದೊ-
ಅಳುವ ತಾಯಿಳೆಯೊಳೆನ್ನಳಿವುಳಿವನೊಲ್ಲೆ!
ಇದೆ ಜಲಾಂಜಲಿ ಜೀವಿತಾಶೆಗೊಡೆಯಾ!
ನಿನಗೆನ್ನನಿತ್ತೆನೊಡೆಯಾ! ೫೬

ನಿನಗೆನ್ನನಿತ್ತೆನೊಡೆಯಾ!
ಸಿಡಿಲ ಸನ್ನೆಯಿನೆನ್ನನಂತಕಂ ಕರೆವನ್ನ,
ಕೆಯ್ಮುಗಿಯುವಲಿ ನಿನಗೆ ಕಣ್ಮುಗಿಯುವೆನ್ನ
ಜೀವನಂ ಬಸಿವನ್ನ ಭಾವನಂ ಕುಸಿವನ್ನ,
ಮೂರ್ಛೆಯಿಂ ನಿನ್ನ ಹೆಸರುಚ್ಚರಿಸದನ್ನ,
ಸ್ವಾಗತಮೆ ತವ ಪದಾಗತನಿಗೊಡೆಯಾ?
ಇದೆ ಕೊನೆಯ ಮನವಿಯೊಡೆಯಾ! ೬೩

ಇದೆ ಕೊನೆಯ ಮನವಿಯೊಡೆಯಾ!
ತಾಯ ಸಂಕಲೆೆ ಕಡಿಯೆ ಸಂಗಳಿಸದಾಂ ಮಡಿಯೆ,
ನೀನದಂ ತವಕದಿಂ ತರಿವೆಂದು ಬಲ್ಲೆ!
ಮಡಿಯೆ ಜನಿತ ವ್ಯಕ್ತಿ, ಮಡಿವುದೇನನುರಕ್ತಿ?—
ತಾಯೊಸಗೆ ತರ್ವಿನಂ ಸ್ವರ್ಗಸುಖಮೊಲ್ಲೆ!
ಭವಭವನಮನೆನಗಿಲ್ಲಿ ಸಲ್ಲಿಸೊಡೆಯಾ!
ಕರೆವೆ ನಾ ನಿನ್ನನೊಡೆಯಾ!
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...