Home / ಕವನ / ಕವಿತೆ / ಕೊಳುಗುಳದ ಮನವಿ

ಕೊಳುಗುಳದ ಮನವಿ

[Theodor Korner ಎ೦ಬ ಜರ್ಮನ್‌ ಕವಿಯ `Gebet wahrend der
Schlacht’ (Prayer during the battle) ಎಂಬ ಕವಿತೆಯಿಂದ ಪ್ರೇರಿತವಾದುದು]

ಕರೆವೆ ನಾ ನಿನ್ನನೊಡೆಯಾ!
ನಿನ್ನ ಹೆಸರಂ ಕೊಂಡು ನಿಂದೆನಿದೊ ಸಿಡಿಗುಂಡು
ನೂರ್ಮೆ ಮಾರ್ಮೊರಸೆ ಕಾರ್ಮೊಳಗನುರ್ವರೆಯಿಂ,
ಕಿಸುಬಾಯನಾಕಳಿಸಿ ದೆಸೆಗಳಂ ಬಾಗುಳಿಸಿ,
ಮಿಂಚೆರಂಚಿ ಪಳಂಚಿ ಮುಂಚೆ ದಳ್ಳುರಿಯಿಂ-
ಪ್ರೋಚ್ಚಂಡ ತಾಂಡವಮೊ ನಿನ್ನದೊಡೆಯಾ?
ನಿನಗೆ ಮಣಿಮಣಿವೆನೊಡೆಯಾ| ೭

ನಿನಗೆ ಮುಣಿಮಣಿನೆನೊಡೆಯಾ!
ಕಾಳೆಗಳ ಭೋಂಕಾರ ಢೋಲ್ಗಳ ಧಳಂಕಾರ-
ಹೊಂಗುತಿದೆ ಮಂಗಲಾಮಂಗಲಮೊ ತೂರ್ಯಂ!
ಇದೊ ನಿಶಾಂತ ತುತೂರಿಯೂದಲಿಂತೆದೆ ತೂರಿ-
‘ಪರಧುರ್ಯರಿತಿಕಾರ್ಯಮನಿವಾರ್ಯ ಶೌರ್ಯಂ!’
ಜೀವಂತ ಕೋವಿಯಾನೇವೆನೊಡೆಯಾ!
ಕಾಣಿಸಾಣತಿಯನೊಡೆಯಾ! ೧೪

ಕಾಣಿಸಾಣತಿಯನೊಡೆಯಾ!
ನಮ್ಮ ಬಾಯಿಯ ತುತ್ತ ಕಸಿವ ಹಸಿವೆಯ ಕುತ್ತ
ಮೆಂತಂತು ಸಂಗ್ರಾಮ ಸಂಭ್ರಮಾಹ್ವಾನಂ,
ಗೃಹಲಕ್ಷ್ಮಿ ಕೊರಳಾಂತು ಸುರಿದ ನೀರವಮೆಂತು
ಅಂತೀ ರಣಾಂಗಣ ಘನಾಘನ ಧ್ವಾನಂ-
ನಿನ್ನ ನಿಶ್ಶಂಕ ಸಂಕಲ್ಪಮೊಡೆಯಾ!
ನೀಡ ರಣದೀಕ್ಷೆಯೊಡೆಯಾ! ೨೧

ನೀಡ ರಣದೀಕ್ಷೆಯೊಡೆಯಾ!
ವಶಗೆಯ್ಯಲಿಳೆಯೆಲ್ಲ ಮಸಗಿ ಕಾದುವೆನಲ್ಲ-
ಸ್ವಾರಾಜ್ಯವರ್ಜ್ಯಮನ್ಯರ ರಾಜ್ಯಮೇಕೆ?
ತಾಯ ಸೆರೆಯಂ ಸವರಲೆಂದೆ ವೆರಮೀ ಬವರ-
ದಬ್ಬಾಳಿಕೆಯ ಮೆಟ್ಟಡಿಯ ತಬ್ಬಬೇಕೆ?
ವಿಸ್ಫಾರಿಸೆನ್ನೆದೆಯ ಧಮನಿಯೊಡೆಯಾ!
ತಾರ ಸಮರಾಜ್ಞೆಯೊಡೆಯಾ! ೨೮

ತಾರ ಸಮರಾಜ್ಞೆಯೊಡೆಯಾ!
ಅನ್ಯದೇಶಾಕ್ರಾಂತಿ ಸ್ವಪರನಾಶಭ್ರಾಂತಿ
ಯಿಂ ದ್ವಿಪಕ್ಷದ ರಕ್ಷೆಗೀಕ್ಷಿಸದೆ ಬಗೆಯಂ,
ರಣಮೊಂದೆ ಶರಣೆಂದೆ ಬಂದೆ ಮುಂದೆದೆಯಿಂದೆ
ತೊಳೆದು ಕಂಬನಿಯೊಳೆದುರಾಳಿಗಳ ಪಗೆಯಂ-
ಸನ್ನದ್ಧನಾಂ ಧರ್ಮಯುದ್ಧಕೊಡೆಯಾ!
ಬೆಂಬಲಿಸು ನನ್ನನೊಡೆಯಾ! ೩೫

ಬೆಂಬಲಿಸು ನನ್ನನೊಡೆಯಾ!
ಎನ್ನೆವರೆಗೀ ಪ್ರಾಣಮೆನ್ನೆವರೆಗೆ ಕೃಪಾಣ
ಮನ್ನೆಗಂ ಕಾದೆಂದು ಬೀಳ್ಕೊಡಿಂದೆನ್ನ!
ನೀನೆ ವಿಜಯಧ್ವಜಂ! ನೀನೆ ಹೃದಯಸ್ರಜಂ!
ನೀನೆ ವಿಷ್ವಕ್ಸೇನ ಸೇನಾನಿಯೆನ್ನ!
ಸೋಲಗೆಲವೆನ್ನದೇಂ? ನಿನ್ನದೊಡೆಯಾ!
ಕಾದವುದೆ ನನ್ನದೊಡೆಯಾ! ೪೨

ಕಾದುವುದೆ ನನ್ನದೊಡೆಯಾ!
ಸರ್ವಭಾರಮನಿಂದು ನಿನಗಿರಿಸಿ ತರಿಸಂದು
ನಿನ್ನ ಹೆಸರೆತ್ತುತೆತ್ತುವೆ ಕತ್ತಿಯನ್ನ!
ನಿನ್ನಿಚ್ಛೆ ಎಂತೆಂತು ನಡೆಸೆನ್ನನಂತಂತು-
ಜಯಕೆ ಮುನ್ನಡೆಯಿಸಥವಾ ಮರಣಕೆನ್ನ!
ಮರಣಮೆ ವರಂ ಪರಾಶ್ರಯದಿನೊಡೆಯಾ!
ಮುನ್ನಡೆಯಿಸೆನ್ನನೊಡೆಯಾ! ೪೯

ಮುನ್ನಡೆಯಿಸೆನ್ನನೊಡೆಯಾ!
ಇಂದು ಜೀವಮನೆನ್ನ ತೆತ್ತೆ ಕೆಯ್ಗಿದೊ ನಿನ್ನ-
ನೀನಿದಂ ನನಗಿತ್ತೆ, ನೀನೆ ಕೊಳಬಲ್ಲೆ!
ಹರಸೆನ್ನನುಳಿಯೆಂದೊ, ಹರಸೆನ್ನನಳಿಯೆಂದೊ-
ಅಳುವ ತಾಯಿಳೆಯೊಳೆನ್ನಳಿವುಳಿವನೊಲ್ಲೆ!
ಇದೆ ಜಲಾಂಜಲಿ ಜೀವಿತಾಶೆಗೊಡೆಯಾ!
ನಿನಗೆನ್ನನಿತ್ತೆನೊಡೆಯಾ! ೫೬

ನಿನಗೆನ್ನನಿತ್ತೆನೊಡೆಯಾ!
ಸಿಡಿಲ ಸನ್ನೆಯಿನೆನ್ನನಂತಕಂ ಕರೆವನ್ನ,
ಕೆಯ್ಮುಗಿಯುವಲಿ ನಿನಗೆ ಕಣ್ಮುಗಿಯುವೆನ್ನ
ಜೀವನಂ ಬಸಿವನ್ನ ಭಾವನಂ ಕುಸಿವನ್ನ,
ಮೂರ್ಛೆಯಿಂ ನಿನ್ನ ಹೆಸರುಚ್ಚರಿಸದನ್ನ,
ಸ್ವಾಗತಮೆ ತವ ಪದಾಗತನಿಗೊಡೆಯಾ?
ಇದೆ ಕೊನೆಯ ಮನವಿಯೊಡೆಯಾ! ೬೩

ಇದೆ ಕೊನೆಯ ಮನವಿಯೊಡೆಯಾ!
ತಾಯ ಸಂಕಲೆೆ ಕಡಿಯೆ ಸಂಗಳಿಸದಾಂ ಮಡಿಯೆ,
ನೀನದಂ ತವಕದಿಂ ತರಿವೆಂದು ಬಲ್ಲೆ!
ಮಡಿಯೆ ಜನಿತ ವ್ಯಕ್ತಿ, ಮಡಿವುದೇನನುರಕ್ತಿ?—
ತಾಯೊಸಗೆ ತರ್ವಿನಂ ಸ್ವರ್ಗಸುಖಮೊಲ್ಲೆ!
ಭವಭವನಮನೆನಗಿಲ್ಲಿ ಸಲ್ಲಿಸೊಡೆಯಾ!
ಕರೆವೆ ನಾ ನಿನ್ನನೊಡೆಯಾ!
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...