Home / ಕವನ / ಅನುವಾದ / ವಿದಾಯ

ವಿದಾಯ

(೧೯೧೧ನೆಯ ಏಪ್ರಿಲ್‌ ತಿಂಗಳ `Modern Review’ ಮಾಸಪತ್ರಿಕೆಯಲ್ಲಿ ಪ್ರಕಟವಾದ ಶ್ರೀ ರವೀಂದ್ರನಾಥ ರಾಕೂರರ “Farewell”ಎಂಬ ಕವಿತೆಯನ್ನು ಅನುವರ್ತಿಸಿ ಬರೆದುದು)

ಪೋಗಗೊಡೆನ್ನನು ತಾಯೆ ಬಿಡು,
ಮುದ್ದಿನ ತಾಯೇ ಪೋಗಗೊಡು!
ಮಬ್ಬ ಮರೆಯ ಮುಂಜಾನೆಯಲಿ
ಬರಿತೋಳ್ಗಳ ನಿಡುಚಾಚುತಲಿ,
ಎಲ್ಲಿಹೆ ಮಗುವೇ? ಬಾರೆಂದು ೫
ದಳದಳನೆನ್ನ ನೀ ಕರೆವಂದು,
ಅವ್ವಾ ಮುದ್ದಿನ ಮಗುವಿಲ್ಲಿ
ಇಲ್ಲವೆನುವೆ ನಿನ್ನ ಕಿವಿಯಲ್ಲಿ
ಪೋಗಗೊಡೆನ್ನನು ತಾಯೆ ಬಿಡು,
ಮುದ್ದಿನ ತಾಯೇ ಪೋಗಗೊಡು ೧೦
ಅಲೆವೆಲರುಸಿರಿಂ ಹುಯ್ಯುವೆನು,
ನಿನ್ನೆದೆಯಿಂ ನಿಡುಸುಯ್ಯುವೆನು;
ಬಿಮ್ಮನೆ ತೋಳುಗಳಿಂದೆನ್ನ
ಬಿಗಿವಿಡಿಯಡೊಲೋಡುವೆ ನಿನ್ನ,
ನೀರಿನ ಕಿರುದೆರೆಯಾಗುತಲಿ, ೧೫
ಯಾರೆನ್ನರಿಯದೊಲೀಸುತಲಿ,
ಮೀಯುವ ನಿನ್ನನು ಬಲವಂದು
ಮುರಿಮುರಿದಪ್ಪಿ ಕೊಳುವೆನಂದು
ಪೋಗಗೊಡೆನ್ನನು ತಾಯೆ ಬಿಡು,
ಮುದ್ದಿನ ತಾಯೇ ಪೋಗಗೊಡು ೨೦

ಸೂಸುವ ಸೇಸೆಯ ಸೋನೆಯಲಿ
ಇರುಳಲಿ ನೀನಮ್ಮ ಮನೆಯಲಿ
ಒಂಟಿ ಮಲಗಿ ನಮ್ಮ ಹಸೆಯಲ್ಲಿ
ಮೆಯ್ಮರೆತೆನ್ನನೆ ನೆನೆವಲ್ಲಿ,
ತಟತಟ ತಟಕುವ ತನಿಯೆಲೆಯಿಂ ೨೫
ತೊದಲಾಡುನೆನಿಂಬನಿಯುಲಿಯಿಂ
ಮುಚ್ಚಲು ಮರೆತಿಹ ಕಿಟಿಕಿಗಳಿಂ
ಮಿಂಚುವೆ ಮಿಂಚಿನ ಮಿಟಕುಗಳಿಂ-
ಅಂದಿನ ನನ್ನಟ್ಟಸವನ್ನ
ಬಗೆಯಲಳನೆ ಅವ್ವಾ ನಿನ್ನ? ೩೦

ಮೀರಿದಿರುಳ ಕಗ್ಗತ್ತಲಲಿ
ನೀನೆಚ್ಚರವಿರೆ ಮರುಗುತಲಿ,
ಮಿರುರೆಪ್ಪೆಯ ತಾರಗೆಯಾಗಿ
ಮಲಗವ್ವಾ ಎನುವೆನು ಬಾಗಿ,
ಅಳಲಿ ಬಳಲಿ ಕಡೆಯಲಿ ದಣಿದು ೩೫
ಪವಡಿಸುತಲೆ ನೀನರೆಮಣಿದು,
ಚಂದ್ರನ ಸೊದೆಗದಿರಾಗುನೆನು,
ನಿನ್ನ ಹಸೆಯನಕ ಸಾಗುವೆನು,
ಇಳಿಯುತ ಚುಂಬಿಸಿ ತಂಗುವೆನು
ನಿನ್ನ ಹನಿವ ನನೆಗಂಗಳನು ೪೦

ನಿನ್ನೆವೆಗದವಿನಿಸರಳಿರಲು
ಹೊಂಚುತ ಹಣಕುವೆನೊಳಬರಲು,
ಸಸಿನೆ ನುಸುಳಿ ಕನಸಲಿ ನಿನ್ನ
ಮುದ್ದಿಸುವೆನು ನಿದ್ದಿಸುವನ್ನ
ಬೆಪ್ಪನೆದ್ದು ನೀ ದಿಗಿಲೆಂದು ೪೫
ಹಸೆಯೊಳೆನ್ನ ತಡವರಿಪಂದು,
ಯಾರಿನ್ನೆಗಮರಿಯದಿಹಲ್ಲಿ
ತಟ್ಟನೆ ಮೆಯ್ಗರೆಯುವೆನಲ್ಲಿ
ಪೋಗಗೊಡೆನ್ನನು ತಾಯೆ ಬಿಡು,
ಮುದ್ದಿನ ತಾಯೇ ಪೋಗಗೊಡು ೫೦

ಮಾನವಮಿಯ ಹಬ್ಬದ ದಿನದಿ
ಬಾಲಕರೆಮ್ಮಯ ಪೂಬನದಿ
ಆಡಲು ಬಂದು ನುಡಿವರಂದು
ಈ ಮನೆಯಲಿ ಮಗುವಿಲ್ಲೆಂದು;
ಅಂದಾದರು ಕೊಳಲಿಂಚರದಿ ೫೫
ತೇಲುತ ರವಿಗದಿರಂಬರದಿ,
ಮನೆಗೆಲಸವ ಗೆಯ್ಯುವ ನಿನ್ನ
ಸೆರಗನೆ ಹಿಡಿದಾಂ ಬಿಡೆ ಬೆನ್ನ.
ಪೋಗಗೊಡೆನ್ನನು ತಾಯೆ ಬಿಡು,
ಮುದ್ದಿನ ತಾಯೇ ಪೋಗಗೊಡು. ೬೦

ಹಬ್ಬದುಡುಗೆರೆಗಳನು ತಂದು
ನಮ್ಮಯ ಮನೆಗತ್ತಿಗೆ ಬಂದು,
ಅಕ್ಕಾ ಮಗುವೆಲ್ಲಿಹುದೆಂದು
ಕೇಳುವಳಾಕೆಗೆ ಪೇಳಂದು-
ಎಲ್ಲೆಲ್ಲಿಯು ನನ್ನ ಮಗುವಿಹುದು, ೬೫
ನೋಡೆನ್ನಯ ಕಣ್ಣುಲಿಯದು!
ಎನ್ನಯ ಮೊಲೆಯ ಕುಡಿಯುತಿಹುದು,
ಎನ್ನಂಕದಲಿದೊ ಕುಳಿತಿಹುದು!
ಪೋಗಗೊಡೆನ್ನನು ತಾಯೆ ಬಿಡು,
ಮುದ್ದಿನ ತಾಯೇ ಪೋಗಗೊಡು ೭೦
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...