Home / ಕವನ / ಅನುವಾದ / ವಿದಾಯ

ವಿದಾಯ

(೧೯೧೧ನೆಯ ಏಪ್ರಿಲ್‌ ತಿಂಗಳ `Modern Review’ ಮಾಸಪತ್ರಿಕೆಯಲ್ಲಿ ಪ್ರಕಟವಾದ ಶ್ರೀ ರವೀಂದ್ರನಾಥ ರಾಕೂರರ “Farewell”ಎಂಬ ಕವಿತೆಯನ್ನು ಅನುವರ್ತಿಸಿ ಬರೆದುದು)

ಪೋಗಗೊಡೆನ್ನನು ತಾಯೆ ಬಿಡು,
ಮುದ್ದಿನ ತಾಯೇ ಪೋಗಗೊಡು!
ಮಬ್ಬ ಮರೆಯ ಮುಂಜಾನೆಯಲಿ
ಬರಿತೋಳ್ಗಳ ನಿಡುಚಾಚುತಲಿ,
ಎಲ್ಲಿಹೆ ಮಗುವೇ? ಬಾರೆಂದು ೫
ದಳದಳನೆನ್ನ ನೀ ಕರೆವಂದು,
ಅವ್ವಾ ಮುದ್ದಿನ ಮಗುವಿಲ್ಲಿ
ಇಲ್ಲವೆನುವೆ ನಿನ್ನ ಕಿವಿಯಲ್ಲಿ
ಪೋಗಗೊಡೆನ್ನನು ತಾಯೆ ಬಿಡು,
ಮುದ್ದಿನ ತಾಯೇ ಪೋಗಗೊಡು ೧೦
ಅಲೆವೆಲರುಸಿರಿಂ ಹುಯ್ಯುವೆನು,
ನಿನ್ನೆದೆಯಿಂ ನಿಡುಸುಯ್ಯುವೆನು;
ಬಿಮ್ಮನೆ ತೋಳುಗಳಿಂದೆನ್ನ
ಬಿಗಿವಿಡಿಯಡೊಲೋಡುವೆ ನಿನ್ನ,
ನೀರಿನ ಕಿರುದೆರೆಯಾಗುತಲಿ, ೧೫
ಯಾರೆನ್ನರಿಯದೊಲೀಸುತಲಿ,
ಮೀಯುವ ನಿನ್ನನು ಬಲವಂದು
ಮುರಿಮುರಿದಪ್ಪಿ ಕೊಳುವೆನಂದು
ಪೋಗಗೊಡೆನ್ನನು ತಾಯೆ ಬಿಡು,
ಮುದ್ದಿನ ತಾಯೇ ಪೋಗಗೊಡು ೨೦

ಸೂಸುವ ಸೇಸೆಯ ಸೋನೆಯಲಿ
ಇರುಳಲಿ ನೀನಮ್ಮ ಮನೆಯಲಿ
ಒಂಟಿ ಮಲಗಿ ನಮ್ಮ ಹಸೆಯಲ್ಲಿ
ಮೆಯ್ಮರೆತೆನ್ನನೆ ನೆನೆವಲ್ಲಿ,
ತಟತಟ ತಟಕುವ ತನಿಯೆಲೆಯಿಂ ೨೫
ತೊದಲಾಡುನೆನಿಂಬನಿಯುಲಿಯಿಂ
ಮುಚ್ಚಲು ಮರೆತಿಹ ಕಿಟಿಕಿಗಳಿಂ
ಮಿಂಚುವೆ ಮಿಂಚಿನ ಮಿಟಕುಗಳಿಂ-
ಅಂದಿನ ನನ್ನಟ್ಟಸವನ್ನ
ಬಗೆಯಲಳನೆ ಅವ್ವಾ ನಿನ್ನ? ೩೦

ಮೀರಿದಿರುಳ ಕಗ್ಗತ್ತಲಲಿ
ನೀನೆಚ್ಚರವಿರೆ ಮರುಗುತಲಿ,
ಮಿರುರೆಪ್ಪೆಯ ತಾರಗೆಯಾಗಿ
ಮಲಗವ್ವಾ ಎನುವೆನು ಬಾಗಿ,
ಅಳಲಿ ಬಳಲಿ ಕಡೆಯಲಿ ದಣಿದು ೩೫
ಪವಡಿಸುತಲೆ ನೀನರೆಮಣಿದು,
ಚಂದ್ರನ ಸೊದೆಗದಿರಾಗುನೆನು,
ನಿನ್ನ ಹಸೆಯನಕ ಸಾಗುವೆನು,
ಇಳಿಯುತ ಚುಂಬಿಸಿ ತಂಗುವೆನು
ನಿನ್ನ ಹನಿವ ನನೆಗಂಗಳನು ೪೦

ನಿನ್ನೆವೆಗದವಿನಿಸರಳಿರಲು
ಹೊಂಚುತ ಹಣಕುವೆನೊಳಬರಲು,
ಸಸಿನೆ ನುಸುಳಿ ಕನಸಲಿ ನಿನ್ನ
ಮುದ್ದಿಸುವೆನು ನಿದ್ದಿಸುವನ್ನ
ಬೆಪ್ಪನೆದ್ದು ನೀ ದಿಗಿಲೆಂದು ೪೫
ಹಸೆಯೊಳೆನ್ನ ತಡವರಿಪಂದು,
ಯಾರಿನ್ನೆಗಮರಿಯದಿಹಲ್ಲಿ
ತಟ್ಟನೆ ಮೆಯ್ಗರೆಯುವೆನಲ್ಲಿ
ಪೋಗಗೊಡೆನ್ನನು ತಾಯೆ ಬಿಡು,
ಮುದ್ದಿನ ತಾಯೇ ಪೋಗಗೊಡು ೫೦

ಮಾನವಮಿಯ ಹಬ್ಬದ ದಿನದಿ
ಬಾಲಕರೆಮ್ಮಯ ಪೂಬನದಿ
ಆಡಲು ಬಂದು ನುಡಿವರಂದು
ಈ ಮನೆಯಲಿ ಮಗುವಿಲ್ಲೆಂದು;
ಅಂದಾದರು ಕೊಳಲಿಂಚರದಿ ೫೫
ತೇಲುತ ರವಿಗದಿರಂಬರದಿ,
ಮನೆಗೆಲಸವ ಗೆಯ್ಯುವ ನಿನ್ನ
ಸೆರಗನೆ ಹಿಡಿದಾಂ ಬಿಡೆ ಬೆನ್ನ.
ಪೋಗಗೊಡೆನ್ನನು ತಾಯೆ ಬಿಡು,
ಮುದ್ದಿನ ತಾಯೇ ಪೋಗಗೊಡು. ೬೦

ಹಬ್ಬದುಡುಗೆರೆಗಳನು ತಂದು
ನಮ್ಮಯ ಮನೆಗತ್ತಿಗೆ ಬಂದು,
ಅಕ್ಕಾ ಮಗುವೆಲ್ಲಿಹುದೆಂದು
ಕೇಳುವಳಾಕೆಗೆ ಪೇಳಂದು-
ಎಲ್ಲೆಲ್ಲಿಯು ನನ್ನ ಮಗುವಿಹುದು, ೬೫
ನೋಡೆನ್ನಯ ಕಣ್ಣುಲಿಯದು!
ಎನ್ನಯ ಮೊಲೆಯ ಕುಡಿಯುತಿಹುದು,
ಎನ್ನಂಕದಲಿದೊ ಕುಳಿತಿಹುದು!
ಪೋಗಗೊಡೆನ್ನನು ತಾಯೆ ಬಿಡು,
ಮುದ್ದಿನ ತಾಯೇ ಪೋಗಗೊಡು ೭೦
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...