Home / ಲೇಖನ / ಇತರೆ / ಮನಸಿಗೆ ಪಾಠ

ಮನಸಿಗೆ ಪಾಠ

ಪ್ರಿಯ ಸಖಿ,

ದುಃಖತಪ್ತ ಶಿಷ್ಯನೊಬ್ಬ ತನ್ನ ಗುರುವಿನ ಬಳಿಗೆ ಬಂದು ಗುರುಗಳೇ ಈ ಪ್ರಪಂಚದಲ್ಲಿ ನನ್ನನ್ನು ಯಾರೂ ಪ್ರೀತಿಸುವವರಿಲ್ಲ. ನಾನು ಯಾರಿಗೂ ಬೇಕಾಗಿಲ್ಲ. ನನ್ನನ್ನು ಯಾರೂ ಅರ್ಥಮಾಡಿಕೊಳ್ಳುತ್ತಿಲ್ಲ. ನನ್ನ ಮಾತನ್ನು ಯಾರೂ ಕೇಳುವುದಿಲ್ಲ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ತೀರ್ಮಾನಿಸಿದ್ದೇನೆ ಎಂದ. ಗುರುಗಳು ಆ ಶಿಷ್ಯನನ್ನು ತೀಕ್ಷ್ಣವಾಗಿ ನೋಡಿ ಹೋಗಿ ಸಾಯಿ ಎಂದರು. ಗುರುಗಳಿಂದ ಇಂತಹ ಮಾತನ್ನು ನಿರೀಕ್ಷಸದಿದ್ದ ಶಿಷ್ಯ ಪೆಚ್ಚಾಗಿ ಹೋದ.

ತಡವರಿಸುತ್ತಾ ಇಲ್ಲಾ ಗುರುಗಳೇ….. ಅದೂ…. ನನಗೆ ಜೀವನವೇ ಬೇಸರವಾಗಿ ಹೋಗಿದೆ…. ಅದಕ್ಕೆ ಹಾಗೆಂದೆ…. ಎನ್ನುತ್ತಾ ಮತ್ತೆ ತನ್ನ ದುಃಖವನ್ನು ತೋಡಿಕೊಂಡ. ಎಲ್ಲವನ್ನು ಮತ್ತೆ ಕೇಳಿಸಿಕೊಂಡ ಗುರುಗಳು, ನೋಡಿದೆಯಾ ನೀನು ನನ್ನಿಂದ ಸಮಾಧಾನ, ಸಾಂತ್ವನವನ್ನು ಮಾತ್ರ ಬಯಸಿದ್ದೀಯ, ನಿನಗೆ ಸಾಯಲು ಸ್ವಲ್ಪವೂ ಇಷ್ಟವಿಲ್ಲ. ಏಕೆಂದರೆ ನೀನು ನಿನ್ನನ್ನೇ ತುಂಬಾ ಹೆಚ್ಚು ಪ್ರೀತಿಸಿಕೊಳ್ಳುತ್ತಿದ್ದೀಯಾ. ತನ್ನನ್ನು ತಾನು ಉತ್ಕಟವಾಗಿ ಪ್ರೀತಿಸಿಕೊಳ್ಳುವ ವ್ಯಕ್ತಿ ಸ್ವಾರ್ಥಿ ಮತ್ತು ಅಹಂಕಾರಿಯಾಗುತ್ತಾನೆ. ಅವನು ಬೇರೆಯವರನ್ನು ಹೇಗೆ ಪ್ರೀತಿಸಿಯಾನು? ಅರ್ಥಮಾಡಿಕೊಳ್ಳುತ್ತಿಲ್ಲಾ ಎನ್ನುತ್ತೀಯ. ಇಲ್ಲಿ ನೀನು ಯಾರನ್ನಾದರೂ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದೀಯಾ ? ನನ್ನ ಮಾತನ್ನು ಯಾರೂ ಕೇಳುವುದಿಲ್ಲ. ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ನೀನು ನುಡಿಯುತ್ತಿದ್ದರೂ ನಿನ್ನ ಮನಸ್ಸು ಹಾಗೆ ನಡೆದುಕೊಳ್ಳಲು ತಯಾರಿಲ್ಲ. ಹೀಗಿರುವಾಗ ಬೇರೆಯವರು ನಿನ್ನ ಮಾತನ್ನು ಕೇಳುತ್ತಿಲ್ಲ ಎಂದು ಆಕ್ಷೇಪಿಸುವ ಹಕ್ಕು ನಿನಗೆಲ್ಲಿದೆ? ಎಂದರು. ಇದನ್ನು ಕೇಳಿದ ಶಿಷ್ಯನಿಗೆ ತನ್ನ ತಪ್ಪಿನ ಅರಿವಾಯ್ತು.

ಸಖಿ, ನಾವು ಯಾವಾಗಲೂ ಹೀಗೇ ಅಲ್ಲವೇ? ನಾವು ಮಾತ್ರ ಸಾಚಾ, ತಪ್ಪುಗಳಿರುವುದೆಲ್ಲಾ ಇತರರಲ್ಲಿ ಎಂದುಕೊಳ್ಳುತ್ತೇವೆ. ಆದರೆ ಅದರ ಮೂಲ ನಮ್ಮಲ್ಲೇ ಇರುತ್ತದೆ. ವಿಶಾಲ ಹೃದಯದಿಂದ ಇನ್ನೊಬ್ಬರಿಗೆ ಪ್ರೀತಿಯನ್ನು ಕೊಡುವುದನ್ನು ತಿಳಿದಿಲ್ಲದ ನಾವು, ನಮ್ಮನ್ನು ಯಾರೂ ಪ್ರೀತಿಸುವುದಿಲ್ಲ ಎಂದುಕೊಳ್ಳುತ್ತೇವೆ. ಯಾರ ನೋವು ನಲಿವುಗಳನ್ನು. ಭಾವನೆಗಳನ್ನು ನಾವು ಅರ್ಥಮಾಡಿಕೊಳ್ಳಲು ಹೋಗದೇ ಬೇರೆಯವರು ಸದಾ ನಮ್ಮ ನೋವು ನಲಿವುಗಳಿಗೆ ಸ್ಪಂದಿಸಬೇಕೆಂದು ಬಯಸುತ್ತೇವೆ. ನನ್ನ ಮಾತನ್ನು ಯಾರೂ ಕೇಳುವುದಿಲ್ಲ ಎಂದುಕೊಳ್ಳುತ್ತೇವೆ. ಅವರಲ್ಲಿ ನಮಗೆ ಪ್ರೀತಿಯೇ ಇಲ್ಲವೆಂದ ಮೇಲೆ ಅವರು ನಾವು ಹೇಳಿದಂತೆ ಕೇಳಬೇಕು ಎಂದು ಹೇಳುವ ಅಧಿಕಾರವಾದರೂ ನಮಗೆಲ್ಲಿದೆ ? ಅದಕ್ಕಿಂತಾ ಹೆಚ್ಚಿನ ಗುರು ಹೇಳಿದಂತೆ ಮಂಗನಂತಾ ನಿಮ್ಮ ಮನಸ್ಸೇ ನಾವು ಹೇಳಿದ ಮಾತು ಕೇಳುವುದಿಲ್ಲ. ಇನ್ನು ಬೇರೆಯವರ ಮಾತೇನು? ಪಾಠ ಕಲಿಸುವುದೇ ಆದರೆ ನಮ್ಮ ಮನಸ್ಸಿಗೆ ಪಾಠ ಕಲಿಸಬೇಕು. ಇತರರನ್ನು ಪ್ರೀತಿಸುವುದನ್ನು ಕಲಿಸಬೇಕು. ಅರ್ಥಮಾಡುವುದನ್ನು ಕಲಿಸಬೇಕು. ಹೀಗಾದಾಗ ಮಾತ್ರ ನಾವೂ ಬೇರೆಯವರಿಂದ ಇದನ್ನೇ ನಿರೀಕ್ಷಿಸಬಹುದು. ತಮ್ಮನ್ನು ತಾವೇ ಪ್ರೀತಿಸಿಕೊಳ್ಳುವುದರಲ್ಲಿಯೇ ಮುಳುಗಿರುವವರಿಗೆ, ಬೇರೆಯವರಿಗೆ ಒಂದಿಷ್ಟು ಪ್ರೀತಿಯನ್ನು ಕೊಡಲರಿಯದವರಿಗೆ ಬೇರೆಯವರಿಂದ ಅದನ್ನು ನಿರೀಕ್ಷಿಸುವ ಹಕ್ಕು ಎಲ್ಲಿರುತ್ತದೆ? ಅಲ್ಲವೇ?
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...