Home / ಕವನ / ಕವಿತೆ / ನನ್ನ ಕವಿತೆ

ನನ್ನ ಕವಿತೆ

ಕವಿತೆ ಹುಟ್ಟುವುದು ಮಹಲಿನಲ್ಲಲ್ಲ,
ಮುರುಕು ಜೋಪಡಿಗಳಲ್ಲಿ.
ಕವಿತೆ ಹುಟ್ಟುವುದು ಝಗಝಗಿಸುವ
ದೀಪಗಳ ಬೆಳಕಿನಲ್ಲಲ್ಲ ಬುಡ್ಡಿ-
ಬೆಳಕಿನ ಮಿಡುಕಿನಲ್ಲಿ.

ಕವಿತೆ ಹುಟ್ಟುವುದು ಕಲ್ಪನೆಯ ಮೂಸೆಯಲ್ಲಲ್ಲ
ದೈನಂದಿನ ಘಟನಾವಳಿಗಳಲ್ಲಿ.
ಕವಿತೆ ಹುಟ್ಟುವುದು ತುಂತುರುಮಳೆಯಲ್ಲಲ್ಲ
ನೊಂದವರ ಕಣ್ಣೀರಿನಲ್ಲಿ.

ಕವಿತೆ ಹುಟ್ಟುವುದು ಬಿಗಿದ ಕೊರಳಿನಲ್ಲಿ,
ನಿರಾಶೆಯ ನೆರಳಿನಲ್ಲಿ, ಅಸಹಾಯಕರ ಆಕ್ರಂದನದಲ್ಲಿ.
ಇವೆಲ್ಲ, ಅಲ್ಲಿ ಇಲ್ಲಿ ಹೆಕ್ಕಿ ಪಟ್ಟಿಮಾಡಿದ
ನುಡಿಮುತ್ತುಗಳು. ಹೋದಲ್ಲೆಲ್ಲ ಹಿಂಬಾಲಿಸಿ
ಕಾಡುವ ಮಾತಿನ ಭೂತಗಳು.

ಆದರೆ ನನ್ನ ಕವಿತೆ, ಹುಟ್ಟಿದ್ದು ಮಹಲಿನಲ್ಲಿ,
ಪಿಳಿಪಿಳಿ ಕಣ್ಣುಬಿಟ್ಟಿದ್ದು ಝಗಝಗಿಸುವ
ದೀಪಗಳ ಬೆಳಕಿನಲ್ಲಿ, ಬೆಳೆದಿದ್ದು ಕಲ್ಪನೆಯ-
ಮೂಸೆಯಲ್ಲಿ, ಅರಳಿದ್ದು ಕನಸಿನಲ್ಲಿ.

ಆದರೂ ಈ ಕವಿತೆಗೆ-
ತುಡಿತ-ಮಿಡಿತಗಳಿಗೆ ಸ್ಪಂದಿಸುವ ಹೃದಯವಿದೆ
ಮನದಲ್ಲಿ ಹೊಸೆದ ಹೊಸ ಕನಸಿದೆ.
ಕಣ್ಣ ಬಿಂಬದಲ್ಲಿ ಕೈ ಕೈ ಬೆಸೆದು ಜೊತೆಯಾಗಿ
ಹೆಜ್ಜೆಯಿಡುವ ಹಂಬಲವಿದೆ.

ಇಷ್ಟಾದರೂ ಹಲವರ ದೃಷ್ಟಿಯಲ್ಲಿ ನನ್ನದು
ಹುಟ್ಟುವುದಕ್ಕೆ ಮುಂಚೆಯೆ ಸತ್ತ ಕವಿತೆ
ಕೆಲವರ ದೃಷ್ಟಿಯಲ್ಲಂತು ಬದುಕಿದರೂ ಸತ್ತ ಕವಿತೆ!


Tagged:

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...