Home / ಕವನ / ಕವಿತೆ / ನನ್ನ ಕವಿತೆ

ನನ್ನ ಕವಿತೆ

ಕವಿತೆ ಹುಟ್ಟುವುದು ಮಹಲಿನಲ್ಲಲ್ಲ,
ಮುರುಕು ಜೋಪಡಿಗಳಲ್ಲಿ.
ಕವಿತೆ ಹುಟ್ಟುವುದು ಝಗಝಗಿಸುವ
ದೀಪಗಳ ಬೆಳಕಿನಲ್ಲಲ್ಲ ಬುಡ್ಡಿ-
ಬೆಳಕಿನ ಮಿಡುಕಿನಲ್ಲಿ.

ಕವಿತೆ ಹುಟ್ಟುವುದು ಕಲ್ಪನೆಯ ಮೂಸೆಯಲ್ಲಲ್ಲ
ದೈನಂದಿನ ಘಟನಾವಳಿಗಳಲ್ಲಿ.
ಕವಿತೆ ಹುಟ್ಟುವುದು ತುಂತುರುಮಳೆಯಲ್ಲಲ್ಲ
ನೊಂದವರ ಕಣ್ಣೀರಿನಲ್ಲಿ.

ಕವಿತೆ ಹುಟ್ಟುವುದು ಬಿಗಿದ ಕೊರಳಿನಲ್ಲಿ,
ನಿರಾಶೆಯ ನೆರಳಿನಲ್ಲಿ, ಅಸಹಾಯಕರ ಆಕ್ರಂದನದಲ್ಲಿ.
ಇವೆಲ್ಲ, ಅಲ್ಲಿ ಇಲ್ಲಿ ಹೆಕ್ಕಿ ಪಟ್ಟಿಮಾಡಿದ
ನುಡಿಮುತ್ತುಗಳು. ಹೋದಲ್ಲೆಲ್ಲ ಹಿಂಬಾಲಿಸಿ
ಕಾಡುವ ಮಾತಿನ ಭೂತಗಳು.

ಆದರೆ ನನ್ನ ಕವಿತೆ, ಹುಟ್ಟಿದ್ದು ಮಹಲಿನಲ್ಲಿ,
ಪಿಳಿಪಿಳಿ ಕಣ್ಣುಬಿಟ್ಟಿದ್ದು ಝಗಝಗಿಸುವ
ದೀಪಗಳ ಬೆಳಕಿನಲ್ಲಿ, ಬೆಳೆದಿದ್ದು ಕಲ್ಪನೆಯ-
ಮೂಸೆಯಲ್ಲಿ, ಅರಳಿದ್ದು ಕನಸಿನಲ್ಲಿ.

ಆದರೂ ಈ ಕವಿತೆಗೆ-
ತುಡಿತ-ಮಿಡಿತಗಳಿಗೆ ಸ್ಪಂದಿಸುವ ಹೃದಯವಿದೆ
ಮನದಲ್ಲಿ ಹೊಸೆದ ಹೊಸ ಕನಸಿದೆ.
ಕಣ್ಣ ಬಿಂಬದಲ್ಲಿ ಕೈ ಕೈ ಬೆಸೆದು ಜೊತೆಯಾಗಿ
ಹೆಜ್ಜೆಯಿಡುವ ಹಂಬಲವಿದೆ.

ಇಷ್ಟಾದರೂ ಹಲವರ ದೃಷ್ಟಿಯಲ್ಲಿ ನನ್ನದು
ಹುಟ್ಟುವುದಕ್ಕೆ ಮುಂಚೆಯೆ ಸತ್ತ ಕವಿತೆ
ಕೆಲವರ ದೃಷ್ಟಿಯಲ್ಲಂತು ಬದುಕಿದರೂ ಸತ್ತ ಕವಿತೆ!


Tagged:

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...