ನನ್ನ ಕವಿತೆ

ಕವಿತೆ ಹುಟ್ಟುವುದು ಮಹಲಿನಲ್ಲಲ್ಲ,
ಮುರುಕು ಜೋಪಡಿಗಳಲ್ಲಿ.
ಕವಿತೆ ಹುಟ್ಟುವುದು ಝಗಝಗಿಸುವ
ದೀಪಗಳ ಬೆಳಕಿನಲ್ಲಲ್ಲ ಬುಡ್ಡಿ-
ಬೆಳಕಿನ ಮಿಡುಕಿನಲ್ಲಿ.

ಕವಿತೆ ಹುಟ್ಟುವುದು ಕಲ್ಪನೆಯ ಮೂಸೆಯಲ್ಲಲ್ಲ
ದೈನಂದಿನ ಘಟನಾವಳಿಗಳಲ್ಲಿ.
ಕವಿತೆ ಹುಟ್ಟುವುದು ತುಂತುರುಮಳೆಯಲ್ಲಲ್ಲ
ನೊಂದವರ ಕಣ್ಣೀರಿನಲ್ಲಿ.

ಕವಿತೆ ಹುಟ್ಟುವುದು ಬಿಗಿದ ಕೊರಳಿನಲ್ಲಿ,
ನಿರಾಶೆಯ ನೆರಳಿನಲ್ಲಿ, ಅಸಹಾಯಕರ ಆಕ್ರಂದನದಲ್ಲಿ.
ಇವೆಲ್ಲ, ಅಲ್ಲಿ ಇಲ್ಲಿ ಹೆಕ್ಕಿ ಪಟ್ಟಿಮಾಡಿದ
ನುಡಿಮುತ್ತುಗಳು. ಹೋದಲ್ಲೆಲ್ಲ ಹಿಂಬಾಲಿಸಿ
ಕಾಡುವ ಮಾತಿನ ಭೂತಗಳು.

ಆದರೆ ನನ್ನ ಕವಿತೆ, ಹುಟ್ಟಿದ್ದು ಮಹಲಿನಲ್ಲಿ,
ಪಿಳಿಪಿಳಿ ಕಣ್ಣುಬಿಟ್ಟಿದ್ದು ಝಗಝಗಿಸುವ
ದೀಪಗಳ ಬೆಳಕಿನಲ್ಲಿ, ಬೆಳೆದಿದ್ದು ಕಲ್ಪನೆಯ-
ಮೂಸೆಯಲ್ಲಿ, ಅರಳಿದ್ದು ಕನಸಿನಲ್ಲಿ.

ಆದರೂ ಈ ಕವಿತೆಗೆ-
ತುಡಿತ-ಮಿಡಿತಗಳಿಗೆ ಸ್ಪಂದಿಸುವ ಹೃದಯವಿದೆ
ಮನದಲ್ಲಿ ಹೊಸೆದ ಹೊಸ ಕನಸಿದೆ.
ಕಣ್ಣ ಬಿಂಬದಲ್ಲಿ ಕೈ ಕೈ ಬೆಸೆದು ಜೊತೆಯಾಗಿ
ಹೆಜ್ಜೆಯಿಡುವ ಹಂಬಲವಿದೆ.

ಇಷ್ಟಾದರೂ ಹಲವರ ದೃಷ್ಟಿಯಲ್ಲಿ ನನ್ನದು
ಹುಟ್ಟುವುದಕ್ಕೆ ಮುಂಚೆಯೆ ಸತ್ತ ಕವಿತೆ
ಕೆಲವರ ದೃಷ್ಟಿಯಲ್ಲಂತು ಬದುಕಿದರೂ ಸತ್ತ ಕವಿತೆ!


Previous post ನೆನಪು ಮತ್ತು ಮರೆವು
Next post ಮಳೆ ಮತ್ತು ಮಗು

ಸಣ್ಣ ಕತೆ

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…