ಗುರಜಾಡ ವೆಂಕಟ ಅಪ್ಪಾರಾವ್ರವರು ಆಧುನಿಕ ತೆಲುಗು ಭಾಷೆಯ ಪ್ರಧಾನ ರೂಪಶಿಲ್ಪಿಗಳಲ್ಲಿ ಗಣ್ಯರು. ಸಂಸ್ಕೃತದ ಗಾಢಪರಿಷ್ವಂಗದಿಂದ ಬಿಡಿಸಿ ಬಳಿಕೆಯಲ್ಲಿರುವ ಜನರಾಡುವ ಮಾತಿಗೆ ಪಟ್ಟವನ್ನು ಕಟ್ಟಿ ತೆಲುಗು ಭಾಷಾ ಪರಿಣಾಮದಲ್ಲಿ ಅತ್ಯಂತ ಪ್ರಾಮುಖ್ಯವಾದ ತಿರುವನ್ನು ತಂದವರು! ಮಾನ್ಯಶ್ರೀ ಗಿಡುಗು ರಾಮಮೂರ್ತಿಯವರೊಂದಿಗೆ ಸೇರಿ ಕೃಷ್ಣಾರ್ಜುನರಂತೆ ಭಾಷಾ ಯುದ್ಧದಲ್ಲಿ ಕೃತಕವಾದ, ಪಂಡಿತರು ಮಾತ್ರ ಬಲ್ಲ ಗ್ರಾಂಥಿಕಭಾಷೆಯನ್ನು ಜನರಾಡುವ ಭಾಷೆಗೆ ಮಾರ್ಪಡಿಸಿದರು. ತಮ್ಮ ಸತ್ವವನ್ನೆಲ್ಲಾ ಪಣವಿಟ್ಟು ಎದುರುನಿಂತ ಪಂಡಿತರಾಶಿಯನ್ನು ಸೋಲಿಸಿ ಜಯಗಳಿಸಿದರು.
ಅವರು ಹುಟ್ಟಿದ್ದು ೨೧ ಸೆಪ್ಟೆಂಬರ್ ೧೮೬೨ರಲ್ಲಿ, ೧೮೮೨ರಲ್ಲಿ ಅವರು ಇಂಗ್ಲೀಷ್ನಲ್ಲಿ ಬರೆದಿರುವ ‘ಕುಕೂ’ (cuckoo) ಎಂಬ ಕವನ ಪ್ರಕಟಗೊಂಡಿತು. ೧೮೮೪ ರಲ್ಲಿ ವಿಜಯನಗರದ ಮಹಾರಾಜಾ ಕಾಲೇಜಿನ ಹೈಸ್ಕೂಲ್ ನಲ್ಲಿ ಉಪಾಧ್ಯಾಯ ವೃತ್ತಿಯಲ್ಲಿ (ಇದು ಹಂಪಿ ವಿಜಯನಗರವಲ್ಲ) ಉದ್ಯೋಗ ಜೀವನವನ್ನಾರಂಭಿಸಿ ಆಮೇಲೆ ಪೇಷ್ಕರ್, ರೆವೆನ್ಯೂ ಸೂಪರ್ ವೈಜರ್, ಖಿಲೇದಾರ ಮುಂತಾದ ಹುದ್ದೆಗಳಲ್ಲಿ ನಿಯತರಾಗಿ ಕೊನೆಯಲ್ಲಿ ವಿಜಯನಗರದ ದೊರೆ ಆನಂದಗಜಪತಿ ರಾಜರ ಸೋದರಿ ಶ್ರೀಮತಿ ಅಪ್ಪಲಕೊಂಡಯಾಂಬರ ಪರ್ಸನಲ್ ಸೆಕ್ರಟರೀಯಾಗಿ, ಆಸ್ಥಾನದ ಆಗುಹೋಗುಗಳಲ್ಲಿ ಸಲಹೆದಾರರಾಗಿ ದುಡಿದವರು.
ಅವರು ಕಾರಣ ಜನ್ಮರು, ಇಪ್ಪತ್ತೆನೆಯ ಶತಮಾನದ ಪ್ರಾರಂಭದಲ್ಲೂ ವಿಶೃಂಖಲತೆ ಯಿಂದ ನಡೆಯುತ್ತಿದ್ದ ಕನ್ಯಾಶುಲ್ಕ ದುರಾಚಾರವನ್ನು (ಹಣಕ್ಕೆ ಅಪ್ರಾಪ್ತ ವಯಸ್ಕರಾದ ಬಾಲೆಯರನ್ನು ವಯಸ್ಸು ಮೀರಿದ ಗಂಡನಿಗೆ ಮಾರುವ ಒಂದು ಹೀನಪದ್ಧತಿಯನ್ನು ಪ್ರತಿಭಟಿಸಿ ಸಮಾಜ ಸುಧಾಕರರಾಗಿ ಮೆರೆದವರು. ತಮ್ಮ ಪ್ರತಿಭಟನೆಯನ್ನು ‘ಕನ್ಯಾಶುಲ್ಕ’ ನಾಟಕ ರೂಪದಲ್ಲಿ ತಂದು ಜನಜಾಗೃತಿಯನ್ನುಂಟು ಮಾಡಿದರು. ಕೇವಲ ಸಂಸ್ಕೃತಭಾಷೆಯಲ್ಲಿ ಶೂದ್ರಕನ ಮೃಚ್ಛಕಟಿಕ ನಾಟಕಕ್ಕೆ ಮಾತ್ರ ಹೋಲಿಸಬಹುದಾದ ಪರಮೋತ್ಕೃಷ್ಟ ನಾಟಕವದು. ಆ ಕಾಲಕ್ಕೆ ಅವರು ಡಿಗ್ರೀ ಪಡೆದ ಮಹಾ ವಿದ್ವಾಂಸರು. ತೆಲುಗು ಮಾತ್ರವಲ್ಲದೆ ಆಂಗ್ಲಭಾಷೆಯಲ್ಲೂ ಪ್ರವೀಣರು, ಬರಹಗಾರರೂ ಹೌದು. ಸಂಪೂರ್ಣ ಸಮಾಜದ ಬಿಂಬವನ್ನು ಅತ್ಯಂತ ಸೂಕ್ಷ್ಮವಾಗಿ ವಿಡಂಬಿಸಿ, ಸಮಾಜದ ನಗ್ನಸ್ವರೂಪವನ್ನು ಬಹಿರಂಗಪಡಿಸಿದರು. ಮೂಢಾಚಾರಗಳ ಮೂಳೆ ಮುರಿದರು! ಪ್ರಪಂಚದ ಎಲ್ಲಾ ಭಾಷೆಯ ನಾಟಕ ಕೃತಿಗಳಲ್ಲಿಯೇ ಅತ್ಯಂತ ಉತ್ತಮವೆನಿಸಿದ ನಾಟಕಗಳ ಸಾಲಿನಲ್ಲಿ ಕನ್ಯಾಶುಲ್ಕ ನಾಟಕಕ್ಕೆ ಆದ್ಯ ಪ್ರಾಧಾನ್ಯತೆ ಇದೆ ಎಂದು ವಿಮರ್ಶಾಗ್ರೇಸರರಿಂದ ಪರಿಗಣಿಸಲ್ಪಟ್ಟಿದೆ.
ಅವರ ಗೀತೆ ರಚನೆಯಂತೂ ‘ಪೂರ್ಣಮ್ಮ’, ‘ಲವಣರಾಜು ಕಲ’, ‘ಕನ್ಯಕ’ ಇತ್ಯಾದಿ ಕೇವಲ ಕೆಲವು ಮಾತ್ರ, ಆದರೆ ತಮ್ಮ ಸರಳ ನಡಿಗೆಯಿಂದ, ಸುಂದರ ಶೈಲಿಯಿಂದ ಮತ್ತು ಮಧುರವಾದ ಭಾಷೆಯಿಂದ ಎಂದೆಂದಿಗೂ ಮರೆಯಲಾರದವುಗಳಾಗಿ ಉಳಿದಿವೆ. ಅವರ ‘ದೇಶಭಕ್ತಿ’ ಹಾಡಿನಂಥ ಸಾರ್ವಕಾಲಿಕ, ಸಾರ್ವಜನಿಕ ಮತ್ತು ಸರ್ವಜಗದಾತ್ಮಕತವಾದ ಹಾಡು ಮತ್ತೆಲ್ಲಿಯೂ ಕಾಣಸಿಗದು. ಯಾವದೇಶದವರಾಗಲಿ ಯಾವಭಾಷೆಯವರಾಗಲಿ, ಯಾವ ಕಾಲದಲ್ಲಾಗಲಿ ಹಾಡಬಹುದಾದ ಅದ್ಭುತವಾದ ಹಾಡು.
ಅವರ ಕಥೆಗಳ ಸಂಖ್ಯೆ ಐದು ಮಾತ್ರ. ತೆಲುಗುಭಾಷೆಯಲ್ಲಿ ಕನ್ನಡದಂತೆಯೇ ೧೯೦೦ ರಲ್ಲಿ ಚೊಚ್ಚಲ ಕಥೆ ಹೊರಬಂತು. ಆದರೆ ಪ್ರಮುಖ ವಿಮರ್ಶಕರ ದೃಷ್ಟಿಯಲ್ಲಿ ಎಲ್ಲರೀತಿಯಲ್ಲೂ "ಕಥೆ" ಪದಕ್ಕೆ ಆಧುನಿಕ ಗುಣಗಳುಳ್ಳ ಕಥೆ ಯಂದರೆ ಗುರುಜಾಡರವರ ದಿದ್ದುಬಾಟು (ತಿದ್ದುಪಡಿ) ಯೇ ಮೊದಲ ಕಥೆ ಎಂಬುದಾಗಿದೆ. ಇದರ ಬರವಣಿಗೆ ೧೯೧೦ ಸಮಾರಿನಲ್ಲಿ, ಹೊಸರೀತಿಯ ನಿರೂಪಣೆಯಿಂದ ಸತ್ವಯುತವಾದ ಸಂಭಾಷಣೆಗಳಿಂದ ನಾಟಕೀಯವಾದ ಸನ್ನಿವೇಶಗಳ ಸೃಜನದಿಂದ ಗುರಜಾಡರ ಕಥೆಗಳು ಇಂದಿಗೂ ಅತ್ಯುತ್ತಮ ಮಟ್ಟದಲ್ಲಿರುವ ಮನ್ನೆಣೆ ಹೊಂದುತ್ತಿವೆ.
ಕಥೆಗಳು ನಿಮ್ಮ ಮುಂದೆ ಇವೆ. ಆದಕಾರಣ, ಉಣ್ಣಲು ಕುಳಿತು ರುಚಿಯನ್ನು ಕೇಳುವುದೂ, ಹೇಳುವುದೂ ಅನವಶ್ಯಕವಾದವೆಂದು ನಮ್ಮ ಭಾವನೆ. ಕನ್ನಡಿಗರಿಗೂ ಬಹುಮಟ್ಟಿಗೆ ಪರಿಚಿತನಾದ ವೇಮನ್ನನು ಹೇಳಿದಂತೆ "ಗಂಗಿ ಗೋವಿನ ಹಾಲು ಗುಟುಕಾದರು ಸಾಕು-ಗಡಿಗೆ ತುಂಬ ಕತ್ತೆ ಹಾಲದೇಕೆ" ಎಂಬಂತೆ ರಾಸಿಯಲ್ಲಿ ಕಡಿಮೆ ಯಾದರೂ ಗುರಜಾಡರ ರಚನೆಗಳೆಲ್ಲವೂ ವಾಸಿಯಲ್ಲಿ ಘನವಾದವಾಗಿವೆ. ತೆಲುಗು ಸಾಹಿತ್ಯಕ್ಕೆ ೨೦ ನೆಯ ಶತಮಾನದ ಯುಗಕವಿ ಎಂದು ಅವರು ಮಾನ್ಯತೆ ಗಳಿಸಿದ್ದಾರೆ.
*****
ಗತ ಶತಮಾನದ ಕೊನೆಯ ದಿನಗಳ ಮಾತು. ಸೂಳೆಗಾರಿಕೆಯನ್ನು ತೊಡೆದು ಹಾಕಬೇಕೆಂಬ ಒಂದು ಉದ್ರೇಕದ ಭಾವ ಸಮಾಜವನ್ನೆಲ್ಲಾ ಅವರಿಸಿತ್ತು. ಚೆನ್ನ ರಾಷ್ಟ್ರ (ಹಳೆಯ ಮದ್ರಾಸು ರಾಷ್ಟ್ರ) ದ ತುಂಬಾ […]
ದೇವರು ಮಾಡಿರುವ ಮನುಷ್ಯರೇ! ಮನುಷ್ಯರು ಮಾಡಿರುವ ದೇವರೇ! ನಿಮ್ಮ ಹೆಸರೇನು? ಪುರಾಣಗಳ ಬಗ್ಗೆ ಶಂಕೆಗಳು ಮೂಡಿ ಕೇಳಿದಾಗ ನಮ್ಮ ಗುರುಗಳು “ಕೆಲಸಕ್ಕೆ ಬಾರದ ಓದು! ನಿಮ್ಮ ಬುದ್ಧಿಗಳೆಲ್ಲಾ […]
ನಾನು ವೃಕ್ಷಶಾಸ್ತ್ರದ ಎಂ.ಏ. ಪರೀಕ್ಷಗೆ ಓದಿತ್ತಿರುವ ದಿನಗಳಲ್ಲಿ ಮೈಲಾಪೂರದ ದೊಡ್ಡ ಬೀದಿಯಲ್ಲಿರುವ ಒಂದು ಮಹಡಿ ಮನೆಯಲ್ಲಿ ವಾಸವಾಗಿದ್ದೆ. ನನ್ನಂತಹ ಹತ್ತಾರು ಜನವಿದ್ಯಾರ್ಥಿಗಳು ನಮ್ಮ ದೇಶದವರು ಆ ಮಹಡಿ […]
(ಗೋಲಕೊಂಡ ಬಾದಶಹಿ ಫರ್ಮಾನರ ಸೀಲನ್ನು ಇಲ್ಲಿ ಬಿಚ್ಚಿರುವುದರಿಂದ ಇದಕ್ಕೆ ಸಿಕಾಕೋಲ್ ಅಥವಾ ಚಿಕಾಕೋಲ ಎಂಬ ಹೆಸರು ಬಂದಿದೆಯೆಂದು ಇಲ್ಲಿರುವವರು ಹೇಳುವರಾಗಲಿ ಇದು ಸತ್ಯವಲ್ಲ. ಈ ಪಟ್ಟಣ ಅತ್ಯಂತ […]