Home / ಕವನ / ಕವಿತೆ / ಶುಕ್ರಗೀತೆ

ಶುಕ್ರಗೀತೆ

[ಮೈಸೂರು ವಿಶ್ವವಿದ್ಯಾನಿಲಯದ ಬೆಳ್ಳಿಯ ಹಬ್ಬದ ಕವಿಸಮ್ಮೇಳನದಲ್ಲಿ ಓದಿದ್ದು]

ಓಂ, ಸಹ ನಾವವತು ; ಸಹ ನೌ ಭುನಕ್ತು;
ಸಹ ವೀರ್‍ಯಂ ಕರವಾವಹೈ ;
ತೇಜಸ್ವಿನಾವಧೀತಮಸ್ತು ;
ಮಾ ವಿದ್ವಿಷಾವಹೈ.
ಓಂ ಶಾಂತಿಃ ಶಾಂತಿಃ ಶಾಂತಿಃ

ಮೊತ್ತಮೊದಲೇ, ಬೆಳಕಾಗಲೆಂದಾಗ, ಬೆಳಕಾಯ್ತು ; ಬೆಳಕು ಚೆಲುವಾಯ್ತು;
ಕಿಡಿ ಸಿಡಿದು ಮಿನುಗಿದುವು ಜ್ಯೋತಿಗಳ್‌ ; ಮೂಡಿದರು ಸೂರ್ಯ ಚಂದಿರರು
ಲೋಕಚಕ್ಷುಗಳೆನಿಸಿ, ಸತ್ಯ ಧರ್ಮಗಳಂತೆ, ಕ್ಷಮೆ ದಯೆಗಳಂತೆ.
ಹಸುರ ಸೊಬಗಂ ತೊಟ್ಟು, ಹಾಡುತ್ತ, ಬಾನ್‌ಬಯಲೊಳಾಟವಾಡುತ್ತ,
ಸೌಂದರ್‍ಯದಿಂ ತೀವಿ, ಭೂದೇವಿ ಬೆಳಗಿದಳು, ಜೀವ ಪರಮಾತ್ಮರಿಂ ತೊಳಗಿ.

ಆ ದಿವ್ಯ ದರ್ಶನಂ ಕಣ್ಮುಂದೆ ನೋಡಿದರ್
ದಿವಿಜರುಂ, ಋಷಿಗಳುಂ ; ನಲಿದು ಕುಣಿದಾಡಿದ‌ರ್‌ ;
ಪಾಟಮಂ ಪಾಡಿದರ್-
ಓಂ, ತತ್ಸವಿತುರ್ ವರೇಣಿಯಂ
ಭರ್ಗೋ ದೇವಸ್ಯ ಧೀಮಹಿ,
ಧಿಯೋ ಯೋ ನಃ ಪ್ರಚೋದಯಾತ್.
ಮತ್ತಮವರಿಂತೆಂದು ಬೇಡಿದರ್‌-
ಹಿರಣ್ಮಯೇನ ಪಾತ್ರೇಣ
ಸತ್ಯಸ್ಯಾಪಿಹಿತಂ ಮುಖಂ ;
ತತ್ ತ್ವಂ ಪೂಷನ್ ಅಪಾವೃಣು
ಸತ್ಯಧರ್ಮಾಯ ದೃಷ್ಟಯೇ.

ಇನ್ನು ಮೊಂದಂ ಬಯಸಿ ಪೂಟಮಂ ಪೂಡಿದರ್-
ಅಸತೋ ಮಾ ಸದ್ಗಮಯ,
ತಮಸೋ ಮಾ ಜ್ಯೋತಿರ್‌ಗಮಯ,
ಮೃತ್ಯೋರ್ ಮಾ ಅಮೃತಂ ಗಮಯ,

ಇಂದಿಂಗಮೆಮಗದುವೆ ದರ್ಶನಂ, ಬಯಸಿದುದೆ ಆ ಅಮೃತಪುತ್ರರ್.
ಬ್ರಹ್ಮ ಮೀ ವಿಶ್ವಂ ; ಬ್ರಹ್ಮಮುಂ ಪೂರ್‍ಣಮೆನೆ ಏನ್ ಚೆಲುವೊ ನಮ್ಮ ಬಾಳ್ ಚೆಲುವು,
ಏನ್ ನಲಿವೊ ನಮ್ಮ ನಲಿವಾತ್ಮನಾನಂದಂ!

ಆನಂದನರಿಯದರ್‌,
ಆತ್ಮವನೆ ಒಲ್ಲದರ್,
ಬಾನ ಗಡಿಯಲಿ ಗಿಡಿದ ಕತ್ತಲೆಯ ಗುಹೆಯೊಳಡಗಿರ್‍ದರಾ ಅಸುರರ್
ಕೇಳ್ದರಾ ಪಾಟಮಂ ಪಲ್ಮೊರೆದು, ಕಣ್ಣಿರಿಯೆ ಕಂಡರಾ ಬಿಡುಗಣ್ಣ ಬೆಳಕನ್,
ಪೊಳೆದು ಪೊಳೆಯಿಸುತಿರ್ಪ ಬಿಳಿಯ ಬಾನ್‌ಬೆಳಕನ್.
ಮೆಲ್ಲಮೆಲ್ಲನೆ ನುಸುಳಿ ದೇವರಾವರಣದಲಿ, ಆಳ ತೋಟದಲಿ,
ತೆಕ್ಕೆ ತೆಕ್ಕೆಯೊಳೆದ್ದು ಹೊರಬಿದ್ದು, ಕಾರಿರುಳ ಮೊತ್ತಂಗಳಾಗಿ,
ಪೊಗೆಯಾಗಿ, ನೊಣೆವ ಪಡಿನೆಳಲಾಗಿ, ನಂಜಾಗಿ, ಕಣ್ಣ ಮಂಜಾಗಿ,
ಮುತ್ತಿ ಮರುಳ್ಗೊಳಿಸಿದ‌ರ್‌ ಸಂಶಯಂಗಳನೊತ್ತಿ, ಪಾಪಮಂ ಬಿತ್ತಿ,
ಅಲ್ಲದುದನಹುದೆಂದು, ಅಹುದನಲ್ಲೆಂದು,
ಇಲ್ಲದುದನಿಹುದೆಂದು, ಇಹುದನಿಲ್ಲೆಂದು,
ನಲ್ಲದಂ ಪೊಲೆಯೆಂದು, ಪೊಲೆ ನಲ್ಲದೆಂದು,
ತಿರಿಸಿದರ್ ಮಾಯಾವಿಗಳ್ ಬಾಳ್ವ ಮಕ್ಕಳಂ ಸಾವ ಸಂಸಾರ ಸುತ್ತಿ.
ಪಲ ಪೆಸರ್, ಪುರುಳೊಂದು,
ಪಲ ತೆರನ್, ನೆರೆನೊಂದು-
ಅಹಿ, ವೃತ್ರ, ಮಾರ, ಕಲಿ, ಅಹ್ರಿಮನ್, ಸೈತಾನ್!

ಅಂದು ಮೊದಲಾದುದೇ ದೇವಾಸುರಂ!
ಎಂದು ಕೊನೆಗಾಣ್ಬುದೋ ದೇವಾಸುರಂ!
ಪಸುಳೆವೋಲ್ ನಿಲ್ವಾಳ ನಿಲವು!
ಏನ್ ಚೆಲ್ಲು ಚೆಲ್ವು!

ಓ ಪಂಪ, ನೀನ್ ತುಂಬಿ ತೊರೆದೊಱತೆ ಪರಿವುದಿನ್ನುಂ.
ಸಾವಿರಂ ಸಂದುವುದು ಪರಿವುದಿನ್ನುಂ.
ಅದನೆ ಬಸವಣ್ಣನ್,
ಅದನೆ ಕುವರವ್ಯಾಸನ್
ಇನ್ನೊಮ್ಮೆ ಸಾರಿದರ್ ತಮ್ಮ ಕಣ್ಣಿನ್ ಕಂಡು
ಪೊಸಪೊಸತು ಪರಿಯಿನ್,
ಆಳ ಬಾಳನ್ ಕಡೆವ ಶಿವಕಲೆಯ ಕೃಪೆಯಿನ್ :
ಅದು ಶಿವಂ, ಸತ್ಯಮದು, ಸುಂದರಂ.
ಗುರು ಪಂಪ, ಓ ತಂದೆ ಪಂಪಾ,
ತೆಂಕನಾಡನ್ ಮರೆಯಲಾರದೆಲೆ ಜೀವಾ,
ಮರೆಯದಿರು, ಪರಸು, ಪರಸೆಮ್ಮನ್.
ಪಳೆಯ ಕರ್ನಾಟಕಂ ಮತ್ತೊರ್‍ಮೆ ಕಟ್ಟುಗೆ!
ಎಳೆಯ ಕರ್ನಾಟಕಂ ಪೊಸಪುಟ್ಟು ಪುಟ್ಟುಗೆ!
ಪಿರಿಯತನಮನ್ ಮರೆತ ಕಿರುಮಕ್ಕಳನ್ ಪರಸು,
ಪರಸು ನೀನೆಮ್ಮನ್.
*****
೧೯೪೧

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...