Home / ಕವನ / ಕವಿತೆ / ಒಲವು ಬಂಧನವಲ್ಲ

ಒಲವು ಬಂಧನವಲ್ಲ

ಹಿಂದೆಲ್ಲ ಬಣ್ಣಬಣ್ಣದ ನಾಜೂಕು ಬಳೆಗಳ
ಕಂಡಾಗಲೆಲ್ಲಾ ಮನ ನವಿಲಾಗುತ್ತಿತ್ತು.
ಕಿಣಿಕಿಣಿ ನಾದ ಕಿವಿ ತುಂಬುತ್ತಿತ್ತು. ಆದರೆ
ಬಂಗಾರದ ಮಿನುಗು ಬಳೆಗಳು
ಹಸಿರು ಗಾಜಿನ ಬಳೆಗಳು
ದಿನಕಳೆದು ಗಡುಸಾದಂತೆ ಕೈಗಳು
ಗಾಯಗೊಳಿಸುತ್ತವೆ ತೊಡುವಾಗಲೆಲ್ಲಾ..
ಸಂಕೋಲೆಯ ಕಂಕಣ
ಡಂಭ ಜೀವನದ ಸುರುಳಿ
ಬಳೆ ತೊಡುವುದೆಂದರೆ ನನ್ನ
ಕೈಗಳಿಗೆ ಬೇಡಿ.

ಅಂಟಿಕೊಂಡ ಮೂಗುತಿ
ಮೂಗುತಿಯೇ ಇಲ್ಲದ
ನಿರಾಭರಣ ಮುಖಗಳ
ಕಂಡಾಗಲೆಲ್ಲಾ ನನ್ನ ಅಣಕಿಸುತ್ತದೆ.
ಆಗಾಗ ಎಲ್ಲೆಲ್ಲೋ ತೊಡರಿಕೊಂಡು
ಮೂಗು ಘಾಸಿಗೊಳ್ಳುವಾಗಲೆಲ್ಲಾ,
ಅಂದುಕೊಳ್ಳುತ್ತೇನೆ.. ಇದರ ಹಂಗೇ ಬೇಡ.
ತೆಗೆದು ಪಕ್ಕಕ್ಕಿಡಲೇ… ಎಂದು.

ಅರಿಸಿನದ ನಂಜು ತೆಗೆಯುವ ಕೊಂಬು
ಕೆಲವೊಮ್ಮೆ ಕುತ್ತಿಗೆಗೆ ಕೆರೆತ ತಂದಿಡುತ್ತದೆ.
ತಾಳಿಯ ನೀರು ಮೈಮೇಲೆ ಬಿದ್ದರೂ
ಕಡಿತ ಕಾಡುತ್ತದೆ.
ಮುಲಾಮುಗಳ ಸಾಲು ಹೆಚ್ಚು
ಹೆಚ್ಚುತ್ತಾ ಹೋದರೂ
ತುರಿಕೆ ನಿಲ್ಲುವುದಿಲ್ಲ.

ಮುಂಚಿನಂತೆ ಈಗ ನನ್ನ ಕಾಲಿಗೆ
ಗೆಜ್ಜೆ ಶೋಭಿಸುವುದಿಲ್ಲ.
ಗೆಜ್ಜೆಯ ಸುತ್ತ ಕಟ್ಟಿಕೊಂಡ ಆ ಸದ್ದು
ತಾರಕ್ಕೇರಿದಂತೆ ಸಂತೆಯೇ ಭುಗಿಲೇಳುತ್ತದೆ.

ತನು ಬಂಧನದ ಕಡಿವಾಣಗಳು
ಕಟ್ಟಿಹಾಕುವುದ ಅರಿತಿಲ್ಲ-
ಮನಗುದುರೆಗೆ ನಾಗಾಲೋಟ
ಕಲಿಸಬೇಕಿಲ್ಲ.
ಎಂದರೆ ಅವನೆಂದ ಒಳಹೊರಗು ಅರಿತರೆ
ತಾಳಿ, ನತ್ತು, ಬಳೆ ನಿನಗೆ ಬೇಕೆಂದಿಲ್ಲ
ಹೊರಗು ಮಾಡಬೇಕಿಲ್ಲ,
ಒಳಜಡಿದು ಬೀಗ ಹಾಕಬೇಕಿಲ್ಲ.
ಮತ್ತೆಲ್ಲವೂ ನಿನ್ನಿಷ್ಟ,
ನಿನ್ನೊಳಗೆ ನಾ
ನಿರುವುದೇ ನನ್ನ ಅದೃಷ್ಟ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...