Home / ಕವನ / ಕವಿತೆ / ಅಮರ ಲೀಲೆ

ಅಮರ ಲೀಲೆ


ಆಕಾಶ ಕುಸುಮವನ್ನಭಿವರ್ಣಿಸುವ ಕಾವ್ಯ
ವಿದ್ದೇನು ಸಾರ್ಥಕ್ಯ? ಕುರುಡಗಣ್ಣು!
ಸಾಕಾರ ದೇವನಿಗೆ ನೈವೇದ್ಯವೇ ಶೂನ್ಯ
ಉದ್ಧಾರ ವೇನಿದಕೆ? ಘೋರ ಹುಣ್ಣು!


ಹಣವಂತ ಮಾನವನ ಹೆಣಗೈದರೂ ತೃಪ್ತಿ
ಇಲ್ಲೆಂದು ಕುದಿಕುದಿದು ಲಾಭಕಾಗಿ;
ಒಣ ರೊಟ್ಟಿ ಸಿಕ್ಕದೊಲು ಗೈದು ರಕ್ತವ ಹೀರಿ
ಕೊಲ್ಲುವನು ಕೂಲಿಯನು ಸ್ವಾರ್ಥಿಯಾಗಿ


ಹೊಟ್ಟೆಯನು ನೆನೆದಾಗ ಬೆಟ್ಟ ನಿಲುವುದು ಮುಂದೆ
ಬಟ್ಟೆಯುಂಟೇ ಬಟ್ಟೆ ಇಲ್ಲದರಿಗೆ?
ಸಿಟ್ಟು ರಟ್ಟೆಯೊಳಿಲ್ಲ; ಮೈ ಮೂಳೆ ಗೂಡಮಮ!
ಎಷ್ಟು ದಿನವೀ ಮೋಸ ಕಾರ್ಮಿಕರಿಗೆ?


ಗಗನ ಮಧ್ಯದ ಗುಹೆಯೊಳಾರುಂಟು ಗೊತ್ತುಂಟೆ?
ನೋಡ ಬಯಸುವರೊಮ್ಮೆ ನೋಡಿ ಜೋಕೆ!
ಮುಗಿದೀತು ಇಹಪರದ ಕತೆಯೆ ಬಲು ಎಚ್ಚರಿಕೆ
ಗುಡುಗು ಮೋಡದ ಸಿಡಿಲು ಕಾಣಬೇಕೆ?


ವಿಷಮತೆಯ ವಿಷವದೋ ಹೊನಲಾಗಿ ಹರಿಯುತಿದೆ
ಜೀವ ಕೋಟಿಯ ಕೊಂದು ಮುಂದೆ ಸಾಗಿ
ಕಸಕೆ ಕಸವರವೆಂದು ಬಾಯ್ಬಿಟ್ಟು ಚೀರುತಿದೆ
ಸಾವು ಕಾದಿದ್ದರತಿಯಾಶೆಯಾಗಿ


ಧನದ ಧರ್ಮವು ಕೂರ ಬಲು ಘೋರವಾಗುತಿದೆ
ಜನವೆಲ್ಲ ಕಾಲ ಹುಡಿ ಉಸಿರಿದ್ದರೂ
ಘನವು ಕಿರಿದಾಗದಿರೆ ಬಾಳು ಬರಡಾಗಲಿದೆ
ಕನಸು ಮನಸಿನ ಮಂತ್ರ ಮಿಡಿದಿದ್ದರೂ


ತೇಜಸ್ಸು ತುಂಬೋಣ ಕಾವ್ಯ ವೀಣೆಯ ಮಿಡಿದು
‘ಲೇಖನಿಯು ಕೂರಸಿ’ ಯಿದೆಂದು ತೋರಿ
ಓಜಸ್ಸು ನಮಗೆಲ್ಲ ಧೀ ಶಕ್ತಿ ನೀಡಲದು
ನಾಕವನೆ ನಿರ್ಮಿಸುವ ಹಾಡಿ ಹಾರಿ


ಜೀವಂತ ಸಾಮ್ರಾಜ್ಯ ಮೈವೆತ್ತು ನಿಂತಿರಲಿ
ಸುಖ ಜೀವ ನಾಡಿಯದು ಶಾಂತಿಕಣ್ಣು!
ಭಾವನೆಯ ಭಾಗ್ಯ ಸುರನಾರಿ ಕೆಲಸಾರಿರಲಿ
ಮುಖವೆ ಸ್ವರ್ಲೋಕವಾಗಿರುವ ಹಣ್ಣು.


ದಿನದ ಮೊಳೆತದ ಮುನ್ನ ಕಾರಿರುಳು ಕೊರೆದಿತ್ತು
ಕಣ್ಸನ್ನೆ ಕೈಸನ್ನೆ ಕಾಣದಂತೆ!
ಮನಕೆ ಮೋಡಿಯ ಮಾಡಿ ತನ್ನ ತಾ ಮರೆಸಿತ್ತು
ಶ್ರಮಜೀವಿ ಬಲೆಯಿದನ್ನರಿಯದಂತೆ-!

೧೦
ಬದುಕುವಾಸೆಯು ಯಾರಿಗಿಲ್ಲವೋ ನಿಜ ಹೇಳಿ
ಎಲ್ಲ ಹೋರಾಟವೂ ಬದುಕಿಗಾಗಿ
ಮುದದಿಂದ ಬಾಳಗೊಡಿ ಬಡವವನು ಬಲ್ಲಿದರೆ
ಇಲ್ಲದಿರೆ ದುಡಿವನವ ಕ್ರಾಂತಿಗಾಗಿ

೧೧
ನೆತ್ತರೋಕುಳಿಯಾಡಿ ತನ್ನಗೋರಿಯ ಕಟ್ಟಿ
ಕೀರ್ತಿ ಗುಡಿ ನಿಲ್ಲಿಸುವನದರ ಮೇಲೆ
ಸುತ್ತಲೂ ಸಾಮ್ರಾಜ್ಯ ಚಾಚುವೊಲು ಮನಮುಟ್ಟಿ
ದುಡಿವ ಜೀವಿಯ ದುಡಿತ “ಅಮರ ಲೀಲೆ”
*****
ಬೆಂಗಳೂರು : ೧೯೪೪

Tagged:

Leave a Reply

Your email address will not be published. Required fields are marked *

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...