Home / ಕವನ / ಕವಿತೆ / ಅಮರ ಲೀಲೆ

ಅಮರ ಲೀಲೆ


ಆಕಾಶ ಕುಸುಮವನ್ನಭಿವರ್ಣಿಸುವ ಕಾವ್ಯ
ವಿದ್ದೇನು ಸಾರ್ಥಕ್ಯ? ಕುರುಡಗಣ್ಣು!
ಸಾಕಾರ ದೇವನಿಗೆ ನೈವೇದ್ಯವೇ ಶೂನ್ಯ
ಉದ್ಧಾರ ವೇನಿದಕೆ? ಘೋರ ಹುಣ್ಣು!


ಹಣವಂತ ಮಾನವನ ಹೆಣಗೈದರೂ ತೃಪ್ತಿ
ಇಲ್ಲೆಂದು ಕುದಿಕುದಿದು ಲಾಭಕಾಗಿ;
ಒಣ ರೊಟ್ಟಿ ಸಿಕ್ಕದೊಲು ಗೈದು ರಕ್ತವ ಹೀರಿ
ಕೊಲ್ಲುವನು ಕೂಲಿಯನು ಸ್ವಾರ್ಥಿಯಾಗಿ


ಹೊಟ್ಟೆಯನು ನೆನೆದಾಗ ಬೆಟ್ಟ ನಿಲುವುದು ಮುಂದೆ
ಬಟ್ಟೆಯುಂಟೇ ಬಟ್ಟೆ ಇಲ್ಲದರಿಗೆ?
ಸಿಟ್ಟು ರಟ್ಟೆಯೊಳಿಲ್ಲ; ಮೈ ಮೂಳೆ ಗೂಡಮಮ!
ಎಷ್ಟು ದಿನವೀ ಮೋಸ ಕಾರ್ಮಿಕರಿಗೆ?


ಗಗನ ಮಧ್ಯದ ಗುಹೆಯೊಳಾರುಂಟು ಗೊತ್ತುಂಟೆ?
ನೋಡ ಬಯಸುವರೊಮ್ಮೆ ನೋಡಿ ಜೋಕೆ!
ಮುಗಿದೀತು ಇಹಪರದ ಕತೆಯೆ ಬಲು ಎಚ್ಚರಿಕೆ
ಗುಡುಗು ಮೋಡದ ಸಿಡಿಲು ಕಾಣಬೇಕೆ?


ವಿಷಮತೆಯ ವಿಷವದೋ ಹೊನಲಾಗಿ ಹರಿಯುತಿದೆ
ಜೀವ ಕೋಟಿಯ ಕೊಂದು ಮುಂದೆ ಸಾಗಿ
ಕಸಕೆ ಕಸವರವೆಂದು ಬಾಯ್ಬಿಟ್ಟು ಚೀರುತಿದೆ
ಸಾವು ಕಾದಿದ್ದರತಿಯಾಶೆಯಾಗಿ


ಧನದ ಧರ್ಮವು ಕೂರ ಬಲು ಘೋರವಾಗುತಿದೆ
ಜನವೆಲ್ಲ ಕಾಲ ಹುಡಿ ಉಸಿರಿದ್ದರೂ
ಘನವು ಕಿರಿದಾಗದಿರೆ ಬಾಳು ಬರಡಾಗಲಿದೆ
ಕನಸು ಮನಸಿನ ಮಂತ್ರ ಮಿಡಿದಿದ್ದರೂ


ತೇಜಸ್ಸು ತುಂಬೋಣ ಕಾವ್ಯ ವೀಣೆಯ ಮಿಡಿದು
‘ಲೇಖನಿಯು ಕೂರಸಿ’ ಯಿದೆಂದು ತೋರಿ
ಓಜಸ್ಸು ನಮಗೆಲ್ಲ ಧೀ ಶಕ್ತಿ ನೀಡಲದು
ನಾಕವನೆ ನಿರ್ಮಿಸುವ ಹಾಡಿ ಹಾರಿ


ಜೀವಂತ ಸಾಮ್ರಾಜ್ಯ ಮೈವೆತ್ತು ನಿಂತಿರಲಿ
ಸುಖ ಜೀವ ನಾಡಿಯದು ಶಾಂತಿಕಣ್ಣು!
ಭಾವನೆಯ ಭಾಗ್ಯ ಸುರನಾರಿ ಕೆಲಸಾರಿರಲಿ
ಮುಖವೆ ಸ್ವರ್ಲೋಕವಾಗಿರುವ ಹಣ್ಣು.


ದಿನದ ಮೊಳೆತದ ಮುನ್ನ ಕಾರಿರುಳು ಕೊರೆದಿತ್ತು
ಕಣ್ಸನ್ನೆ ಕೈಸನ್ನೆ ಕಾಣದಂತೆ!
ಮನಕೆ ಮೋಡಿಯ ಮಾಡಿ ತನ್ನ ತಾ ಮರೆಸಿತ್ತು
ಶ್ರಮಜೀವಿ ಬಲೆಯಿದನ್ನರಿಯದಂತೆ-!

೧೦
ಬದುಕುವಾಸೆಯು ಯಾರಿಗಿಲ್ಲವೋ ನಿಜ ಹೇಳಿ
ಎಲ್ಲ ಹೋರಾಟವೂ ಬದುಕಿಗಾಗಿ
ಮುದದಿಂದ ಬಾಳಗೊಡಿ ಬಡವವನು ಬಲ್ಲಿದರೆ
ಇಲ್ಲದಿರೆ ದುಡಿವನವ ಕ್ರಾಂತಿಗಾಗಿ

೧೧
ನೆತ್ತರೋಕುಳಿಯಾಡಿ ತನ್ನಗೋರಿಯ ಕಟ್ಟಿ
ಕೀರ್ತಿ ಗುಡಿ ನಿಲ್ಲಿಸುವನದರ ಮೇಲೆ
ಸುತ್ತಲೂ ಸಾಮ್ರಾಜ್ಯ ಚಾಚುವೊಲು ಮನಮುಟ್ಟಿ
ದುಡಿವ ಜೀವಿಯ ದುಡಿತ “ಅಮರ ಲೀಲೆ”
*****
ಬೆಂಗಳೂರು : ೧೯೪೪

Tagged:

Leave a Reply

Your email address will not be published. Required fields are marked *

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...