೧
ಆಕಾಶ ಕುಸುಮವನ್ನಭಿವರ್ಣಿಸುವ ಕಾವ್ಯ
ವಿದ್ದೇನು ಸಾರ್ಥಕ್ಯ? ಕುರುಡಗಣ್ಣು!
ಸಾಕಾರ ದೇವನಿಗೆ ನೈವೇದ್ಯವೇ ಶೂನ್ಯ
ಉದ್ಧಾರ ವೇನಿದಕೆ? ಘೋರ ಹುಣ್ಣು!
೨
ಹಣವಂತ ಮಾನವನ ಹೆಣಗೈದರೂ ತೃಪ್ತಿ
ಇಲ್ಲೆಂದು ಕುದಿಕುದಿದು ಲಾಭಕಾಗಿ;
ಒಣ ರೊಟ್ಟಿ ಸಿಕ್ಕದೊಲು ಗೈದು ರಕ್ತವ ಹೀರಿ
ಕೊಲ್ಲುವನು ಕೂಲಿಯನು ಸ್ವಾರ್ಥಿಯಾಗಿ
೩
ಹೊಟ್ಟೆಯನು ನೆನೆದಾಗ ಬೆಟ್ಟ ನಿಲುವುದು ಮುಂದೆ
ಬಟ್ಟೆಯುಂಟೇ ಬಟ್ಟೆ ಇಲ್ಲದರಿಗೆ?
ಸಿಟ್ಟು ರಟ್ಟೆಯೊಳಿಲ್ಲ; ಮೈ ಮೂಳೆ ಗೂಡಮಮ!
ಎಷ್ಟು ದಿನವೀ ಮೋಸ ಕಾರ್ಮಿಕರಿಗೆ?
೪
ಗಗನ ಮಧ್ಯದ ಗುಹೆಯೊಳಾರುಂಟು ಗೊತ್ತುಂಟೆ?
ನೋಡ ಬಯಸುವರೊಮ್ಮೆ ನೋಡಿ ಜೋಕೆ!
ಮುಗಿದೀತು ಇಹಪರದ ಕತೆಯೆ ಬಲು ಎಚ್ಚರಿಕೆ
ಗುಡುಗು ಮೋಡದ ಸಿಡಿಲು ಕಾಣಬೇಕೆ?
೫
ವಿಷಮತೆಯ ವಿಷವದೋ ಹೊನಲಾಗಿ ಹರಿಯುತಿದೆ
ಜೀವ ಕೋಟಿಯ ಕೊಂದು ಮುಂದೆ ಸಾಗಿ
ಕಸಕೆ ಕಸವರವೆಂದು ಬಾಯ್ಬಿಟ್ಟು ಚೀರುತಿದೆ
ಸಾವು ಕಾದಿದ್ದರತಿಯಾಶೆಯಾಗಿ
೬
ಧನದ ಧರ್ಮವು ಕೂರ ಬಲು ಘೋರವಾಗುತಿದೆ
ಜನವೆಲ್ಲ ಕಾಲ ಹುಡಿ ಉಸಿರಿದ್ದರೂ
ಘನವು ಕಿರಿದಾಗದಿರೆ ಬಾಳು ಬರಡಾಗಲಿದೆ
ಕನಸು ಮನಸಿನ ಮಂತ್ರ ಮಿಡಿದಿದ್ದರೂ
೭
ತೇಜಸ್ಸು ತುಂಬೋಣ ಕಾವ್ಯ ವೀಣೆಯ ಮಿಡಿದು
‘ಲೇಖನಿಯು ಕೂರಸಿ’ ಯಿದೆಂದು ತೋರಿ
ಓಜಸ್ಸು ನಮಗೆಲ್ಲ ಧೀ ಶಕ್ತಿ ನೀಡಲದು
ನಾಕವನೆ ನಿರ್ಮಿಸುವ ಹಾಡಿ ಹಾರಿ
೮
ಜೀವಂತ ಸಾಮ್ರಾಜ್ಯ ಮೈವೆತ್ತು ನಿಂತಿರಲಿ
ಸುಖ ಜೀವ ನಾಡಿಯದು ಶಾಂತಿಕಣ್ಣು!
ಭಾವನೆಯ ಭಾಗ್ಯ ಸುರನಾರಿ ಕೆಲಸಾರಿರಲಿ
ಮುಖವೆ ಸ್ವರ್ಲೋಕವಾಗಿರುವ ಹಣ್ಣು.
೯
ದಿನದ ಮೊಳೆತದ ಮುನ್ನ ಕಾರಿರುಳು ಕೊರೆದಿತ್ತು
ಕಣ್ಸನ್ನೆ ಕೈಸನ್ನೆ ಕಾಣದಂತೆ!
ಮನಕೆ ಮೋಡಿಯ ಮಾಡಿ ತನ್ನ ತಾ ಮರೆಸಿತ್ತು
ಶ್ರಮಜೀವಿ ಬಲೆಯಿದನ್ನರಿಯದಂತೆ-!
೧೦
ಬದುಕುವಾಸೆಯು ಯಾರಿಗಿಲ್ಲವೋ ನಿಜ ಹೇಳಿ
ಎಲ್ಲ ಹೋರಾಟವೂ ಬದುಕಿಗಾಗಿ
ಮುದದಿಂದ ಬಾಳಗೊಡಿ ಬಡವವನು ಬಲ್ಲಿದರೆ
ಇಲ್ಲದಿರೆ ದುಡಿವನವ ಕ್ರಾಂತಿಗಾಗಿ
೧೧
ನೆತ್ತರೋಕುಳಿಯಾಡಿ ತನ್ನಗೋರಿಯ ಕಟ್ಟಿ
ಕೀರ್ತಿ ಗುಡಿ ನಿಲ್ಲಿಸುವನದರ ಮೇಲೆ
ಸುತ್ತಲೂ ಸಾಮ್ರಾಜ್ಯ ಚಾಚುವೊಲು ಮನಮುಟ್ಟಿ
ದುಡಿವ ಜೀವಿಯ ದುಡಿತ “ಅಮರ ಲೀಲೆ”
*****
ಬೆಂಗಳೂರು : ೧೯೪೪

















