ಗುರುವಿನ ಕಠೋರ ಮಾತುಗಳು ಶಿಷ್ಯನಿಗೆ ವೇದನೆಯಾಯಿತು. ತಾನು ಮಾಡಿದ ತಪ್ಪುಗಳನ್ನು ಅರಿತು ಆಂತರ್ಯವನ್ನು ಶೋಧಿಸ ತೊಡಗಿದ. ಒಡನಾಡುವ ಮಿತ್ರರೊಂದಿಗೆ ತನ್ನ ಭಾವನೆಗಳನ್ನು ಹಂಚಿಕೊಳ್ಳಲಾರದೆ ವಿಕಾಂತವನ್ನು ಬಯಸಿದ. ಕಾಡಿನ ಮೂಲೆಯಲ್ಲಿ ಗಿಡಮರಗಳ ಮಧ್ಯೆ ಏಕಾಂತದಲ್ಲಿರಲು ಇಚ್ಛಿಸಿದ. ಗುರುವಿನ ಮಾತುಗಳನ್ನು, ಉಪದೇಶವನ್ನು ಮನದಟ್ಟು ಮಾಡಿಕೊಳ್ಳುತ್ತಿದ್ದ. ಅಳಕನ್ನು ಹುಡುಕಿ ಮನವ ಗುಡಿಸುತ್ತಿದ್ದ, ಸಾರಿಸುತ್ತಿದ್ದ, ತಿಕ್ಕಿ ತೊಳೆದು, ಒರೆಸಿ, ಶುಭ್ರ ಮಾಡುತ್ತಿದ್ದ.
ಏಕಾಂತದಲ್ಲಿ ಕುಳಿತು ಅಂತರಂಗದ ಒಳಹೊಕ್ಕು ದೀಪ ಹಚ್ಚುತ್ತಿದ್ದ. ಬೆಳಕಿನಲ್ಲಿ ಆತ್ಮ ಸಂಶೋಧನೆ ಮಾಡುತ್ತಿದ್ದ. ಏಕಾಂತದಲ್ಲಿ ಕಣ್ಣೀರು ಸುರಿಸಿ ಮುತ್ತಾಗಿ ಬೆಳೆಸುತ್ತಿದ್ದ. ಹೃದಯ ಹೊಲವ ಉಳುತ್ತಿದ್ದ. ತನ್ನನ್ನು ತಾನೇ ತೋಡಿಕೊಂಡು ಬೀಜ ಮೊಳೆಯುವಂತೆ ಸಂಪನ್ನ ಗೊಳಿಸುತ್ತಿದ್ದ. ಏಕಾಂತದಲ್ಲಿ ದಿಗಂತದವರೆಗೂ ಸಾಗುತ್ತಿದ್ದ. ಮನವನ್ನು ಎತ್ತರಕ್ಕೆ ಬೆಳೆಸುತ್ತಿದ್ದ.
ಶಿಷ್ಯನು ಬಹಳಷ್ಟು ಹೊತ್ತು ಏಕಾಂತದಲ್ಲಿ ಕಳೆಯುವುದನ್ನು ಗಮನಿಸಿ ಶಿಷ್ಯನನ್ನು ಕರೆದು “ನಿನ್ನ ಏಕಾಂತಕ್ಕೆ ಕಾರಣವೇನು?” ಎಂದು ಕೇಳಿದರು.
“ಗುರುವೆ! ನಿಮ್ಮ ಸಾನಿಧ್ಯದಲ್ಲಿ ಕಲಿತದ್ದು ರಕ್ತಗತವಾಗಿರಿಸಲು ನಾ ಏಕಾಂತದಲ್ಲಿ ನನ್ನ ನಾನು ಹುಡುಕಿಕೊಂಡು ಹೊರಟಿರುವೆ” ಎಂದ.
“ನಿನ್ನ ನೀನು ಹುಡುಕಲು ಎಲ್ಲಿಗೂ ಹೋಗಬೇಕಿಲ್ಲ. ಕಾಡು ವನದಲ್ಲಿ ನೀನು ಹುಡುಕಬೇಡ. ನೀನು ಇರುವುದು ನಿನ್ನ ಹೊರಗಲ್ಲ, ಒಳಗೆ, ನಿನ್ನ ದೃಷ್ಟಿ ಅಂತರ ಮುಖವಾಗಲಿ. ನಿನ್ನ ಭಾವ ಪರಿಪಕ್ವವಾಗಲಿ. ನಿನ್ನೊಳಗಣ ಹಾದಿ ಅನಂತವಾಗಲಿ. ಅದಕ್ಕೆ ಅನುವಾಗುವುದು ಏಕಾಂತ ಎಂದು ಅರಿತಿರುವೆಯಾ?” ಎಂದರು ಗುರುಗಳು.
“ಏಕಾಂತದಿಂದ ಶ್ರೀಕಾಂತ ಸಾಕ್ಷಾತ್ಕಾರ. ಏಕಾಂತದ ಹಾದಿಯಲ್ಲಿ ಝೆನ್ ಹೆಜ್ಜೆ ಇಟ್ಟು ನಡೆ. ಸಾಗುವುದು. ಗುರಿ ಸೇರುವುದು” ಎಂದಾಗ ಶಿಷ್ಯನ ಎದೆ ತುಂಬಿ ಬಂದಿತು.
*****

















