ಬಿಜ್ಜಳ ಮಹಾರಾಜರ ಬಳಿ ಅಣ್ಣ ಬಸವಣ್ಣನವರು ಮಹಾ ಮಂತ್ರಿಯಾದ ಹೊಸದರಲ್ಲಿ ಕಲ್ಯಾಣ ನಗರಿಯಲ್ಲಿದ್ದ ಚಾಡಿ ಕೋರರಾದ ಮಲ್ಲಪ್ಪ ಶೆಟ್ಟಿ ಕೊಂಡಿ ಮಂಚಣ್ಣ ಮುಂತಾದವರೆಲ್ಲ ಸೇರಿಕೊಂಡು ಒಮ್ಮೆ ಅಣ್ಣ ಬಸವಣ್ಣನವರು ಏಕಾಂತವಾಗಿದ್ದಾಗ ಅಲ್ಲಿಗೆ ಬಂದರು.
‘ಬಿಜ್ಜಳ ಮಹಾರಾಜರು ನಿಮ್ಮ ಬಗ್ಗೆ ಮೊನ್ನೆ ದಿನ ಎಲ್ಲರ ಎದುರಿಗೆ ನಿಮ್ಮನ್ನು ಕೇವಲವಾಗಿ ನಿಂದಿಸಿದರು!’ ಎಂದು ಬಂದವರು ಪೀಠಿಕೆ ಹಾಕಿ ಮಾತಿಗೆ ಮಾತು ಪೋಣಿಸುತ್ತಾ ಕುಳಿತರು.
“ನೀವು ಬಿಜ್ಜಳ ಮಹಾರಾಜರ ಮಾತುಗಳನ್ನು ಸತ್ಯವೆಂದು ನಂಬುವಿರೇನು ? ಅವರು ನಮ್ಮ ಬಗ್ಗೆ ಪ್ರೀತಿಯಿರುವವರು. ನಿಮ್ಮ ಮನಸ್ಥಿತಿ ಹಾಗೆ ಆಲೋಚಿಸಿರಬಹುದು. ಇಲ್ಲವೆ ನೀವು ಪೂರ್ವಗ್ರಹ ಪೀಡಿತರಿರಬಹುದು. ನಿಮಗೆ ಯಾವುದು ಸತ್ಯವೆನಿಸುವುದು?” ಅಣ್ಣ ಬಸವಣ್ಣನವರು ಬಂದಿದ್ದವರನ್ನು ಪ್ರಶ್ನಿಸಿ ಅವರ ಮುಖ ನೋಡುತ್ತಾ ಕುಳಿತರು.
ಅಲ್ಲಿದ್ದವರೆಲ್ಲ ಬೆವರ ತೊಡಗಿದರು. ತೊದಲ ತೊಡಗಿದರು.
‘ಮಹಾ ಮಂತ್ರಿಗಳೇ… ಬಿಜ್ಜಳ ಮಹಾರಾಜರು ಏನೆಂದು ನಮಗೇನು ತಿಳಿಯದು. ಸತ್ಯಾಸತ್ಯತೆ ಕುರಿತು ನಾವು ಆಲೋಚಿಸಿಲ್ಲ. ನಿಮ್ಮ ಬಗ್ಗೆ ಹಾಗೆ ಅಂದಿದ್ದನ್ನು ಹೇಳಲು ಬಂದಿದ್ದೆವು’ ಎಂದರು.
“ನಿಮ್ಮ ಚಾಡಿ ಮಾತುಗಳಿಂದೇನು ಲಾಭವಿಲ್ಲ. ಕಲ್ಯಾಣದ ಜನತೆಗೆ ಬಿಜ್ಜಳ ಮಹಾರಾಜರ ಬೊಕ್ಕಸ ತುಂಬಿಸಲು ಚಿಂತಿಸಿ, ಮಹಾರಾಜರ ಜನರ ತಲೆ ತುಂಬಿಸಿ ನೀವೂ ಹಾಳಾಗಬೇಡಿ ! ನೀವು ಮೊದಲು ಹೊರಡಿ. ಇನ್ನೆಂದು ನನ್ನ ಬಳಿ ಅವರಿವರ ಸುದ್ದಿ ತಂದು ನನ್ನ ಸಮಯ ವ್ಯರ್ಥ ಮಾಡಬೇಡಿ’ ಎಂದು ಅಣ್ಣ ಬಸವಣ್ಣನವರು ಖಾರವಾಗಿ ಪ್ರತಿಕ್ರಿಯಿಸಿದರು.
‘ನಾವು ನಿಮಗೆ ಉಪಕಾರ ಮಾಡಲು ಬಂದಿದ್ದೆವು. ನೀವು ನಮ್ಮನ್ನು ಅವಮಾನಿಸಿ ಕಳಿಸಿದ್ದು ಸರಿಯಿಲ್ಲ. ಇದರ ಪ್ರತಿಫಲ ಉಂಡೇ ಉಣ್ಣುವಿರಿ…’ ಎಂದು ಬಂದಿದ್ದವರು ಕೂಗಾಡಿದರು.
ಅಣ್ಣ ಬಸವಣ್ಣನವರು ಬಂದಿದ್ದವರನ್ನು ಮೌನ ವ್ರತದಿ ಸಾಗ ಹಾಕಿದರು.
*****