Home / ಕವನ / ಕವಿತೆ / ಮುಳ್ಳಗಳ್ಳಿ

ಮುಳ್ಳಗಳ್ಳಿ

ಮುಳ್ಳಗಳ್ಳಿ ಬಳಿಯೆ ನೀನು
ಕಳ್ಳಿಕರಿಯ ಹುಳದ ಕೊಲೆಗೆ
ಅಳಲಿ ಬಳಲಿ ಬಾಯಬಿಟ್ಟು
ನೊಂದು ಬೆಂದು ಬೂದಿಯಾಗಿ ಕಾಣುತಿರುವೆಯ
ಚಂದದಿಂಪು ಸಂದಿತೆಂದು ಸವೆಯುತಿರುವೆಯ
ಕೋಟಗೀಟೆಯಂತೆ ಬೇಲಿ
ಕೂಟಕೆಲ್ಲ ನಿನ್ನ ನಡಿಸೆ
ಮಾಟವಾಗಿ ಮೆರೆದು ನಿಂದು
ಸೊಬಗಿನಿಂದ ಬೆಳೆದು ಬಂದ ದಿವಸ ಪೋಯಿತೆ
ಜವನ ಜಾತ್ರೆ ಜವದಿ ಬಂದು ಮೋಸವಾಯಿತೆ
ಮುಳ್ಳಿನಿಂದ ಕೂಡಿಯಿರುವ
ಒಳ್ಳೆ ಹಣ್ಣಿನಿಂದ ಸಿಳ್ಳಿ-
ಮಿಳ್ಳಿ ಜಗವ ತಣಿಸಿ ಕುಣಿಸಿ
ಚಲುವಿನಿಂದ ಬೆಳೆಪ ಬಾಲರಮೃತವೆಲ್ಲಿದೆ
ತಿಳಿಯದಾಯ್ತು ತಿರೆಗೆ ಬೇರೆತರವದೆಲ್ಲಿದೆ
ಹಕ್ಕಿ ಹರಿಣಿ ಹಾವುಗಳಿಗೆ
ತಕ್ಕುದಾದ ಇಕ್ಕೆಯನ್ನು
ಮಕ್ಕಳಂತೆ ಸಾಕಿ ಕೊಡಲು
“ನಾಡತಾಯಿ ಬೀಡು” ಎಂದು ಕೂಗಿ ಕಲೆತವೆ
ಕೇಡುಗಾಲ ಬರಲು ತಾವೆಯೋಡಿ ಹೋದವೆ
ಹಲವು ಕಾಲ ಹಲವು ಬಗೆಯ
ಹೊಲವ ಬಳಸಿ ಮಲೆತುನಿಂತು
ಛಲದೆ ಬೆಳೆಯ ಜನರು ನಿನ್ನ
ಸವರಿ ಸವರಿ ಸೋತು ಸೋತು ಸರಿದು ನಿಂತ‌ರೈ
ಬವಣೆಯಿಂದ ಕೊಲುವ ಮದ್ದನಿತ್ತು ದಣಿದರೈ
ರಕ್ತಬೀಜ ರಾತ್ರಿಚರನ
ರಕ್ತದಂತೆ ಬಿದ್ದ ಕಡೆಗೆ
ವ್ಯಕ್ತರೂಪದಿಂದಲೇಳೆ
ಮತಿಯು ಹರಿಯದಿರಲು ನರರು ಮೊರೆಯನಿಟ್ಟರೆ
ವ್ಯಥಿತವಾದ ದನಿಯನೆಲ್ಲ ದೇವ ಕೇಳ್ದನೆ
ರೀತಿ ನೀತಿ ತಿಳಿದುನೋಡಿ
ಜಾತಿ ರತ್ನದಂತ ದೇವಿ
ಖ್ಯಾತಿಗೊಂಡು ನಡೆಯದಿರಲು
ಪೊಡವಿಯೊಡೆಯ ಸಿಟ್ಟಿನಿಂದೆ ಪಿಡುಗಬಿಟ್ಟನೆ
ಒಡನೆ ಹುಳದ ಗಡಣದಿಂದೆ ಕೊಲೆಯ ನಡಿಸಿತೆ
ಸಿಟ್ಟಿಗೆದ್ದು ದೇವ ಕಷ್ಟ
ಕೊಟ್ಟನೆಂಬ ನಾಡ ನುಡಿಯ
ಮಟ್ಟಿಗಿಳಿಯದಿರುವ ಮಾತ
ಮನದೆ ತೂಗಿ ನೋಡೆ ದಯಾಮಯನು ಮಾಳ್ಪನೆ
ಜನಕತಂದೆ “ಅನುವ ತನುವ” ನೋಡದಿರುವನೆ
ಸಾವಿರಾರು ವರುಷದಿಂದೆ
ಧರೆಯ ಬಳಸಿ ಮರೆದು ನಿಂದ
ಅರಸುತನದ “ಅರವು ಮರವು”
ಅರಿಯದಂತೆ ಕರಗಿ ಕರಗಿ ಮಾಯವಾಯಿತೆ
ಪಿರಿದೆನಿಪ್ಪ ಸಿರಿಯ ಮರವು ಸರಿದು ಹೋಯಿತೆ
೧೦
ತಾಯಿ ನಿನ್ನ ಬೇನೆಯೇನು
ಬಾಯಿ ಬರದೆ ಪೇಳುವುದಕೆ
ಕಾಯ್ವರಾರೊ ಕೊನೆಯ ಕಾಣೆ
ಯಾವದುಷ್ಟ ಪಿಡುಗು ಬಂದು ಕುಲವ ಕಡಿವುದೈ
ಕಾವನೆಲ್ಲಿ ಇರುವನಯ್ಯೊ ಕುಲವೆ ಕಳೆವುದೈ
೧೧
ಕರ್ಮಭೂಮಿಯಲ್ಲಿ ಬಂದು
ಕರ್ಮವನ್ನು ಮಾಡಿ ನಿಂದು
ಕರ್ಮದಿಂದ ಹುಟ್ಟು ಸಾವ
ತೊಟ್ಟು ಧರೆಗೆ ಬಂದು ಆಡಿಪಾಡಿ ಮಡಿವೆವೈ
ಬಿಟ್ಟು ಬಿಡದ ಕರ್ಮವನ್ನು ಕಟ್ಟಿ ನಡೆವೆವೈ
೧೨
ಬರದ ಕಾಲ ಬಂದು ಜನರ
ತರಿದು ತರಿದು ತೂರುತ್ತಿರು
ಹರಣವುಳಿಸಿ ಪೊರೆದ ತಾಯಿ
ಸಿರಿಯ ತೊರೆದು ಧರೆಯ ತೊರೆದು ಪೋಗುತಿರುವೆಯ
ಮರುಕದಿಂದ ಮನದೆ ನೊಂದು ಹರಣ ತೊರೆವೆಯ
೧೩
ಕಷ್ಟ ಕಾಲವೊದಗಿ ಬರಲು
ಇಷ್ಟರಾಪ್ತ ಮಿತ್ರರೆಲ್ಲ
ನಿಷ್ಟುರಾಗಿ ನಡೆವರಯ್ಯ
ಕಾಲ ಬರಲು ಕಾಲು ತಾನೆ ಕೊಲೆಗೆ ನಿಲುವುದೈ
ಗೆಳೆಯರೆಂಬ ಕೊಳಚೆಯೆಲ್ಲ ಕಳಚಿ ಬೀಳ್ವುದೈ
೧೪
ಪರಮಪುಣ್ಯ ಪರಮಪಾಪಿ
ಧರೆಯನಾಳ್ದ ನರಪರೆಲ್ಲ
ಹಿರಿದು ಕಿರಿದು ಪದವಿ ತೊರೆದು
ಕಾಲಗತಿಗೆ ಕಟ್ಟುಬಿದ್ದು ಮಾಯವಾದರೈ
ಕಾಲಬರಲು ಯಾರು ತಾನೆ ಜಗದೆ ಉಳಿವರೈ
೧೫
ಅಂಗವೆಲ್ಲ ರೋಗದಿಂದ
ವಿಂಗಡಾಗಿ ಕಳಚಿ ಬೀಳ್ವ
ಸಾಂಗವಾದ ಸಾವ ನೋಡೆ
ಒಡನೆ ದುಗುಡದಿಂದ ಕೂಡಿ ಒಡಲೆಯುರಿಯುದೈ
ಪೊಡವಿಯಾಣ್ಮನಡಿಯಕಂಡು ನುಡಿಯುತ್ತಿರುವುದೈ
೧೬
ನಿನ್ನ ದುಃಖವೆನ್ನತಾಗೆ
ಬನ್ನ ಬಡುವ ಮನವು ತಾನೆ
ಭಾವಗೀತೆಯಲ್ಲಿ ಮೊಳೆಯೆ
ಕಲಿಸದಿರ್ದ ಕವನ ತಾನೆ ಕಟ್ಟಿ ಬರುವುದೈ
ಕರುಳಿಗೆಲ್ಲ ತಿಳಿವ ತಾನೆ ತೊಳೆದು ನಿಲುವುದೈ
೧೭
ಜಗದ ಬಗೆಯ ಬಗೆದು ನೋಡಿ
ಬಗೆದ ದುಗುಡವೆಲ್ಲ ನುಂಗಿ
ಮಗುಳಿ ಮನವ ಬಿಗಿದು ಬಿಗಿದು
ಇಳೆಗೆ ತಂದು ತಿಳಿವನಿತ್ತ ದೊರೆಯ ಪಾಡುವ
ಕಳೆವಕಾಯ ಕಳಚಿಬೀಳೆ ಒಲಿದು ಪಾಡುವ
*****
Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...