Home / ಕಥೆ / ಸಣ್ಣ ಕಥೆ / ನದಿಯ ಕೆನ್ನೆ……

ನದಿಯ ಕೆನ್ನೆ……

ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

ಅವನಿಗೆ ದಿನಾ ಸಾಯಂಕಾಲದ ಹೊತ್ತು ಮುಳುಗಿತ್ತಿರುವ ಸೂರ್ಯನನ್ನು ಸೇತುವೆಯ ಮೇಲಿಂದ ನೋಡುವುದು ತುಂಬಾ ಇಷ್ಟ. ಆ ನದಿ ಪಶ್ಚಿಮಕ್ಕೆ ಹರಿಯುತ್ತಿರುತ್ತದೆ. ಪಶ್ಚಿಮದ ಗುಡ್ಡದ ಅಂಚಿನಲ್ಲಿ ಸೂರ್ಯ ಕಂತುವಾಗ ಕೆಂಪನೆ ಕಿರಣಗಳು ನೀರಿನ ಮೇಲೆ ಪ್ರತಿಫಲಿಸಿ ದಿವ್ಯತೆಯನ್ನು ಮೂಡಿಸುತ್ತವೆ. ಆ ಹೊತ್ತು ಸಂಜೆ ಹಕ್ಕಿಗಳು ವಿಭಿನ್ನ ಸ್ವರ ಹೊರಡಿಸುತ್ತವೆ. ಅವಕ್ಕೂ ಗೊಡಗಳಿಗೆ ಮರಳಲು ಇಷ್ಟವಿಲ್ಲವೇನೋ? ಆಕಾಶದಲ್ಲಿ ಬೆಳ್ಳಕ್ಕಿಗಳು ಹಿಂಡಾಗಿ ಹಾರುವುದನ್ನು ನೋಡುವುದೇ ಒಂದು ಖುಷಿ. ಅದಕ್ಕೆ ಪೂರಕವಾಗಿ ಕೆಳಗೆ ಹರಿಯುವ ನದಿಯ ಜುಳುಜುಳು ನಾದ.

ಆಗೆಲ್ಲಾ ಅವನಿಗೆ ಅವಳು ನೆನಪಾಗುತ್ತಾಳೆ. ಅವಳ ಆ ತುಂಬು ಗಲ್ಲಗಳನ್ನು ನೋಡುತ್ತಾ ಅವನು ಸೂರ್ಯಾಸ್ತದ ಬಣ್ಣಗಳನ್ನು ಕಲ್ಪಿಸಿಕೊಳ್ಳುತ್ತಿದ್ದ. ಅವನು ಅವಳಿಗೆ ಪ್ರಕೃತಿ ಎಂದು ಹೆಸರಿಟ್ಟಿದ್ದ. ಅವಳನ್ನು ನೋಡುವಾಗೆಲ್ಲಾ “ನಾನು ಪ್ರಕೃತಿ ವೀಕ್ಷಣೆ ಮಾಡುತ್ತಿದ್ದೇನೆ. ” ಎನ್ನುತ್ತಿದ್ದ. ಪ್ರಕೃತಿ ಸ್ಫೂರ್ತಿ ನೀಡುತ್ತದೆ. ಬರಡು ಜೀವನದಲ್ಲಿ ಜೀವಸೆಲೆ ಉಕ್ಕಿಸುತ್ತದೆ, ಕಾಡುವ ಏಕಾಂಗಿತನಕ್ಕೆ, ಜೀವನದೆ ಅಭದ್ರತೆಗೆ ಸಾಂತ್ವನ ನೀಡುತ್ತದೆ, ಎಲ್ಲಕ್ಕಿಂತ ಹೆಚ್ಚಾಗಿ ಬದುಕಿನಲ್ಲಿ ಮುನ್ನುಗ್ಗುವಂತೆ ಮಾಡುತ್ತದೆ ಎಂದು ಅವಳಲ್ಲಿ ಹೇಳುತ್ತಿದ್ದ. ಅವಳಿಗೂ ಅದು ಇಷ್ಟವಾಗಿತ್ತು!

ಕೆಲವೊಮ್ಮೆ ಆ ಪ್ರಕೃತಿ ತನ್ನದೇ ಆಗಿರಬೇಕೆಂದು ಸ್ವಾರ್ಥವೂ ಅವನನ್ನು ಕಾಡುತ್ತಿದ್ದುದುಂಟು. ಆಗೆಲ್ಲಾ ಅವನು ತಾನೆಷ್ಟು ಸಣ್ಣದಾಗಿ ಯೋಚಿಸಿದ್ದೇನೆ ಅಂದುಕೊಳ್ಳುತ್ತಿದ್ದ. ಆದರೂ ಸಂಜೆ ಅವನನ್ನು ನದಿಯ ಸೇತುವೆಯ ಬಳಿಗೆ ಕಾಲುಗಳು ಒಯ್ಯುತ್ತಿದ್ದವು. ಸೂರ್ಯಾಸ್ತದ ಬಣ್ಣಗಳಲ್ಲಿ ಅವನು ತನ್ನನ್ನು ಕಳಕಳ್ಳೊತ್ತಿದ್ದ. ಸದಾ ಪ್ರಕೃತಿ ವೀಕ್ಷಣೆಗಾಗಿ ಹಾತೊರೆಯುತ್ತಿದ್ದ.

ಒಂದು ಸಲ ಅವಳೊಡನೆ ಹರಟುವಾಗ ಆ ಸುಂದರ ಸಂಜೆಯ ಭಾವನೆ ಗಳನ್ನು ಅವಳ ಮುಂದಿರಿಸಿದ್ದ. ಅವಳು ನಕ್ಕಿದ್ದಳು. ಅಂತಹ ಮಾತುಗಳು ಅವಳಿಗೂ ಇಷ್ಟವೇ. ಅವನು ಹೇಳಿದ ಮೇಲೆ ಅವಳು ಮನೆಯ ಹಿಂಬದಿಯ ಗುಡ್ಡಕ್ಕೆ ಹೋಗಿ ಸೂರ್ಯಾಸ್ತವನ್ನು ನೋಡುತ್ತಿದ್ದಳು. ದಿವ್ಯತೆಯನ್ನು ಅನುಭವಿಸುತ್ತಿದ್ದಳು. ಆದರೆ ಅಲ್ಲಿ ನದಿ ಇರಲಿಲ್ಲ. ನಾದ ಮಾಧುರ್ಯ ಸವಿಯಲು ಅವಳಿಂದ ಆಗುತ್ತಿರಲಿಲ್ಲ.

ಎಷ್ಟು ದಿನಗಳು ಕಳೆದವೋ? ಅವರಿಬ್ಬರು ಹಾಗೆ ಸೇರುತ್ತಿದ್ದಾಗಲೆಲ್ಲಾ ಪ್ರಕೃತಿಯ ಬಗ್ಗೆ ಮಾತಾಡುತ್ತಿದ್ದರು. ಒಂದು ದಿನ ಅವನು ಅವಳ ಕೈ ಹಿಡಿದುಕೊಂಡು,”ಜೀವನದ ಕೊನೆಯವರೆಗೂ ಈ ಪ್ರೀತಿ ನನಗೆ ಸಿಗುತ್ತದಲ್ಲಾ?” ಎಂದು ಕಣ್ಣೀರಾದ, ಅವಳಿಗೆ ದಿಗಿಲು. ಅವ ತನ್ನಲ್ಲಿ ಏನು ಕಂಡು ತನಗೆ ಹತ್ತಿರವಾದ? ಅವನದಕ್ಕೆ ಹೇಳಿದ್ದ: ’ನಮಗೆ ಇಷ್ಟ ಆಗುವವರು ಕೇವಲ ಕೆಲವರು. ಅವರೂ ದೂರಾದರೆ ಬದುಕು ಅರ್ಥ ಕಳಕೊಳ್ಳುತ್ತದೆ.’ ಅವಳದಕ್ಕೆ ’ಒಂದಲ್ಲ ಒಂದು ದಿವಸ ದೂರವಾಗಲೇ ಬೇಕಲ್ಲ.’ ಎಂದು ಕೇಳಿದ್ದಳು. ಅವನು ನಗುತ್ತಾ ’ನೀನು ಸೂರ್ಯಾಸ್ತದ ಕಾಲದ ನದಿಯನ್ನು ನೋಡಿಲ್ಲ. ಒಂದು ಸಲ ನೋಡು. ಕೋಟಿಗಟ್ಟಲೆ ಮೈಲು ದೂರದ ಸೂರ್ಯ ನಮ್ಮ ಊರಿನ ನದಿಯ ಕೆನ್ನೆಯಲ್ಲಿ ಕೆಂಪು ಮೂಡಿಸುತ್ತಾನೆ. ಅದು ಪ್ರೀತಿಯ ಶಕ್ತಿ! ದೂರವಾದರೂ ಹತ್ತಿರ ಇರುವುದೆಂದರೆ ಹಾಗೆ’ ಎಂದಿದ್ದ. ಆ ಮಾತು ಅವಳಲ್ಲಿ ದಿವ್ಯತೆಯ ಅನುಭೂತಿಯನ್ನು ಮೂಡಿಸಿತ್ತು.

ಅಂದು ಅವಳು ಸೇತುವೆಯಲ್ಲೇ ಅವನನ್ನು ಭೇಟಿ ಯಾಗಿದ್ದಳು. ಅವನು ಹೇಳಿದ್ದ ದಿವ್ಯತೆಯನ್ನು ಅವನೊಟ್ಟಿಗೆ ಸವಿದಿದ್ದಳು. ನದಿಯ ಕೆನ್ನೆಯನ್ನು ರಂಗೇರಿಸುವ ಸೂರ್ಯನನ್ನು ಕಂಡಿದ್ದಳು. ಕತ್ತಲಾಗುವಾಗ ಅವಳು ಒಂದು ಪತ್ರವನ್ನು ಅವನಿಗೆ ಕೊಟ್ಟಳು. ಅವನು ಅದನ್ನು ತೆರೆಯಲಿಲ್ಲ. ’ಯಾವಾಗ ಮದುವೆ’ ಎಂದು ಪ್ರಶ್ನಿಸಿದ. “ತೆರೆದು ನೋಡು ನಿನಗೇ ಗೊತ್ತಾಗುತ್ತದೆ.” ಅವನು ತೆರೆಯಲಿಲ್ಲ. “ಗೊತ್ತಾಗಿ ಏನಾಗಬೇಕಿದೆ? ನಾನು ಮದುವೆಗೆ ಬರುವುದಿಲ್ಲ!” ಅವಳು ಪೆಚ್ಚಾದಳು.

“ಯಾಕೆ ಹಾಗೆ ಹೇಳುತ್ತೀಯಾ? ಏನಾಗಿದೆ ನಿನಗೆ?” ಅವನು ತಣ್ಣನೆಯ ಸ್ವರದಲ್ಲಿ ಹೇಳಿದ. “ನೀನು ಮದುವೆಯಾಗಬೇಕಾದದ್ದು ಪ್ರಕ್ಕತಿಯ ನಿಯಮ. ನನಗದರಲ್ಲಿ ಬೇಸರವೇನೂ ಇಲ್ಲ. ಆದರೆ ನಾನು ಮದುವೆಗೆ ಬಾರದಿದ್ದರೆ ನೀನು ನನ್ನವಳಾಗಿಯೇ ಇರುತ್ತೀಯ. ನಾನೆಷ್ಟೋ ದೂರದಲ್ಲಿದ್ದು ನಿನ್ನ ಕೆನ್ನೆ ಕೆಂಪೇರಿಸುವ ಸೂರ್ಯನಾಗಿರುತ್ತೇನೆ. ಕತೆ ಬರೆಯುವವಳಲ್ಲವೇ ನೀನು, ಸಾಧ್ಯವಾದರೆ ಒಂದು ಕತೆ ಬರೆದುಬಿಡು.”

ಅವಳು ನಿಶ್ಶಬ್ದವಾಗಿ ಹಿಂತಿರುಗಿದಳು. ಸುತ್ತ ಕತ್ತಲೆ ಕವಿಯುತ್ತಿತ್ತು. ಅವನ ಗಟ್ಟಿಯಾಗಿ ಹೇಳಿದ. “ಕತ್ತಲೆ ಕವಿಯುತ್ತಿದೆ ಎಂದು ಹೆದರಬೇಡ, ನಾಳೆ ಬೆಳಕಾಗುತ್ತದೆ. ನಾಳೆ ಸಂಜೆ ಮತ್ತೆ ಸೂರ್ಯ  ನದಿಯ ಕೆನ್ನೆಯನ್ನು ಕೆಂಪೇರಿಸುತ್ತಾನೆ! ”
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...