ಎಲ್ಲಿ ಹೋದನೇ ಮರೆದು-ಹರಿ
ಎಲ್ಲಿ ಹೋದನೇ ತೊರೆದು?
ಎಲ್ಲಿ ಹೋದನೇ ನಲ್ಲೆ ನೀಡಿದಾ
ಹಾಲನು ಮಣ್ಣಿಗೆ ಸುರಿದು?
ಅಲೆದು ಬಂದೆನೇ ವನವ-ನಾ
ತೊರೆದು ಬಂದೆನೇ ಜನವ;
ಒಲಿದು ನೀಡಿದ ಹರಿಗೆ ನನ್ನನೇ
ಸುಲಿದು ಸವಿದನೇ ಫಲವ
ಮಾಸಿತೇ ಮನ ಗೆಳತಿ
ದಾಸನಾದ ಹರಿ ಎನಿಸಿ,
ಮೋಸಹೋದೆ ನಾ ಮೀಸಲು ನೀಡಿದ
ಒಲವನೆ ಬಾಗಿಸ ಬಯಸಿ
ಕಳೆದುಕೊಂಡೆನೇ ಅವನ
ಹಾರದೆ ಏಕಿದೆ ಹರಣ?
ತಂತಿ ಸಿಡಿಯಿತೇ ರಾಗ ಕಡಿಯಿತೇ
ಹಾಡದೆ ಮುಂದಿನ ಚರಣ
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.