Home / ಕವನ / ಕವಿತೆ / ದಶಾವತಾರ

ದಶಾವತಾರ

ಹೃದಯಾವಕಾಶದೊಳು ಸಚ್ಚಿದಾನಂದವನು
ತ್ರಿದಶತ್ರಿವಿಷ್ಟಪರ ರೂಪದೊಳು ಮೂಡಿಸಿದ
ಪರಮ ಋಷಿದರ್ಶನಗಳಸ್ತಮಿಸೆ ಜಡಧಿಯೊಳು
ಕರುಣಿ ನೀನಾ ಜಡಧಿಗನುವಾದ ರೂಪಾಂತು
ಮೇಲಕೆತ್ತಿದೆ ವೇದರೂಪದೆಮ್ಮಾತ್ಮವನು.

ಬಾಳೊಳಮೃತಾನಂದ ಪಡೆಯುವಾತುರದಲ್ಲಿ
ವಿಷಯಾಬ್ಧಿಮಗ್ನಮತಿ ವೈಕ್ಲಬ್ಯವಡೆದಿರಲು
ಅಸಮಧೃತಿ ಬೆನ್ನಿತ್ತೆ ಕೂರ್ಮಸಂಕೇತದೊಳು.

ತನ್ನಹಂಕಾರಕ್ಕೆ ಸೃಸ್ಟಿಯೆಲ್ಲವ ನಿಲಿಸಿ
ನಿನ್ನಹಂಕಾರವನೆ ಧಿಕ್ಕರಿಪ ದುರ್ಮದನ
ಟೊಳ್ಳುಗೈಯಲು ತಕ್ಕ ಭೂದಾರನಾದೆಯೈ.

ಎಲ್ಲೆಲ್ಲು ನೀನಿಹುದು ಸುಳ್ಳೆಂದು ನಿನ್ನಿರವಿ-
ಗೆಲ್ಲೆಯನು ನಿರ್ಮಿಸುವ ಕ್ಷುಲ್ಲಮತಿಯೆಲ್ಲೆಗೆಡೆ
ಕಲ್ಲೊಳೂ ಮೂಡಿದೆಯ ನರಸಿಂಹ ತೇಜವೇ?

ಇಳೆಮುಗಿಲಕೊಂಡರೂ ಒಳಗಕೊಳ್ಳದೆ ತಣಿಯೆ
ನೆರೆಯ ಬೇಡುವೆನಲ್ಲೆ ಎನೆ ಬಲಿಯ ತುಳಿದೆಯಾ
ಸಕಲರಂತರ್ಯಾಮಿ ನೀನೆಯೆಂದರಿವರಿಯೆ?

ಅಕಳಂಕನೇ, ಸ್ವಾಮಿ, ನರನು ಮಾನವನೆಂಬ
ಸಂಭಾವನೆಗೆ ಸಲುವ ಕಾಲದೊಳು ಏಷಣೋ-
ಜ್ಜೃಂಭಣವೆ ಪೌರುಷದ ಬೆರೆಯಾಗೆ ಕ್ಷತ್ರಿಯರ

ಕಾಮದಿಂ ಮೂಡಿಬಹ ಕೋಪಾಗ್ನಿ ಎನುವಂತೆ
ಜಾಮದಗ್ನಿಯ ನೆವದಿ ತಿರೆಯ ಪಾವಕನಾದೆ.

ಧರ್ಮಧವಳಾಚಲದಿ ಜನಿಯಾಂತು, ವಿಷ್ಣುಪದ
ಮರ್ಮರವನಿಳೆಯ ತಿಳಿವಿಗೆ ತಂದು, ಸಂಯಮದ
ಕೂಲದೊಳು ತ್ಯಾಗವೇಗದಿ ಹರಿದು ಭೋರ್ಗರೆದ
ಭಾರತದ ಬಾಳುವೆಯ ಬಿತ್ತರದ ತೀರ್ಥನೇ,
ಶ್ರೀ ರಘೋತ್ತಮ, ನಿನಗೆ ಮಂಗಳವ ವಚಿಸುತ್ತ
ಗೆಲವಾಗುವೆನು ತಂದೆ.

ದಡವ ಮೀರಿತೊ ಏನೊ
ನಲವಿನಿಂಗಡಲೆಂದು ತಿರೆಯ ಜನರುತ್ಸವಿಸೆ,
ಹೊಲ್ಲರುಲ್ಲಸಗೆಡಲು, ಬಲ್ಲ ಜನ ಬೆರಗಾಗೆ
ಎಲ್ಲ ಬಾಳಿನ ದಗೆಯ ತಣಿಸಿದಾಪದ್ಬಂಧು,
ನೀರದ ಶ್ಯಾಮನೇ, ಭವಿಗೆ ಭವದುತ್ಸಾಹ
ತೀರದಿರುವಂದದೊಳು ಕರ್ಮರತಿಯನು ಹೊಗಳಿ
ಫಲವಿರತಿಯಿಂದದರ ಕಹಿಯನೆಲ್ಲವ ಕಳೆವ
ಸುಲಭಮಾರ್ಗವನರುಹಿ ನಡೆದು ತೋರಿದ ಧೀರ,
ಎನಿತು ಶುಭಗಳ ತಂದೆ ನೀನೆಮ್ಮ ತಾಯ್ನೆಲಕೆ
ಎನಿತೆತ್ತರಕ್ಕೊಯ್ದೆ ನೀನೆಮ್ಮ ಜೀವಿತವ!

ಸ್ವರವಿಲ್ಲದೆಯೆ ಗಾನ, ಮಲರಿಲ್ಲದೆಯೆ ಕಂಪು
ಕರಣ ವಿಷಯಗಳೊಂದುಗೂಡದೆಯೆ ಸೊಗದುಣ್ಮು
ದಾಹವಿಲ್ಲದೆ ತಣಿವು, ದೇಹವಿಲ್ಲದೆಯಿರವು-
ಸ್ನೇಹಮಯ, ನೀನಿಂತು ಯಾವ ನಿಲುವೊಳು ನಿಂದು
ಯಾವ ದರ್ಶನ ಬಲದೊಳಾವ ಭ್ರಮೆಯನು ಗೆದ್ದು
ಯಾವ ನಲ್ಮೆಯ ನೆಲೆಗೆ ತಿರೆಬಾಳನೊಯ್ಯಲೆಂ-
ದೆಂಥ ಪಂಥಕೆ ಸಂದೆ? “ಎಲ್ಲ ನಶ್ವರವಿದರ
ಅಂತ್ಯವೆಂಥದೊ ಕಾಣೆ; ಜೀವ ಜೀವವ ಕಾಡಿ
ಜೀವಿಸುವುದೇತಕ್ಕೆ; ದುಃಖಮಯದೀ ಭವದಿ
ಬೇವ ಗಾವಿಲ ನಿನ್ನ ನಿರ್ವಿಣ್ಣತೆಗೆ ಮುಕ್ತಿ
ನಿರ್ವಾಣವೆಂದೆ ತಿಳಿ; ಸರ್ವಕಾಮವ ಕಳೆ;
ದುರ್ವಾರವೆನಿಸುವೀ ಹುಟ್ಟುಸಾವನು ಶಮಿಸಿ
ಸುಜ್ಜಾನಿಯಾಗುವೊಡೆ ಭವದಾಸೆ ಹಿಂಗಿಸು;
ಅಜ್ಞರಾಚರಿಸುತಿಹ ಯಜ್ಞಮಾರ್ಗವ ಬಿಡು.”
ಪಾರ್ವರನು ದಮಿಸಿದನೆ, ಅತಿಲೋಲುಪತೆಗಿಂಥ
ಸರ್ವಾಪಹರತತ್ವದೆಳತವೇ ಬೇಕಾಯ್ತೆ
ಜೀವನವನುದ್ಧರಿಸೆ ಮೋಹಾಂಧಕೂಪದಿಂ
ನೋವು ನಲವೊಳಗದುವು ಸಮತೂಕದೊಳು ತೂಗೆ?

ಇಂದುವರೆಗಿಂತಾಯ್ತು ನರನಾತ್ಮದುದ್ಧಾರ
ನಂದುವಂತಿರೆ ಧರ್ಮ ತಿರೆಗೆ ಶಿವದವತಾರ.
ಮುಂದೆ ದಣಿಯೆಂತೊಲಿವನೀ ಧರೆಯ ಜೀವಕ್ಕೆ?
ಕುಂದ ಕಳೆದೆಮಗೀವನಾವ ಹದುಳದ ಬಿಕ್ಕೆ?
ಮುಟ್ಟಿದುದ ಸುಡುವಂಥ ವರವ ಪಡೆದವನಂತೆ
ಸೃಷ್ಟಿಯನು ಕೆಡಿಸುತಿರೆ ಈಹೆ ಅಸುರನಹಂತೆ
ದುರ್ಮದಾವೇಗಗಳ ಯಂತ್ರದೈತ್ಯನು ಗಳಿಸೆ
ಧರ್ಮಗಳು ಧೂಳೇಳೆ ಕಾಮಪಥದೊಳು ಚರಿಸೆ
ಕುದುರೆ ಆಳಿಬ್ಬರೂ ಉನ್ಮತ್ತರಾದವೊಲು
ಹದುಳ ಕೆಟ್ಟಿರೆ ಲೋಕ ಇಂದ್ರಿಯೋನ್ಮಾದದೊಳು
ದುರ್ಜ್ಞೇಯನೇತೆರದಿ ತಿರೆಯ ತಿಳಿವಿಗೆ ಬರುವ?
ವಿಜ್ಞಾನ ಬಲಿಯಿದಿರು ಯಾವ ಬಿಕ್ಕೆಯನೆರೆವ?

ಜಡಕೆ ಕಿಂಕರನಾಗಿ ಬಳಲಿ ದೆಸೆಗೆಟ್ಟಿರುವ
ಬಡ ಚೇತನನಿಗಾವ ಬಗೆಯ ಬೆಂಬಲವೀವ?
ಚಪಲಜಂಗಮಜಗಕೆ ಚಪಲಾಶ್ವವನೆ ಏರಿ
ಉಪಶಮಿಸೆ ಬರುವನೋ ಪರಮರೌದ್ರವ ಬೀರಿ
ಜಗದವಲಯದ ಮೇಲೆ ಕರವಾಲವನು ಬೀಸಿ
ಯುಗದ ಪಾಪವ ಕೆಡಿಸೆ ಕ್ಷೀರಜಲಧಿನಿವಾಸಿ?
ನಡುಗುತೆನ್ನೆದೆ ನೆನೆವುದಾ ಭೀಮಭಯಕರನ
ನುಡಿಯರಿಯದಳಲುತಿದೆ ಅವನ ನುತಿಸುವ ಹದನ.
*****

Tagged:

Leave a Reply

Your email address will not be published. Required fields are marked *

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...