Home / ಕವನ / ಕವಿತೆ / ಸೋಮಾರಿ

ಸೋಮಾರಿ

ಬರಿದೇ ಬೈವರು ಜನ ಸೋಮಾರಿಯ!
ಕೋಣಕೆ ಸಮನೆನುತಲಿ ಛೀಮಾರಿಯ
ಮಳೆ ಸುರಿಸುತ ಮುದಗೊಳ್ಳುತಲಕಟ
ತೊಡಿಪರು ಬೈಗುಳ ಮುಳ್ಳಿನ ಮುಕುಟ!
“ಕೆಲಸಕೆ ಕುಳಿತರೆ ಒಂದೇ ಎರಡೇ?
ಅದನು ನೆಚ್ಚಿದರೆ ಜೀವನ ಬರಡೇ!”
ಎಂಬ ಸತ್ಯವನು ಅರಗಿಸಿಕೊಂಡಿಹ
ಸೋಮಾರಿಯೆ ಜಗದೊಬ್ಬನೆ ಗಂಡಹ!
ಕಾಲಚಕ್ರಕಡಿಯಾಳಾಗಿಹ ರವಿ
ಬೆಟ್ಟವನೆಬ್ಬಿಸುತಿರೆ ಮೈದಡವಿ
ಅದಕೂ ಮುನ್ನವೆ ಎಚ್ಚತ್ತಿರೆ ಬುವಿ
ಬೆಚ್ಚನೆ ಕಂಬಳಿ ಮುಸುಕೊಳದೇಂ ಸವಿ!
ದೂರದ ರೇಡಿಯೊ ಗಾನವ ಕಿವಿಯು
ಚಪ್ಪರಿಸುತ್ತಿರೆ ಇನ್ನೂ ಸವಿಯು!
ಇಂತು ಮುಳುಗಿರಲು ಅರೆನಿದ್ದೆಯೊಳು
ಎಚ್ಚರಕೂ ಹೊಳೆಯದ ಭಾವಗಳು
ಸುಳಿಯುವುವಹ ಮನವನು ನಸು ಕೆಣಕಿ
ಹುಡುಗಾಟಕೆ ಮಗು ನೋಡುವೊಲಿಣುಕಿ
“ಎಲ್ಲ ಸುಖಗಳಿಗೆ ಮಿತಿಯೊಂದುಂಟು!”
ಎನೆ ಗಡಿಯಾರವು ಬಾರಿಸಲೆಂಟು
“ಆರಿತು ಕಾಫಿಯು ಏಳಿರಿ ಸಾಕು!”
ಎನ್ನುತಲಿರೆ ಮನೆಯಾಕೆಯ ಕಾಕು,
ಮತ್ತೀ ಜಗಕೇ ಬರುವೊಲು ಮೆದುಳು
“ಏಳಪ್ಪಾ” ಎನೆ ಮಗುವಿನ ತೊದಲು
ಎಳೆಯನ ಚುರುಕಭಿಮಾನವ ಕೊರೆಯೆ
ಕಂಬಳಿ ಮುಸುಕನು ಕೊಂಚವೆ ತೆರೆಯೆ
ಕಿಟಿಕಿಯು ಚೆಲ್ಲಿಹ ನೆರಳನು ಕಂಡು,

ಎದ್ದು, ಮೈಮುರಿದು ಆ ಸುಖವುಂಡು
ಕಾಲ ಹೊರಗಿಡಲದೆಂತಹ ನೋಟ!
ಕಣ್ಗಳಿಗೆಂತಹ ಹಬ್ಬದ ಊಟ!-
ಎಲ್ಲೆಲ್ಲೂ ತೂಕಡಿಸುವ ಮಂಜು!
ಬಣ್ಣ ಬಣ್ಣಗಳ ಹೂಗಳ ಪಂಜು!
ಕಾಣದ ವಿಧವಿಧ ಖಗಗಳ ಗಾನ!-
ಸಗ್ಗಕೆ ಒಯ್ಯುವ ದನಿಗಳ ಮೇನ!
ಇರುಳೆಲ್ಲಾ ಬಿಳಿ ಮಂಜನು ಹೀರಿ
ತಲೆದೂಗುತ್ತಿದೆ ಕುಡಿ ಮತ್ತೇರಿ!
ಹುಲ್ಲು ಧರಿಸಿಹವು ಬೆಳ್ಳಿ ಮುಲಾಮ
ಕಣ್ಣಿಟ್ಟವರಿಗೆ ಹಾಕಿ ಸಲಾಮ!
ನಿದ್ದೆಯ ಕಂಗಳು ರವಿಕರ ಸ್ಪರ್ಶದಿ
ಮುದಗೊಳ್ಳುತ ತೇಲುವುವಹ ಹರ್ಷದಿ!
“ಎಂಟಕೆ ಏಳ್ವುದೆ ದೊಡ್ಡ ಪುರಾಣ!
ಮುಖ ತೊಳೆವುದರೊಳು ಹೋಹುದು ಪ್ರಾಣ!”
ಎನ್ನುವ ಗೃಹಿಣಿಯ ಸಿಡಿನುಡಿ ಕಿವಿಗೆ
ಸೊದೆಯೆರೆಯುತ್ತಿರೆ ಇಳಿದೀ ಬುವಿಗೆ
ಪ್ರಕೃತಿಯ ಪಾಡಿಗೆ ಪ್ರಕೃತಿಯ ಬಿಡಲು
ಬಚ್ಚಲ ಮನೆಯೊಳು ಕಾಲ್ಗಳನಿಡಲು
ಒಲೆಯ ಪ್ರಲೋಭನ ಜಾಲಕೆ ಸಿಲುಕಿ
ಮುಂಗಡೆ ಕೂರುತ ಹೆಂಡತಿಗಳುಕಿ
ಬೆಂಕಿಯ ಜೊತೆಯೊಳು ಆಡುತಲಿರಲು
ಅಲ್ಲಿಗು ಹೆಂಡತಿ ಬಂದೆರಗಿರಲು
“ಬೆಂಕಿಯ ಶಾಖವೆ ಎಷ್ಟೋ ಮೇಲು!
ಅದಕೂ ಬಿಸಿ ಕಿಡಿನುಡಿಗಳ ಸಾಲು!”
ಎನ್ನುತಲವಳನು ರೇಗಿಸಿ, ನಗಿಸಿ
ಮುಖಮಾರ್ಜನಗಳ ಶಾಸ್ತ್ರವ ಮುಗಿಸಿ

ಬಂದು ಬಿಸಿ ಕಾಫಿ ಹೀರುತಲಿರಲು
ಚೆಲುವಿನ ಮನೆಯಾಕೆಯ ಸವಿಗೊರಲು
“ಎಣ್ಣೆಯ ಸ್ನಾನಕೆ ಏಳಿರಿ” ಎನಲು
ಬೇಡೆನ್ನುತ್ತಿರೆ, ತೈಲವ ತರಲು
ತಲೆಗೊತ್ತುತಲಿರೆ ಆ ಸುಖ ಸವಿದ
ಬಳಿಕ ನುಗ್ಗುತಲಿ ಕತ್ತಲೆ ಕವಿದ
ಸ್ನಾನದ ಕೋಣೆಗೆ, ಎಣ್ಣೆಯ ತರಿಸಿ
ಲೇಪಿಸಿ ಮೈಯ್ಯಿಗೆ, ಉಗುರೊಳು ತುರಿಸಿ
ವಿಧ ವಿಧ ಚಿತ್ತಾರಗಳನು ಬರೆಯುತ
ಕೋಣೆಯ ಹೊರಗಣ ಜಗವನೆ ಮರೆಯುತ
ಕನಸನು ಕಾಣುತಲಂತೇ ನಿಂದಿರೆ
ಬೆನ್ನಿಗೆ ಎಣ್ಣೆಯ ಲೇಪಿಸಲಿಂದಿರೆ
ಇದಕೂ ಮಿಕ್ಕಿಹ ಸುಖವಿನ್ನುಂಟೆ?
ಸುಮ್ಮನೇತಕೋ ಕೆಲಸದ ತಂಟೆ?
ಬಿಸಿ ಬಿಸಿ ನೀರಿನ ಮಣಿಗಳ ಕೈಯೊಳು
ಹಿಡಿಯುತಲವುಗಳ ಧರಿಸಿ ಮೈಯೊಳು
ಬಿಸಿಲಿನ ಕೋಲಿಗೆ ಮೈಯನು ಒಡ್ಡಿ
ನೀರಿನ ಮಣಿಗಳ ಮಿಸುನಿಯೊಳದ್ದಿ
ಅವುಗಳ ಗೃಹಿಣಿಗೆ ತೋರಿಸಿ ನಲಿಯುತ,
“ಹುಡುಗಾಟವಿದೇನೇಳಿರಿ” ಎನ್ನುತ
ಸಿಡುಕಲು, ಆಕೆಯ ಕೆನ್ನೆಗೆ ಚಿಮುಕಿಸೆ
ನೀರನು ನಗುತಲಿ ಕಣ್ಣನು ಮಿಟುಕಿಸೆ,
“ಅಯ್ಯೋ! ಮುಖಕ್ಕೆ ಹಾರಿತು ಎಣ್ಣೆ!”
ಎನ್ನುತ ಕೋಪದೊಳೊರೆಯಲು ಚೆನ್ನೆ,
ಅಂತೂ ಇಂತೂ ಸ್ನಾನವ, ಆಡುತ
ಮುಗಿಸುತ, ಕಂಬಳಿ ಮುಸುಕೊಳಗಡಗುತ
ಬಿಸಿ ಬಿಸಿ ಕಾಫಿಯು ಬರಲಿನ್ನೊಮ್ಮೆ

ಕುಡಿದಾಕೆಯ ಸೆಳೆಯುತ ತುಟಿಗೊಮ್ಮೆ
ಬಿಸಿಯ ಮುತ್ತನೊತ್ತುತ್ತಿರೆ ಸುಖದಿ
ಸೋಮಾರಿಯೆ ಸರಿ ಓಡುವ ಜಗದಿ!

ದಿಟವೈ ಈ ಜಗ ನಿಲದೋಡುತಿದೆ
ಗಳಿಗೆ ಗಳಿಗೆಗೂ ಮುಂದಕೋಡುತಿದೆ
ಏಕಿದಾತುರವೊ ಅರಿಯೆನು ನಾನು!
ತಲೆ ಹೋಹಂತಹ ಕೆಲಸವದೇನು!
ಧೂಳನೆಬ್ಬಿಸುತ ಓಡುವ ಕಾರು
ತೆರಳಲು ಗಂಟೆಗೆ ಮೈಲಿನ್ನೂರು
ಏನುಪಯೋಗವೊ? ಅದರಲಿ ಕುಳಿತ
ಪೆದ್ದಗೆ ಬರುವುದೆ ಬುದ್ಧಿಯು ಬಲಿತ?

ಎದ್ದರು ನೇಸರಿಗಿಂತಲು ಮುನ್ನವೆ
ಸೂರ್ಯೋದಯವನೆ ಸನಿಯದ ಬನ್ನವೆ!
ಎದ್ದು ಗಡಿಬಿಡಿಯೊಳೋಡಾಡುತ್ತ
ಮಲಗಿರುವವರನು ಬೈದಾಡುತ್ತ
“ಶುದ್ಧ ಸೋಮಾರಿ! ಏಳದೆ ಉಂಟೆ?”
ಎನ್ನುತ ಬರಿದೇ ಗೈಯುತ ತಂಟೆ,
ಒಲೆ ಹತ್ತದೆಯೇ ಇದ್ದರು ಕೂಡ
“ಕಾಫಿ ಆರಿತು” ಎನ್ನುತ ದಡಬಡ
ಸದ್ದನು ಮಾಡಿ ಪಾತ್ರೆಯ ಕೆಡವಿ
ಮೊಲೆಗೂಸನು ಸಹ ಎಬ್ಬಿಸಿ ತಡವಿ
ಇಷ್ಟಾದರು ಮಲಗಿಹರನು ದೂಷಿಸಿ
ಕಿವಿ ಕಣ್ಣುಗಳಿಗೆ ನೀರನು ಚಿಮುಕಿಸಿ
“ತಣ್ಣೀರಿದ್ದರೆ ತಣ್ಣೀರೇ ಸರಿ!
ಬಿಸಿನೀರಿದ್ದರೆ ಹೂಂ ಅದಕೂ ಸರಿ!”
ಎನ್ನುತ ನೀರನು ಮೈಯ್ಯಿಗೆ ಎರಚಿ

ಚುಟುಕೊಳು ಸ್ನಾನವ ಮುಗಿಸುತ, ಅರಚಿ
ಏನೇನೋ ಮಂತ್ರಗಳನು ಬಾಯೊಳು,
ಗಟಗಟ ಕಾಫಿಯ ಸುರಿದು ಗಂಟಲೊಳು
ಮನೆಯಾಕೆಯ ಕಡೆ ತಿರುಗುತ ಮಂದ-
ಹಾಸವೊಂದನೂ ಬೀರದೊಲವಿಂದ
ಓಡುವರೆಲ್ಲಿಗೊ ಅವಸರದಿಂದ
ಸವಿಯದೆ ಸುತ್ತಣ ಪ್ರಕೃತಿಯ ಚೆಂದ!
ಈ ಅವಸರವೇತಕೊ ನಾ ಕಾಣೆ!
ಇದರಿಂದೇನುದ್ಧಾರವೊ ಕಾಣೆ!

“ಆತುರಗಾರಗೆ ಬುದ್ಧಿಯೆ ಮಟ್ಟು!”
ಅವ ಕೈ ಹಾಕಿದ ಕಾರ್ಯನೆ ಛಟ್ಟು!
ಆತುರ ಮರವುಗಳೆರಡಕು ನಂಟು!
ಅದರಿಂ ತಾಪತ್ರಯ ನೂರೆಂಟು!-
ಏನನೊ ಬರೆಯುತ ಕುಳಿತಿರೆ, ಚೆನ್ನೆ
ಕಾಫಿಯ ಮುಂದಿಡೆ, ಲೋಟವದನ್ನೆ
ಮಸಿಯ ಕುಡಿಕೆಯಿದು ಎನ್ನುತ ಭ್ರಮಿಸಿ
ಅದರೊಳೆ ಲೇಖನಿಯದ್ದುತ ಕಸಿವಿಸಿ
ಪಡುವುದೇತಕೋ! ಬಳಿಕ ಗೃಹಿಣಿಯನು
ಬೈವುದೇತಕೋ! ಕಣ್ಣಿನ ಮಣಿಯನು
ನೋಯಿಸಿ, ಸಂಸಾರದ ಸೊದೆಗಡಲೊಳು
ಹುಳಿಯ ಹಿಂಡುವುದಕಿಂತಲು, ಜಗದೊಳು
ಜಡತನದಿಂದಿರುವುದೆ ಮೇಲಲ್ಲವೆ?
ಇಲ್ಲದೊಡೀ ಬಾಳ್‌ ವ್ಯರ್ಥವಲ್ಲವೆ?

ಚೆಲುವ ಸವಿಯಲೂ ಇವರಿಗಾತುರವು!
ಇಲ್ಲವೆ ಇಲ್ಲವು ನಿಲ್ವ ಕಾತರವು!-
ಪೆಪ್ಪರಮೆಂಟನು ಕೊಟ್ಟರೆ ತೆಗೆದು

ಚಪ್ಪರಿಸದೆ ಅದ ಕಚಕಚನಗಿದು
ನುಂಗುವರೀ ಜನಕೇನು ಹೇಳಲಿ!
ಜಗವನೆ ಹೊತ್ತಿಹರೇನೊ ತೋಳಲಿ
ಎನ್ನುವ ತೆರದೊಳು ಓಡಾಡುವರು!
ಸೋಮಾರಿಯ ತನ್ನಷ್ಟಕೆ ಬಿಡರು!

ಪಾದರಸವು, ದಿಟ ಚುರುಕ ತವರೂರು!
ಏನುಪಯೋಗವೊ? ಬಿದ್ದರೆ ಚೂರು!
ಬೆಣ್ಣೆಯು ಜಗದೊಳು ಮೊದ್ದಿನ ಮುದ್ದೆ!
ನೆಲಕ್ಕೆ ಬಿದ್ದರು ಒಡೆವುದೆ ಪೆದ್ದೆ?

ಇನ್ನೇತಕೆ ಬರಿ ಚರ್ಚೆಯು ಸಾಕು!
ಓಡುವಿಳೆಗೆ ಸೋಮಾರಿಯೆ ಬ್ರೇಕು!
*****

Tagged:

Leave a Reply

Your email address will not be published. Required fields are marked *

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...