ಹಿಂಸಿಸುವರು ನನ್ನನ್ನು ಸಾಮ್ರಾಜ್ಯವಾದಿಯೆಂದು:
ದೂಷಿಸುವರು ನನ್ನನ್ನು ಮಹಾಪಾತಕಿಯೆಂದು.
ಶಕ್ತಿಹೀನರ ಉಕ್ತಿಗಳಿವು, ಬಲವಂತರ ಬಲ್ನುಡಿಯಲ್ಲ!
ಪಂಜರದಿಂದ ಇಲಿಯನ್ನು ಹಿಡಿದ ಬೆಕ್ಕಿಗೆ ಹೇಳಿರಿ-ತಿನ್ನದಿರೆಂದು.
ಆನೆಯ ತಲೆ-ಮುತ್ತನುದುರಿಸಲು ಕಾಲೆತ್ತಿದ ಸಿಂಹಕುಸಿರಿರಿ-ಸೊಕ್ಕದಿರೆಂದು.
ಹುಲ್ಲೆಯ ಹಿಡಿದ ಹುಲಿಯ ರಂದಬಿಸಿರಿ-ಬಿಟ್ಟುಬಿಡೆಂದು.
ಹುಚ್ಚುಮಾತಿದು! ಬಲವಿದ್ದರೆ ಗುದ್ದು,-ಇಲ್ಲದಿರೆ ಗುದ್ದಿದೆನಿದೊ!
ಜೀವವ ಹಿಂಡಿ ಬದುಕುವೆಸಕ ಸಹಜವೆಂಬುದ ತಿಳಿಯದಿಹರೆ?
ಪ್ರಭುತ್ವವನೆಂತು ಬಿಡಲಿ? ರಾಜ್ಯವನೆಂತು ಒಲ್ಲೆನ್ನಲಿ?
ಒಲ್ಲೆಂದರೆ ಬಂದು ಪಾದಕೆ ಬೀಳುವರು ರಾಜಾಧಿರಾಜರು,
ತೆರವಾದ ಕಿರೀಟಗಳು ಬಂದು ಮೆರೆಯುವವೆನ್ನ ತಲೆಯ ಮೇಲೆ,
ಗತಿಗೆಟ್ಟ ರಾಜ್ಯಗಳಾಮಂತ್ರಿಸುವವೆನ್ನನಾಳಲಿಕ್ಕೆ-
ಗೊಂಬೆಗಳಂತೆ ಜನರೊಪ್ಪಿಸುವರೆನಗೆ ರಾಜ್ಯಸೂತ್ರಗಳನ್ನು!
ನೀರು, ಮುಗಿಲು, ನೆಲ, ಗಾಳಿಯಾಕಾಶ-ಇವೆಲ್ಲ
ಬಲ್ಲವೆನ್ನ ಶಕ್ತಿಯನು! ಪ್ರಕೃತಿ ನನ್ನಯ ದಾಸಿ.
ನನ್ನ ಶೋಧವು ಪ್ರತಿಸೃಷ್ಟಿ,-ಅಮೃತವನೊಂದುಳಿದು ನನ್ನದೆಲ್ಲ!
ಇದನೆಲ್ಲ ಗುಬ್ಬಿಮಾನವರೊಡನೆ ಪುಕ್ಕಟೆಯಾಗಿ ಹಂಚಿಕೊಡುವದೆ?
ದುಡಿಯಲಿ ಆಳಾಗಿ,-ಪಡೆಯಲಿ ಸಾಮಗ್ರಿಗಳನ್ನು!
ಮಾನವನು ನಾನು; ಸೊಕ್ಕಿದೆ ನನಗೆ! ನಿರ್ಲಿಪ್ಮ ನಿರ್ಜರನಲ್ಲ!
ಕಪ್ಪುಬಣ್ಣದವನು ನನ್ನೆದುರು ಮೈಮುರಿದು ದುಡಿಯುವಾಗ-
ನಾಯಿಯು ಮೂಸದ ಹೇಸಿಗೆಯನ್ನು ಹೊತ್ತು ಹೊತ್ತು ತರುವಾಗ-
ನನಗೆ ಹೊಳೆಯುವದೊಮ್ಮೊಮ್ಮೆ,-ನಾನು ಮಾಡಿದುದು ತಪ್ಪೆಂದು.
ಹುಲುಸಾಗಿ ತಿಂದು ಮದಿರೆಯ ಕುಡಿದು ನಾನು ಮನಬಂದಂತೆ ಕುಣಿವಾಗ-
ಹಗಲೆಲ್ಲ ದುಡಿದು ಹಣ್ಣಾಗಿ ಮತ್ತೆ ಹಡಗವ ನಡೆಸಲವನು ನಿಂತಿರಲು-
ಕಣ್ಣು ಮುಚ್ಚಿ ಯಂತ್ರದ ಮೇಲೆ ಕೈಯಿಟ್ಟು ಮನೆಯ ಮಂತ್ರವ ಜಪಿಸುತಿರಲು,-
ನನಗೆನಿಸುವದು ಕ್ಷಣಕ್ಷಣಕೆ,-ನಾನು ಮಾಡುವದು ತಪ್ಪೆಂದು.
ಪ್ರೀತಿಯೆಲ್ಲ ಪ್ರೇತವಾಗಿ ಪ್ರೇಮವೆಲ್ಲ ಕಾಮವಾಗಿ, ಒಗೆತನವೆಲ್ಲ ಹಗೆತನವಾಗಿ
ಪರಿಣಮಿಸಿದಾಗ,-ತಲೆಯೆಲ್ಲ ಭ್ರಮಿಸಿದಾಗ-
ಅರೆನಿಮಿಷ ಕಂಪಿಸುವದೆದೆಯೆಲ್ಲ,-ನಾನು ಮಾಡಲಿಹುದು ತಪ್ಪೆಂದು.
ಮತ್ತೆ ಎಚ್ಚರಿದು ನೋಡುವೆನು ನನ್ನ ಹಡಗವನ್ನು.
ಮುನ್ನೀರನೆಂತು ಭೇದಿಸಿ ಪಯಣ ಬೆಳೆಸಿದೆ ನೋಡು!
ಈ ಮಹಾದ್ಭುತವ ಬಿಟ್ಟು ವಿನಯದಿಂದಿರಬೇಕೆ?
ಆಗದು! ಅದಾಗದು! ದೈವಪರೀಕ್ಷೆಯಾಗಿಬಿಡಲಿ!
ಹೊನ್ನಿನ ಗಟ್ಟಿಯಂತೆ ಗಟ್ಟಿಯಾಗಿದೆ ನನ್ನ ದೈವವಿಲ್ಲಿಯವರೆಗೆ!
ಅದು ಪೊಳ್ಳಿದ್ದರೆ,-ಹಾಗೊಮ್ಮೆ ಅನುಭವ ಬರಲಿ!
*****

















