Home / ಕವನ / ಕವಿತೆ / ಚಿಕುಹೂ

ಚಿಕುಹೂ

ಚಿಕುಹೂ ಚಿಕುಹೂ ಚಿಕುಹೂ-
ಸನ್ನೆಯವೊಲು ಮುಹುರ್ಮುುಹು
ಆರೆಚ್ಚರಕೀ ತುತ್ತುರಿ
ಬಾನೊಳು ಮೊಳಗುತ್ತಿದೆ?
ಎನ್ನ ಕಿವಿಯೊಳೀ ಸವಿ ದನಿ
ಸಿಂಪಿಸುತಿದೆ ಸೊದೆಸೀರ್ಪನಿ
ವಿಸ್ಮೃತಿಗೈದಿರುವಾತ್ಮವ-
ನುಜ್ಜೀವಿಪ ತೆರದೆ.

ದಿವಮರೆತಪ್ಸರೆ ಎಚ್ಚರೆ
ಅಗಲುವಳೆಂದಿಳೆ ಬೆಚ್ಚಿರೆ
ಹರಿಕಾರರನಮರಾವತಿ
ದೊರೆಯಟ್ಟಿಹನೆನಲು
ಈ ದನಿ ಬರೆ ಲಾಲಿಸುತದೆ
ಪಯಣಕೆ ಸಡಗರಗೊಳುತಿದೆ
ಮನ್ಮಾನಸ ಸರೋವರದ
ಕರಣಗಳಂಚಿನೊಳು.

ಚಿಕುವೂ ಚಿಕುವೂ ಚಿಕುವೂ-
ಕಂಪೆರಚಿದೆ ಈ ದನಿಹೂ
ರಸ ಸೂಸಿದೆ ಸ್ವಾಹಾ
ಎಂದುಜ್ವಲಿಸಲು ನೆನಹು
ನೋಡುತಲಿದ್ದರು ಕಾಣದು
ಆಲಿಸುತಿದ್ದರು ಕೇಳದು
ಸರ್ವೇಂದ್ರಿಯವಿದಕಾಗಿರೆ
ಪ್ರತ್ಯಕ್ಷವೆ ಮರಹು.

“ಬಂದಿರ ತಂದಿರ ಕೊಡುವಿರ
ಕೊಟ್ಟಿರ ಕೊಳುವಿರ ನಡೆವಿರ”-
ನಿಸ್ಸ್ನೇಹದ ಸಭ್ಯತೆಯೊಳು
ಈ ನಡೆವಳಿಯೆಲ್ಲಾ
ನಡೆಯುತ್ತಿವೆ ಹೊರಬಗೆಯೊಳು,
ಮನೆಯಾಚೆಯ ಗದ್ದಲದೊಲು;
ಯೋಗಕ್ಷೇಮದ ವೇದನೆ
ಇಂದೆನಗಿನಿತಿಲ್ಲ.

ಭವಿ ನಾ ತಾಪಸಿ ನಾನು
ಕವಿ ನಾ ಕಿಂಕರ ನಾನು
ನಾ ನಾ ಇದಕಿತಿಯೇನಿದೆ
ಮಿತಿಯೇನಿದೆ, ದನಿಯೇ,
ಥಟ್ಟನೆರಗಿ ಗರುಡನ ತೆರ
ಅಹಮೆಂಬೀ ನಿಧಿನಾಗರ-
ನೊಯ್ದಿಹೆನೀ ಮುದವಿದ್ಯುತ್-
ಸ್ಪರ್ಶವ ಮನ ಪಡೆಯೆ.

ಚಿಕುವೂ ಕುವ್ವೂ- ಏನ್ ಸವಿ!
ಒಂದೇ ಸರದೊಂದೇ ಛವಿ
ಅಜರಾಮರವಿದು ಅಚ್ಚರಿ
ಪುರಾಣ ನೂತನವು
ಕೋಟಿ ಕೋಟಿ ಕೋಗಿಲೆ ಮೈ
ತರಗೆಲೆಯಂತುದುರಿವೆ ಸೈ
ಇದನು ಹಿಡಿದು ಬಿಡುವಾಟದಿ
ಋತುಋತು ಯುಗಯುಗವೂ.

ಈಯೆಡೆ ಆಯಡೆ ಬೇರಡೆ
ಬಿಡುವಿರುವೆಡೆ ಬಿಡುವಿರದೆಡೆ
ಒಲಿವೆಡೆ ನಲಿವೆಡೆ ಅಳುವೆಡೆ
ದೇಶವಿದೇಶದೊಳು
ಜನ್ಮದಿ ಜನ್ಮದಿ ನಾನಿದ
ಬಗೆಬಗೆಯೊಳು ಕೇಳಿದ ಹದ
ಇಂದೆಂತೆಯೊ ತೆರೆ ತರೆಯುತ
ತೋರಿದೆ ಹೃದಯದೊಳು-

“ಓ ಕೆಳೆಯಾ, ಮನೆ ನೆನೆಯಾ
ಬಿಡುಬಿಡು ಭವದೀ ಕೊನೆಯಾ
ದಿವ್ಯತೆಗೆಯೆ ಕಾಮಂಗೊಂ
ಡೆದೆ ಎರಕೆಯನೆರೆಯಾ”
ಎಂಬರ್ತಿಯ ಆರ್ತಸ್ವರ-
ವಿದು ಬಗೆಗೊಳೆ, ನಾ ಕಾತರ-
ಗೊಂಡೋಗುಟ್ಟುವೆ ನೆನೆನೆನೆ-
ದಾ ದೂರದ ಕರೆಯಾ.

ಚಿಕುವೂ ಕುವು ಕುವು ಟಿಇವೂ-
ಕಾರ ತಂಪು ಮಿಂಚ ಹೊಳಹು
ದಾಳಿಂಬೆಯ ರುಚಿ ಅಗಲಿದ
ಕಾದಲರೆದೆ ಕಾವು,
ಮಗು ತಾಯಿಗೆ, ಕವಿ ಚೆಲುವಿಗೆ,
ನನ್ನಿಗ ನನ್ನಿಗೆ, ಪರಮಗೆ
ಭಕ್ತರು ಹಂಬಲಿಸುವ ಬಗೆ
ಈ ಕೋಗಿಲೆಯುಲಿವು.

ದನಿಹಣ್ಣಿಂದಮೃತದ ರಸ
ತೊಟ್ಟಿಡಲಿಂತೆದೆ ತಾಮಸ-
ವುಳಿದುಜ್ವಲಿಸಿರೆ ಈ ಮಹ-
ದನುಭವಕೇನೆಂಬೆ?
ಈ ಶಾಶ್ವತ ರುತಿಗೊಂದಿದ
ಅಂದಂದಿನ ಸ್ಮೃತಿಯೋಲಿದ
ಪಿಡಿವಾನಂದದೊಳಾನಂ-
ತ್ಯವ ಮುಟ್ಟಿಹೆನೆಂಬೆ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...