Home / ಕವನ / ಕವಿತೆ / ಯುಗಾದಿಯ ನೆನಪು

ಯುಗಾದಿಯ ನೆನಪು

ನಿನ್ನೆ ಹೆಸರಳಿದು ನೀರಾದುದಾ ಪ್ರಭವಂ
ಜೀವನಪ್ಲವಮೆನ್ನ ಸಂಪ್ಲವಿಸಿ ನಿನ್ನ!
ಇಂದೆನ್ನನೀಚಿಸುವ ವೀಚಿಯೂ ವಿಭವಂ
ಸಾರ್ಥಮಕ್ಕೆಮ ವಿಯೋಗಿಸಿ ಭವದಿನೆನ್ನ ೪

ಆ ಯುಗಾದಿಯಲಿ ನೀನೆನ್ನ ಕಣ್ತಣಿಮೆ-
ಈ ಯುಗಾದಿಯಲಿ ನೀನೆಲ್ಲಿ? ನಾನೆಲ್ಲಿ?
ನನ್ನೆದೆಯಮಾಸೆಗಿನ್ನಶ್ರು ತರ್ಪಣಮೆ-
ಹಬ್ಬಮಿನ್ನೆನಗೆ ನಿನ್ನೊಡಗೂಡುವಲ್ಲಿ! ೮

ಕೊನೆಯ ತವರ್ಮನೆಗಕಟ! ನೀ ತೆರಳುವಂದು
ತಿಂಗಳಾರರ ಮುನ್ನಮುಟ್ಟ ಮಡಿಸೀರೆ
ಕಡೆಗಾಯ್ತೆ? ಇನ್ನುಡೆಯನೆಂತೀವೆನೆಂದು
ನೆನವ ನೂಲಂ ಮೀಸಲಿಡುವೆನಿದೊ ನೀರೆ! ೧೨

ಸರ್ವಮಂಗಲೆ! ಸರ್ವಶೃಂಗಾರವೆತ್ತು-
ಕೆಚ್ಚೆರಂಕದಿನೆನ್ನ ಹಚ್ಚಿ ಕುಂಕುಮಮಂ,
ನೆನವ ಬಾಗಿನವನೆನಗನುವಿಂದ ತೆತ್ತು,
ಮುಡಿದು ಮುಡಿಗೆನ್ನ ಸುರಿಕಂಬನಿಯ ಸುಮಮಂ- ೧೬

ಮದವಳಿಗೆ ಲಗ್ನವೇದಿಕೆಯಂತೆ, ಚಿತಿಯ
ಪೊಗುತಗ್ನಿಯಂ ಮನ್ಮನೋರಣಿಯಿನಾಂತು,
ನಮ್ಮೇಕ ಗಾರ್ಹಪತ್ಯವ್ರತವ ಸತಿಯ
ಧರ್ಮದಿಂದುದ್ಯಾಪಿಸಿದೆ ನೀ ಸಮಂತು ೨೦

ನಿನ್ನಯ ಚಿತಾಗ್ನಿಯಾಗಳಿನೆದೆಯೊಳೆನ್ನ
ಬೇಯೆ ಬಾಂಗಿನೆಯೆ ಬೈಗಿನ ಬೆಂಕಿಯಂತೆ
ಮೂಡಿಂದುವಂತೆ! ಕರೆಯಕ್ಕರೆಯ ಜೊನ್ನ
ದುಮ್ಮನದ ಗುಮ್ಮನೆರಕೆಯಿಳುಂಕಿಪಂತೆ. ೨೪

ಕಂತಿದಿಂ ಬಳಿಕ ನೀ ನಿನ್ನೊಸಗೆಯರಿಯೆಂ,
ನೀನಾದಡಂ ಬಲ್ಲೆಯೇನಳಲನೆನ್ನ?-
ನನೆನಲಿನಮಂ ನಿಟ್ಟಿಪಂತಿರುಳ ಮರೆಯಿಂ
ನೇಸರೇನಿರುಳ ನಲಿನಂ ನೇಸರನ್ನ? ೨೮

ಕುಂದೇನು ಮನದನ್ನೆ ನೊಂದಡಾನಿಲ್ಲಿ?
ಮಗು ಮುಡಿದ ತೊಟ್ಟಿಲೇನಾದಡೇನಂತೆ?
ನೀರ ಕೆರೆ ತಾರದಂತರಗಾಲದಲ್ಲಿ,
ನೀನಲ್ಲಿ ನೆಮ್ಮದಿಯಿನಿರೆ ಸಾಕು, ಕಾಂತೆ! ೩೨

ಪತಿಗೆ ಹೆಂಡತಿ ಸಾಲಗಾತಿ ತಾನಂತೆ,
ನಮ್ಮೊಳಂತಲ್ಲ, ನಾ ಸಾಲಿಗನೆ ನಿನ್ನ-
ಕಣ್ಣ ಕಾಣಿಕೆಯಂತೆ ನನ್ನಿರವನಾಂತೆ,
ಪಾಲಾಗಿ ನೀರನಿನಿವಾಲೆಸಗಿದೆನ್ನ ೩೬

ಇದ್ದೆ ಸೆಯಿನಿದ್ದೊರೆಗಳೆದ್ದು ಮುಂಬೆರೆಯೆ,
ಒಂದನಿನ್ನೊಂದು ಮರೆಸಂದು ಹರಿವಂತೆ,
ಬಲ್ಲೆನೆನ್ನಯ ಕಂಗಣಂಗಿ ನೀ ಸರಿಯೆ,
ಬೆರತಿನ್ನುಮಿರವನ್ನ ಹರಿವೆ ಮುನ್ನಂತೆ. ೪೦

ಕಡಲೆನಿತು ಕೆರಳ್ದೊಡಂ, ಕಡೆವುದೇಂ ಕರೆಯಂ?-
ಆಯುರವಧಿಯನೆನ್ನ ನನ್ನಳವೆ ಮೀರೆ?
ಕಾವೆನಾಚೆಗೆ ನಿನ್ನ ತೇರಿಸಿದ ತರಿಯಂ,
ಗೆಣೆವಕ್ಕಿ ಹಗಲಂತೆ ತನ್ನೆಣೆಯ ಸೇರೆ. ೪೪

ಎನಿತಿನ್ನುಮೆನ್ನ ಬಾಳ್ವೆಯ ಹುಳುಕು ವಾಲೆ
ಮಗಚುವುದೊ ನಾನರಿಯೆ- ಬರೆದವನೆ ಬಲ್ಲಂ!
ಇನ್ನುಮಳ್ತಿಯೆ ನನ್ನನಿಂತು ವಿಧಿಯಾಲೆ
ಹಿಳಿಯಲೇವಾಳ್ತೆ? ಕಳಲಿಂದಹುದೆ ಬೆಲ್ಲಂ? ೪೮

ತಾಳದು ವಿಕಾಳಿಸುವ ಕಾಳಿಮೆ! ಇದನ್ನ
ತಾಳದಕಟಾ ನಿನ್ನ ಬಾಳೆನೆನೆ, ಮನವಂ
ಸೇರುವೆಗೆ ಕೋರಿಸಿ ಚಕೋರಿಸುವೆನೆನ್ನ
ಪ್ರೇಮಪರಿಧಿಯ ಸುಧಾನಿಧಿಯೆ ನಿನ್ನೆನವಂ! ೫೨
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...