Home / ಕವನ / ಕವಿತೆ / ಯುಗಾದಿಯ ನೆನಪು

ಯುಗಾದಿಯ ನೆನಪು

ನಿನ್ನೆ ಹೆಸರಳಿದು ನೀರಾದುದಾ ಪ್ರಭವಂ
ಜೀವನಪ್ಲವಮೆನ್ನ ಸಂಪ್ಲವಿಸಿ ನಿನ್ನ!
ಇಂದೆನ್ನನೀಚಿಸುವ ವೀಚಿಯೂ ವಿಭವಂ
ಸಾರ್ಥಮಕ್ಕೆಮ ವಿಯೋಗಿಸಿ ಭವದಿನೆನ್ನ ೪

ಆ ಯುಗಾದಿಯಲಿ ನೀನೆನ್ನ ಕಣ್ತಣಿಮೆ-
ಈ ಯುಗಾದಿಯಲಿ ನೀನೆಲ್ಲಿ? ನಾನೆಲ್ಲಿ?
ನನ್ನೆದೆಯಮಾಸೆಗಿನ್ನಶ್ರು ತರ್ಪಣಮೆ-
ಹಬ್ಬಮಿನ್ನೆನಗೆ ನಿನ್ನೊಡಗೂಡುವಲ್ಲಿ! ೮

ಕೊನೆಯ ತವರ್ಮನೆಗಕಟ! ನೀ ತೆರಳುವಂದು
ತಿಂಗಳಾರರ ಮುನ್ನಮುಟ್ಟ ಮಡಿಸೀರೆ
ಕಡೆಗಾಯ್ತೆ? ಇನ್ನುಡೆಯನೆಂತೀವೆನೆಂದು
ನೆನವ ನೂಲಂ ಮೀಸಲಿಡುವೆನಿದೊ ನೀರೆ! ೧೨

ಸರ್ವಮಂಗಲೆ! ಸರ್ವಶೃಂಗಾರವೆತ್ತು-
ಕೆಚ್ಚೆರಂಕದಿನೆನ್ನ ಹಚ್ಚಿ ಕುಂಕುಮಮಂ,
ನೆನವ ಬಾಗಿನವನೆನಗನುವಿಂದ ತೆತ್ತು,
ಮುಡಿದು ಮುಡಿಗೆನ್ನ ಸುರಿಕಂಬನಿಯ ಸುಮಮಂ- ೧೬

ಮದವಳಿಗೆ ಲಗ್ನವೇದಿಕೆಯಂತೆ, ಚಿತಿಯ
ಪೊಗುತಗ್ನಿಯಂ ಮನ್ಮನೋರಣಿಯಿನಾಂತು,
ನಮ್ಮೇಕ ಗಾರ್ಹಪತ್ಯವ್ರತವ ಸತಿಯ
ಧರ್ಮದಿಂದುದ್ಯಾಪಿಸಿದೆ ನೀ ಸಮಂತು ೨೦

ನಿನ್ನಯ ಚಿತಾಗ್ನಿಯಾಗಳಿನೆದೆಯೊಳೆನ್ನ
ಬೇಯೆ ಬಾಂಗಿನೆಯೆ ಬೈಗಿನ ಬೆಂಕಿಯಂತೆ
ಮೂಡಿಂದುವಂತೆ! ಕರೆಯಕ್ಕರೆಯ ಜೊನ್ನ
ದುಮ್ಮನದ ಗುಮ್ಮನೆರಕೆಯಿಳುಂಕಿಪಂತೆ. ೨೪

ಕಂತಿದಿಂ ಬಳಿಕ ನೀ ನಿನ್ನೊಸಗೆಯರಿಯೆಂ,
ನೀನಾದಡಂ ಬಲ್ಲೆಯೇನಳಲನೆನ್ನ?-
ನನೆನಲಿನಮಂ ನಿಟ್ಟಿಪಂತಿರುಳ ಮರೆಯಿಂ
ನೇಸರೇನಿರುಳ ನಲಿನಂ ನೇಸರನ್ನ? ೨೮

ಕುಂದೇನು ಮನದನ್ನೆ ನೊಂದಡಾನಿಲ್ಲಿ?
ಮಗು ಮುಡಿದ ತೊಟ್ಟಿಲೇನಾದಡೇನಂತೆ?
ನೀರ ಕೆರೆ ತಾರದಂತರಗಾಲದಲ್ಲಿ,
ನೀನಲ್ಲಿ ನೆಮ್ಮದಿಯಿನಿರೆ ಸಾಕು, ಕಾಂತೆ! ೩೨

ಪತಿಗೆ ಹೆಂಡತಿ ಸಾಲಗಾತಿ ತಾನಂತೆ,
ನಮ್ಮೊಳಂತಲ್ಲ, ನಾ ಸಾಲಿಗನೆ ನಿನ್ನ-
ಕಣ್ಣ ಕಾಣಿಕೆಯಂತೆ ನನ್ನಿರವನಾಂತೆ,
ಪಾಲಾಗಿ ನೀರನಿನಿವಾಲೆಸಗಿದೆನ್ನ ೩೬

ಇದ್ದೆ ಸೆಯಿನಿದ್ದೊರೆಗಳೆದ್ದು ಮುಂಬೆರೆಯೆ,
ಒಂದನಿನ್ನೊಂದು ಮರೆಸಂದು ಹರಿವಂತೆ,
ಬಲ್ಲೆನೆನ್ನಯ ಕಂಗಣಂಗಿ ನೀ ಸರಿಯೆ,
ಬೆರತಿನ್ನುಮಿರವನ್ನ ಹರಿವೆ ಮುನ್ನಂತೆ. ೪೦

ಕಡಲೆನಿತು ಕೆರಳ್ದೊಡಂ, ಕಡೆವುದೇಂ ಕರೆಯಂ?-
ಆಯುರವಧಿಯನೆನ್ನ ನನ್ನಳವೆ ಮೀರೆ?
ಕಾವೆನಾಚೆಗೆ ನಿನ್ನ ತೇರಿಸಿದ ತರಿಯಂ,
ಗೆಣೆವಕ್ಕಿ ಹಗಲಂತೆ ತನ್ನೆಣೆಯ ಸೇರೆ. ೪೪

ಎನಿತಿನ್ನುಮೆನ್ನ ಬಾಳ್ವೆಯ ಹುಳುಕು ವಾಲೆ
ಮಗಚುವುದೊ ನಾನರಿಯೆ- ಬರೆದವನೆ ಬಲ್ಲಂ!
ಇನ್ನುಮಳ್ತಿಯೆ ನನ್ನನಿಂತು ವಿಧಿಯಾಲೆ
ಹಿಳಿಯಲೇವಾಳ್ತೆ? ಕಳಲಿಂದಹುದೆ ಬೆಲ್ಲಂ? ೪೮

ತಾಳದು ವಿಕಾಳಿಸುವ ಕಾಳಿಮೆ! ಇದನ್ನ
ತಾಳದಕಟಾ ನಿನ್ನ ಬಾಳೆನೆನೆ, ಮನವಂ
ಸೇರುವೆಗೆ ಕೋರಿಸಿ ಚಕೋರಿಸುವೆನೆನ್ನ
ಪ್ರೇಮಪರಿಧಿಯ ಸುಧಾನಿಧಿಯೆ ನಿನ್ನೆನವಂ! ೫೨
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...