Home / ಕವನ / ಕವಿತೆ / ಮಣ್ಣು

ಮಣ್ಣು

ನಾನು ಭಾವ ನೀನು ಗೀತ
ನಾನು ರಾಮ ನೀನು ಸೀತ
ಹೀಗೆಲ್ಲ ಹಾಡಿದ ಕವಿಗಳು ಒಂದು ದಿನ
ನಾನು ಶವ ನೀನು ಪ್ರೇತ
ಎಂದು ಸಾಯುತ್ತಾರೆ

ನಾನು ದೇವರ ಪುತ್ರ ಬನ್ನಿ ನನ್ನಡಿಯಲ್ಲಿ
ಮೋಕ್ಷದ ಹಾದಿ ಸುರಳೀತ
ಎಂದು ಸಾರಿದ ಸಾಧಕರೆಲ್ಲ
ಗೊತ್ತಿದ್ದೋ ಗೊತ್ತಿಲ್ಲದೆಯೋ
ಇನ್ನೂ ಏಳದ ಹಾಗೆ ಮಲಗಿದ್ದಾರೆ

ಅಣು ಅರಸಿದವನು, ಕೃತಕ
ಮಳೆ ಸುರಿಸಿದವನು, ವಿದ್ಯುತ್
ಒಲೆ ಉರಿಸಿದವನು
ಒಂದು ಸಲ ಅರಸಿ ಹೋಗಿದ್ದಾರೆ ಏನನ್ನೋ
ತಿರುಗಿ ಬಂದಿಲ್ಲ

ಎಲ್ಲರೂ ಕಂಡದ್ದು ಒಂದೇ ಕೊನೆ
ಹೊಡೆದವನದೊಂದೇ ಬೆಣೆ

ನಾನಿಂತ ಮಣ್ಣಲ್ಲೆಲ್ಲ ಕರಗಿದವರ ಕತೆ
ಒಂದು ನರಿಯಂತೆ ಮತ್ತೊಂದು ಹುಲಿಯಂತೆ
ಇನ್ನೊಂದು ಬೀದಿ ನಾಯಿಯಂತೆ
ಎಲ್ಲಾ ಕೂಡಿ
ನಮ್ಮ ಮನೆಯಂಗಳಕ್ಕೆ ಮಣ್ಣಾದವಂತೆ

ಒಬ್ಬ ಮಾಸ್ತರನಂತೆ
ಉಣ್ಣದೇ ಸತ್ತವನು
ಒಬ್ಬ ಕಾರಕೂನನಂತೆ
ಹೊಟ್ಟೆ ತುಂಬಿಯೇ ಸತ್ತವನು

ಇದ್ದಾಗ ಒಬ್ಬರ ಮುಖ
ಇನ್ನೊಬ್ಬರಿಗಾಗದು
ಅವನ ಬಯ್ಯದೇ ಇವಗೆ
ಹೊತ್ತೇ ಹೋಗದು

ಇಬ್ಬರೂ ಸೇರಿ
ಚೌತಿಯ ಗಣಪತಿಗೆ
ಆಕಾರವಾದರು

ಮಣ್ಣ ಹಣತೆಯದೊಂದು ಕತೆ
ಮಡಕೆಯದೊಂದು ನೀಳ್ಗತೆ
ಹೊಸ ಮನೆಯ ಗೋಡೆಯದೊಂದು
ಕಾದಂಬರಿಯೇ ಇದೆ

ಕೇಳುತ್ತ ದಂಗಾದೆ
ಬೆರಳು ಕಚ್ಚಿದೆ ಆಶ್ಚರ್ಯಕ್ಕೆ
ಥೂ ! ಥೂ !
ಉಗಿದೆನು ಬರೀ ಮಣ್ಣು !
ಇಡೀ ಮೈ ನಕ್ಕಿತು ಒಳಗಿನವನನ್ನು ನೋಡಿ
“ನಾನು ನಿನಗಿಂತ ಹಿಂದೆ
ಸತ್ತವರ ಬೂದಿ”

ತಾಳಲಾರದೇ ಮನಸ್ಸಿನ
ಸ್ವಾಸ್ಥ್ಯಕ್ಕೆಂದು
ಮೆಲ್ಲಗೆ ಪಕ್ಕದ ಮನೆಯ
ಹುಡುಗಿಯನ್ನೆತ್ತಿಕೊಂಡೆ
ಎತ್ತಿಕೊಂಡರೆ ಪೂರಾ ಮಣ್ಣಿನದೆ ವಾಸನೆ
ಮೂಗೊತ್ತಿಕೊಂಡೆ

ಪೇಟೆಯಲ್ಲೆಲ್ಲ ಮಣ್ಣಿನದೆ ಮೆರವಣಿಗೆ
ಕ್ಲಾಸಿನಲ್ಲೆಲ್ಲ ಮಣ್ಣಿನದೆ ಬರವಣಿಗೆ
ಮಣ್ಣಿಗೆ ಮಣ್ಣು ಗೋಪುರ ಕಟ್ಟುತ್ತ

ಚೌತಿಯ ಗಣಪತಿ
ಈಶ್ವರ ಕೆರೆಯ ನೀರಲ್ಲಿ
ಹಗು-ಹಗೂರ
ಕರಗುವ ಹಾಗೆ

ನನ್ನೊಳಗೆ ಕರಗುತ್ತಿದ್ದೆ
ಮಣ್ಣಿನ ಮುದ್ದೆ

ಸತ್ತವರ ನೆರಳುಗಳಲ್ಲಿ
ಇದ್ದವರ ಕೊರಳು
ಕೊರೆಯುವ ಗೆದ್ದಲಗಳಲ್ಲಿ
ಬೀಳುತ್ತೆ ಉರುಳು

ಬಜಾರಿನ ತರಕಾರಿ, ಬಜಾರಿಯ ಚಿನ್ನಾಭರಣ
ಈ ಪ್ರಯೋಗಾಲಯದ ಗಾಜಿನುಪಕರಣ
ಜೊತೆಯಲ್ಲಿ ನಾನೂ, ನೀವೂ
ಮಾನವ ಕುಲದ
ಇತಿಹಾಸದಶ್ವತ್ಥ ಮರದಡಿಗೆ
ಮಣ್ಣಲ್ಲಿ ಮಣ್ಣಾಗಿ ಕರಗುವ ಕತೆಯೇ
ಇಂದಿನೀ ಉಸಿರು
*****

 

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...