Home / ಕವನ / ಕವಿತೆ / ಹೂವಡಿಗಿತ್ತಿ

ಹೂವಡಿಗಿತ್ತಿ

ನಾದನಾಮಕ್ರಿಯಾ

ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ!


ಸಂಪಗೆಯ ಮಲ್ಲಿಗೆಯ
ಸೊಂಪು ಸೇವಂತಿಗೆಯ
ಕಂಪೊಗೆವ ಜಾಜಿಯನು ಕೊಳ್ಳಿರಮ್ಮಾ!
ಕೆಂಪು-ಬಿಳಿ ತಾವರೆಯ
ಸುರಯಿ ಸುರಹೊನ್ನೆಗಳ
ಪೆಂಪುವಡೆದರಳುಗಳ ಕೊಳ್ಳಿರಮ್ಮಾ!
ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ!


ಒಮ್ಮೆಯೇ ಮೂಸಿದರು
ಜುಮ್ಮು ಜುಮ್ಮೆನುವುದೆದೆ,
ಕಮ್ಮನೆಯ ಹೂಗಳಿವು ಕೊಳ್ಳಿರಮ್ಮಾ!
ನಮ್ಮ ತೊಟಿಗರಣ್ಣ
ಹೆಮ್ಮೆಯಲಿ ಬೆಳೆಯಿಸಿದ
ಸೊಮ್ಮು ಈ ಅರಳುಗಳು, ಕೊಳ್ಳಿರಮ್ಮಾ!
ಕೊಳ್ಳಿರಮ್ಮಾಽ… ಹೂವ ಕೊಳ್ಳಿರಮ್ಮಾ !


ಬರಿಯ ಹೊರಬಣ್ಣದಲಿ
ಮಿರುಗಿ ಕಣ್ಣನು ಸೆಳೆವ
ಬರಡುಗಂಪಿನವಲ್ಲ, ಕೊಳ್ಳಿರಮ್ಮಾ!
ಹುರುಳನೆಲ್ಲೆಡೆಯಲಿಯು
ಹರಡಿ ಮಂದಿಯ ಮನವ
ಬೆರಗುಗೊಳಿಸುವ ಅರಳು, ಕೊಳ್ಳಿರಮ್ಮಾ!
ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ!


ಬೆಳಗುಜಾವದಿ ಮೂಡಿ-
ದೆಳ ನೇಸರನು ನೋಡಿ
ನಲಿದು ಬಾಯ್ದೆರೆದರಳ ಕೊಳ್ಳಿರಮ್ಮಾ!
ಎಳೆಯ ನೇಸರು ಹೊನ್ನ
ಸೆಳೆಗದಿರ ಸೋಂಕಿಸಲು
ತಳೆದಿಹವು ಹೊಸಚೆಲುವ ಕೊಳ್ಳಿರಮ್ಮಾ!
ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ !


ಅಳಿಯ ಬಳಗದ ಕಣ್ಣು-
ಗಳನು ತಪ್ಪಿಸಿ ತಂದೆ
ಗಳಿಲನೇ ನೀವೀಗ ಕೊಳ್ಳಿರಮ್ಮಾ!
ಅಳಿಯ ಬಳಗದ ಬಾಯ್ಗೆ
ಸಿಲುಕಿದರೆ ಈ ಅರಳಿ-
ನೆಳ ಎಸಳು ಸಹ ಸಿಗದು, ಕೊಳ್ಳಿರಮ್ಮಾ!
ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ!


ದೂರದೂರದಿ ನೋಡೆ
ತೋರದಿವುಗಳ ಸೊಬಗು
ಸೇರಿಸಲು ಮುಡಿಗಿವನು ಕೊಳ್ಳಿರಮ್ಮಾ!
ಸೇರಿಸಲು ಮುಡಿಗಿವನು
ಮುನಿದಿರೆಯು ನಿಮ್ಮವನು
ಸಾರಿಬರುವನು ಬಳಿಗೆ, ಕೊಳ್ಳಿರಮ್ಮಾ!
ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ!


ಸುರಲೋಕದರಳುಗಳು
ಸರಿಯೆನಿಸವಿವುಗಳಿಗೆ,
ಗರತಿಯರು ನೆರೆದೀಗ ಕೊಳ್ಳಿರಮ್ಮಾ!
ಗರತಿಯರೆ ನೀವು ಮುಡಿ-
ಗಿರಿಸಿದರೆ ಈ ಅರಳ
ಸುರರನ್ನು ಮೀರುವಿರಿ! ಕೊಳ್ಳಿರಮ್ಮಾ!
ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ!


ಮಡದಿಯರು ಮುಡಿಮುಡಿದು
ಬೆಡಗ ಬಳೆಯಿಸಿರೆಂದು
ಪಡುವೆನಾ ತವಕವನು ಕೊಳ್ಳಿರಮ್ಮಾ!
ಮುಡಿಯದಿರೆ ಈ ಹೂವು
ಕೆಡುತೆ ಸುಮ್ಮಗೆ ಬಾಡಿ
ಹುಡಿಗೂಡಿ ಹೋಗುವುವು; ಕೊಳ್ಳಿರಮ್ಮಾ!
ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ!


ಬೆಡಗಿನರಳಿವು ಬರಿದೆ
ಹುಡಿಗೂಡಿದರೆ ನಾನು
ತಡೆಯೆನೆದೆ ಮಿಡುಕನ್ನು ಕೊಳ್ಳಿರಮ್ಮಾ!
ಒಡೆಯ ತೋಟಿಗರಣ್ಣ
ಒಲವಿನಲಿ ಕೊಟ್ಟರಳ
ಕೆಡಿಸುವುದು ಸರಿಯಹುದೆ? ಕೊಳ್ಳಿರಮ್ಮಾ!
ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ!

೧೦
ಹುಡಿಯ ಕೂಡಿಸಿ ಹೂವ
ಕೆಡಿಸುವುದಕಿಂತಲೂ
ಕೊಡುವೆ ಹಾಗೆಯೆ ಮುಡಿದುಕೊಳ್ಳಿರಮ್ಮಾ!
ಮುಡಿಯೆ ಅರಳನು ನಿಮ್ಮ
ಬೆಡಗನ್ನು ನೋಡುತಲಿ
ಪಡೆವೆ ನಾ ನಲಿವನ್ನು ಕೊಳ್ಳಿರಮ್ಮಾ!
ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ!

೧೧
ಸಂಪಗೆಯ ಮಲ್ಲಿಗೆಯ
ಸೊಂಪು ಸೇವಂತಿಗೆಯ
ಕಂಪೊಗೆವ ಜಾಜಿಯನು ಕೊಳ್ಳಿರಮ್ಮಾ!
ಕೆಂಪು-ಬಿಳಿ ತಾವರೆಯ
ಸುರಯಿ ಸುರಹೊನ್ನೆಗಳ
ಪೆಂಪುವಡೆದರಳುಗಳ ಮುಡಿಯಿರಮ್ಮಾ!
ಮುಡಿಯಿರಮ್ಮಾಽ ಬೆಡಗ ಪಡೆಯಿರಮ್ಮಾ!
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...