Home / ಲೇಖನ / ಇತರೆ / ಜಾಣ ಕುರುಡೇ?

ಜಾಣ ಕುರುಡೇ?

ಚಿತ್ರ: ಗರ್‍ಡ್ ಆಲ್ಟ್‌ಮನ್

ಪ್ರಿಯ ಸಖಿ,

ಹೀಗೆ, ಆಶ್ರಮವೊಂದರಲ್ಲಿ ಗುರುವೊಬ್ಬನಿದ್ದ. ಮಹಾನ್ ಮಾನವತಾವಾದಿ. ಎಂತಹ ಸೂಕ್ಷ್ಮ ಮನಸ್ಸಿನವನೆಂದರೆ ತನ್ನ ಮಾತು, ಕೃತಿಗಳಿಂದ ಎಂದೂ ಇತರರನ್ನು ನೋಯಿಸಿದವನಲ್ಲ. ತನ್ನ ಶಿಷ್ಯರೊಡನೆಯೂ ಪ್ರೀತಿ ಮಮತೆಗಳಿಂದ ನಡೆದುಕೊಳ್ಳುತ್ತಿದ್ದ. ಬಿರು ಬೇಸಿಗೆಯಲ್ಲಿ ಗಿಡಗಳು ಸುಟ್ಟು ಹೋಗುತ್ತವಲ್ಲ ಎಂದೂ ಚಳಿಗಾಲದಲ್ಲಿ ಪಕ್ಷಿಗಳು ನಡುಗಿ ನೋಯುತ್ತವಲ್ಲಾ ಎಂದೂ, ಗಿಡದಿಂದ ಹೂಕಿತ್ತರೆ ಅದಕ್ಕೆ ನೋವಾಗುವುದೆಂದೂ ಪರಿತಪಿಸುತ್ತಿದ್ದ. ಇಷ್ಟೆಲ್ಲಾ ಸೂಕ್ಷ್ಮ ಮನಸ್ಸಿನ ಈ ಗುರು ಒಬ್ಬ ಮಾಂಸಾಹಾರಿಯಾಗಿದ್ದ. ಆ ತನ್ನ ತಪಸ್ಸಿನ ಶಕ್ತಿಗೆ, ಧೈರ್ಯ, ಬುದ್ಧಿವಂತಿಕೆಗೆ ತೇಜಸ್ಸಿಗೆ ತಾನು ಮಾಂಸಹಾರಿಯಾಗಿರುವುದೇ ಕಾರಣವೆಂದು ಬಲವಾಗಿ ನಂಬಿದ್ದ! ಈ ಆಶ್ರಮಕ್ಕೆ ಹೊಸ ಶಿಷ್ಯನೊಬ್ಬ ಆಗಮಿಸಿದ. ಅವನೋ ಅಪ್ಪಟ ಸಸ್ಯಾಹಾರಿ. ಜೊತೆಗೆ ಮಹಾನ್ ಬುದ್ಧಿವಂತ. ಅವನಿಗೆ ತನ್ನ ಗುರುಗಳ ಬುದ್ಧಿವಂತಿಕೆ, ಶಕ್ತಿ, ಎಲ್ಲಕ್ಕಿಂತ ಹೆಚ್ಚಾಗಿ ಅವರ ಮಾನವೀಯ ಗುಣಗಳು ಹೆಚ್ಚು ಮೆಚ್ಚುಗೆಯಾದವು. ಮಾನವೀಯತೆಯ ಕುರಿತು ಅವರು ಹೇಳುತ್ತಿದ್ದ ಕಥೆಗಳು, ಅದರಂತೆ ನಡೆಯಬೇಕೆಂದು ಅವರು ನೀಡುತ್ತಿದ್ದ ಉಪದೇಶ ಎಲ್ಲವೂ ಬಹಳ ಅಪ್ಯಾಯಮಾನವಾಗಿದ್ದವು. ಹಾಗೆಯೇ ಹೂವು, ಗಿಡ, ಮರ, ಪಕ್ಷಿಗಳ ಕುರಿತೂ ಅವರಿಗಿರುವ ಪ್ರೀತಿಯನ್ನು ಕಂಡು ಹೃದಯ ತುಂಬಿಬರುತ್ತಿತ್ತು.

ಆದರೆ ಅವನಿಗೆ ಅರ್ಥವಾಗದ್ದೊಂದೇ. ಅದು ಗುರುಗಳ ಮಾಂಸಾಹಾರ ಸೇವನೆ. ಇಷ್ಟೆಲ್ಲಾ ಪ್ರೀತಿ ತುಂಬಿದ ಹೃದಯದ ಗುರುಗಳು ಮಾಸಾಹಾರಿಗಳೇಕೆ ಎಂಬ ಪ್ರಶ್ನೆ ಅವನನ್ನು ಕಾಡುತ್ತಿತ್ತು. ಹಾಗೆಂದು ಗುರುಗಳನ್ನು ಎದುರಿಗೇ ಕೇಳಲಾದೀತೇ? ಸರಿ ಅವರ ಆಹಾರ ಕ್ರಮವನ್ನು, ಇಂಚಿಂಚೂ ಪರೀಕ್ಷಿಸತೊಡಗಿದ.

ಗುರುಗಳು ಆಹಾರದ ಸಮಯಕ್ಕೆ ಸರಿಯಾಗಿ ಭೋಜನ ಶಾಲೆಗೆ ಆಗಮಿಸುತ್ತಿದ್ದರು. ಆಹಾರ ಸೇವಿಸಿ ಹೊರಟು ಹೋಗುತ್ತಿದ್ದರು. ಆಹಾರ ತಯಾರಿ ವಿಧಾನವಾಗಲಿ, ಇವರ ಮಾಂಸಾಹಾರಕ್ಕಾಗಿ ನಡೆಯುವ ಪ್ರಾಣಿ ವಧೆಯನ್ನಾಗಲಿ ಅವರು ಕಂಡೇ ಇರಲಿಲ್ಲ.

ಈ ಹೊಸ ಶಿಷ್ಯ ಇದನ್ನೆಲ್ಲವನ್ನೂ ಅವರಿಗೆ ತೋರಿಸಲು ನಿರ್ಧರಿಸಿದ. ಒಂದು ದಿನ ಆ ವೇಳೆಯಲ್ಲಿ ಅವರನ್ನು ಪಾಕ ಶಾಲೆಗೆ ಕರೆತಂದ. ಅಲ್ಲಿ ಕೆಲ ಶಿಷ್ಯರು ಕೋಳಿಯೊಂದರ ಪುಕ್ಕ ಕಿತ್ತು, ಅದನ್ನು ಕೊಲ್ಲುವ ತಯಾರಿಯಲ್ಲಿದ್ದರು. ಇದನ್ನು ಕಂಡ ಗುರುಗಳು ಸಿಟ್ಟಿನಿಂದ ಕೂಗಾಡಿದರು. ಶಿಷ್ಯರು ತಮ್ಮ ಆಹಾರಕ್ಕಾಗಿಯೇ ಈ ಎಲ್ಲಾ ಹಿಂಸೆ ಎಂದಾಗ ಗುರುಗಳು ದಿಗ್ಭ್ರಾಂತರಾದರು!

ಪ್ರಿಯ ಸಖಿ, ಗುರುಗಳು ಮಾಂಸಾಹಾರ ತ್ಯಜಿಸಿ ಸಸ್ಯಾಹಾರಿಯಾದರೋ ಇಲ್ಲ ಇಂತಹ ಹಿಂಸೆಯನ್ನು ತಮ್ಮ ಕಣ್ಣಿಗೆ ತೋರಿಸಿದ್ದಕ್ಕಾಗಿ ಹೊಸ ಶಿಷ್ಯನನ್ನೇ ದಂಡಿಸಿದರೋ, ಮುಂದೆ ಆ ಕಥೆಯೇನಾಯ್ತೋ ನಮಗೆ ಬೇಡ. ಆದರೆ ಮೃದು ಹೃದಯದ, ಸಣ್ಣ ನೋವಿಗೂ ಸ್ಪಂದಿಸುವೆವೆಂದು ಹೇಳಿಕೊಳ್ಳುವಂತಹಾ ಈ ಗುರುವಿನಂತವರು ಇಂತಹಾ ಹಿಂಸಾಚಾರವನ್ನು ನಿತ್ಯ ತಮ್ಮ ಮನೆಗಳಲ್ಲಿ ನೋಡುತ್ತಲೇ ಇರುತ್ತಾರಲ್ಲವೇ ? ನಮ್ಮ ಕಥೆಯ ಗುರುವಿನಂತೆ ಹಿಂಸೆಯ ಅರಿವು ಅವರಿಗಿರುವುದಿಲ್ಲವೊ, ಈ ಕುರಿತು ಜಾಣ ಕುರುಡೋ. ಪ್ರಾಣಿಗಳಿರುವುದೇ ನಮ್ಮ ಆಹಾರಕ್ಕೆ ಅದರಲ್ಲೆಂತಾ ಹಿಂಸೆ ಎಂಬ ದಿವ್ಯ ಬುದ್ಧಿವಂತಿಕೆಯೋ? ಏನೆಂಬುದು ಅವರವರಿಗೇ ಗೊತ್ತಿರಬೇಕಷ್ಟೇ.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್