Home / ಕವನ / ಕವಿತೆ / ಮನೆಯು ಪಾಲಾಯ್ತು

ಮನೆಯು ಪಾಲಾಯ್ತು

“ಮನೆಯು ಪಾಲಾಯ್ತು
ಒರ್‌ಬಾಳ್ವೆ ಹೋಳಾಯ್ತು
ಕರುಳೆರಡು ಸೀಳಾಯ್ತು
ಅಯ್ಯೊ! ಅಕಟಕಟಾ!
ಎರಡಾಯ್ತು ಬಾವುಟ”
ಎಂದು ಗೋಳಾಡದಿರು
ಓ, ಗೆಳೆಯನೇ!

ಕಲಹ ಪಾಲಿಗೆ ಮೊದಲು:
ಹೊಗೆಯಿತಸಮಾಧಾನ,
ಉರಿಯಿತು ದುರಭಿಮಾನ.
ತಮ್ಮ, ಪಸುಗೆಯ ಬಯಸಿ
ಕೈಮಾಡಿದನು, ಮುನಿದು;
ಒಬ್ಬಣ್ಣ ಸುಮ್ಮನಿರೆ
ಉಳಿದರಂತಿಹರೆ?

ಹೊಡೆತಕ್ಕೆ ಮರುಹೊಡೆತ;
ಮತದ ಮದ್ದಿನ ಸಿಡಿತ!
ಮಾರಿಗಾಯ್ತೌತಣ;
ನಾಡೆಲ್ಲ ರಣ ರಣ!

ತಡವೆ ರೋಗನಿದಾನ!
ಒಳಗೆಲ್ಲೊ ವಿಷದ ಸೆಲೆ
ಉಪಚಾರ ಮೇಲ್ಮೇಲೆ!
ಅರಿವು ಮೂಡಿದ ಮೇಲೆ
ನಿಜದ ಸಂಧಾನ.
ನಮ್ಮ ಮನೆ ಪಾಲಾಗೆ
ಬೇಕಾಯ್ತು ಕಡೆಗೆಮಗೆ
ಹೆರರ ತೀರ್ಮಾನ!

ಎಲ್ಲವೂ ಆಯ್ತು, ದಿಟ!
ಪಾಲಾಯ್ತು ಮನೆ ಮಠ,
ಹಣಕಾಸು ಆಳು ಭಟ;
ಒಂದೆಸೆದ ಬಾವುಟ!
ಗೆದ್ದಿತೆಲ್ಲರ ಹಟ!
ಇನ್ನೇತಕಾ ಗೋಳು?

ನೋಡು ನಾಳಿನ ಬಾಳು:
ನಗುತಿರಲಿ ಆ ಮನೆ,
ನಗುತಿರಲಿ ಈ ಮನೆ!
ಅವರ ಬಾವುಟವವರು
ನಮ್ಮ ಬಾವುಟ ನಾವು
ಏರಿಸುವ! ಹಾರಿಸುವ!
ಒಲುಮೆ ತೋರಿಸುವ!
ನಮ್ಮ ಕರುಳಿನ ನಂಟು
ಬಿಡಿಸಲಾಗದ ಗಂಟು:
ಈ ನಂಬಿಕೆಯ ಬೆಳಕೆ
ಒಡೆದ ಮನಕಂಟು!

ಬೇರೆಯಿಹ ಕೈಗಳನು
ಮುಗಿದು ವಂದಿಸಿದಂತೆ;
ಎರಡು ಕಣ್ಣಿನ ಕವಲು-
ನೋಟ ಸಂಧಿಸಿದಂತೆ;
ಇಬ್ಬಗೆಯ ಹೂಗಳನು
ಹಾರಕೊಂದಿಸಿದಂತೆ;
ಗಂಡು ಹೆಣ್ಣಿನ ಬಾಳ-
ನೊಲುಮೆ ಬಂಧಿಸಿದಂತೆ;
ಕವಲೊಡೆದ ಕಾವೇರಿ
ಮತ್ತೆ ಕೂಡಿದ ತೆರದಿ;
ಬೇಡನಾವನೊ ಬಂದು
ಎರಡು ಗೂಡಿನಲಿಟ್ಟ
ಜೊತೆಯ ಹಕ್ಕಿಗೆ ಕಟ್ಟ-
ಕಡೆಗೆ ಬಿಡುಗಡೆ ದೊರೆಯೆ
ಅವು ಹಾರಿ ನೆರೆವಂತೆ;
ಹುಟ್ಟು ಧರಿಸಿದ ಆತ್ಮ
ಪರಮಾತ್ಮನಲಿ ಕಡೆಗೆ
ಬೆರೆತೈಕ್ಯವಪ್ಪಂತೆ;
ನಾವು ಸೋದರರಿಂದು
ಬೇರಾದರೇನಂತೆ,-
ಮನವೊಡೆಯದಂತೆ
ಮನೆಯೊಡೆಯದಂತೆ
ಮತ್ತೆ ಬೆರೆಯೋಣ,
ಹೊಸ ಬಾಳ ತೆರೆಯೋಣ,
ಶಾಂತಿ ಸೌಹಾರ್ದಗಳ
ಅಮೃತವರ್ಷದ ಧಾರೆ
ಇಳೆಗೆಲ್ಲ ಕರೆಯೋಣ!
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...