Home / ಕವನ / ಕವಿತೆ / ನಿನ್ನ ಬರುವು

ನಿನ್ನ ಬರುವು

ನಿನ್ನ ಬರವನೇ ಕಾಯ್ದು ಇರುವೆ ಇರವೆಲ್ಲ ಕಾಯ್ವ ಚಿಂತೆ
ಬರದೆ ನೀನು ಬರಡಾದೆ ನಾನು ಬಾಗಿಲನು ತೆರೆದೆ ನಿಂತೆ

ಬಣ್ಣ ಬಣ್ಣ ವೇಷಗಳ ತೊಟ್ಟು ಬಯಲಾಟ ಬೊಂಬೆಯಂತೆ
ಬಣ್ಣಿಸಿದ್ದೆ ನಾ ಹಿಂದೆ ಅಂತೆಯೇ ಎಲ್ಲ ಅಂತೆ ಕಂತೆ

ಜಟೆಕಿರೀಟದಲಿ ನಾಲ್ಕು ಕೈಗಳಲಿ ವಿವಿಧ ಆಯುಧಗಳ
ರೇಷ್ಠ ಬಟ್ಟೆಗಳ ಚಿನ್ನದೊಡವೆಗಳ ಮುತ್ತು ರತ್ನ ಬಹಳ

ತೊಟ್ಟು ಬರುವಿ ನೀ ಬೆಳಕ ತರುವಿ ಝಗ್ಗೆಂದು ಕಣ್ಣ ಕುಕ್ಕಿ
ಎಂಬ ಭ್ರಮೆಯು ಈಗಿಲ್ಲ ತಂದೆ ತಿಳಿದಿಹುದು ತಿಳಿವು ಸಿಕ್ಕಿ

ಬಾ ಬಾರ ದೇವ ಬಂದೀಯ ನೀನು ಗುರುತಿಸಲು ಬಾರದಂತೆ
ಕಣ್ಣ ಮುಂದೆ ಹಗಲಿರುಳು ತಿರುಗಿದರು ನೋಟವರಿಯದಂತೆ

ಸುಕ್ಕುಗಲ್ಲ ಬರಿ ಎಲುಬು ಮೈಯಿ ಒಳಸೇರಿದಂಥ ದಿಟ್ಟಿ
ಭೂಮಿ ಭಾರ ಹೊತ್ತಂತೆ ಬೆನ್ನು ನಸುಬಾಗಿ ಕೋಲು ಕುಟ್ಟಿ

ಬರಿಮೈಯೊ ಏನೊ ಅರಮೈಯೊ ಏನೊ ಮಾನಕ್ಕೆ ಮರೆಯು ಬಟ್ಟೆ
ಬರಿಹೊಟ್ಟೆ ಏನೊ ಅರೆಹೊಟ್ಟೆ ಏನೊ ಬದುಕಿರಲು ನೆವವು ಹೊಟ್ಟೆ

ಮಾತನಾಡಿದರು ಮೂಕನಂತೆ ಮೌನದಲೆ ಎಲ್ಲ ಭಾಷ್ಯ
ಸುಮ್ಮನಿದ್ದರೂ ಮಗುವಿನಂತೆ ಲೀಲೆಯೊಳು ಕೃತಿಯು ವಶ್ಯ

ನೀನು ಬರಲು ಮೆರವಣಿಗೆಯಿಲ್ಲ ತುತ್ತೂರಿ ಕಹಳೆ ಇಲ್ಲ
ಬಾಲ ಹಿಂಬಾಲ ಬೊಗಳು ಹೊಗಳುಗಳು ಯಾರ ತರಲೆ ಇಲ್ಲ
ಗಾಳಿಯಷ್ಟು ಹಗುರಾಗಿ ಬರುವೆ ರವಿಕಿರಣದಂತೆ ನೇರ
ಬೆಳಕಿನಂತೆ ತಿಳಿಯಾಗಿ ಬರುವೆ ಜಲದಂತೆ ತೊಳೆಯ ಬಾರ

ಹಣ್ಣಿಗಿಂತ ಹಣ್ಣಾಗಿ ಬರುವೆ ಅನುಭಾವ ರಸವ ಹನಿಸಿ
ಹೂವಿನಂತೆ ಎದೆ ಅರಳುವಂತೆ ಪರಿಮಳದ ಪ್ರೇಮವೆನಿಸಿ

ತಿರೆಯ ಭ್ರಮಣ ಪರಿಯಂತೆ ಬಿಡುವಿರದ ಕಾಯಕರ್ಮನಿರತ
ಅಮರ ತತ್ವ ತೋರಿಸುವ ಮರಗಳೊಲು ಪ್ರಕೃತಿ ಧರ್ಮ ರಕ್ತ

ಋತು ಋತುವು ಹೊಸದು ಋತ ಸತ್ಯ ನಿತ್ಯ ನಿತ್ಯಾತ್ಮ ಲೀನ ನೀನು
ಇದ್ಧಿಲ್ಲದಂತೆ ಸದ್ದಿಲ್ಲದಂತೆ ಇರದಿರುವ ಯೋಗ ನೀನು
***

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...