ಒಮ್ಮೆ ಗುರುಗಳು ತಮ್ಮ ಇಬ್ಬರು ಆಪ್ತ ಶಿಷ್ಯರನ್ನು ಕರೆದು ಒಂದು ಪರೀಕ್ಷೆಗೆ ಒಳಪಡಿಸಿದರು.
“ಶಿಷ್ಯಂದಿರೆ! ನೀವು ಝೆನ್ನನ್ನು ಬಹಳದಿನದಿಂದಲೂ ಕಲಿಯುತ್ತಿದ್ದೀರಿ. ನಿಮಗೆ ಈ ಪರೀಕ್ಷೆ ಎದುರಾಗಿದೆ. ಝೆನ್ನಲ್ಲಿ ನಿಮ್ಮ ಹೃದಯ ಎಷ್ಟು ಒಂದಾಗಿದೆ ಎಂದು ತಿಳಿಯಬೇಕು. ಈಗ ಒಂದು ಪ್ರಶ್ನೆ ನಿಮ್ಮ ಮುಂದಿಡುತ್ತೇನೆ. ನೀವು ಕೆಲವು ದಿನಗಳಾದ ನಂತರ ಬಂದು ನನಗೆ ಉತ್ತರಕೊಡಬೇಕು” ಅಂದರು.
ಶಿಷ್ಯಂದಿರು “ಹಾಗೇ ಆಗಲಿ ಗುರುಗಳೇ” ಎಂದು ಒಪ್ಪಿಕೊಂಡರು.
“ನೀವು ಎರಡು ಕೈ ಚಪ್ಪಾಳೆ ಕೇಳಿದ್ದೀರಿ ಅಲ್ಲವೇ?”
“ಹೌದು ಗುರುಗಳೇ?”
“ಈಗ ಅದಕ್ಕೆ ವಿರುದ್ಧವಾಗಿ ಎರಡೂ ಕೈ ಸೇರದ ಚಪ್ಪಾಳೆ ಬಗ್ಗೆ ನೀವು ತಿಳಿದು ಬರಬೇಕು” ಎಂದರು ಗುರುಗಳು.
“ಎರಡು ಕೈ ಸೇರದಿರುವಾಗ ಚಪ್ಪಾಳೆ ಎಲ್ಲಿ ಬಂತು? ಗುರುಗಳೇ?”- ಎಂದರು ಶಿಷ್ಯಂದಿರು.
“ನೀವು ತಿಳಿಯಬೇಕಾದದು ಅದೇ. ನೀವು ಕಾರ್ಯೋನ್ಮುಖರಾಗಿ ಶೋಧನೆಗೆ ಅಗಮ್ಯ ಯಾವುದೂ ಇಲ್ಲ” ಎಂದರು ಗುರುಗಳು.
ಇಬ್ಬರು ಶಿಷ್ಯರು ದೂರದ ಕಾಡಿಗೆ ಹೋದರು. ಅಲ್ಲಿ ಬೆಟ್ಟಗುಡ್ಡದ ಎದರು ನಿಂತರು, ಹರಿಯುವನದಿ, ಜಲಪಾತಗಳ ಸದ್ದು ಕೇಳಿಸಿಕೊಂಡರು. ವೃಕ್ಷದ ಕೆಳಗೆ ನಿಂತರು. ಎಲೆಗಳ ಮರ್ಮರ ಕೇಳಿಸಿಕೊಂಡರು. ಯಾವ ಸುಳಹು ಮೂಡಲಿಲ್ಲ. ಮತ್ತೆ ಧ್ಯಾನ ಭಂಗಿಯಲ್ಲಿ ಕುಳಿತು ಅಂತರ ಮುಖಿಗಳಾದರು. ಎದೆಯ ಢಬಡಬನಾದ ಕೇಳತೊಡಗಿತು. ಆತ್ಮ ನಿರತರಾಗಿ ಕೈಸೇರದ ಚಪ್ಪಾಳೆಯ ನಾದ ಕೇಳುತ್ತಾ ತನ್ಮಯರಾದರು. ಪ್ರಕೃತಿಯಲ್ಲಿ ಎಲ್ಲೆಲ್ಲೂ ಕೇಳುವ ಸಪ್ಪಳ ನದಿಯಲ್ಲಿ, ಝರಿಯಲ್ಲಿ, ಜಲಪಾತದಲ್ಲಿ, ಗಿಡಮರದಲ್ಲಿ ಮಹಾವೃಕ್ಷಗಳಲ್ಲಿ, ಕೈ ಇರದ ಚಪ್ಪಾಳೆಯು ಮಹಾ ಮೌನದ ಆಂತರ್ಯದಲ್ಲಿ ಸ್ಪುಟಗೊಂಡಿತು.
ಇಬ್ಬರೂ, ಗುರುಗಳಲ್ಲಿಗೆ ಬಂದು ತನಗಾದ ಒಂದೇ ಅನುಭವವನ್ನು ತಿಳಿಸಿದರು. ಮಹಾ ಮೌನದಲ್ಲಿ ನೀವು ಒಂದು ಕೈ ಚಪ್ಪಾಳೆಯ ಕೇಳಲು ಸಾಧ್ಯವಿರುವಾಗ, ಅದೇ ಮೌನದಲ್ಲಿ ಎರಡು ಕೈ ಇಲ್ಲದ ಚಪ್ಪಾಳೆಯನ್ನು ಕೇಳಿದರೆ ಅಚ್ಚರಿ ಏನು? ಝೆನ್ ಅಧ್ಯಯನ ನಿಮಗೆ ಇತ್ತ ವರವಲ್ಲವೇ ಇದು” ಎಂದರು ಗುರುಗಳು.
*****

















