Home / ಲೇಖನ / ಪತ್ರ / ಪೂರ‍್ಣಿಮ – ೧

ಪೂರ‍್ಣಿಮ – ೧

ಪ್ರಿಯೆ ಪೂರ‍್ಣಿಮಾ,

ಇಂದು ಮನೆಗೆ ಬಂದಾಗ ೨-೩೦. ಮಧ್ಯರಾತ್ರಿ ಮೀರಿತ್ತು. ಮನೆಯ ದಾರಿಯಲ್ಲಿ ಮಲಗಿದ್ದ ನಾಯಿಗಳು ಬೊಗುಳಿ ನನ್ನ ಸ್ಥಿತಿಯನ್ನು ತೆಗಳುತ್ತಿದ್ದವು. ಮನೆಯ ಮೌನ, ಅದರ ಕಳಾ ಶೂನ್ಯತೆ ಇವು ನನ್ನನ್ನು ಬೆನ್ನು ಹಿಡಿದು ಹಿಂದಕ್ಕೆ ನೂಕುತ್ತಿದ್ದವು. ನಾನು ಅವುಗಳನ್ನು ನೂಕಿಕೊಂಡು ಮನೆಯನ್ನು ಹೊಕ್ಕೆನು.

ಬಂದವನೇ ಹಾಸಿಗೆಯನ್ನು ಆಶ್ರಯಿಸಿದೆನು. ಅದಾದರೂ ಕರುಣೆಯನ್ನು ತೋರುವುದೆಂದು ಆಶಿಸಿದೆನು, ಇಲ್ಲ-ಅದೂ ನಿರ್ದಯವಾಗಿತ್ತು. ನಿದ್ರೆಕೊಡಲಿಲ್ಲ. ನಾಲ್ಕು ಬಡೆಯಲು ಹತ್ತು ನಿಮಿಷಗಳಾದರೂ ಕಣ್ಣನ್ನು ಭದ್ರವಾಗಿ ಮುಚ್ಚಿಕೊಂಡರೂ ಮಪ್ಪುರವೂ ಬರಲಿಲ್ಲ.

ಇಂದು ಒಂದು ರಾತ್ರಿಯೇಕೆ ಪ್ರತಿ ರಾತ್ರಿಯೂ ಇಂತೆಯೇ ಆಗುತ್ತಿದೆ. ನಿನ್ನನ್ನು ನನ್ನ ಮನಸ್ಸಿನ ವಿರುದ್ಧವಾಗಿ ಅನಿವಾರ್ಯವಾಗಿ ಎಳೆದುಕೊಂಡು ಹೋಗಿ ಅಲ್ಲಿಗೆ ಬಿಟ್ಟು ಇಲ್ಲಿಗೆ ಬಂದಾಗಿನಿಂದಲೂ ಇದೇ ಪ್ರಾಯಶ್ಚಿತ್ತ. ಮುಂಜಾನೆ ೧೦ ಘಂಟೆಗೆ ಮನೆಯನ್ನು ಬಿಟ್ಟರೆ ಪುನಃ ಮನೆಗೆ ಬರುವುದು ರಾತ್ರಿ ಎರಡು ಘಂಟೆಗೆ. ನೀನಿಲ್ಲದ ಮನೆ; ಮಕ್ಕಳಿಲ್ಲದ ಮನೆ ನಿಜವಾಗಿ ನಾನು ಈ ಮನೆಗೆ ಇಟ್ಟ ಹೆಸರಿನಂತೆ “ಬೇವಿನ ಮನೆ” (Neem cottage) ಯಾಗಿಯೇ ಇದೆ.

ಎಲ್ಲಕ್ಕಿಂತ ಇಂದಿನ ರಾತ್ರಿ ತೀರ ಹಗಲಾಗಿ ಬಿಟ್ಟಿತು. ಮಲಗುವುದು ಬೇಡವಾಯಿತು. ಎದ್ದು ಕುಳಿತೆನು, ದಿಂಬನ್ನು ಒರಗಿಕೊಂಡೆ. ಒಮ್ಮೆಲೇ ನನ್ನ ನೆನಪಿನ ತೆರೆಯು ತೆರೆಯಿತು. ಮಂಚದಿಂದ ಇಳಿದು ಬಂದು- ನೆನಪಿನ ಒತ್ತಡದಲ್ಲಿ ಲೇಖನಿಯನ್ನು ಹಿಡಿದು ಕುಳಿತಿರುವೆನು.

ಏನನ್ನು ಬರಸುವುದೋ ಬರೆಸಲಿ ಎಂದು ತೆರೆದ ಹೃದಯದಿಂದ ಉಕ್ಕಿ ಬಂದ ಭಾವನೆಗಳ ಬಡಿತದಿಂದ ಸಿದ್ಧನಾಗಿರುವೆನು.

ಪೂರ‍್ಣೀ, ನನ್ನ ಜೀವನವನ್ನು ಪ್ರಯೋಗ ಶಾಲೆಯೆಂಬ ಒಳ್ಳೆಯ ಹೆಸರಿನಿಂದ ಕರೆದುಕೊಳ್ಳುವುದಕ್ಕಿಂತ, ಪ್ರಾಯಶ್ಚಿತ್ತದ ಮಂಟಪವೆಂದು ಕರೆದುಕೊಳ್ಳುವುದು ಸರಿಯಾದೀತು. ಬಾಲ್ಯ, ಯೌವನ, ವೃದ್ಧಾಪ್ಯ, ಬಡತನ, ಸಿರಿತನ, ಸೊಬಗು, ಬೆಡಗು, ಇವೆಲ್ಲವನ್ನೂ ನಲವತ್ತು ವರುಷ ತುಂಬುವುದರಲ್ಲೇ ನುಂಗಿ ನೀರು ಕುಡಿದಿರುವ ನನಗೆ, ಜೀವನ ಬೇಸರವಾಗಿ, ಮರಣವು ಆಪ್ಯಾಯನವಾಗಿದ್ದರೆ ಆಶ್ಚರ್ಯವೇಕೆ? ನೀನು ನಮಗಾಗಿ ಬದುಕಿರಿ ಎಂದೇನೋ ಹೇಳುತ್ತಿರುವಿ ನಿಜ, ನಿನಗಾಗಿ ನಾನು ನನಗಾಗಿ ನೀನು, ನಾನು ಮತ್ತು ನೀನೂ, ಇಬ್ಬರೂ ಮಕ್ಕಳಿಗಾಗಿ ಬದುಕುವುದು ಬದುಕಬೇಕಾದುದು ಸಹಜವೇ ಆದರೂ ನನಗೇಕೆ ಜೀವಿಸಿರ ಬೇಕೆಂಬ ಬಯಕೆಯೇ ಹುಟ್ಟುತ್ತಿಲ್ಲವಲ್ಲ? ಕಷ್ಟಗಳಿಗೆ ಹೆದರುವ ಹೇಡಿತನ ವಿಲ್ಲದಿದ್ದರೂ, ಶಿಕ್ಷೆಗಳಿಗೆ ಬೆದರದ ಎದೆತನವಿದ್ದರೂ, ಈ ಲೋಕವನ್ನು ಕಂಡರೆ ಇಷ್ಟೊಂದು ವ್ಯಾಕುಲವೇಕೆ?

ನನ್ನನ್ನು ಆಡಿಸುವ ವಿಧಿ, ಬರಿಯ ಬಡತನವನ್ನು ಕೊಟ್ಟರೆ ಬೇಡವೆನ್ನುವರಾರು? ಅದರ ಜೊತೆಗೆ ಅಗಲಿಕೆಯನ್ನೂ ಜೋಡಿಸುವನೇಕೆ ? ಹೀಗೆಂದ ಕೂಡಲೇ ಕಾಮ ಜೀವನದ – ಕಾತುರವೆಂದರ್ಥ ಮಾಡುವರು ಮಾಡಿಕೊಳ್ಳಲಿ. ಅವರಿಗೇನು ಗೊತ್ತು, ಪ್ರೇಮದ ಗಾಳಿಯು ತಿಳಿ ಹೃದಯಗಳಲ್ಲಿ ನೀಡುವ ತಂಗಾಳಿಯ ಸೊಗಸು!

ಮದುವೆಯಾಗಿ ಇಂದಿಗೆ ೧೫ ವರುಷಗಳು ಕಳೆದವು. ನೀನು ನಾಲ್ಕು ಮಕ್ಕಳ ತಾಯಿ, ಅಂದಮೇಲೆ ನಾನೂ ನಾಲ್ಕು ಮಕ್ಕಳಿಗೆ ತಂದೆಯಾದೆನಲ್ಲವೆ? ಅನುಭವಿಸಿದ ಕಷ್ಟ ನಿಷ್ಟುರಗಳ ನೆನಪು ಬಂದರೆ ಭಯವಾಗುವುದಿಲ್ಲ. ಬಡತನದ ಭೂತವು ನಾಲ್ಕು ಕೋರೆಗಳನ್ನು ಕಟ್ಟಿಕೊಂಡು ಬಂದರೂ ಅದನ್ನು ದಿಟ್ಟಿಸಿ ನೋಡುವ ದಿಟ್ಟತನವಿದೆ. ಆದರೆ ಬಲವಂತವಾಗಿ, ಇರಬೇಕಾದ ಈ ಅಗಲಿಕೆಯು ನನಗೆ ಶೂಲಕ್ಕೇರಿಸಿದಂತಾಗಿದೆ.

ಜೊತೆಯಲ್ಲಿ ಜೀವಿಸಿರಬೇಕಾದರೆ ಇದೋ ಗುಟುಕುಗಂಜಿ! ಅಗಲಿರ ಬೇಕಾದರೆ, ಹಿಡಿ, ಹಿಡಿಯನ್ನವನ್ನು ಎಂದು ವಿಧಿ ನನ್ನೊಂದಿಗೆ ಚಕ್ಕಂದವಾಡುತ್ತಿರುವನು. ಯಾವುದನ್ನು ಸ್ವೀಕರಿಸಲಿ ಪೂರ‍್ಣಿಮಾ? ಈ ಆಯ್ಕೆಯಲ್ಲಿ ನಿನ್ನದೂ ಪಾತ್ರವಿದೆ. ನಿನಗಾವುದು ಬೇಕೆಂಬುದನ್ನು ತಿಳಿದು ಮಕ್ಕಳೂ ಅರೆಹೊಟ್ಟೆ ಇರಬಲ್ಲಿರೋ, ಅಥವಾ ನನ್ನಿಂದ ದೂರವಿದ್ದು ಹೊಟ್ಟೆ ತುಂಬಿಸಿಕೊಳ್ಳುವಿರೋ. ಗೊತ್ತಿದೆ ಪೂರ‍್ಣಿಮಾ, ನಿನ್ನ ಹೃದಯವೂ ನನಗೆ ಗೊತ್ತಿದೆ. ನಿನ್ನ ಬಯಕೆಯೂ ತಿಳಿದಿದೆ; ನಿನಗೆ ನಾನು ಬೇಕು, ಮತ್ತು ಹೊಟ್ಟೆ ತುಂಬುವಷ್ಟು ಅನ್ನ ಮೈದುಂಬುವಷ್ಟು ಅರಿವೆ ಬೇಕು. ಪಾಪ, ಇದೇನು ನೀನು ಬೇಡಬಾರದ ಆಸೆಯೆ? ಇರಬಾರದ ಇಚ್ಛೆಯೇ? ಆದರೆ ನನ್ನ ವಿಧಿಯ ಇಚ್ಛೆಯೇ ಬೇರೆಯಾಗಿರುವಾಗ, ಅವನಿಗೆದುರು ಗೊಣಗುಟ್ಟಲು ನಾವೆಷ್ಟರವರು.

ನನ್ನ ಎದೆಯೊಡತಿ, ನಾನು ನಿಶ್ಚಯಿಸಿರುವೆನು ಎಲ್ಲವನ್ನೂ ಮರೆತು ಎಲ್ಲರನ್ನೂ ಬಿಟ್ಟು ಬರಿಯ ದುಡಿತವನ್ನೇ ಶರಣು ಹೋಗಬೇಕೆಂದು. ದುಡಿತದಲ್ಲಿ ಬಳಲಿಕೆ ಕಂಡರೂ, ಬವಣೆಯ ಭಯವು ಕಾಣುತ್ತಿಲ್ಲ. ನಾಳೆ ನನ್ನ ಮಕ್ಕಳಿಗೆ ಏನು ಗತಿ ಈ ದುರ್ಭಿಕ್ಷದಲ್ಲಿ ಎಂಬ ಕಳವಳವನ್ನು ನನ್ನಿಂದ ದೂರಾಗಿಸುವ ಈ ನನ್ನ ಕೆಲಸವೇ ನನಗೆ ಬೆಳದಿಂಗಳ ಜೊತೆಗಾತಿ. ಮಲಗುವಾಗ ಏಳುವಾಗ ಸಣ್ಣ ದನಿಯಲ್ಲಿ ಕಣ್ಣು ಕುಣಿಸುತ್ತ ಇನ್ನು ಮಲಗಿರಿ, ಇನ್ನು ಏಳಿ, ಎಂದು ವೈಯಾರದಿಂದ ಸಂಧ್ಯಾರಾಗ, ಉದಯರಾಗಗಳನ್ನು ಹಾಡುವ ನನ್ನ ಎಡಬಲದ ವೈಯ್ಯಾರಿ ಈ ನನ್ನ ಹಗಲು ರಾತ್ರಿಯ ಕೆಲಸವೇ ಆಗಿದೆ.

ನನ್ನ ಕೆಲಸ, ನನ್ನ ದುಡಿತ, ನನ್ನ ಕಸುಬು ಇವು ನಿನಗೆ ಸವತಿ ತಿಳಿಯಿತೆ? ಸರಿಯಾದ ಹೋಲಿಕೆಯನ್ನು ಕೊಟ್ಟಂತಾಯಿತಲ್ಲವೆ ಲೋಕದವರ ಕಡೆಗೆ ಕೈ ತೋರಿಸಬೇಡ. ಅವರಂತೆ ಪಾಪ-ತಾಪಗಳಿಗೆ ಪುರೋಹಿತರಿಗೆ ದಕ್ಷಿಣೆ ಕೊಟ್ಟು ಅವರಿಂದ ಪುಣ್ಯಾರ್ಚನೆ ಮಾಡಿಸಿ ಪರಿಶುದ್ಧಿಗೊಳಿಸುವ ಶಕ್ತಿ ಅಥವಾ ಯುಕ್ತಿ ನನ್ನಲ್ಲಿ ಇಲ್ಲ. ದಕ್ಷಿಣೆಯ ಬಲವೂ ಇಲ್ಲ! ಪುರೋಹಿತರ ಒಲವೂ ಇಲ್ಲ. ನನಗಿರುವುದು ನಿನ್ನ ಮತ್ತು ನಿನ್ನ ಸವತಿಯ ಒಲವು. ಕೂಡಲೇ ಉತ್ತರ ಬರೆಯುವೆಯಲ್ಲವೆ.

ಹೂಬಳ್ಳಿ ಇತಿ ನಿನ್ನ ಚೆನ್ನ,
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...