Home / ಕವನ / ಕವಿತೆ / ಕೆಮ್ಮಣ್ಣುಗುಂಡಿಯಲ್ಲಿ

ಕೆಮ್ಮಣ್ಣುಗುಂಡಿಯಲ್ಲಿ

ಎಲ್ಲಿ ನೋಡಲಲ್ಲಿ ಕಣ್ಣು
ಕಾಣುತಿಹೆದು ಕೆಮ್ಮಣ್ಣು!
ಸುತ್ತ ಮುತ್ತ ನೋಡು ಮಿತ್ರ
ಪ್ರಕೃತಿಯಾ ಕೃತಿ ವಿಚಿತ್ರ!

ತನ್ನ ರೂಪ ತಾನೆ ನೋಡಿ
ಮೆಚ್ಚಿ ಮೋದದಿಂದ ಹಾಡಿ
ಸುರಿಸುತಿಹಳೊ ಪ್ರಕೃತಿಮಾತೆ
ಕಣ್ಣನೀರನೆಂಬೊಲೊರತೆ-
ಯೊಂದು ನೋಡು ಬೀಳುತಿಹುದು!
ನೊರೆಯ ನಗೆಯು ಏಳುತಿಹುದು!
ಇದೋ! ನುಣುಪುಕಲ್ಲ ನಲ್ಲ
ಮುತ್ತನಿಡಲು ನಿಲಲು ಗಲ್ಲ
ತಿರುಗಿಸಿದೊಲು, ಕೊಂಚ ಬಳುಕಿ,
ಅದರ ಆಸೆ ಮುರಿಯಲಳುಕಿ
ಮತ್ತೆ ಬಂಡೆಯನೇ ತಬ್ಬಿ-
ತೆನ್ನೆ ಬಳಸಿರುವುದು ಉಬ್ಬಿ!
ಇದರ ಗಾನವೆಷ್ಟು ಇಂಪು!
ಹಾ! ಕೊರೆವುದಿದರ ತಂಪು!
“ಆ ಮಂಜುಗಡ್ಡೆಯು
ಬಿಸಿಯು” ಎಂಬಸಡ್ಜೆಯು!

ಕೆಳಗೆ ಕಮರಿಯಾಳದಲ್ಲಿ-
ಅಲ್ಲ-ಪಾತಾಳದಲ್ಲಿ
ಕೊಂಚ ನೋಡು!
ಬಗ್ಗಿ ನೋಡು!
ಪ್ರಕೃತಿಯೆಂತು ವಿವಿಧ ವರ್ಣ
ಮೇಳದಿಂದರೊಂದವರ್ಣ-
ನೀಯಮಾದ ಚಿತ್ರವನ್ನು
ರಚಿಸುತಿಹಳು! ರಾಸಿ ಹೊನ್ನು
ಸುರಿದರೂ ಇಂಥ ಚಿತ್ರ
ದೊರೆವುದೇನು ನೋಡು ಮಿತ್ರ!
ಅದೋ! ಅಲ್ಲಿ ದೂರದಲ್ಲಿ
ಭೂಮಿ ಬಾನು ಸೇರುವಲ್ಲಿ
ಹೊಂಬಿಸಿಲಿಗೆ ಮಂಜಕೂಡಿ
ಪ್ರಕೃತಿಯೊಡನೆ ಸ್ಪರ್ಧೆ ಹೂಡಿ
ಸಪ್ತವರ್ಣಧನುವನೆಂತು
ಧರಿಸುತಿರುವನಹಾ ಕಂತು!

ಇತ್ತ ಕೆಳಗೆ ನಮ್ಮ ಎದುರು
ರಾಸಿ ಕೆಂಪು ಬಣ್ಣದದಿರು
ಕಾಣುತಿಹುದು ಚುಕ್ಕಿಯಂತೆ
ಸುತ್ತಲಿರಲು ಹಸಿರ ಸಂತೆ!
“ಚೆಲುವೆ ವಸುಂಧರೆಯ ನೆತ್ತಿ-
ಯೊಳಗಿಹುದೋ ಒಂದು ಮತ್ತಿ
ಪಚ್ಚೆಹಸಿರ ಸೀರೆಯುಟ್ಟ
ತಿರೆಯ ಹೆಣ್ಣ ಮೂಗಬೊಟ್ಟ-
ನಾಳಿ ಮೆರೆಯುತಿರುವ ಕೆಂಪೊ
ಕುಂಕುಮದ ಬೊಟ್ಟ ಕೆಂಪೊ”
ಎಂದು ಮನವು ಭ್ರಮಿಪುದು
ಪ್ರಕೃತಿಗಿಂತು ನಮಿಪುದು!

ಅದಂತಿರಲಿ ಇತ್ತ ಬಂದು
ಕಾಲನೆಂತೊ ಕಿತ್ತು ತಂದು
ಸೊಬಗ ಮಡಿಲನೆಂತೊ ಬಿಟ್ಟು
ಮೌನವನ್ನು ಬೀಳ್ಕೊಟ್ಟು
ಯಂತ್ರ ಜಗದಿ ಮನವಿಡು
ಮೂಗ ಮೇಲೆ ಬೆರಳಿಡು!

ಸಮುದ್ರದೊಳೆ ಮರೆಯಾಗುವ ಹಡಗೊಲು
ಬೆಳಗೊಳು ಕ್ಷೀಣಿಪ ನಕ್ಷತ್ರದವವೊಲು
ರೈಲ ಹಿಂದಿರುವ ಕೆಂಬೆಳಕಿರುಳೊಳು
ಮೆಲುಮೆಲ್ಲನೆಯೇ ನಶಿಸುವ ತೆರದೊಳು
ಬಾನಿಗಳೆಲ್ಲಾ ತೆರಳಿದವು
ಅದಿರನು ಸುರಿಯುತ ಮರಳಿದವು!
ಸೋಲುವೆ ಬಾಯೊಳೆ ಬಣ್ಣಿಸಲೆಳಸಿ!
ಏನುಪಯೋಗವು ಉಹಪಮೆಯ ಬೆಳಸಿ?

ಇತ್ತ ಬುವಿಯ ಬಸಿರ ಬಗೆಯೆ
ಚೆಲುವನೆಲ್ಲ ಕಿತ್ತೊಗೆಯೆ
ರಕ್ತ ಬಸಿಯುತಿರುವುದು
ಎನ್ನೆ ಕುಸಿಯುತಿರುವುದು
ಕೆಮ್ಮಣ್ಣು ರಾಸಿಯಾಗಿ
ಕಣ್ಣಿರಲು ರೋಸಿಹೋಗಿ

ಅಯ್ಯೊ! ನಾನೆಂಥ ಮರುಳ
ಆ ತೊರೆಯ ಹಾಡ ತಿರುಳ
ಕೊಂಚವೂ ತಿಳಿಯದೆ
ಪ್ರಕೃತಿ ಸುರಿವ ದುಃಖ ಬಾಷ್ಪ-
ವನ್ನೆ ಆನಂದ ಬಾಷ್ಪ-
ವೆಂದು ಏನು ತಿಳಿಯದೆ,
ಇದರ ತಂಪು
ಸಾವ ತಂಪು
ಎಂಬುದನ್ನೆ ತಿಳಿಯದೆ
ಏನೇನೊ ಗಳಹಿದೆ!

ಇಂತು ಮನವು ವಿವಿಧ ಭಾವ-
ಗಳಿಗೆ ಇಂಬನೀಯುತಿರೆ
ಬೆಟ್ಟವಿಳಿಯುತಿದ್ದೆ ವಾವು
ರೈಲೆಮಗೇ ಕಾಯುತಿರೆ!
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...