ಬೇಬಿ

ಬೇಬಿ ವಸಂತನ ಸುದ್ದಿಯಲ್ಲದೆ ಇನ್ನಾರ ಸುದ್ದಿಯನ್ನೂ ಬರೆಯಬೇಡ ಎಂದು ಹೇಳಿದ್ದೀಯಾ. ಅವನ ವಿಷಯವನ್ನೇ ಬರೆಯುತ್ತೇನೆ.

ಬೇಬಿ ನಿಲ್ಲುತ್ತಾನೆ; ಬೇಬಿ ಕೂತುಕೊಳ್ಳುತ್ತಾನೆ; ಬೇಬಿ ಮಲಗುತ್ತಾನೆ. ಬೇಬಿ ನಗುತ್ತಾನೆ; ಬೇಬಿ ಅಳುತ್ತಾನೆ ಬೇಬಿ ನಿದ್ರೆ ಮಾಡುತ್ತಾನೆ; ಬೇಬಿ ನಿದ್ರೆ ಮಾಡುವದಿಲ್ಲ. ಬೇಬಿಗೆ ನಾಲ್ಕು ಹಲ್ಲುಗಳಿವೆ; ನಾಲ್ಕೇ ಹಲ್ಲುಗಳಾದರೂ ದಿನಕ್ಕೆ ಆರು ಗ್ಲೆಕ್ಸೋ ಬಿಸ್ಕತ್ತುಗಳನ್ನು ತಿನ್ನುತ್ತಾನೆ; ಅದು ಸಾಲದೆಂತ ಅಳುತ್ತಾನೆ. ಬೇಬಿ ಹಿಡಿಯದೇ ನಿಲ್ಲುತ್ತಾನೆ. ನಾನು ಬರೆಯುತ್ತಾ ಕೂತರೆ ನನ್ನ ಬೆನ್ನ ಮೇಲೆ ಹತ್ತುತ್ತಾನೆ. ನನ್ನ ಕಿವಿಗಳನ್ನು ಕಚ್ಚುತ್ತಾನೆ; ನನ್ನ ಕಿವಿಗಳನ್ನು ಕಚ್ಚಿ ಗಾಯಮಾಡಿದ್ದಾನೆ. ಭಾರತಿಯ ಜಡೆಯನ್ನು ಹಿಡಿದು ಎಳೆಯುತ್ತಾನೆ. ಊಟ ಮಾಡುವಾಗ ಎಲೆಯನ್ನು ಹಿಡಿಯಲು ಬರುತ್ತಾನೆ. ಬೆಂಕಿಯನ್ನು ಎಳೆಯಲು ಪ್ರಯತ್ನ ಮಾಡುತ್ತಾನೆ. ನನ್ನನ್ನು ಕೇಳದೆಯೇ ಅಂಗಳಕ್ಕೆ ಓಡಿ ಹೋಗುತ್ತಾನೆ. ಬಟ್ಟೆಯನ್ನು ಕೊಳೆ ಮಾಡಿಕೊಳ್ಳುತ್ತಾನೆ. ಹೆದರಿಸಿದರೆ ನಗುತ್ತಾ ಮೈಮೇಲೆ ಹತ್ತುತ್ತಾನೆ. ಬಿಳಿ ಬಟ್ಟೆಯವರನ್ನು ಕಂಡರೆ, ನೀನೆಂತ ಅವರ ಹತ್ತಿರ ಓಡುತ್ತಾನೆ. ನಾನೆರಡು ಡೆಹಿಲಿಯಾ ಗಿಡಗಳನ್ನು ಬೆಳೆಸಿಕೊಂಡಿದ್ದೇನೆ; ಅವುಗಳನ್ನು ಹೋಗಿ ಕೀಳುತ್ತಾನೆ.

ಮೇಜಿನ ಮೇಲೆ ಒಂದು ಪಾತ್ರೆಯಲ್ಲಿ ಹೂವಿಟ್ಟಿದ್ದೆ. ಮೇಜಿನ ಬಟ್ಟೆಯನ್ನು ಬೇಬಿ ಎಳೆದ. ಹೂವಿನ ಸಮೇತ ಪಾತ್ರೆ ಕೆಳಗೆ ಬಿತ್ತು. ನೆಲವೆಲ್ಲಾ ಗಾಜಿನ ಚೂರು, ಅವುಗಳ ಮಧ್ಯೆ ಅಲ್ಲೊಂದು ಇಲ್ಲೊಂದು ಹೂವು, ಬಿದ್ದ ಹೂಗಳನ್ನು ತೆಗೆದು ತಿನ್ನಲು ಸುರುಮಾಡಿದ. ಆಫೀಸಿಗೆ ಹೋಗಿ ಮೇಜಿನಡಿಯಲ್ಲಿ ಕೂತುಕೊಳ್ಳುತ್ತಾನೆ; ಕೆಳಗೇನಾದರೂ ಇದ್ದರೆ ಅದನ್ನು ಹರಿದುಹಾಕುತ್ತಾನೆ; ಸೇಫಿನ ಬಾಗಿಲನ್ನು ಹಿಡಿದು ತೆಗೆಯಲು ಪ್ರಯತ್ನಿಸುತ್ತಾನೆ. ಸೀತಾ ರಾಮನ ಪಂಚೆಯನ್ನು ಹಿಂದುಗಡೆಯಿಂದ ಹೋಗಿ ಎಳೆಯುತ್ತಾನೆ. ನನಗೆ ಹೇಳದೆಯೆ ಮೀನಾಕ್ಷಿಯ ಜೊತೆಯಲ್ಲಿ ಅವಳ ಮನೆಗೆ ಹೋಗಿಬಿಡುತ್ತಾನೆ.

ಮೀಯಿಸುವಾಗ ಎದ್ದು ಕೂತುಕೊಂಡು ಚೊಂಬನ್ನು ಕಿತ್ತುಕೊಳ್ಳುತ್ತಾನೆ. ಸಾಬೂನನ್ನು ಬಾಯಲ್ಲಿಟ್ಟುಕೊಳ್ಳುತ್ತಾನೆ. ಮೈಯನ್ನು ಉಜ್ಜಲು ಬಿಡುವದಿಲ್ಲ; ಬಲಾತ್ಕಾರದಿಂದ ಉಜ್ಜಿದರೆ ಬಹಳ ಅಳುತ್ತಾನೆ. ವಿಶ್ವನಾಥನು ಓದುತ್ತಿದ್ದರೆ ಅವನ ಪುಸ್ತಕ ಕಿತ್ತುಕೊಂಡು ಹರಿಯುತ್ತಾನೆ. ನಾನು ಪಾತ್ರೆಯಲ್ಲಿ ನೀರಿಟ್ಟುಕೊಂಡಿದ್ದರೆ ಅದನ್ನು ಚೆಲ್ಲುತ್ತಾನೆ.

ಬೇಬಿ ಸುದ್ದಿ ಬರೆಯುವದಾದರೆ ಒಂದು ಪುಸ್ತಕ ತುಂಬಾ ಬರೆದರೂ ಮುಗಿಯುವದಿಲ್ಲ. ಇನ್ನೊಂದು ಸಾರಿ ಬರೆಯುತ್ತೇನೆ.

ನಿನ್ನ
ಗೌರಮ್ಮ
*****

Tagged:

Leave a Reply

Your email address will not be published. Required fields are marked *

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...