Home / ಕವನ / ಕವಿತೆ / ಇಲ್ಲಿಯ ನ್ಯಾಯ

ಇಲ್ಲಿಯ ನ್ಯಾಯ

ಸುಡು ಈ ಗಾಳಿವೇಗವನ್ನು, ಭೋಗವನ್ನು, ಚೆಲುವನ್ನು!
ಪಯಣವಿಲ್ಲದೆ ನರನು ಬಾಳಿದರೆ-ತಪ್ಪೇನಿತ್ತು?
ನಿರ್ಮಿಸಿಹನೀಗ ನರಕವನ್ನು ನರಪ್ರಾಣಿಗಳಿಗೆ,
ಒಬ್ಬನ ಸುಖಕಾಗಿ ಇನ್ನೊಬ್ಬರಿಗೆ ದುಃಖ:
ಒರ್ವನ ಸ್ವರ್ಗಕ್ಕಾಗಿ ಇನ್ನೊರ್ವನಿಗೆ ರವರವ ನರಕ!
ಇಂತಿದೆ ಇಲ್ಲಿಯ ನ್ಯಾಯ! ಇಂತಿದೆ ಇಲ್ಲಿಯ ಜೀವನ!
ಅನ್ಯಾಯವೆಂದು ಮುಗಿಯುವದು?
ವಿವೇಕವೆಂದು ಚಿಗಿಯುವದು?

ಬಿಳಿಯನಿಗಿದೆ ಮಂಜುಗಡ್ಡೆಯ ತಿನುವಾಸೆ;
ಅದಕೆ ನಂಜಿನಂಥ ಶೆಡ್ಡಿನಲ್ಲಿ ನಿಲ್ಲುವನು ಕರಿಯ.
ಬಿಳಿಯನಿಗೆ ಬೇಕು ಕೈಜೋಡಿಸಿದ ಸೇವೆ,-
ಆದಕೆ ಕರಿಯನಾದ ನಿತ್ಯಸೇವಕ!
ಇವ ಬಿಳಿಯ ಅವ ಕರಿಯ, ಇವ ಹಾರುವ ಅವ ಹೊಲೆಯ,
ಇವ ಸೇವ್ಯ ಅವ ಸೇವಕ, ಇವ ಗಾಣಿಗ ಅವ ಗಾಣ,-
ಅವ ತ್ರಾಣ-ಅವ ನಿತ್ರಾಣ!
ಇಂತಿದೆ ಇಲ್ಲಿಯ ನ್ಯಾಯ! ಇಂತಿದೆ ಇಲ್ಲಿಯ ಜೀವನ!
ಅನ್ಯಾಯವೆಂದು ಮುಗಿಯುವದು?
ವಿವೇಕವೆಂದು ಚಿಗಿಯುವದು?

ಮಾನವಜಾತಿಯನ್ನು ಮಣ್ಣುಮುಕ್ಕಿಸುವ ರೀತಿಯ ನೋಡಿರೆ!
ಪಶುವಿಗಿಂತ ಕಡೆ,-ಪಕ್ಷಿಗಿಂತ ಕೀಳು ಮಾನವನಿಲ್ಲಿ!
ತಲೆಗೆ ಎಣ್ಣೆಯಿಲ್ಲ, ಮೈಗೆ ಬಟ್ಟೆಯಿಲ್ಲ-
ಮೈಯಲ್ಲಿಯ ಎಣ್ಣೆ ಮುಗಿಯುವ ತನಕ-
ಕಣ್ಣೆದುರಿನ ಬಟ್ಟೆ ಕಾಣುವ ತನಕ-
ದುಡಿಯಬೇಕು ಮಡಿಯಬೇಕಿಲ್ಲಿ ಮಾನವನು!
ಅಡಿಯಾಳಾಗಿ ನಡೆಯಬೇಕು!
ಇಂತಿದೆ ಇಲ್ಲಿಯ ನ್ಯಾಯ! ಇಂತಿದೆ ಇಲ್ಲಿಯ ಜೀವನ!
ಅನ್ಯಾಯವೆಂದು ಮುಗಿಯುವದು?
ವಿವೇಕವೆಂದು ಚಿಗಿಯುವದು?

ದಾಸ್ಯದಲ್ಲಿ ಸಿಲುಕಿ ಗಾಸಿಗೊಂಡ ತಾಯ್ನಾಡೆ!
ಭಾರತದೇವಿ!
ಈ ಬವಣಿ ಮಾತ್ರ ಬರದಿರಲಿ ನಿನಗೆ.
ಪಾರತಂತ್ರ್ಯದಲ್ಲಿ ಬಿದ್ದು ಪಾರಗಾಣದಿರಬಹುದು,-
ಬಡತನ, -ಒಡಕುತನ,-ಎಲ್ಲ ಬರಬಹುದು.
ಆದರೆ ಈ ಮದೋನ್ಮತ್ತತೆಯ ಅಂಧತೆ ಬೇಡ!
ಒಡೆತನದ ನರಕ ಬೇಡ!
ಬಂಡಿವಾಳದ ಬಂಡು ಬೇಡ!
ಅದು ಪರಮ ದಾಸ್ಯ! ದುಃಸ್ಸಹ ನರಕ!
ಇಂತಿದೆ ಇಲ್ಲಿಯ ನ್ಯಾಯ! ಇಂತಿದೆ ಇಲ್ಲಿಯ ಜೀವನ!
ಅನ್ಯಾಯವೆಂದು ಮುಗಿಯುವದು?
ವಿವೇಕವೆಂದು ಚಿಗಿಯುವದು?
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...