Home / ಕವನ / ಕವಿತೆ / ತವರು ಮನೆ

ತವರು ಮನೆ

ಕಡಗವಿಲ್ಲದ ಕೈಯು, ದಿಡಗವಿಲ್ಲದ ಹೊಳೆಯು
ಹಡದವ್ವ ಇಲ್ಲದ ತವರಿ‌ಽಗೆ | ಹೋದಽರ
ನಡುದಾರ್ಯಾಗ ವಸ್ತಿ ಹೋದ್ಹಾಂಗ ||

ಮಳೆಯು ಬಂದರು ಬರಲಿ, ಮರದಽ ಮೇಲಿರುವೆ
ಮಳೆ ನಿಂತ್ರು ಮರದ ಹನಿ ಬಿಡದ | ಹಡದವ್ವ
ನೀಬಿಟ್ರ ನಿನ್ನ ಮನ ಬಿಡದ ||

ಕಾಸಿಗೆ ಹೋಗುದಕ, ಏಸುದಿನ ಬೇಕವ್ವ
ತಾಸ್ಹೊತ್ತಿನ ಹಾದಿ ತವರಿಽಗೆ | ಹೋದಽರ
ಕಾಸಿ ಅದಾಳ ಹಡದವ್ವ ||

ಹಡದವ್ವದಾಳೆಂದು, ಬಡಬಡ ಒಳಗ್ಹೋದೆ
ಒಳಗ ಹಡದವ್ನ ಸೊಸ್ತೆಽರ | ಸಪ್ಪಳಕ
ತುದಿಗಟ್ಟಿತಳಗ ತಿರುಗೇನ ||

ಬಡವರು ಬಗ್ಗರು, ಹೆಡಗಿ ಬುಟ್ಟಿಯವರು
ಹೋಗರಿ ನನ್ನ ತವರಿಗೆ | ಅಣ್ಣಯ್ಯ
ದರುಮದ ಹಗೆಯ ತಗೆದಾನ ||

ಹಾಲುಂಡ ತವರೀಗೆ, ಏನೆಂದು ಹಾಡಲೆ
ಹೊಳೆದಂಡೆಲಿರುವ ಕರಕೀಯ | ಕುಡಿಯಂಗ
ಹಬ್ಬಲೆ ಅವರ ರಸಬಳ್ಳಿ ||

ಒಳ್ಳಸುತ್ತಲಕ್ಕಿ, ಕಲ್ಲಸುತ್ತಲಿ ಜೋಳ
ನಾಲಗೆ ಸುತ್ತಲು ಸುಲಿಹಲ್ಲು | ತಾಯವ್ವ
ನಾರಿ ನಿನಸುತ್ತ ಸರುಬಳಗ |

ಅಕ್ಕಿ ಕಿಚಡಿ ಮಾಡಿ, ತುಪ್ಪ ಬೆಚ್ಚಗೆ ಮಾಡಿ
ಸುತ್ತೇಳು ನಿರಿಗೆ ಮರೆಮಾಡಿ | ಉಣಿಸುವ
ಹೆತ್ತವ್ವನಿಲ್ಲ ಮನೆಯಾಗ ||

ಉಂಡೇನ ಉಟ್ಟೇನೆ, ತಂದೆಯ ಪುಣ್ಯೇವ
ಉಂಡೀನೆ ತಾಯಿ ಮೊಲೆಹಾಲ | ಅದರ್ಹಂಗ
ಗಂಡ ಮಗನೇನ-ಗಳೆಯಾಕ ||

ಕಣ್ಣು ಕಾಣುವತನಕ, ಬೆನ್ನು ಬಾಗುವತನಕ
ತಾಯಿಯಿರಲಿ ನನಗ ತವರಿರಲಿ | ನನ್ನವ್ವ
ಅಣ್ಣಯ್ಯರಿರಲಿ ಕರಿಸಾಕ ||

ತಂಗಾಳಿ ನೆನದಽರ ತಂಗಳು ಬಿಸಿಯಾದೆ
ತಿಂಗಳದ ತಲೆಯು ಮಡಿನಾದೆ | ತಾಯವ್ವ
ಗಂಗಾದೇವಿಯ ನೆನೆದಾಗ ||

ಯಾರು ಇದ್ದರು ನನ್ನ, ತಾಯವ್ನ ಹೋಲಾರ
ಸಾವಿರದಕೊಳ್ಳಿ ಒಲಿಮುಂದ | ಇದ್ದರ
ದೀವಿಽಗೆ ನಿನ್ನ ಹೋಲಾವ ||

ತಾಯಗಲಿ ಬಂದೀನಿ, ತಾಳಲಾರೆನು ಬಿಸಲ
ಬೇಗ ಹಾಸಣ್ಣ ಹರಗೋಲ | ಗಂಗವ್ವ
ನಿನ್ನಂಥ ತಾಯಿ ಅಗಲೇನ ||

ಊರ ಮುಂದಣ ಗಾಳಿ, ಏನಂತ ಬೀಸ್ಯಾವ
ಆಲೀಸಿ ಕೇಳ ಹಡದವ್ವ | ನಿನ ಮಗ
ಹಾಡ್ಯಾಡಿ ಹಂತಿ ಹೊಡದಾನ ||

ಲಿಂಬಿಹಣ್ಣಿನ್ಹಾಂಗ, ತುಂಬೇತಿ ನನ ಬಳಗ
ಹಂಗೂಸಿ ರಾಯ ಬೈಬ್ಯಾಡ | ತವರೂರ
ಹಿಂಡಿನನ್ನಾಕಿ ಅಗಲೇನ ||

ನೀರ್ಹೊಳಿ ದಾರ್ಯಾಗ, ತಾಯವ್ನ ಕಂಡೀರೆ
ಯಾರಂತಾಕಿ ನನ್ನ ಹಡದವ್ವ | ಮೂಗುತಿ
ಹರಳಿನಂತ್ಹಾಕಿ ತಾಯವ್ವ ||

ಹುಗ್ಗಿ ಹೂರಣಗಡುಬು, ಮಗ್ಗಿ ತಾಳಲಗಾಯಿ
ಒಗ್ಗರಣಿ ಸೋರಿ ಹದಿನಾರು | ಹಡದವ್ನ
ಒಡ್ಡೀನ ಹೊಲದ ಚೆರಗಾವ ||

ಬಂಡಿ ಬಂಡೀಯವರು, ಬಂಡಿಸಾಗರದವರು
ಹಿಂಡೆತ್ತಿನವರು ತವರವರು | ಬರುವಾಗ
ಒಂದೆತ್ತಿನಣ್ಣ ಬದಿಗಾಗೊ ||

ಅಣ್ಣನ ಆರೆತ್ತು, ತಮ್ಮನ ಮೂರೆತ್ತು
ನಮ್ಮಪ್ಪನೆತ್ತು ಹದಿನಾರು | ಬರುವಾಗ
ನನ್ನೂರ ಭೂಮಿ ನಡುಗ್ಯಾವ ||

ತಂದೆ ನನ್ಹಡದವ್ವ, ಒಂದು ಬಳುವಲಿ ಕಳಿಸು
ಅಂಗಳ ತುಂಬ ಎಳೆಗಽರ | ತವರೂರ
ಜಂಗೂಳಿ ಬಂದ್ರ ಕರೆಯಾಕ ||

ತಾಯಿ ಕಟ್ಟಿದ ಬುತ್ತಿ, ತರತರಕ ಯಾಲಕ್ಕಿ
ತಾಯಿ ನನ್ನವ್ವ ಗರತಿಽಯ | ಕಟ್ಟೀದ
ಬುತ್ತಿ ಬಿಚ್ಚೇನ ಹೊಳಿಯಾಗ ||

ದಾಸ್ಯಾಳ ಹೂವೀಲೆ, ನೇಸ್ಯಾಳ ಕುಂಚೀಗಿ
ದೇಶಕ ಹಡದವ್ವ ಕಳುಹ್ಯಾಳ | ನನ್ನೂರ
ದೇಸಾಯಿ ಕಂಡು ಬೆರಗಾದ ||

ಬೇದಂತ ಬೇಗಳ, ಬೆನ್ಹತ್ತಿ ಬಾರಽವ
ಕೋದಂತ ಕುಸುಬಿ ಚಿಗಿಯಽವ | ಹಡದವ್ನ
ಬೇದವರ ವಂಶ ಹುರಿಯಽಲೆ ||

ಲಿಂಬಿಯ ಗಿಡ ಹುಟ್ಟಿ, ಲಿಂಗಕ ನೆರಳಾಗಿ
ನೆಂಬಿಗಿ ಬಕುತ ನನ ತಮ್ಮ | ಮನಿಯಾಗ
ಜಂಗಮರುಣ್ಣುದು ಕಡೆಯಿಲ್ಲ ||
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...