Home / ಕಥೆ / ಕಿರು ಕಥೆ / ಮೀನದ ಪರಿಮಳ

ಮೀನದ ಪರಿಮಳ

(ಕೇಳಿದ ಕತೆ)

ಮೀನ ಮಾರಿ ಮರುಳುವಾಗ ಕತ್ತಲಾಯಿತು. ಪರಿಚಿತರಾದ ಯೆಂಕಟ ಆಚಾರ್ರ ಮನೆಯ ಅಂಗಳದಲ್ಲೇ ‘ಹಮ್ಕೊಂಡು’ ‘ಹೊತ್ತಾರೆ’ ಹೋದರಾಯಿತೆಂದು ಅವರು ನಿಶ್ಚಯಿಸಿದರು.

ಆಚಾರಿಯ ಮನೆಯಲ್ಲಿ ಅಂದು ಸತ್ಯನಾರಾಯಣವಾಗಿತ್ತು. ಬಾಗಿಲಿಗೆ ಬಂದ ಅಂಬಿಗಿತಿಯರಿಗೆ ಅಂಗಳದ ತುದಿಗೆ ಮಲಗಲು ಜಾಗ ಕೊಡದಷ್ಟು ಕೆಟ್ಟವನಲ್ಲ ಆಚಾರಿ. “ಓಹೋ ಆಚಾರ್ರ ಮನೇಲಿಯೇನೋ ಇಶೇಷ ಅಂತ್ಕಾಣ್ತೀದು!” ಎಂದು ಅಂಬಿಗಿತಿಯರು ಹೇಳಿದ ಮೇಲೆ ಅವರಿಗೆ ಒಂದು ಚೂರು ಅದು ಇದು ಕೊಡದೆ ಇರಲೂ ಅವನಿಂದಾಗಲಿಲ್ಲ.

ದಣಿದುಬಂದ ಅಂಬಿಗಿತಿಯರು ಅಂಗಳದ ತುದಿಗೆ ಗೊರೆಯಹತ್ತಿದರು. ಸತ್ಯನಾರಾಯಣವಾದ್ದರಿಂದ ಹೂವು ಕಪ್ಪುರ ಊದುಬತ್ತಿಗಳ ನರುಗಂಪು ಆಚಾರಿಯ ಮನೆಯೊಳಗೂ ಆ ವಠಾರದಲ್ಲೂ ತುಂಬಿಕೊಂಡಿತ್ತು.

“ಯೇನೇ ಅಕ್ಕಾ, ವರ್ಕ ಬರ್ಲಿಲ್ವನೇ?”

“ನಿನ್ಗೂ ಬರ್ಲಿಲ್ವೊ ನೋಡ್ತೆ”

“ಇಲ್ವೆ, ಯೇನೋ ಒಂದ್ ನಮೂನಿ ನಾತ ಬತ್ತಿದು.”

“ನನ್ಗೂ ಅದೇ ನೋಡು.”

“ಯೇನ್ಮಾಡ್ವ? ನನ್ಗೆ ಇಲ್ಲಿ ವರ್ಕ ಬರ್ವಾಂಗೇ ಇಲ್ಲ”

“ನನ್ಗೂ ಹಾಗೇ, ತೋಟಕ್‌ ಹೋಗಿ ಹಂಮ್ಕಂಬನೆ?”

ಆ ಕಂಪಿನಿಂದ ನಿದ್ದೆ ಉಡುಗಿ ಹೋಗಲು ಇಬ್ಬರೂ ವಿಚಾರಿಸಹತ್ತಿದರು. “ಬೇಡ್ವೆ. ಇಲ್ಲೇ ನಂ ಬುಟ್ಟಿ ತಂದಿಟ್ಕಂಬ” ಎಂಬ ನಿರ್ಣಯಕ್ಕೆ ಬಂದರು.

ಆಚಾರಿಯ ಮನೆಯೆದುರು ಕಂಪು ಬೀರಲು ತರಬಾರದೆಂದು ತೋಟದಲ್ಲಿಯೇ ಬಿಟ್ಟು ಬಂದ ಮೀನಿನ (ಖಾಲಿಯಾದ) ಬುಟ್ಟಿಗಳನ್ನು ತಲೆಬದಿಗೆ ಇಟ್ಟುಕೊಂಡರು.

ಮೀನು ಇರದಿದ್ದರೂ ಬುಟ್ಟಿಗೆ ಪರಿಮಳ ಇದ್ದೇ ಇತ್ತು, ಇದರಿಂದ ಊದಬತ್ತಿ, ಕಪ್ಪುರ, ಹೂಗಳ ‘ನಾತ’ ಓಡಿಹೋಯಿತು.

ಅಂಬಿಗಿತಿಯರಿಗೆ ತಮ್ಮ ಗುಡಿಸಲಿನಲ್ಲೇ ಮಲಗಿದಷ್ಟು ಸುಖವಾಗಿ ನಿದ್ದೆ ಹತ್ತಿತು.
*****

Tagged:

Leave a Reply

Your email address will not be published. Required fields are marked *

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...