(ಕೇಳಿದ ಕತೆ)
ಮೀನ ಮಾರಿ ಮರುಳುವಾಗ ಕತ್ತಲಾಯಿತು. ಪರಿಚಿತರಾದ ಯೆಂಕಟ ಆಚಾರ್ರ ಮನೆಯ ಅಂಗಳದಲ್ಲೇ ‘ಹಮ್ಕೊಂಡು’ ‘ಹೊತ್ತಾರೆ’ ಹೋದರಾಯಿತೆಂದು ಅವರು ನಿಶ್ಚಯಿಸಿದರು.
ಆಚಾರಿಯ ಮನೆಯಲ್ಲಿ ಅಂದು ಸತ್ಯನಾರಾಯಣವಾಗಿತ್ತು. ಬಾಗಿಲಿಗೆ ಬಂದ ಅಂಬಿಗಿತಿಯರಿಗೆ ಅಂಗಳದ ತುದಿಗೆ ಮಲಗಲು ಜಾಗ ಕೊಡದಷ್ಟು ಕೆಟ್ಟವನಲ್ಲ ಆಚಾರಿ. “ಓಹೋ ಆಚಾರ್ರ ಮನೇಲಿಯೇನೋ ಇಶೇಷ ಅಂತ್ಕಾಣ್ತೀದು!” ಎಂದು ಅಂಬಿಗಿತಿಯರು ಹೇಳಿದ ಮೇಲೆ ಅವರಿಗೆ ಒಂದು ಚೂರು ಅದು ಇದು ಕೊಡದೆ ಇರಲೂ ಅವನಿಂದಾಗಲಿಲ್ಲ.
ದಣಿದುಬಂದ ಅಂಬಿಗಿತಿಯರು ಅಂಗಳದ ತುದಿಗೆ ಗೊರೆಯಹತ್ತಿದರು. ಸತ್ಯನಾರಾಯಣವಾದ್ದರಿಂದ ಹೂವು ಕಪ್ಪುರ ಊದುಬತ್ತಿಗಳ ನರುಗಂಪು ಆಚಾರಿಯ ಮನೆಯೊಳಗೂ ಆ ವಠಾರದಲ್ಲೂ ತುಂಬಿಕೊಂಡಿತ್ತು.
“ಯೇನೇ ಅಕ್ಕಾ, ವರ್ಕ ಬರ್ಲಿಲ್ವನೇ?”
“ನಿನ್ಗೂ ಬರ್ಲಿಲ್ವೊ ನೋಡ್ತೆ”
“ಇಲ್ವೆ, ಯೇನೋ ಒಂದ್ ನಮೂನಿ ನಾತ ಬತ್ತಿದು.”
“ನನ್ಗೂ ಅದೇ ನೋಡು.”
“ಯೇನ್ಮಾಡ್ವ? ನನ್ಗೆ ಇಲ್ಲಿ ವರ್ಕ ಬರ್ವಾಂಗೇ ಇಲ್ಲ”
“ನನ್ಗೂ ಹಾಗೇ, ತೋಟಕ್ ಹೋಗಿ ಹಂಮ್ಕಂಬನೆ?”
ಆ ಕಂಪಿನಿಂದ ನಿದ್ದೆ ಉಡುಗಿ ಹೋಗಲು ಇಬ್ಬರೂ ವಿಚಾರಿಸಹತ್ತಿದರು. “ಬೇಡ್ವೆ. ಇಲ್ಲೇ ನಂ ಬುಟ್ಟಿ ತಂದಿಟ್ಕಂಬ” ಎಂಬ ನಿರ್ಣಯಕ್ಕೆ ಬಂದರು.
ಆಚಾರಿಯ ಮನೆಯೆದುರು ಕಂಪು ಬೀರಲು ತರಬಾರದೆಂದು ತೋಟದಲ್ಲಿಯೇ ಬಿಟ್ಟು ಬಂದ ಮೀನಿನ (ಖಾಲಿಯಾದ) ಬುಟ್ಟಿಗಳನ್ನು ತಲೆಬದಿಗೆ ಇಟ್ಟುಕೊಂಡರು.
ಮೀನು ಇರದಿದ್ದರೂ ಬುಟ್ಟಿಗೆ ಪರಿಮಳ ಇದ್ದೇ ಇತ್ತು, ಇದರಿಂದ ಊದಬತ್ತಿ, ಕಪ್ಪುರ, ಹೂಗಳ ‘ನಾತ’ ಓಡಿಹೋಯಿತು.
ಅಂಬಿಗಿತಿಯರಿಗೆ ತಮ್ಮ ಗುಡಿಸಲಿನಲ್ಲೇ ಮಲಗಿದಷ್ಟು ಸುಖವಾಗಿ ನಿದ್ದೆ ಹತ್ತಿತು.
*****

















