Home / ಕಥೆ / ಕಿರು ಕಥೆ / ಮೀನದ ಪರಿಮಳ

ಮೀನದ ಪರಿಮಳ

(ಕೇಳಿದ ಕತೆ)

ಮೀನ ಮಾರಿ ಮರುಳುವಾಗ ಕತ್ತಲಾಯಿತು. ಪರಿಚಿತರಾದ ಯೆಂಕಟ ಆಚಾರ್ರ ಮನೆಯ ಅಂಗಳದಲ್ಲೇ ‘ಹಮ್ಕೊಂಡು’ ‘ಹೊತ್ತಾರೆ’ ಹೋದರಾಯಿತೆಂದು ಅವರು ನಿಶ್ಚಯಿಸಿದರು.

ಆಚಾರಿಯ ಮನೆಯಲ್ಲಿ ಅಂದು ಸತ್ಯನಾರಾಯಣವಾಗಿತ್ತು. ಬಾಗಿಲಿಗೆ ಬಂದ ಅಂಬಿಗಿತಿಯರಿಗೆ ಅಂಗಳದ ತುದಿಗೆ ಮಲಗಲು ಜಾಗ ಕೊಡದಷ್ಟು ಕೆಟ್ಟವನಲ್ಲ ಆಚಾರಿ. “ಓಹೋ ಆಚಾರ್ರ ಮನೇಲಿಯೇನೋ ಇಶೇಷ ಅಂತ್ಕಾಣ್ತೀದು!” ಎಂದು ಅಂಬಿಗಿತಿಯರು ಹೇಳಿದ ಮೇಲೆ ಅವರಿಗೆ ಒಂದು ಚೂರು ಅದು ಇದು ಕೊಡದೆ ಇರಲೂ ಅವನಿಂದಾಗಲಿಲ್ಲ.

ದಣಿದುಬಂದ ಅಂಬಿಗಿತಿಯರು ಅಂಗಳದ ತುದಿಗೆ ಗೊರೆಯಹತ್ತಿದರು. ಸತ್ಯನಾರಾಯಣವಾದ್ದರಿಂದ ಹೂವು ಕಪ್ಪುರ ಊದುಬತ್ತಿಗಳ ನರುಗಂಪು ಆಚಾರಿಯ ಮನೆಯೊಳಗೂ ಆ ವಠಾರದಲ್ಲೂ ತುಂಬಿಕೊಂಡಿತ್ತು.

“ಯೇನೇ ಅಕ್ಕಾ, ವರ್ಕ ಬರ್ಲಿಲ್ವನೇ?”

“ನಿನ್ಗೂ ಬರ್ಲಿಲ್ವೊ ನೋಡ್ತೆ”

“ಇಲ್ವೆ, ಯೇನೋ ಒಂದ್ ನಮೂನಿ ನಾತ ಬತ್ತಿದು.”

“ನನ್ಗೂ ಅದೇ ನೋಡು.”

“ಯೇನ್ಮಾಡ್ವ? ನನ್ಗೆ ಇಲ್ಲಿ ವರ್ಕ ಬರ್ವಾಂಗೇ ಇಲ್ಲ”

“ನನ್ಗೂ ಹಾಗೇ, ತೋಟಕ್‌ ಹೋಗಿ ಹಂಮ್ಕಂಬನೆ?”

ಆ ಕಂಪಿನಿಂದ ನಿದ್ದೆ ಉಡುಗಿ ಹೋಗಲು ಇಬ್ಬರೂ ವಿಚಾರಿಸಹತ್ತಿದರು. “ಬೇಡ್ವೆ. ಇಲ್ಲೇ ನಂ ಬುಟ್ಟಿ ತಂದಿಟ್ಕಂಬ” ಎಂಬ ನಿರ್ಣಯಕ್ಕೆ ಬಂದರು.

ಆಚಾರಿಯ ಮನೆಯೆದುರು ಕಂಪು ಬೀರಲು ತರಬಾರದೆಂದು ತೋಟದಲ್ಲಿಯೇ ಬಿಟ್ಟು ಬಂದ ಮೀನಿನ (ಖಾಲಿಯಾದ) ಬುಟ್ಟಿಗಳನ್ನು ತಲೆಬದಿಗೆ ಇಟ್ಟುಕೊಂಡರು.

ಮೀನು ಇರದಿದ್ದರೂ ಬುಟ್ಟಿಗೆ ಪರಿಮಳ ಇದ್ದೇ ಇತ್ತು, ಇದರಿಂದ ಊದಬತ್ತಿ, ಕಪ್ಪುರ, ಹೂಗಳ ‘ನಾತ’ ಓಡಿಹೋಯಿತು.

ಅಂಬಿಗಿತಿಯರಿಗೆ ತಮ್ಮ ಗುಡಿಸಲಿನಲ್ಲೇ ಮಲಗಿದಷ್ಟು ಸುಖವಾಗಿ ನಿದ್ದೆ ಹತ್ತಿತು.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...