Home / ಕವನ / ಕವಿತೆ / ಹೊತ್ತು ಮುಳುಗಿದ ನಂತರ….

ಹೊತ್ತು ಮುಳುಗಿದ ನಂತರ….

ಹೊತ್ತು ಮುಳುಗಿತು ಕತ್ತಲಾಯಿತು
ಚಿತ್ತ ಬಾಗಿಲಿಗೋಡಿತು;
ಒಂದೆ ದಿನದಲಿ ಬರುವೆನೆಂದರು
ಮೂರು ದಿನ ಕಳೆದಾಯಿತು.
ಎದೆಯ ಹಂಬಲ ತುಂಬಿ ನಿಂತಿದೆ
ನಿಮಿಷ ನಿಮಿಷವನೆಣಿಸಿದೆ
ಕರುಳು ಕರುಳಿಗು ಶಾಂತಿ ಹೇಳಿದೆ
ಜೀವ ಕಳವಳಗೊಂಡಿದೆ
ಅವರ ಪ್ರೀತಿಯ ಹೂವು ಹೆರಳಲಿ
ಮಧುರ ಸೌರಭ ಸೂಸಿದೆ
ಇಂದು ಬರವಿಗೆ ತಾನು ಕೂಡಾ
ಬಾಡಿ ಹೋಗುವೆನೆಂದಿದೆ.
ಮೊದಲ ಇರುಳಲಿ ಬೆರಳು ಬರಳಲಿ
ಕೊರಳು ಕೊರಳಲಿ ಸೇರಿಸಿ
ಕುರುಳು ಹೊರಳಿಸಿ ತೋಳ ತಳುಕಿಸಿ
ದೇಹ ದೇಹದಿ ಕರಗಿಸಿ
ಜೀವ ಕಣ ಕಣದಲ್ಲಿ ಸ್ವರ್ಗದ
ಸುಖದ ಹೊಳೆಯನು ಹರಿಯಿಸಿ
ಹಾಲು ಹಣ್ಣಿನ ಹೂವು ಜೇನಿನ
ಸಾಮರಸ್ಯದಿ ಬೆರೆಯಿಸಿ
ನನ್ನ ಬಾಳಿನ ಪೂರ್ಣ ಚಂದ್ರಮ
ಬೆಳಗಿ ಬಂದಿಹ ಸಂಭ್ರಮ
ಬೇಡಿ ಬಯಸಿದ ಬಯಕೆ ಕೂಡಿತು
ಹರಿದು ಹೋಯಿತು ವಿಭ್ರಮ.
ಬೆಳಕು ಬೆಳಕಿಗೆ ಮುತ್ತು ನೀಡಿತು
ಜೀವ ಹೊಸ ಹೊಸದಾಯಿತು
ಹೊಳೆವ ಲೀಲಾಲೋಲ ಕಣ್ಣಲಿ
ನನ್ನ ಮುಖವೂ ಅರಳಿತು.
ಮಾತು ಮಾತಿಗೆ ಎನಿತು ಹೊಲಿಕೆ
ಕಡಲ ಒಡಲಿನ ರತ್ನಕೆ
ಸಂಜೆ ಸಮಯದಿ ಇಣಿಕಿ ಮಿಣುಕುವ
ಮುಗಿಲಿನಕ್ಷಿಗೆ-ಚಿಕ್ಕೆಗೆ
ಗಂಗೆ ಗೌರಿಯೊ ತುಂಗ ಭದ್ರೆಯೊ
ಸರ್ವಮಂಗಳೆ ಪೂರ್ಣಿಮಾ;
ಮೂಡಣದ ಉಷೆ ಬಂದು ಕುಣಿವಳೊ
ಕಾವ್ಯ ಕನ್ನಿಕೆ ಕಲ್ಪನಾ.
ಅಂದಿಗೂ ಮೊದಲಾಗಿ ಇಂದಿಗು
ಏಸು ದಿನಗಳ ನೆನೆಯಲಿ
ಕನಸಿನಲಿ ಕಂಡಂತೆ ಆಗಿದೆ
ಬಂದು ರಕ್ಷೆಯ ನೀಡಲಿ
ತಂಗಿ ಇಂದಿರೆ ತಮ್ಮ ಮೋಹನ
ಹೊಸತಿಲದ ಬಳಿ ಬಂದು ನಿಲ್ಲಲೆ
ಮರೆತು ನಿಂದಿರೆ ಮರೆಯಲಿ
ಬರುವ ದಾರಿಯ ಕಾಯಲೆ?
ಇರುಳು ಮರಳಿತು ಮತ್ತೆ ಹೊರಳಿತು
ಆದರೂನೂ ವಿಫಲವೆ!
ಹಗಲು ಬಂದಿತು ಮತ್ತೆ ಸಂದಿತು
ಬಾರದಿರುವರೆ ದೈವವೆ!
ಹತ್ತು ಹೊಡೆಯಿತು ಚಿತ್ತ ಕದಡಿತು
ಯಾವ ಆಶೆಯ ಹಿಡಿಯಲಿ
ಸ್ವರ್ಗವೂ ಹಾಳಾಗಿ ಹೋಗಲಿ
ಬಂದು ಎದುರಿಗೆ ನಿಲ್ಲಲಿ!
*****
Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...