Home / ಕಥೆ / ಆತ್ಮ ಕಥೆ / ಕಾಡುತಾವ ನೆನಪುಗಳು – ೩೨

ಕಾಡುತಾವ ನೆನಪುಗಳು – ೩೨

ನನಗೂ ವಯಸ್ಸಾಯ್ತಲ್ಲ ಚಿನ್ನು… ಜೊತೆಗೆ ಈ ಮಾನಸಿಕ ‘ಖಿನ್ನತೆ’ ಬೇರೆ… ಹೀಗಾಗಿ ನಾನೆಲ್ಲೂ ಹೋಗುವುದೇ ಇಲ್ಲ. ಹೊರಗೊಂದು ಪ್ರಪಂಚವೊಂದಿದೆ ಎಂಬುದನ್ನು ಮರೆಯಲು ಯತ್ನಿಸುತ್ತಿದ್ದೇನೆ… ಯಾರಾದರೂ ನೋಡಲು ಮಾತನಾಡಲು ಬರುತ್ತಾರೆಂದರೆ, ನಾನು ಮುಖ ತಪ್ಪಿಸಿಕೊಳ್ಳುತ್ತೇನೆ. ಈಗ ನನಗೆ ಒಂಟಿತನದ ಭೂತದ ಭಯವಿಲ್ಲ… ನಾನೇ ಅದರೊಳಗೆ ಸೇರಿಕೊಂಡುಬಿಟ್ಟಿದ್ದೇನೆ. ಕೆಳಗಿನ ದೊಡ್ಡಮನೆ ಅವ್ವನ ನೆನಪುಗಳಿಂದ ತುಂಬಿರುವುದರಿಂದ, ತಾರಸಿಯ ಮೇಲೊಂದು ರೂಮು ಕಟ್ಟಿಸಿಕೊಂಡು, ನನ್ನ ಲೈಬ್ರರಿ, ಅವಶ್ಯಕತೆಗಳಿರುವ ಪಾತ್ರೆಗಳೊಂದಿಗೆ Shift ಆಗಿದ್ದೇನೆ. ನನಗೀಗ ಅರಮನೆಯೂ ಈ ಪುಟ್ಟ ಗೂಡು ಒಂದೇ ಆಗಿದೆ. ಆಮೆ ಚಿಪ್ಪಿನೊಳಗೆ ಅಡಗಿಕೊಳ್ಳುವಂತೆ ನನ್ನ ‘ಖಿನ್ನತೆ’ಯ ಚಿಪ್ಪಿನೊಳಗೆ ಅಡಗಿಕೊಂಡಿದ್ದೇನೆ.

ಇನ್ನೇನು ನಿನ್ನ ಮೆಡಿಕಲ್ ಕೋರ್ಸ್ ಮುಗಿಯುತ್ತಾ ಬಂದಿತಲ್ವಾ? ಡಾಕ್ಟರಾಗುವ ನಿನ್ನ ತಾಯಿ-ತಂದೆಯ ನಿನ್ನ ಕನಸು ನನಸಾಗಿದ್ದು, ನನಗೆ ನೆಮ್ಮದಿ, ಸಂತೋಷ ತಂದಿತೆ ಇಷ್ಟೆಲ್ಲಾ ಬರೆದು ತಲೆಕೆಡಿಸಿದೇಂತ ಭಾವಿಸಬೇಡಾ. ನೀನು ಪ್ರಬುದ್ಧ ಹುಡುಗಿ, ತರ್ಕಬದ್ಧವಾಗಿ ಯೋಚಿಸುತ್ತೀಯಾ… ಜಾಣೆ ಕೂಡಾ. ಸಾವು-ಹುಟ್ಟು ನಮ್ಮ ಕೈಲಿಲ್ಲ. ಆದರೆ ಬದುಕು ನಮ್ಮದು… ನಾವೇ ಕಟ್ಟಿಕೊಳ್ಳಬೇಕೆಂದು ಎಲ್ಲರೂ ಬುದ್ದಿ ಹೇಳುತ್ತಾರೆ. ಆದರದು ತುಂಬಾ ಕಷ್ಟ, ಕಠಿಣ ಕಣೆ…! ಬೇವಿನ ಮರದ ಬುಡಕ್ಕೆ ನೀನೂ ದಿನವೂ ಬೆಲ್ಲದ ನೀರು ಸುರಿದು ಬೆಳೆಸಿದರೂ, ದೊಡ್ಡದಾದ ಮೇಲೆ ಅದು ಕೊಡುವುದು, ಬೇವಿನ ಹಣ್ಣನ್ನೇ ಮಾವಿನ ಹಣ್ಣನಲ್ಲ. ನನ್ನನ್ನು ಕಾಡಿದ್ದು ನನ್ನ ವ್ಯಕ್ತಿತ್ವ, ಇದರಲ್ಲಿ ಆನುವಂಶೀಯತೆಯೂ ಕಾರಣವಾಗಿರುತ್ತದೆ. ಆದರೆ ನಾವುಗಳು ಶಿಲೆಯನ್ನು ಉಳಿಯಿಂದ ಕೆತ್ತಿ-ಕೆತ್ತಿ ಸುಂದರ ಮೂರ್ತಿಯನ್ನಾಗಿ ಮಾಡಿಕೊಳ್ಳಬೇಕಾಗುತ್ತದೆ. ಅದೇ ಬದುಕು ಕಟ್ಟಿಕೊಳ್ಳುವ ರೀತಿ ಮಗಳೇ. ಕೆಟ್ಟವುಗಳನ್ನೆಲ್ಲಾ ವರ್ಜಿಸಿ, ಅಧ್ಯಯನ, ಒಳ್ಳೆಯ ಗೆಳತಿಯರು, ಸಜ್ಜನರ ಸಂಗದಿಂದ ನಮ್ಮ ವ್ಯಕ್ತಿತ್ವವನ್ನು ತಿದ್ದಿಕೊಳ್ಳಬಹುದು. ಆದರೆ ನಾನು ಹಾಗೆ ಮಾಡಲಿಲ್ಲ. ಆನೇ ನಡೆದಿದ್ದೇ ದಾರಿಯೆಂಬಂತೆ ನಡೆದಿದ್ದೇನೋ… ಏನೋ… ನಂಗೆ ಗೊತ್ತಿಲ್ಲ…!

ಒಳ್ಳೆಯ ಬದುಕು ಕಟ್ಟಿಕೊಳ್ಳಲು ‘ಡಿಗ್ರಿ’ಗಳು ಬೇಕಾಗಿಲ್ಲ ಚಿನ್ನು. ಜಾಣತನ, ಸಮಯಸ್ಫೂರ್ತಿ, ಸಂಯಮ, ಸಮತೋಲನ, ದೂರದೃಷ್ಟಿ ಮುಖ್ಯವಾಗುತ್ತದೆ. ಅರೇ ನನಗಿರಲಿಲ್ಲಾಂತ ಅನ್ನಿಸುತ್ತದೆ. ಭಾವನೆಗಳೊಂದಿಗೇ ಬದುಕಲು ಆಗದು ಎಂಬುದಕ್ಕೆ ನಾನೇ ಉದಾಹರಣೆ. ತಿರಸ್ಕೃತಳಾಗಿ, ಶಾಪಗ್ರಸ್ತಳಂತೆ, ಬದುಕಿದ ನನ್ನ ಬದುಕೂ ಒಂದು ಬದುಕೇ?

ಏನೂ ಬೇಕೆನ್ನಿಸುವುದಿಲ್ಲ. ಕಾಲನೇಮಿಯ ಕರೆಗಾಗಿ ಕಾಯುತ್ತಾ ಇದ್ದೇನೆ. ಹೋಗಲಿ ಬಿಡು… ನನ್ನ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ. ನಾನು ನನ್ನಂತೆಯೇ ಆರಾಮವಾಗಿದ್ದೇನೆ. ನಿರ್ಭಾವುಕೆ, ನಿರ್ಲಿಪ್ತತೆಯ ಹೊದಿಕೆಯನ್ನು ಹೊದ್ದು ಬದುಕಿದ್ದೇನೆ. ಕಳೆದುಕೊಳ್ಳಲೂ ಏನೂ ಇಲ್ಲ. ಪಡೆದುಕೊಳ್ಳುವಂತಹುದೂ ಯಾವುದೂ ಇಲ್ಲ. ಅಂತಹ ನಿರೀಕ್ಷೆಗಳೂ ಉಳಿದಿಲ್ಲ ಮಗಳೇ.

ಇನ್ನು… ಸಾಕು… ನಿಲ್ಲಿಸುತ್ತೇನೆ. ಬದುಕಿನಲ್ಲಿ ಹೆಕ್ಕಿ ತೆಗೆದ ಕಾಡುತ್ತಿರುವ ನೆನಪುಗಳು. ಅವುಗಳು ನನ್ನವು… ನಿನ್ನವಾಗಬಾರದೆಂದು,

ಹಾರೈಸುವ…

ನಿನ್ನ ಅವ್ವಾ
ಮುಗಿಯಿತು

ಚಿತ್ರಗಳು

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...