ಕಾಡುತಾವ ನೆನಪುಗಳು – ೨೫

ಕಾಡುತಾವ ನೆನಪುಗಳು – ೨೫

ಮಾರನೆಯ ದಿನ ಔಟ್‌ಪೇಶೆಂಟ್ ವಿಭಾಗದಲ್ಲಿ ರೋಗಿಗಳಿಂದ ನನಗೆ ಫೋನ್ ಬಂದಿತ್ತು. ನನಗೆ ‘ಆಕೆ’ಯದೇ ಫೋನ್ ಇರಬೇಕು ಎನ್ನಿಸಿತ್ತು. ರೆಸೆಪ್ಷನ್ ಕೌಂಟರ್‌ಗೆ ಬಂದು ಫೋನನ್ನು ಕೈಗೆತ್ತಿಕೊಂಡಿದ್ದೆ.

“ಹಲೋ…”

“ನಾನು ಮೇಡಂ… ಬೌರಿಂಗ್ ಆಸ್ಪತ್ರೆಯಿಂದ ಮಾತಾಡ್ತಾ ಇದ್ದೀನಿ…”

“ಹೇಳಿ…”

“ನೀವು ಬೇಜಾರಾಗೋಲ್ಲ ತಾನೆ?”

“ಪೇಶೆಂಟ್ಸ್ ತುಂಬಾ ಇದ್ದಾರೆ, ಏನೂಂತ ಹೇಳಿ…”

“ನಿಮ್ಮ ಯಜಮಾನರಿಗೆ ನನ್ನ ಕಂಡರೆ ತುಂಬಾ ಇಷ್ಟವಂತೆ…”

“ಸರಿ…”

“ನೀವು ಡೈವೋರ್ಸ್ ಕೊಟ್ಟರೆ ನನ್ನನ್ನು ಮದ್ಎವಯಾಗ್ತಾರಂತೆ…”

“ಅಷ್ಟೇ ತಾನೆ? ಕೊಡ್ತೀನಿ ಬಿಡಿ…”

“ನಿಜವಾಗ್ಲೂನಾ?”

“ಸುಳ್ಳು ಹೇಳೋದು ತುಂಬಾ ಕಡಿಮೆ.”

“ತುಂಬಾ ಥ್ಯಾಂಕ್ಸ್ ಮೇಡಂ…”

ಟೆಲಿಫೋನನ್ನು ಕೆಳಗಿಟ್ಟು ಔಟ್ ಪೇಶಂಟ್ ವಿಭಾಗಕ್ಕೆ ಬಂದಿದ್ದೆ. ನಾನು ಸ್ವಲ್ಪವೂ ವಿಚಲಿತಳಾಗಿರಲಿಲ್ಲ. ಮುಂದಿನ ಕಾರ್ಯಗಳ ಬಗ್ಗೆ ಯೋಚಿಸಬೇಕಿತ್ತು.

ನನಗೆ ಪರಿಚಯವಿದ್ದ ವಕೀಲರ ಬಳಿ ವಿಷಯ ತಿಳಿಸಿ ಡೈವೋರ್ಸ್ ಹಾಕುವ ‘ಫಾರಂ’ಗಳನ್ನು ತೆಗೆದುಕೊಂಡು ಆ ದಿನ ರಜೆ ಹಾಕಿ ಬೆಂಗಳೂರಿನ ಮನೆಗೆ ಬಂದಿದ್ದೆ. ‘ಅವನು’ ಎಲ್ಲಿಗೋ ಹೊರಡಲು ತಯಾರಾಗಿದ್ದ. ನನ್ನನ್ನು ನೋಡಿ ಕುಳಿತುಕೊಂಡಿದ್ದ. ನಾನು ಅವನ ಮುಂದೆ ಕುಳಿತು ವಿಚ್ಛೇದನದ ಪತ್ರಗಳನ್ನು ಹೊರ ತೆಗೆದಿದ್ದೆ.

“ಈ ಪೇಪರ್ಸ್ ಒಂದ್ಸಾರಿ ಓದಿ ಸಹಿ ಮಾಡಿಬಿಡು…” ಎಂದಿದ್ದೆ.

“ಏನು ಪೇಪರ್ಸ್?” ಆಶ್ಚರ್ಯದಿಂದ ಕೇಳಿದ್ದ.

“ಡೈವೋರ್ಸ್ ಪೇಪ‌ರ್ಸ್ಗಳು…”

“……..”

“ಇಬ್ಬರೂ ಒಪ್ಪಿಗೆಯಿಂದ ಒಟ್ಟಿಗೆ ಸಹಿ ಮಾಡಿ ಅಪ್ಲಿಕೇಷನ್ಸ್ ಹಾಕಿದರೆ ಡೈವೋರ್ಸ್ ಯಾವ ತಕರಾರು ಇಲ್ಲದೆ ಬೇಗ ಮುಗಿಯುತ್ತಂತೆ…”

“ನಾನು ಕೇಳಿರಲಿಲ್ಲ…”

“ನಾನು ಕೇಳ್ತಾ ಇದ್ದೀನಲ್ಲ. ನೀನು ನಿನಗಿಷ್ಟವಾದ ಬದುಕನ್ನು ಆರಿಸಿಕೊಂಡು ಸುಖವಾಗಿರು. ನನ್ನಿಂದ ನಿನ್ನನ್ನು ಬಿಡುಗಡೆಗೊಳಿಸ್ತಾಯಿದ್ದೀನಿ…”

“……..”

“ಇಲ್ಲಿ… ನಿನ್ನ ಸಹಿ ಮಾಡಿಬಿಡು…”

“ನನಗಿಷ್ಟವಿಲ್ಲ…”

“ನನಗಿಷ್ಟವಿದೆ. ಜಗ್ಗಾಡಿ, ಎಳೆದಾಡಿ ಬದುಕಿದ್ದು ಸಾಕಾಗಿ ಹೋಗಿದೆ. ನೀನಗೂ ಸುಖವಿಲ್ಲ… ನಾನೂ ಸುಖವಾಗಿಲ್ಲ ಅನ್ನೋದಕ್ಕಿಂತಾ ನೆಮ್ಮದಿ ಇಲ್ಲಾ. ನೀನು ಯಾವುದೋ ಪಂಜರದಲ್ಲಿದ್ದವನಂತೆ ಪರದಾಡುವುತ್ತಿರುವುದು ನನಗೆ ತಿಳಿದಿದೆ. ನನ್ನದೇ ತಪ್ಪಾಗಿದೆ. ಕ್ಷಮಿಸಿಬಿಡು. ನಿನಗಿಷ್ಟವಾದಂತೆ ಬದುಕು…”

ಅಸಮಾಧಾನ, ಅಸಹನೆಯಿಂದ ಅವನ ಮುಖ ಗಂಟಿಕ್ಕಿತ್ತು. ಆದರೂ ಪೇಪರ್ಸಗಳ ಮೇಲೆ ಸಹಿ ಮಾಡಿದ್ದ.

“ನನಗೆ ಮೋಸ ಮಾಡಿಬಿಟ್ಟಿರಿ…”

“ಇಲ್ಲ… ಇಬ್ಬರಿಗೂ ಬದುಕಿನಿಂದ ಮೋಸವಾಗಿದೆ. ಇಬ್ಬರ ಆಯ್ಕೆಯೂ ಸರಿಯಾಗಿರಲಿಲ್ಲ. ಯಾವುದೋ ಆತಂಕ ಒತ್ತಡದಿಂದ ನಿನಗೆ ಕೇಳಿಕೊಂಡಿದ್ದೆ. ನನ್ನನ್ನು ಕ್ಷಮಿಸಿಬಿಡು…”

ನಾನು ಕನಕಪುರಕ್ಕೆ ಹೊರಡಲು ಎದ್ದು ನಿಂತಿದ್ದೆ. ಅವನಿನ್ನೂ ಕುಳಿತೇ ಇದ್ದ.

“ಡೈವೋರ್ಸ್‌ಗೆ ಹಾಕಿದ ಮೇಲೆ ಒಟ್ಟಿಗೇ ಇರಬಾರದಂತೆ. ನೀನು ಹೊರಡಲು ತಯಾರಾದ ನಂತರ ತಿಳಿಸು…”- ನನ್ನ ಮಾತುಗಳಿನ್ನೂ ಮುಗಿದಿರಲಿಲ್ಲ, ಅವನು ಧಿಗ್ಗನೆ ಎದ್ದು ನಿಂತು,

“ಈಗಲೇ ಹೋಗ್ತಾಯಿದ್ದೀನಿ…” ಎಂದು ಕೋಪದಿಂದ ಹೇಳುತ್ತಾ

ದಢದಢನೆ ರೂಮಿನೊಳಗೆ ಹೋಗಿ, ತನ್ನೆಲ್ಲಾ ಬಟ್ಟೆಗಳನ್ನು ಬೀರುವಿನಿಂದ ಎಳೆದು ಹಾಕಿದ್ದ. ಮುಖ ಧುಮುಗುಟ್ಟುತ್ತಿತ್ತು. ಎಲ್ಲವನ್ನೂ ಸೂಟ್‌ಕೇಸ್‌ಗಳಲ್ಲಿ ತುಂಬಿಕೊಂಡು ಬಂದು ನನ್ನೆದುರಿಗೆ ನಿಂತು,

“ನಿಮ್ಮ ಮನೆಯಿಂದ ನಾನು ಏನನ್ನೂ ತೆಗೆದುಕೊಂಡು ಹೋಗ್ತಾಯಿಲ್ಲ. ಒಂದ್ಸಾರಿ ನೋಡ್ಕೊಳ್ಳಿ…”-ಎಂದು ಹೇಳುವಾಗ ಅವನ ದನಿಯಲ್ಲಿ ಕಂಪನವಿತ್ತಾ? ನೆನಪಿಲ್ಲ.

“ನಾನು ಹೋಗ್ತಾಯಿದ್ದೀನಿ… ಇನ್ಮೇಲೆ ಸುಖವಾಗಿರಬಹುದು…” – ಎಂದು, ಮುಂದಿನ ಬಾಗಿಲನ್ನು ತೆರೆದು ಹಿಂದೆಯೇ ದಢಾರೆಂದು ಮುಚ್ಚಿ ಸೂಟ್‌ ಕೇಸ್ ಗಳೊಂದಿಗೆ ಹೋಗಿಬಿಟ್ಟಿದ್ದ.

ಸ್ವಲ್ಪ ಹೊತ್ತು ಸುಮ್ಮನೇ ಕುಳಿತಿದ್ದ ನಾನು ಕನಕಪುರದ ಬಸ್ತ್ ಹತ್ತಿದ್ದೆ. ಎದೆಯ ಭಾರ ಇಳಿದು ಹೋದಂತಾಗಿತ್ತು…!
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೊಸೂರು
Next post ದಾಸಿಯ ಎರಡನೆ ಹಾಡು

ಸಣ್ಣ ಕತೆ

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…