Home / ಕವನ / ಕವಿತೆ / ಮಹಾತ್ಮರು

ಮಹಾತ್ಮರು

೧. ಚರಮ ಗೀತೆ

ಜಗದಿ ಕತ್ತಲು ಮುಸುಕಿ ಮುಂದರಿಯದಾಯ್ತಿಂದು
ನಡಯಿಸುವ ತಂದೆ ನೀ ಮರೆಯಾಗೆ ನಮ್ಮಿಂದ
ನಾವು ತಬ್ಬಲಿಯಾಗಿ ಬಾಳಲೆ೦ತಿನ್ನಕಟ!
ಜೀವಾತ್ಮ ತೋಲಗಿರುವ ದೇಹದಂತೆ!

ಗಾಂಧಿಗುಂ ಜರೆಯುಂಟೆ-ಮೃತಿಯುಂಟೆ-ಅಳಿವುಂಟೆ
ಎಂದೆಮ್ಮನಾಶ್ಚರ್ಯಗೊಳಿಸಿ ನೀನೊಮ್ಮೆಗೇ
ಮೂಗುವಡಿಸೀ ಜಗವ ಪಯಣಗೈವರೆ ತಾತ
ಸ್ವಾತಂತ್ರ ಸಂಗ್ರಾಮದೇಕವೀರ !!

ಹೃದಯ ಬರಡಾಯ್ತಮಮ ಶೂನ್ಯ ಮಾಯ್ತೀ ಲೋಕ
ತುಂಬಿದೀ ಭರತಪದ ಬರಿದಾಯ್ತು ಬದುಕುಳಿದು
ಭಾರತಿಯ ನಡುನೀರಿನಲಿ ಬಿಟ್ಟು ನಡೆವರೇ
ಓ ಮಹಾತ್ಮನೆ ಜ್ಯೋತಿಯಾರಿಸುವರೆ !!

ಭಾರತಿಯ ಹಿರಿದೆನಿಸಿ ನಲಿಸುವವರಾರಿನ್ನು
ಮೆರೆದಹಿಂಸಾವ್ರತದಿ ಬೆಳಕಿತ್ತ ಭಾಸ್ಕರನೆ
ಅಸ್ತಮಿಸುತೆಲ್ಲಿರುವೆ ಪುಣ್ಯಮೂರುತಿ ನಿನ್ನ
ದಿವ್ಯ ದರ್ಶನವಿತ್ತು ಮುಗುಳುನಗೆಯ !!

ನೊಂದು ಬೆಂದಿತು ಹೃದಯ ಶೋಕವೊಂದೇ ತುಂಬಿ
ದುಃಖಸಾಗರಮಾಯ್ತು ಭರತಭೂಮಿಯ ನೆಲವು
ಭಕ್ತಪದ ಸಮ್ರಾಟ ನುಡಿ ಬಾರೆಲೈ ತಂದೆ,
ಕಣ್ಣೀರಿನಿಂದೊರೆವೆ ಚರಮ ಗೀತೆ!

೨ ಜಗಜ್ಜನಕ ಗಾ೦ಧಿಜೀ

ಭರತರಾಷ್ಟ್ರದ ಜನಕ ಗುರುವರ | ದೇವನನುಪಮ ಯೋಗಿಯೆ
ಸರುವ ಹೃದಯವ ಹೊಕ್ಕು ಸತ್ಯದ | ಮರ್ಮವರುಹಿದ ತ್ಯಾಗಿಯೆ
ಹಿರಿಯ ಸ್ವಾತಂತ್ರ್ಯವನು ಬೋಧಿಸಿ | ಮನವನರಳಿಸಿ ಕೆರಳಿಸಿ
ಧರುಮದರ್ಥವ ತಿಳುಹಿ ಮತಗಳ | ನೊಂದು ಮಾಡಿದ ಮಹಋಷಿ.

ವಿನಯ ಸತ್ಯ ಪ್ರೇಮ ಸಹನ | ತ್ಯಾಗಮೌದಾರ್ಯ೦ಗಳ
ಘನತೆ ಪೌರುಷ ಧೃತಿ ನಿವೇಕ ವಿ| ಚಾರ ನಿರ್ಮಲ ಗುಣಗಳ
ಮುನಿ ವಿರಾಜಿತ ಮನ ಸುಶೋಭಿತ | ಯೋಗಿ ಹೃದಯದ ನಗೆಗಳ
ವನಧಿ ಗಾಂಧಿಮಹಾತ್ಮ ನಿನ್ನನು | ತಿಳಿವರಾರೀ ಬಗೆಗಳ.

ಜೀವಕೆಲ್ಲಕೆ ಕೊಟ್ಟು ಚೇತನ | ಸಕಲ ಹೃದಯವ ಸೇರಿದೆ
ನೋವನೊಪ್ಪಿದೆ ಸಾವನಪ್ಪಿದೆ | ಜಡ ಶರೀರವ ತೂರಿದೆ.
ಭಾವಿತಾತ್ಮನೆ ಬಂದ ಭೂಮಿ ಪ | ವಿತ್ರಮಾಯ್ತು ತ್ಯಾಗದೆ
ಆವ ಘನತೆಯ ಮಹಿಮೆಯಿಂದಲಿ | ನಿನ್ನ ಪಡೆದೆವೊ ಪುಣ್ಯದೆ.

ಲೋಕ ವೈಭವ ನಿನ್ನ ಸುಸ್ವಾ | ಗತಿಸಿ ಕರೆದರೆ ನೋಡದೆ
ಸಾಕು ಹರಿಜನ ಸೇವೆಯೆಂದೇ | ಉಸಿರು ಮೀಸಲು ಮಾಡಿದೆ.
ಬೇಕು ಮನಸಾ ವಾಚ ಕರ್ಮದೊ | ಳೊಂದೆ ಕೃತಿ ಧೃತಿಯೆನ್ನುತೆ
ಏಕಕಂಠದೊಳೊರದೆ ಶ್ರದ್ದಾ | ಸಹನೆ ಪಾವನಮೆನ್ನುತೆ.

ನೀರು-ನಲಮಾಕಾಶ-ಗಾಳಿಯು | ನಿರುತ ಪಾವನವಾದುದು
ಶೌರ್ಯ ಶಮೆ ದಮೆ ತಪಸು ಶೌಚಾ | ಚಾರ ಜೋತಿಯ ಪಡದುದು
ಆರು ಬಳಗಂ ನಿನ್ನದಾವುದು | ಎಲ್ಲ ಲೋಕವ ಸೇರ್ದುದು !
ಆರು ನಿನ್ನವರಲ್ಲ ಧರೆಯಲಿ ? | ನಿನ್ನದಲ್ಲದದಾವುದು?

ಸಿರಿ ಸರಸ್ವತಿ ಶಕ್ತಿ ನಿನಗೂಲಿ | ದಿಹರು ತಾವ್ನಲಿಯುತ್ತಲಿ
ಹರಿಹರಾದಿ ವಿರಿಂಚಿ ಧರ್ಮರು | ಹರಸುತಲಿವರು ಮುದದಲಿ
ವರ ಕುಬೇರನು ತೊತ್ತು ಶಕ್ರನು | ವಿಭವ ತೊರೆದನು ಒಲ್ಲದೆ
ಚರಣಸೇವೆಯ ಮಾಡಿ ನಿಂದರು | ಎಲ್ಲ ಜನಪದಮೂಲದೆ.

ಜಗದ ಹಿತವಂ ಬಗೆದು ನಿನ್ನನೆ | ಮರೆತೆ ಗುಂಡಿಗೆ ನೀಗಿದೆ
ಒಗೆದು ನಶ್ವರದೇಹ ಸೂಕ್ಷ್ಮದಿ | ಎಲ್ಲ ಹೃದಯವ ಸೇರಿದೆ.
ಭಾರತಿಗೆ ನವಜನ್ಮವೀಯುತ | ಸುಪ್ರಕಾಶದಿ ಬೆಳಗಿದೆ.
ಆರತಿಯನೆತ್ತುತಲಿ ಕಣ್ಮರೆ | ಯಾದೆ ಪೂರಣಗೊಳಿಸದೆ.

ಎಲ್ಲ ಜಗವಂ ಸೆಳೆದು ಸಮ್ರಾಟ್ | ಮಕುಟ ತಾಳಿದೆ ಕಾಣದೆ
ಒಲ್ಲೆನೆಂದರು ಬಿಡದು ನಿನ್ನ೦ | ಲೋಕ ಮೆಚ್ಚಿಹ ಪ್ರೇಮದೆ
ರಾಜತಂತ್ರ ವಿವೇಕ ಪರಮಾ| ರ್ಥಗಳು ಭಕ್ತಿ ವಿರಾಗವು
ರಾಜಿಸುತ್ತಿವೆ ಸುಪ್ರಕಾಶದಿ | ನಿನ್ನ ಹೃದಯವ ನೀಗವು.

ಧರೆಯ ಧನ್ವಂತರಿಯೆ ನೀನೆ | ಲ್ಲಿರಲು ನಮ್ಮನು ನೋಳ್ಪುದು
ಕರೆದು ಕೃಪೆಯಂ ಪೊರೆ ಜಗತ್ತನು | ಅಭಯಹಸ್ತವ ತೋರ್ವುದು.
ಹಿರಿಯ ನೀನವತಾರ ಪುರುಷಂ | ಎಂದು ಲೋಕವೆ ಪೇಳ್ವುದು
ಇರಲಿ ನಿನ್ನೀ ಸ್ಮರಣೆ ಸಂತತ | ಎಲ್ಲರೊಳು ಸಮಭಾವದಿ.
*****
೩೦-೧-೧೯೪೮

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...