Home / ಕವನ / ಕವಿತೆ / ಮಹಾತ್ಮರು

ಮಹಾತ್ಮರು

೧. ಚರಮ ಗೀತೆ

ಜಗದಿ ಕತ್ತಲು ಮುಸುಕಿ ಮುಂದರಿಯದಾಯ್ತಿಂದು
ನಡಯಿಸುವ ತಂದೆ ನೀ ಮರೆಯಾಗೆ ನಮ್ಮಿಂದ
ನಾವು ತಬ್ಬಲಿಯಾಗಿ ಬಾಳಲೆ೦ತಿನ್ನಕಟ!
ಜೀವಾತ್ಮ ತೋಲಗಿರುವ ದೇಹದಂತೆ!

ಗಾಂಧಿಗುಂ ಜರೆಯುಂಟೆ-ಮೃತಿಯುಂಟೆ-ಅಳಿವುಂಟೆ
ಎಂದೆಮ್ಮನಾಶ್ಚರ್ಯಗೊಳಿಸಿ ನೀನೊಮ್ಮೆಗೇ
ಮೂಗುವಡಿಸೀ ಜಗವ ಪಯಣಗೈವರೆ ತಾತ
ಸ್ವಾತಂತ್ರ ಸಂಗ್ರಾಮದೇಕವೀರ !!

ಹೃದಯ ಬರಡಾಯ್ತಮಮ ಶೂನ್ಯ ಮಾಯ್ತೀ ಲೋಕ
ತುಂಬಿದೀ ಭರತಪದ ಬರಿದಾಯ್ತು ಬದುಕುಳಿದು
ಭಾರತಿಯ ನಡುನೀರಿನಲಿ ಬಿಟ್ಟು ನಡೆವರೇ
ಓ ಮಹಾತ್ಮನೆ ಜ್ಯೋತಿಯಾರಿಸುವರೆ !!

ಭಾರತಿಯ ಹಿರಿದೆನಿಸಿ ನಲಿಸುವವರಾರಿನ್ನು
ಮೆರೆದಹಿಂಸಾವ್ರತದಿ ಬೆಳಕಿತ್ತ ಭಾಸ್ಕರನೆ
ಅಸ್ತಮಿಸುತೆಲ್ಲಿರುವೆ ಪುಣ್ಯಮೂರುತಿ ನಿನ್ನ
ದಿವ್ಯ ದರ್ಶನವಿತ್ತು ಮುಗುಳುನಗೆಯ !!

ನೊಂದು ಬೆಂದಿತು ಹೃದಯ ಶೋಕವೊಂದೇ ತುಂಬಿ
ದುಃಖಸಾಗರಮಾಯ್ತು ಭರತಭೂಮಿಯ ನೆಲವು
ಭಕ್ತಪದ ಸಮ್ರಾಟ ನುಡಿ ಬಾರೆಲೈ ತಂದೆ,
ಕಣ್ಣೀರಿನಿಂದೊರೆವೆ ಚರಮ ಗೀತೆ!

೨ ಜಗಜ್ಜನಕ ಗಾ೦ಧಿಜೀ

ಭರತರಾಷ್ಟ್ರದ ಜನಕ ಗುರುವರ | ದೇವನನುಪಮ ಯೋಗಿಯೆ
ಸರುವ ಹೃದಯವ ಹೊಕ್ಕು ಸತ್ಯದ | ಮರ್ಮವರುಹಿದ ತ್ಯಾಗಿಯೆ
ಹಿರಿಯ ಸ್ವಾತಂತ್ರ್ಯವನು ಬೋಧಿಸಿ | ಮನವನರಳಿಸಿ ಕೆರಳಿಸಿ
ಧರುಮದರ್ಥವ ತಿಳುಹಿ ಮತಗಳ | ನೊಂದು ಮಾಡಿದ ಮಹಋಷಿ.

ವಿನಯ ಸತ್ಯ ಪ್ರೇಮ ಸಹನ | ತ್ಯಾಗಮೌದಾರ್ಯ೦ಗಳ
ಘನತೆ ಪೌರುಷ ಧೃತಿ ನಿವೇಕ ವಿ| ಚಾರ ನಿರ್ಮಲ ಗುಣಗಳ
ಮುನಿ ವಿರಾಜಿತ ಮನ ಸುಶೋಭಿತ | ಯೋಗಿ ಹೃದಯದ ನಗೆಗಳ
ವನಧಿ ಗಾಂಧಿಮಹಾತ್ಮ ನಿನ್ನನು | ತಿಳಿವರಾರೀ ಬಗೆಗಳ.

ಜೀವಕೆಲ್ಲಕೆ ಕೊಟ್ಟು ಚೇತನ | ಸಕಲ ಹೃದಯವ ಸೇರಿದೆ
ನೋವನೊಪ್ಪಿದೆ ಸಾವನಪ್ಪಿದೆ | ಜಡ ಶರೀರವ ತೂರಿದೆ.
ಭಾವಿತಾತ್ಮನೆ ಬಂದ ಭೂಮಿ ಪ | ವಿತ್ರಮಾಯ್ತು ತ್ಯಾಗದೆ
ಆವ ಘನತೆಯ ಮಹಿಮೆಯಿಂದಲಿ | ನಿನ್ನ ಪಡೆದೆವೊ ಪುಣ್ಯದೆ.

ಲೋಕ ವೈಭವ ನಿನ್ನ ಸುಸ್ವಾ | ಗತಿಸಿ ಕರೆದರೆ ನೋಡದೆ
ಸಾಕು ಹರಿಜನ ಸೇವೆಯೆಂದೇ | ಉಸಿರು ಮೀಸಲು ಮಾಡಿದೆ.
ಬೇಕು ಮನಸಾ ವಾಚ ಕರ್ಮದೊ | ಳೊಂದೆ ಕೃತಿ ಧೃತಿಯೆನ್ನುತೆ
ಏಕಕಂಠದೊಳೊರದೆ ಶ್ರದ್ದಾ | ಸಹನೆ ಪಾವನಮೆನ್ನುತೆ.

ನೀರು-ನಲಮಾಕಾಶ-ಗಾಳಿಯು | ನಿರುತ ಪಾವನವಾದುದು
ಶೌರ್ಯ ಶಮೆ ದಮೆ ತಪಸು ಶೌಚಾ | ಚಾರ ಜೋತಿಯ ಪಡದುದು
ಆರು ಬಳಗಂ ನಿನ್ನದಾವುದು | ಎಲ್ಲ ಲೋಕವ ಸೇರ್ದುದು !
ಆರು ನಿನ್ನವರಲ್ಲ ಧರೆಯಲಿ ? | ನಿನ್ನದಲ್ಲದದಾವುದು?

ಸಿರಿ ಸರಸ್ವತಿ ಶಕ್ತಿ ನಿನಗೂಲಿ | ದಿಹರು ತಾವ್ನಲಿಯುತ್ತಲಿ
ಹರಿಹರಾದಿ ವಿರಿಂಚಿ ಧರ್ಮರು | ಹರಸುತಲಿವರು ಮುದದಲಿ
ವರ ಕುಬೇರನು ತೊತ್ತು ಶಕ್ರನು | ವಿಭವ ತೊರೆದನು ಒಲ್ಲದೆ
ಚರಣಸೇವೆಯ ಮಾಡಿ ನಿಂದರು | ಎಲ್ಲ ಜನಪದಮೂಲದೆ.

ಜಗದ ಹಿತವಂ ಬಗೆದು ನಿನ್ನನೆ | ಮರೆತೆ ಗುಂಡಿಗೆ ನೀಗಿದೆ
ಒಗೆದು ನಶ್ವರದೇಹ ಸೂಕ್ಷ್ಮದಿ | ಎಲ್ಲ ಹೃದಯವ ಸೇರಿದೆ.
ಭಾರತಿಗೆ ನವಜನ್ಮವೀಯುತ | ಸುಪ್ರಕಾಶದಿ ಬೆಳಗಿದೆ.
ಆರತಿಯನೆತ್ತುತಲಿ ಕಣ್ಮರೆ | ಯಾದೆ ಪೂರಣಗೊಳಿಸದೆ.

ಎಲ್ಲ ಜಗವಂ ಸೆಳೆದು ಸಮ್ರಾಟ್ | ಮಕುಟ ತಾಳಿದೆ ಕಾಣದೆ
ಒಲ್ಲೆನೆಂದರು ಬಿಡದು ನಿನ್ನ೦ | ಲೋಕ ಮೆಚ್ಚಿಹ ಪ್ರೇಮದೆ
ರಾಜತಂತ್ರ ವಿವೇಕ ಪರಮಾ| ರ್ಥಗಳು ಭಕ್ತಿ ವಿರಾಗವು
ರಾಜಿಸುತ್ತಿವೆ ಸುಪ್ರಕಾಶದಿ | ನಿನ್ನ ಹೃದಯವ ನೀಗವು.

ಧರೆಯ ಧನ್ವಂತರಿಯೆ ನೀನೆ | ಲ್ಲಿರಲು ನಮ್ಮನು ನೋಳ್ಪುದು
ಕರೆದು ಕೃಪೆಯಂ ಪೊರೆ ಜಗತ್ತನು | ಅಭಯಹಸ್ತವ ತೋರ್ವುದು.
ಹಿರಿಯ ನೀನವತಾರ ಪುರುಷಂ | ಎಂದು ಲೋಕವೆ ಪೇಳ್ವುದು
ಇರಲಿ ನಿನ್ನೀ ಸ್ಮರಣೆ ಸಂತತ | ಎಲ್ಲರೊಳು ಸಮಭಾವದಿ.
*****
೩೦-೧-೧೯೪೮

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...