Home / ಕವನ / ಕವಿತೆ / ಭೂಮದ ಹಾಡು

ಭೂಮದ ಹಾಡು

ಹಂದವೂರದಾಗ ಛಂದಽ ಛಂದದೊಲಿ ಹೂಡಿ|
ಗಂದದ ಚಿಕ್ಕಿ ಪುಟೊ ಮಾಡಿ | ಸೋ ||
ನಂದೀ ಮನಾರಿ ಸೋ ||೧||

ಗಂಧುವದ ಚೆಕ್ಕಿ ಪುಡಿಮಾಡಿ ಮದುಮಗನ|
ಅಕ್ಕ ಮಾಡ್ಯಾಳೊಂದಡಽಗೀಯ | ಸೋ ||
ನಂದೀ ಮನಾರಿ ಸೋ ||೨||

ಹಂದವೂರದಾಗೆ ಛಂದಽ ಛಂದದೊಲಿ ಹೊಡಿ|
ಕಪ್ಪುರದ ಚೆಕ್ಕಿ ಪುಟಮಾಡಿ | ಸೋ ||
ನಂದೀ ಮನಾರಿ ಸೋ ||೩||

ಕಪ್ಪುವುರದ ಚೆಕ್ಕಿ ಪುಟಮಾಡಿ ಮದುಮಗನ|
ತಾಯಿ ಮಾಡ್ಯಾಳೊಂದಡಽಗೀಯ | ಸೋ ||
ನದೀ ಮನಾರಿ ಸೋ ||೪||

ಹಸನುಳ್ಳ ಕಣಕೀಗಿ ಬಿಸಿನೀರ ಛಳಿಕೊಟ್ಟು|
ಎಸಳ ಯಾಲಕ್ಕೀ ಪುಡೀ ಬೆಲ್ಲಽ | ಸೋ ||
ನಂದೀ ಮನಾರಿ ಸೋ ||೫||

ಎಸಳ ಯಾಲಕ್ಕಿ ಪುಡಿ ಬೆಲ್ಲ ಛೆಜ್ಜಕದ|
ಬಿಸಿ ಹೋಳ್ಗಿ ಭೂಮಾಕ ಬರಽಬೇಕ | ಸೋ ||
ನಂದೀ ಮನಾರಿ ಸೋ ||೬||

ಸಣ್ಣುಳ್ಳ ಕಣಕೀಗಿ ಧಣ್ಣೀರಾ ಛಳಿಕೊಟ್ಟು|
ಸಣ್ಣ ಯಾಲಕ್ಕೀ ಪುಡೀ ಬೆಲ್ಲಽ | ಸೋ ||
ನಂದೀ ಮನಾರಿ ಸೋ ||೭||

ಸಣ್ಣ ಯಾಲಕ್ಕಿ ಪುಡಿ ಬೆಲ್ಲಽ ಹುರಣದ
ಎಣ್ಹ್ಯೋಳ್ಗಿ ಭೂಮಾಕ ಬರಽಬೇಕ | ಸೋ ||
ನಂದೀ ಮನಾರಿ ಸೋ ||೮||

ಹೊತ್ತಽಕ ಕರಕಽಕ ಕೆಚ್ಚೆಗ್ಗಳಾದಾಽವ|
ಹತ್ತು ಮಾನಽದ ಪರಽಡೀಯ | ಸೋ ||
ನಂದೀ ಮನಾರಿ ಸೋ ||೯||

ಹತ್ತು ಮಾನಽದ ಪರಡೀಯ ಪಾಯಸಾ|
ಮತ್ತೊಬ್ಳ ಜಾಣಿ ಎಡೀ ಮಾಡಽ | ಸೋ ||
ನಂದೀ ಮನಾರಿ ಸೋ ||೧೦||

ಮತ್ತೊಬ್ಳ ಜಾಣಿ ಎಡಿ ಮಾಡಽ ತಂಗೆವ್ವಾ |
ಮುತ್ತಿನ ಕಂಕಽಣ ತಿರಽವೂತ | ಸೋ ||
ನಂದೀ ಮನಾರಿ ಸೋ ||೧೧||

ಆರಾಕ ತೂರಾಕ ನೀರೆಗ್ಗಳಾದಾವಽ|
ಆರ ಮಾನದಽ ಪರಡೀಯ | ಸೋ ||
ನಂದೀ ಮನಾರಿ ಸೋ ||೧೨||

ಆರ ಮಾನದಽ ಪರಡೀಯ ಪಾಯಸ|
ಮ್ಯಾಲೊಬ್ಳ ಜಾಣಿ ಎಡೀ ಮಾಡಽ | ಸೋ ||
ನಂದೀ ಮನಾರಿ ಸೋ ||೧೩||

ಮ್ಯಾಲೊಬ್ಳ ಜಾಣೀ ಎಡಿ ಮಾಡಽ ತಂಗೆವ್ವಾ|
ಹವಳದ ಕಂಕಣಾ ತಿರವೂತ ಸೋ||
ನಂದೀ ಮನಾರಿ ಸೋ ||೧೪||

ಮದುಮಗನ ಭೂಮಾಕಽ ಮತ್ತ್ಯಾನು ಬರಬೇಕ|
ಇಪ್ಪತ್ತೊಂದಡಕೀ ಬಿಳೀ ಎಲಿಯ | ಸೋ ||
ನಂದೀ ಮನಾರಿ ಸೋ ||೧೫||

ಇಪ್ಪಂತ್ಕೊಂಡಕೀ ಬಿಳಿಯೆಲಿ ಕುಬಸಿನ ಗಳಿಗಿ|
ಬಾಲನ ಭೂಮಾಕ ಬರಽಬೇಕಽ | ಸೋ ||
ನಂದೀ ಮನಾರಿ ಸೋ ||೧೬||

ಬನದಾಗ ಬಿತ್ತೂದು ಬನದಾಗ ಬೆಳೆಯೂದು|
ಬನದಾಗ ಚಾಲೀ ಎರಽಗೂದುಽ | ಸೋ ||
ನಂದೀ ಮನಾರಿ ಸೋ ||೧೭||

ಬನದಾಗ ಚಾಲಿ ಎರಗೂವ ಬಿದುರೀನ|
ಬುಟ್ಟಿ ಭೂಮಾಕಽ ಬರಽಬೇಕಽ | ಸೋ ||
ನಂದೀ ಮನಾರಿ ಸೋ ||೧೮||

ಹಾಳಾಗ ಬಿತ್ತೂದು ಹಾಳಾಗ ಬೆಳವೂದು|
ಹಾಳಾಗಿಂಬಾಗಿ ಇರಽವೂದ | ಸೋ ||
ನಂದೀ ಮನಾರಿ ಸೋ ||೧೯||

ಹಾಳಾಗಿಂಬಾಗಿ ಇರವೂದ ನಿಂಬೀಯ|
ಹೋಳ ಭೂಮಾಕ ಬರಽಬೇಕ | ಸೋ ||
ನಂದೀ ಮನಾರಿ ಸೋ ||೨೦||

ಮಡ್ಡ್ಯಾಗ ಬಿತ್ತೂದು ಮಡ್ಡ್ಯಾಗ ಬೆಳವೂದು|
ತಂದಽರ ಮನಿಗಿ ಬರಽವೂದ | ಸೋ ||
ನಂದೀ ಮನಾರಿ ಸೋ ||೨೧||

ತಂದೂವರ ಮನಿಗಿ ಬರುವ ಮುಕಣೀಯ|
ಹಪ್ಪಳ ಭೂಮಾಕ ಬರಽಬೇಕ | ಸೋ ||
ನಂದೀ ಮುನಾರಿ ಸೋ ||೨೨||

ಎರಿಯಾಗ ಬಿತ್ತೂದು ಎರಿಯಾಗ ಬೆಳವೂದು|
ತಂದರ ಮನಿಗೀ ಬರಽವೂದ | ಸೋ ||
ನಂದೀ ಮನಾರಿ ಸೋ ||೨೩||

ತಂದೂವರ ಮನಿಗಿ ಬರವೂವ ಕಡಲೀಯ|
ಶಂಡಿಗಿ ಭೂಮಾಕ ಬರಽಬೇಕ | ಸೋ ||
ನಂದೀ ಮನಾರಿ ಸೋ ||೨೪||

ಮೆಂತಿಖಡ್ಡೀ ಹುಕಿ ಅತ್ತೀ ತುಪ್ಪವ ಕಾಸ|
ಇಪ್ಪಪತ್ತೊಂದೋಣೀ ಎಸೆದಾಽವ | ಸೋ ||
ನಂದೀ ಮನಾರಿ ಸೋ ||೨೫||

ಇಪ್ಪಪತ್ತೊಂದೋಣಿ ಎಸೆದಾವಽ ಈ ತುಪ್ಪಾ|
ಬಾಲನ ಭೂಮಾಕ ಬರಽಬೇಕ | ಸೋ ||
ನಂದೀ ಮನಾರಿ ಸೋ ||೨೬||

ಶಾಂವೀಗಿ ಸೈದಾನ ಮಾವಿನುಪ್ಪಿನಕಾಯಿ|
ಮ್ಯಾಲ ಕುರಡೀಯಽ ಇಡವೂಽದ | ಸೋ ||
ನಂದೀ ಮನಾರಿ ಸೋ ||೨೭||

ಮದುಮಗನ ಭೂಮಾಕ ಮತ್ತ್ಯಾರು ಬರಬೇಕ|
ಅಪ್ಪಾದಾಗಪ್ಪಾ ಹಿರಿಯಪ್ಪಾ | ಸೋ ||
ನಂದೀ ಮನಾರಿ ಸೋ ||೨೮||

ಅಪ್ಪಾದಾಗಪ್ಪಾ ಹಿರಿಯಪ್ಪಾ ತಾ ಬಂದು|
ಮುಚ್ಚಿಟ್ಟ ಭೂಮಾ ತೆರಽಸ್ಯಾನ | ಸೋ ||
ನಂದೀ ಮನಾರಿ ಸೋ ||೨೯||

ಮದುಮಗನ ಭೂಮಾಕ ಮತ್ತ್ಯಾರು ಬರಬೇಕ।
ಅಣ್ಣಾದಾಗಣ್ಣಾ ಹಿರೀಯಣ್ಣಾ | ಸೋ ||
ನಂದೀ ಮನಾರಿ ಸೋ ||೩೦||

ಆಣ್ಣಾದಾಗಣ್ಣಾ ಹಿರಿಯಣ್ಣ ತಾ ಬಂದು|
ಹೊನ್ನಿಟ್ಟ ಭೂಮಾ ತೆರಽಸ್ಯಾನ | ಸೋ ||
ನಂದೀ ಮನಾರಿ ಸೋ ||೩೧||

ಮದುಮಗನ ಭೂಮಾಕ ಮತ್ತ್ಯಾರು ಬರಬೇಕ।
ಆವ್ವಾದಾಗವ್ವ ಹಿರೀಯವ್ವಾ | ಸೋ ||
ನಂದೀ ಮನಾರಿ ಸೋ ||೩೨||

ಅವ್ವಾದಾಗ ಅವ್ವಾ ಹಿರಿಯವ್ವಾ ತಾ ಬಂದು|
ಉಂಗ್ರಿಟ್ಟು ಭೂಮಾ ತೆರಸ್ಯಾಳ | ಸೋ ||
ನಂದೀ ಮನಾರಿ ಸೋ ||೩೩||

ಯಾವಣ್ಣ ಸೋತಾನ ಯಾವಣ್ಣ ಗೆದ್ದಾನ|
ಯಾವಣ್ಣ ನೀರಾ ಮುಗಽದಾನ | ಸೋ ||
ನಂದೀ ಮನಾರಿ ಸೋ ||೩೪||

ಭೀಮಣ್ಣ ಸೋತಾನ ಕಾಮಣ್ಣ ಗೆದ್ದಾನ|
ನಮ್ಮಣ್ಣ ನೀರ ಮುಗಽದಾನ | ಸೋ ||
ನಂದೀ ಮನಾರಿ ಸೋ ||೩೫||
*****

“ಭೂಮ”ವೆಂಬ ಶಬ್ದಕ್ಕೆ ಸಂಸ್ಕೃತದಲ್ಲಿ “ಸರ್ವವನ್ನೊಳಗೊಂಡದ್ದು” ಎಂಬರ್ಥವಿದೆ. “ಭೂಮ” ಎಂದರೆ ಖಂಡರಹಿತವಾದದ್ದು. “ಖಂಡದಲ್ಲಿ ಸುಖವಿಲ್ಲ, ಆಖಂಡದಲ್ಲಿ ಸುಖವಿದೆ”ಎಂಬರ್ಥದ ಉಪನಿಷದ್ವಾಕ್ಯವೊಂದು ಸರ್ವಶ್ರುತವೇ ಇದೆ. “ಬಿಡಿಯಲ್ಲಿ ಸುಖವಿಲ್ಲ, ಇಡಿಯಲ್ಲಿ ಸುಖವಿದೆ” ಎಂದು ಅದರ ಅರ್ಥ.

ಅಕ್ಷತೆ ಬಿದ್ದಮೇಲೆ, ಮತ್ತು ಮೆರವಣಿಗೆ ಮುಗಿದ ಮೇಲೆ, ಹೀಗೆ ಎರಡು ಸಾರಿ ಈ “ಭೂಮದ” ವಿಧಾನವು ಜರುಗಿಸಲ್ಪಡುತ್ತದೆ. “ಭೂಮ”ವೆಂದರೆ ಒಂದು ರೀತಿಯಿಂದ ಲಗ್ನಶಾಂತಿಯ ಮಹಾನೈವೇದ್ಯ (ಬಡಿವಾಣ)ವೆಂದು ಹೇಳಬಹುದು. ಸರ್ವವಿಧದ ಪಕ್ವಾನ್ನಗಳನ್ನು ಮದುಮಕ್ಕಳ ಮುಂದೆ ಹೊಸದುರುಡಿ(ಬಿದುರಿನ ಬುಟ್ಟಿ)ಯ ಕೆಳಗೆ ಮುಚ್ಚಿ ಇಟ್ಟು ಮುತ್ತೈದೆಯರು ಮತ್ತು ವಿವಾಹಿತ ಪುರುಷರು ಅದನ್ನು ತೆರೆದು ಉಣ್ಣುವರು. ಮೊದಲನೆಯ ಭೂಮ ಹೆಣ್ಣುಮಕ್ಕಳದು. ಎರಡನೆಯದು ಗಂಡಸರದು.

ಇದರಲ್ಲಿ ಸರ್ವಭೋಜನಪದಾರ್ಥಗಳ ಸಮಾವೇಶವಿರುವುದರ ಅರ್ಥವು ದಂಪತಿಗಳ ಸಾಂಸಾರಿಕ ಜೀವನದಲ್ಲಿ ಬರತಕ್ಕ ಸರ್ವವಿಧದ ಸಂಗತಿಗಳನ್ನು ಸೂಚಿಸುವುದು. ಜೀವನದ ಸರ್ವಾಂಗೀನ ಸ್ವರೂಪವನ್ನು ಮಹಾನೈವೇದ್ಯದಂತೆ (ಈಶಪ್ರಸಾದವೆಂದು) ಸ್ವೀಕರಿಸುವುದಕ್ಕೆ ದಂಪತಿಗಳು ದೀಕ್ಷೆ ಹೊಂದಿದಂತೆಯೇ ಸರಿ.

ಛಂದಸ್ಸು:- ತ್ರಿಪದಿ.

ಶಬ್ದಪ್ರಯೋಗಗಳು:- ಹಂದವೂರದಾಗ=ಹಂದರದಲ್ಲಿ. ಪುಟು ಮಾಡು=ಹೊತ್ತಿಸು. ಮಾನಾರಿ=ಮಹಾನಾರಿ, ಮಾನಾರಿಗೆ ನಂದಿಯ ಸಂಬಂಧವೇನೋ ನಮಗೆ ತಿಳಿಯದು. ಛಳಿಕೊಟ್ಟು=ಸಿಂಪಡಿಸಿ. ಛೆಜ್ಜಕ=ಸಜ್ಜಿಗೆ. ಮಾನ=ಒಂದು ಅಳತೆ. ಚಾಲಿ=ಮೆಳೆ? ಹಾಳಾಗ=ಹಾಳುನೆಲದಲ್ಲಿ, ಮಡ್ಡಿ=ಮೊರಡಿ ಭೂಮಿ. ಎರಿ=ಕರಿನೆಲ. ಎಸೆ=ವಾಸನೆ ಹಬ್ಬು. ಶಾಂವಿಗಿ ಕುರುಡಿ=ಊಟದ ಪದಾರ್ಥಗಳು. ಕೊನೆಯ ನುಡಿಗಳಲ್ಲಿ ಬರುವ ಸೋಲು ಗೆಲವುಗಳು ಊಟಕ್ಕೆ ಸಂಬಂಧಿಸಿವೆ. ನೀರಮುಗಿ=ಕೈ ತೊಳೆದುಕೋ.

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...