Home / ಕವನ / ಕವಿತೆ / ಬದುಕು ಬೇಡ ಅನ್ನಿಸಲಿಲ್ಲ

ಬದುಕು ಬೇಡ ಅನ್ನಿಸಲಿಲ್ಲ

ಜ್ವರ ನೂರಾನಾಲ್ಕು ಡಿಗ್ರಿಗೆ ಏರಿ ಎದೆ ಹಾರಿ
ಹೋದಾಗಲೂ ಈ ಡಿಗ್ರಿಗಳ ಕೋಟೆಗಳ ಮೀರಿ
ಪ್ರಾಣಪಕ್ಷಿ ಎನ್ನುತ್ತಾರಲ್ಲ ಅದು ರೆಕ್ಕೆ ಬಿಚ್ಚಿ
ಪುರ್ರಂತ ದಿಗಂತ ಸೇರಿ ಅಂಥದೇ ಪಕ್ಷಗಳ ಪ್ರಭಾತಫೇರಿ
ಕೂಡಿಕೊಳ್ಳಲಿ ಈ ಜೀವ ಗರಂ ಇದ್ದುದು ನರಂ ಆಗಲಿ
ಅನ್ನಲಿಲ್ಲ ಆ ಹೊತ್ತಿನಲ್ಲೂ ಸಾವು ಬೇಕೆನಿಸಲಿಲ್ಲ

ಈ ಕೆಂಪು ಬಿಳಿ ಪಂಚ ಪಂಚ ಪ್ರಾತಃಕಾಲ
ಹೇಗೆ ಹೋಗಲಿ ಬದುಕಿನ ಬಟ್ಟೆಗಳ ಕಳಚಿ-
ಜೀವದ ತುಂಬ ವ್ಯಥೆ ತುಂಬಿ ಒಂದು ಥರಾ
ಹೊಟ್ಟೆ ತೊಳೆಸಿ ಬಂತು ಉಸಿರು ಅಲ್ಲೂ ಇಲ್ಲೂ
ತೇಕುತ್ತಿದ್ದಾಗಲೂ ಬದುಕು ಎಷ್ಟು ಸಿಹಿ ಎಷ್ಟು ಸಹ್ಯ
ಅನುಪಾನ ಉಪಚಾರ ತಣ್ಣೀರು ಪಟ್ಟಿಗಳ ಸಶ್ರಮ ಶಿಕ್ಷೆಯ ನಡುವೆ
ನನ್ನ ಚೈತನ್ಯ
ಗೋಕರ್ಣದ ಬೇಲೆ ದೇವಸ್ಥಾನಗಳನ್ನು ಸುತ್ತಾಡಿ
ಹಿರೇಗುತ್ತಿಯನ್ನು ಮೂಸುತ್ತ ಹೊರಟಿತು

ನನ್ನ ಹಳೆಯ ಕನ್ನಡ ಶಾಲೆಯ ಹತ್ತಿರ ಕಾರು ನಿಂತಿತು
ಇಲ್ಲಿಯ ಕ್ಲಾಸುಗಳಲ್ಲಿ ಅಂಗಿ ಚಡ್ಡಿಯ ನಾನು ಇದ್ದೆ
ಒಂದು ದಿನ ಮನೆಗೋಡಿ ಬರುವಾಗ ಇದೇ ಕಂಪೌಂಡಿನಲ್ಲೊಮ್ಮೆ ಬಿದ್ದೆ
ಮಣ್ಣು ಬಾಯೊಳಹೊಕ್ಕಿತು ಥೂಥೂ ಉಗಿದೆ ಎಲ್ಲ ನಗಬೇಕಿತ್ತು
ನಗಲಿಲ್ಲ ನಾ ಇದ್ದಾಗಲೇ ಅಲ್ಲಿದ್ದ ಧ್ವಜದ ಕಂಬ ಕಿತ್ತು ಇಲ್ಲಿ ಹುಗಿದರು
ನನ್ನ ಜೊತೆ ಇದ್ದವರೆಲ್ಲ ಈಗ ಎಲ್ಲೆಲ್ಲಿದ್ದಾರೆ ಮತ್ತೆ
ಹಾಗೆ ಒಟ್ಟಿಗೆ ಸೇರಲಾರೆವು ಇವೆಲ್ಲ ಒಮ್ಮುಖದ ಓಟ
ಯಾವುದೋ ಗುರಿ ಮುಟ್ಟಲಿಕ್ಕಿರುವ ಒಂದೇ ಉಸಿರಿನ ಆಟ
ಇಲ್ಲಿಯ ಕಬಡ್ಡಿ ಮೂಲೋದ್ಯೋಗ ವ್ಯಾಯಾಮ ಪ್ರಾರ್ಥನೆ
ಪಂಚಾಂಗ ಅಮೃತವಾಣಿ ವಾರದ ಚರ್ಚಾಕೂಟ ಬೆಳಗಿನ ಉಪ್ಪಿಟ್ಟು
ನನ್ನ ಮಾಸ್ತರರು ಅಕ್ಕವರು ಗೆಳೆಯರು ಚಾಡಿ ಮಾತು….
ಜ್ವರ ತೊಂಬತ್ತೊಂಬತ್ತಕ್ಕೆ ಇಳಿಯಿತು

ಕಿವಿಯಲ್ಲಿ ಅಘನಾಶಿನಿ ಮೊರೆದಳು
ಅಘನಾಶಿನೀ ನನಗೆ ಹಾದಿ ಬಿಡು
ಅಲ್ಲಿ ತಾರೀಕಟ್ಟೆಯಲ್ಲಿ ಒಂದರೆಗಳಿಗೆ ಕೂತು
ನಿನ್ನ ನೋಡಿ ಮೈ ಮರೆಯುವೆ ಹೇಳು
ಈ ಚಂದ್ರನ್ನ ನಕ್ಷತ್ರಗಳ ತೊಟ್ಟಿಲು ಕಟ್ಟಿ ತೂಗಿದರಾರು
ನಿನ್ನ ಗರ್ಭದ ಪಾತಾಳದೊಳಗೆ ಸೇರಿದ ಜೀವಗಳೆಷ್ಟು
ಈ ದಡವನ್ನು ಕಾಲುಗಳು ತುಳಿದವು
ನಕ್ಷತ್ರಗಳು ಮೈ ತೊಳೆಯಲು ನಿನ್ನಲ್ಲಿಗೇ ಬಂದಿದ್ದವೇ
ಈ ತಾರಿಕಟ್ಟಿ ಕಟ್ಟಿದವರಾರು ಸಭಾಹಿತರ ಮನೆಯವರು
ಯಾವಾಗ ಬಂದರು ನಿನಗೆಷ್ಟು ವರ್ಷ ಇಲ್ಲಿ ರಾಮಸೀತೆ
ಬಂದಿದ್ದು ನಿಜವೇ ಆ ನಾಯಿಯನ್ನು ಆ ಜನರು ಗುಂಡಿಟ್ಟು
ಕೊಂದರೇ ಈ ತೆಂಗಿನ ಮರದ ಕಾಯಿಗಳನ್ನು ಕದ್ದವರಾರು
ದಿವಸದ ಮೊದಲಿನ ದೋಣಿ ಎಷ್ಟಕ್ಕೆ ಹೊರಡುತ್ತದೆ
ಇವರೆಲ್ಲ ಎಲ್ಲಿಯವರು ಏನಾಗಲಿರುವರು ನೀನು ಎಲ್ಲಿಂದ ಬಂದೆ
ಹೋಗುವೆ ಎಲ್ಲಿಗೆ ಈ ನೈಟ್ ಹಾಲ್ಟ್ ಬಸ್ಸು ಇವತ್ತು ರಾತ್ರಿ
ಎಷ್ಟಕ್ಕೆ ಬಂತು ಈ ಹಾದಿ ದೀಪದ ಮಂದ ಬೆಳಕಲ್ಲಿ
ಹೊಳೆವ ಕಲ್ಲು ಬೂದಿ ಮಣ್ಣು ಬೀದಿನಾಯಿ ಪಾಗಾರ ಕೆಂಪುಬಸ್ಸು
ಇವುಗಳ ಅರ್ಥ ಹೇಳು ಅಘನಾಶಿನೀ ನಿನ್ನ ಸುದೀರ್ಘ ಮೌನ
ಕಳೆದು ಏನೇನೆಂದು ಉಸುರು ಈ ನಿನ್ನ ಗಂಡನ ಹೆಸರು
ಹೇಳು ಇಲ್ಲದಿದ್ದರೆ ನನ್ನ ತಲೆ ಹಾಳಾಗಿ ಹೋಳಾಗಿ ಹೋಗುವುದು
ತಾಯೀ ಅದಕ್ಕಾಗಿಯಾದರೂ ಮಾತಾಡು ನನ್ನ ಚೈತನ್ಯ
ನಿನ್ನ ಮಾತುಗಳಿಂದ ಶಾಂತವಾಗಲಿ
*****

 

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...