Home / ಕವನ / ಕವಿತೆ / ಅಗಲಿಕೆ

ಅಗಲಿಕೆ

ಸಾರಂಗ

ಅಗಲಿಕೆಯೆ, ನಿನ್ನಗಲನಳೆಯುವವರಾರು ?
ಬಗೆಯೊಲವೆ ನಿನ್ನ ನೆಲೆ ತಿಳಿಯುವವರಾರು ?

ಹಿಂದೆ ಗೋವಳತಿಯರು ನಂದಕಂದನನಗಲಿ
ದಂದುಗದಿ ಮೈಮನದ ಹೊಂದಿಕೆಯ ಮರೆಯುತಲಿ
ನೊಂದು ನಿಡುಸರದಿ ಮನಬಂದಂತೆ ಕೂಗುತಲಿ
ಬೆಂದು ಬಾಯ್‌ಬಿಡುತ ಅಲೆದಾಡಿದರು ಅಡವಿಯಲಿ
“ಹುಲ್ಲೆಯೇ ನಲ್ಲನೆಲ್ಲಿರುವ ನೀನರುಹು !
“ಕೋಗಿಲೆಯೆ ಕೂಗಿ ನುಡಿ ಅವನಿರುವ ಕುರುಹು !
“ಗಿಳಿಹಿಂಡೆ ಕಂಡಿಹೆಯ ಗೆಳೆಯನನು ? ಹೇಳು !
“ಅಳಿಕುಳವೆ ಅಡಗಿರುವನೆಲ್ಲಿ ನಮ್ಮಾಳು ?

“ಅಣ್ಣ ! ಗರಿಗಣ್ಣ ! ಮನದನ್ನನಿರುಹನು ತಿಳುಹು !
“ಹೆಣ್ಣುಗಳ ಹೋಗಲಿಹ ಹರಣಗಳ ನೀನುಳುಹು !
“ಹಕ್ಕಿಗಳೆ, ನುಡಿಹೇಳಿ ಚಿಕ್ಕ ಚೆನ್ನಿಗನೆಲ್ಲಿ?
“ದಿಕ್ಕ ತೋರಿರಿ, ಸಾಕು, ಹೊಕ್ಕು ಹುಡುಕುವೆವಲ್ಲಿ!
“ಜಂಗುಳಿಯ ಹಸುಗಳೇ ರಂಗನೆಲ್ಲಿಹನು?
“ಕಂಗಳಿಗೆ ಕಾಣದೊಲು ಮೈಯ ಮರೆಸಿಹನು;
“ಮಂಗಣ್ಣಗಳಿರ, ಮಿತ್ರನ ಮರೆಯ ಹೇಳಿ!
“ಹೆಂಗಳೀ ಹರಕೆಯನು ಹೊಂದಿ ಸೊಗಬಾಳಿ!

“ಮರಬಳ್ಳಿಗಳೆ ಅರುಹಿ ಹರಿಯಿರುವ ತಾಣವನು !
“ಕೆರೆತೊರೆಗಳೇ ತೋರಿ ಅರಸನಿಹ ಗುರುತನ್ನು !
“ಹೊಳೆಯಮ್ಮ, ತಿಳುಹಿಸೌ ಕೊಳಲಿಗನ ನೆಲೆಯನ್ನು !
“ಬೆಟ್ಟದೊರೆ, ಮೂಗುತನ ಬಿಟ್ಟು ತೋರಾತನನು !
“ಮುಗಿಲೆ, ನಿನ್ನಂತಿರುವ ಸೊಗಸೊಡಲನೆಲ್ಲಿ ?
“ಹಗಲೊಡೆಯ, ನಮ್ಮ ಬಗೆಗಳ್ಳನಿಹನೆಲ್ಲಿ ?
“ಸುಳಿವೆಲರೆ, ನಮ್ಮೊಲವ ಸುಲಿದಾತನೆಲ್ಲಿ?
“ಬನಸಿರಿಯೆ, ನಮ್ಮ ಮನ ತಣಿಸುವವನೆಲ್ಲಿ?”

ಇಂತು ಹೆಣ್ಣುಗಳು ಕಣ್ಣಿಗೆ ಕಂಡುದೆಲ್ಲವನು-
ನಸುವು ತಿಳಿವಿರದಿರುವ ಹಸು ಹಕ್ಕಿ ಮಿಗಗಳನು-
ಉಸಿರಿಲ್ಲದಿಹ ಬಳ್ಳಿ-ಹಸಿರು-ಗಿಡ-ಮರಗಳನು-
ನುಡಿಸುತಳುತಲೆದ ಕತೆಯನ್ನ೦ದು ಕೇಳಿದೆನು.
‘ಹುಚ್ಚು ಹೆಣ್ಣುಗಳವರು !’ ಎಂದು ಬಗೆದಂದೆ
‘ಹೆಚ್ಚು ಇದು ! ಎಲ್ಲ ಕವಿಕಲ್ಪನೆಯು !’ ಎಂದೆ;
‘ಕೆಲಸವಿಲ್ಲದ ಕವಿಗೆ ಹುಸಿಯ ಹೆಣೆಯುವುದೇ
‘ಬಲು ಕೆಲಸ!’ ಎಂದು ಬೀಳ್‌ಗಳೆದು ನಾ ನುಡಿದೆ.

ಅಂದೆನಗೆ ತಿಳಿಯದೆಯೆ ಬಾಯ್ಗೆ ಬಂದುದನೊರೆದೆ;
ಇಂದು ಆ ಕತೆಯೆಲ್ಲ ಸರಿಯೆಂದು ತೋರುತಿದೆ.
ಸಟಿಯಲ್ಲ ಕವಿಯುಸಿರು, ಹುಚ್ಚಲ್ಲ ಹುಡುಗಿಯರು,
ದಿಟವನನುಭವಿಸದೆಯೆ ಅರಿತವರದಾರಿಹರು ?
‘ಮುಳುಗದೆಯೆ ನೀರ ನೆಲೆಯೊಳಗನರಿಯಲಿಕೆ-
‘ಬೆಳಕಳಿದ ಕಣ್ಗೆ ತಿಂಗಳನು ತಿಳಿಯಲಿಕೆ-
‘ಎಂತಾಗುವುದು?’ ಎಂಬ ಕಂಡುಂಡ ಮಾತು
ಇಂತೆನಗೆ ತಿಳಿದು ಮನದಾ ಮುಸುಕು ಹೋಯ್ತು.

ದೂರವಿಹ ನನ್ನಿನಿಯನೂರ ದಿಕ್ಕಿನ ಮುಗಿಲು
ಏರಿ ನನ್ನಯ ಬಳಿಯ ಸಾರಿ ಬರೆ ಬಾನಿನೊಳು,
ನನ್ನವುಗಳೆಂದು ನೇಹದ ನೆಟ್ಟ ನೋಟದಲಿ
ಮುಗಿಲ ನೋಡುತ ನಿಲುವೆ ಹಲವು ಹಾರಯಿಸುತಲಿ;
ದೊರೆಯಿರುವ ದೆಸೆಯಿಂದ ಹಕ್ಕಿಗಳು ಹಾರಿ
ಬರುತಿರಲು, ಹರುಷದೊಳು ನವಿರುಗಳು ನಿಮಿರಿ
ನನ್ನ ನಂಟುಗಳೆಂದು ನೆನೆವೆನವುಗಳನು,
ನನ್ನಾತನೊಸಗೆಯನು ಕೇಳಲೆಳಸುವೆನು.

ಮೆಲುಗಾಳಿಯೆ ಇರಲಿ, ಬಲುಗಾಳಿಯೇ ಇರಲಿ,
ಗೆಳೆಯನಿಹ ಕಡೆಯಿಂದ ಸುಳಿದು ಒರೆ-ಮೋಹದಲಿ
ತಿಳಿಯುವೆನು ನಾ ತೀರ ಬಳಿಯಾಪ್ತನೆಂದದನು-
ತಿಳುಹಿಸಲು ನನ್ನೆದೆಯ ಒಳಮಾತನೆಲ್ಲವನು
ನಾಲಗೆಯು ನಲಿಯುವುದು, ಮನವು ಕುಣಿಯುವುದು
ಕೇಳಲಾತನ ಕತೆಯ ಕಿವಿಯು ಕೋರುವುದು,
ಹೀಗೆನ್ನ ನಾಡಿಸುವುದಾವುದದು ಹುಚ್ಚೋ..?
ಆಗದಿರಲಿನಿಯನಲ್ಲಿರುವೆದೆಯ ನಚ್ಚೋ…?

ಇನಿಯನನು ನೋಡಿ ನುಡಿಸಿದ ಮಂದಿಯೆಲ್ಲರನು
ಮನೆಯವರೆ ಎಂದು ನಾ ಮನ್ನಿಸುವೆನವರನ್ನು
ಮನದನ್ನನಾ ರೂಪುಗುಣದ ಬಣ್ಣನೆಯನ್ನು
ನನಗೊರೆಯೆ ನನ್ನ ನಾನೇ ಮರೆತು ಕೇಳುವೆನು.
ಎನಿತೊ ಜನರಿಲ್ಲವೇ ಮತ್ತೆ ನೆರೆಗಳೊಳು ?
ಎನಿಸುವರು ನನಗವರು ಬರಡುಬೊಂಬೆಯೊಲು;
ಮಾತಿಲ್ಲದುವನೆಲ್ಲ ಮಾತನಾಡಿಸುವೆ,
ಮಾತನಾಡುವರಲ್ಲಿ ಮಗುವಡೆದಿರುವೆ.

ಜಡವಸ್ತುಗಳನ್ನು ಜೀವಿಗಳಂತೆ ಕಾಣಿಸುವ
ನಡೆನುಡಿವ ಜೀವಿಗಳ ಜಡಗಳಂತಾಗಿಸುವ
ಅಗಲಿಕೆಯೆ, ನಿನ್ನ ಗಲಗಳೆಯುವವರಾರಿಹರು?
ಬಗೆಯೊಲವೆ ನಿನ್ನ ನೆಲೆ ತಿಳಿದವರದಾರು ?
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...