Home / ಕವನ / ಕವಿತೆ / ಅಗಲಿಕೆ

ಅಗಲಿಕೆ

ಸಾರಂಗ

ಅಗಲಿಕೆಯೆ, ನಿನ್ನಗಲನಳೆಯುವವರಾರು ?
ಬಗೆಯೊಲವೆ ನಿನ್ನ ನೆಲೆ ತಿಳಿಯುವವರಾರು ?

ಹಿಂದೆ ಗೋವಳತಿಯರು ನಂದಕಂದನನಗಲಿ
ದಂದುಗದಿ ಮೈಮನದ ಹೊಂದಿಕೆಯ ಮರೆಯುತಲಿ
ನೊಂದು ನಿಡುಸರದಿ ಮನಬಂದಂತೆ ಕೂಗುತಲಿ
ಬೆಂದು ಬಾಯ್‌ಬಿಡುತ ಅಲೆದಾಡಿದರು ಅಡವಿಯಲಿ
“ಹುಲ್ಲೆಯೇ ನಲ್ಲನೆಲ್ಲಿರುವ ನೀನರುಹು !
“ಕೋಗಿಲೆಯೆ ಕೂಗಿ ನುಡಿ ಅವನಿರುವ ಕುರುಹು !
“ಗಿಳಿಹಿಂಡೆ ಕಂಡಿಹೆಯ ಗೆಳೆಯನನು ? ಹೇಳು !
“ಅಳಿಕುಳವೆ ಅಡಗಿರುವನೆಲ್ಲಿ ನಮ್ಮಾಳು ?

“ಅಣ್ಣ ! ಗರಿಗಣ್ಣ ! ಮನದನ್ನನಿರುಹನು ತಿಳುಹು !
“ಹೆಣ್ಣುಗಳ ಹೋಗಲಿಹ ಹರಣಗಳ ನೀನುಳುಹು !
“ಹಕ್ಕಿಗಳೆ, ನುಡಿಹೇಳಿ ಚಿಕ್ಕ ಚೆನ್ನಿಗನೆಲ್ಲಿ?
“ದಿಕ್ಕ ತೋರಿರಿ, ಸಾಕು, ಹೊಕ್ಕು ಹುಡುಕುವೆವಲ್ಲಿ!
“ಜಂಗುಳಿಯ ಹಸುಗಳೇ ರಂಗನೆಲ್ಲಿಹನು?
“ಕಂಗಳಿಗೆ ಕಾಣದೊಲು ಮೈಯ ಮರೆಸಿಹನು;
“ಮಂಗಣ್ಣಗಳಿರ, ಮಿತ್ರನ ಮರೆಯ ಹೇಳಿ!
“ಹೆಂಗಳೀ ಹರಕೆಯನು ಹೊಂದಿ ಸೊಗಬಾಳಿ!

“ಮರಬಳ್ಳಿಗಳೆ ಅರುಹಿ ಹರಿಯಿರುವ ತಾಣವನು !
“ಕೆರೆತೊರೆಗಳೇ ತೋರಿ ಅರಸನಿಹ ಗುರುತನ್ನು !
“ಹೊಳೆಯಮ್ಮ, ತಿಳುಹಿಸೌ ಕೊಳಲಿಗನ ನೆಲೆಯನ್ನು !
“ಬೆಟ್ಟದೊರೆ, ಮೂಗುತನ ಬಿಟ್ಟು ತೋರಾತನನು !
“ಮುಗಿಲೆ, ನಿನ್ನಂತಿರುವ ಸೊಗಸೊಡಲನೆಲ್ಲಿ ?
“ಹಗಲೊಡೆಯ, ನಮ್ಮ ಬಗೆಗಳ್ಳನಿಹನೆಲ್ಲಿ ?
“ಸುಳಿವೆಲರೆ, ನಮ್ಮೊಲವ ಸುಲಿದಾತನೆಲ್ಲಿ?
“ಬನಸಿರಿಯೆ, ನಮ್ಮ ಮನ ತಣಿಸುವವನೆಲ್ಲಿ?”

ಇಂತು ಹೆಣ್ಣುಗಳು ಕಣ್ಣಿಗೆ ಕಂಡುದೆಲ್ಲವನು-
ನಸುವು ತಿಳಿವಿರದಿರುವ ಹಸು ಹಕ್ಕಿ ಮಿಗಗಳನು-
ಉಸಿರಿಲ್ಲದಿಹ ಬಳ್ಳಿ-ಹಸಿರು-ಗಿಡ-ಮರಗಳನು-
ನುಡಿಸುತಳುತಲೆದ ಕತೆಯನ್ನ೦ದು ಕೇಳಿದೆನು.
‘ಹುಚ್ಚು ಹೆಣ್ಣುಗಳವರು !’ ಎಂದು ಬಗೆದಂದೆ
‘ಹೆಚ್ಚು ಇದು ! ಎಲ್ಲ ಕವಿಕಲ್ಪನೆಯು !’ ಎಂದೆ;
‘ಕೆಲಸವಿಲ್ಲದ ಕವಿಗೆ ಹುಸಿಯ ಹೆಣೆಯುವುದೇ
‘ಬಲು ಕೆಲಸ!’ ಎಂದು ಬೀಳ್‌ಗಳೆದು ನಾ ನುಡಿದೆ.

ಅಂದೆನಗೆ ತಿಳಿಯದೆಯೆ ಬಾಯ್ಗೆ ಬಂದುದನೊರೆದೆ;
ಇಂದು ಆ ಕತೆಯೆಲ್ಲ ಸರಿಯೆಂದು ತೋರುತಿದೆ.
ಸಟಿಯಲ್ಲ ಕವಿಯುಸಿರು, ಹುಚ್ಚಲ್ಲ ಹುಡುಗಿಯರು,
ದಿಟವನನುಭವಿಸದೆಯೆ ಅರಿತವರದಾರಿಹರು ?
‘ಮುಳುಗದೆಯೆ ನೀರ ನೆಲೆಯೊಳಗನರಿಯಲಿಕೆ-
‘ಬೆಳಕಳಿದ ಕಣ್ಗೆ ತಿಂಗಳನು ತಿಳಿಯಲಿಕೆ-
‘ಎಂತಾಗುವುದು?’ ಎಂಬ ಕಂಡುಂಡ ಮಾತು
ಇಂತೆನಗೆ ತಿಳಿದು ಮನದಾ ಮುಸುಕು ಹೋಯ್ತು.

ದೂರವಿಹ ನನ್ನಿನಿಯನೂರ ದಿಕ್ಕಿನ ಮುಗಿಲು
ಏರಿ ನನ್ನಯ ಬಳಿಯ ಸಾರಿ ಬರೆ ಬಾನಿನೊಳು,
ನನ್ನವುಗಳೆಂದು ನೇಹದ ನೆಟ್ಟ ನೋಟದಲಿ
ಮುಗಿಲ ನೋಡುತ ನಿಲುವೆ ಹಲವು ಹಾರಯಿಸುತಲಿ;
ದೊರೆಯಿರುವ ದೆಸೆಯಿಂದ ಹಕ್ಕಿಗಳು ಹಾರಿ
ಬರುತಿರಲು, ಹರುಷದೊಳು ನವಿರುಗಳು ನಿಮಿರಿ
ನನ್ನ ನಂಟುಗಳೆಂದು ನೆನೆವೆನವುಗಳನು,
ನನ್ನಾತನೊಸಗೆಯನು ಕೇಳಲೆಳಸುವೆನು.

ಮೆಲುಗಾಳಿಯೆ ಇರಲಿ, ಬಲುಗಾಳಿಯೇ ಇರಲಿ,
ಗೆಳೆಯನಿಹ ಕಡೆಯಿಂದ ಸುಳಿದು ಒರೆ-ಮೋಹದಲಿ
ತಿಳಿಯುವೆನು ನಾ ತೀರ ಬಳಿಯಾಪ್ತನೆಂದದನು-
ತಿಳುಹಿಸಲು ನನ್ನೆದೆಯ ಒಳಮಾತನೆಲ್ಲವನು
ನಾಲಗೆಯು ನಲಿಯುವುದು, ಮನವು ಕುಣಿಯುವುದು
ಕೇಳಲಾತನ ಕತೆಯ ಕಿವಿಯು ಕೋರುವುದು,
ಹೀಗೆನ್ನ ನಾಡಿಸುವುದಾವುದದು ಹುಚ್ಚೋ..?
ಆಗದಿರಲಿನಿಯನಲ್ಲಿರುವೆದೆಯ ನಚ್ಚೋ…?

ಇನಿಯನನು ನೋಡಿ ನುಡಿಸಿದ ಮಂದಿಯೆಲ್ಲರನು
ಮನೆಯವರೆ ಎಂದು ನಾ ಮನ್ನಿಸುವೆನವರನ್ನು
ಮನದನ್ನನಾ ರೂಪುಗುಣದ ಬಣ್ಣನೆಯನ್ನು
ನನಗೊರೆಯೆ ನನ್ನ ನಾನೇ ಮರೆತು ಕೇಳುವೆನು.
ಎನಿತೊ ಜನರಿಲ್ಲವೇ ಮತ್ತೆ ನೆರೆಗಳೊಳು ?
ಎನಿಸುವರು ನನಗವರು ಬರಡುಬೊಂಬೆಯೊಲು;
ಮಾತಿಲ್ಲದುವನೆಲ್ಲ ಮಾತನಾಡಿಸುವೆ,
ಮಾತನಾಡುವರಲ್ಲಿ ಮಗುವಡೆದಿರುವೆ.

ಜಡವಸ್ತುಗಳನ್ನು ಜೀವಿಗಳಂತೆ ಕಾಣಿಸುವ
ನಡೆನುಡಿವ ಜೀವಿಗಳ ಜಡಗಳಂತಾಗಿಸುವ
ಅಗಲಿಕೆಯೆ, ನಿನ್ನ ಗಲಗಳೆಯುವವರಾರಿಹರು?
ಬಗೆಯೊಲವೆ ನಿನ್ನ ನೆಲೆ ತಿಳಿದವರದಾರು ?
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...