Home / ಲೇಖನ / ಪುಸ್ತಕ / ಮೌನದೊಳಗೊಂದು ಅಂತರ್‍ಧಾನ – ಮುನ್ನುಡಿ

ಮೌನದೊಳಗೊಂದು ಅಂತರ್‍ಧಾನ – ಮುನ್ನುಡಿ

ಮೊದಮೊದಲು ಕವಿತೆಗಳನ್ನು ಮಾತ್ರ ಬರೆಯುತ್ತಿದ್ದೆ. ಆದರೆ ಕ್ರಮೇಣ ಕತೆಯ ಕಡೆ ನನಗರಿವಿಲ್ಲದೇ ನಡೆದ ನನ್ನ ನಡಿಗೆ ಇಂದು ಸಂಕಲನವೊಂದನ್ನು ತರುವಷ್ಟರ ಮಟ್ಟಿಗೆ ಬಂದಿದೆ. ಕತೆಗಳು ನನ್ನೊಳಗೆ ಹೊರಗಿಂದ ಬಂದು ಜೀವ ತಳೆಯುವವೋ ಅಥವಾ ಈ ಮೊದಲೇ ಅವು ಗಟ್ಟಿ ಬೇರೂರಿ ನೀರು ಮತ್ತು ಮಣ್ಣಿಗಾಗಿ ಕಾಯುತ್ತಿದ್ದವೋ ಗೊತ್ತಿಲ್ಲ. ಕವಿತೆ ಬರೆಯುವಾಗ ನಡೆಸುವ ಸಣ್ಣ ಸಣ್ಣ ಮರು ತಿದ್ದುವಿಕೆಯನ್ನು ಕತೆಯಲ್ಲಿ ಮಾತ್ರ ಮಾಡುವುದಿಲ್ಲ.

ಈ ಸಂಕಲನದಲ್ಲಿ ಒಟ್ಟು ಹನ್ನೆರಡು ಕತೆಗಳಿವೆ. ಮನಸ್ಸಿನ ಅಂತರ್ಗತ ಒಳಜಗತ್ತು ಮತ್ತು ಅದು ಹುದುಗಿಸಿಕೊಂಡಿರುವ, ಅದುಮಿಕೊಂಡಿರುವ, ಕೆಲವು ಬಾರಿ ಸ್ವತಃ ಅರ್ಥೈಸಲಾಗದ ವಿಚಾರಗಳು, ಭಾವಗಳು ಸಂವೇದನೆಗಳನ್ನು ಸೃಷ್ಟಿಸುತ್ತಲೇ, ಅಕ್ಷರಗಳಾಗಿ ಮೂಡಿ ವ್ಯಕ್ತವಾಗಿಯೂ, ಅವ್ಯಕ್ತವಾಗುಳಿಯುತ್ತವೆ. ಒಬ್ಬ ವ್ಯಕ್ತಿಯ ಒಂದಿಡೀ ವ್ಯಕ್ತಿತ್ವವೆಂದರೆ ತನ್ನ ಸ್ವಂತ ಅನುಭವ ಮತ್ತು ಪರರ ಅನುಭವಗಳಿಂದ ಪಡೆದ ಜ್ಞಾನ. ಖುಷಿ, ಸಂತೋಷ, ಬಂಧಗಳಲ್ಲಿಯ ಗಾಢತೆ, ನೋವು, ದುಃಖಗಳು, ಪಡೆದುಕೊಂಡ ಹೆಮ್ಮೆ, ಕಳೆದುಕೊಳ್ಳುವ ಭಯ, ಕಾಡುವ ಅಂತಃಪ್ರಜ್ಞೆ, ಸಂಬಂಧಗಳಲ್ಲಿಯ ಗೋಜಲು, ಇವೆಲ್ಲವೂ ನನ್ನ ನಿತ್ಯ ಕಾಡುವ ಸಂಗತಿಗಳು. ಹಾಗಾಗಿ ನನಗೆ ಬದುಕನ್ನು ಬಿಟ್ಟು, ಬರೆಯಲಾಗಲೇ ಇಲ್ಲ. ಕಾಲ್ಪನಿಕತೆಯ ನೆಲೆಯನ್ನು ಸೃಷ್ಟಿಸಿಕೊಂಡಷ್ಟು ಕತೆಗಳು ಉದುರಿಬಿದ್ದವು.

ಮುನ್ನುಡಿಯಲ್ಲಿ ನಾಡಿನ ಅತಿ ಪ್ರಮುಖ ಕತೆಗಾರರೆಂದು ಗುರುತಿಸಿಕೊಂಡಿರುವ ಶ್ರೀಧರ ಬಳಗಾರ ಸರ್ ಹೇಳಿದಂತೆ ಸ್ತ್ರೀಯರಿಗೇ ವಿಶಿಷ್ಟವಾದ ಅನುಭವ ಮತ್ತು ಹೊಸ ಸಂವೇದನೆಯಿಂದ ಬರೆಯುತ್ತಿರುವ ಜಾಗ್ರತ ಲೇಖಕಿಯರು ’ಮಹಿಳಾ ಸಾಹಿತ್ಯ’ ಎಂಬ ರಿಯಾಯಿತಿಯನ್ನೊ ಮೀಸಲಾತಿಯನ್ನೊ ಸಂಪೂರ್ಣವಾಗಿ ನಿರಾಕರಿಸಿದ್ದಾರೆ ಈ ವಿಚಾರವಾಗಿ ಬರಹಗಾರ್ತಿಯರಾದ ಮಹಿಳೆಯರ ಬರಹಗಳು, ಕತೆ, ಕವನಗಳು ಮೂಡಿಬರುತ್ತಿರುವುದು ಖುಷಿಯ ಸಂಗತಿ. ಗಂಡು ಹೆಣ್ಣಿನ ಅನುಭವಗಳು, ಸಂವೇದನೆಗಳು ಭಿನ್ನವಾಗಿರಬಹುದೇ ಹೊರತು, ಆ ಅನುಭವಗಳು ಸಂವೇದನೆಗಳು ಕಟ್ಟಿಕೊಡುವ ಅಕ್ಷರದ ಬಿಂಬಗಳಲ್ಲಿ ಭಿನ್ನತೆಗಳಿಲ್ಲ. ಸಾಹಿತ್ಯ ಜಗತ್ತು ಈ ಸೂಕ್ಷ್ಮತೆಯನ್ನು ಎತ್ತಿ ಹಿಡಿಯಲಿ ಎಂದು ಆಶಿಸುವೆ. ಇನ್ನು ಬಾಲ್ಯದ ಗಾಢ ಅನುಭವಗಳ ಜೊತೆ ಬೆಸೆದುಕೊಂಡಿರುವ ಆಕಾಶದ ನಿರಾಳತೆ, ಪ್ರೌಢ ಮನಸ್ಸಿನ ಪರಿಪಾಕದ ನೆಲೆಯಲ್ಲಿ ಮರೆಮಾಚುವ ನಿಜದ ಮುಖಗಳನ್ನು ಹುಡುಕುತ್ತಾ, ಅದೆಷ್ಟೋ ಭಾವಗಳನ್ನು , ಮುಖಗಳನ್ನು ತಟ್ಟುವ ನನ್ನ ಸಣ್ಣ ಪ್ರಯತ್ನಕ್ಕೆ ನಿಮ್ಮ ಬೆಂಬಲ ಸದಾ ಇರಲೆಂದು ಬಯಸುತ್ತೇನೆ.

ಮಿತಭಾಷಿ, ಸ್ವಂಯಮದ ನಡೆನುಡಿಯವರೂ, ತೃಪ್ತ ಭಾವಕ್ಕೆ ಇನ್ನೊಂದು ಹೆಸರಂತಿರುವ ನಾಡಿನ ಪ್ರಮುಖ ಕತೆಗಾರರಾದ ಶ್ರೀಧರ ಬಳಗಾರ ನನ್ನ ಕತೆಗಳಿಗೆ ಬೆಂಬಲ ನೀಡಿ, ಮುನ್ನುಡಿ ಬರೆದು ಕೊಟ್ಟು ಪ್ರೋತ್ಸಾಹಿಸಿದ್ದಾರೆ. ಇವರಿಗೆ ನನ್ನ ಮೊದಲ ವಂದನೆಗಳು.

ಈ ಸಂಕಲನದ ಹಸ್ತ ಪ್ರತಿಗೆ ಶ್ರೀಮತಿ ಸುಶೀಲಾ ಸೀತಾರಾಮ ಶೆಟ್ಟಿ ಸ್ಮಾರಕ ಕಥಾ ಬಹುಮಾನ ನೀಡಿ, ಪ್ರೋತ್ಸಾಹಿಸಿದ ಜಗಜ್ಯೋತಿ ಕಲಾವೃಂದ ಡೊಂಬಿವಿಲಿ, ಮುಂಬಯಿ ಇವರಿಗೆ ಆಭಾರಿಯಾಗಿದ್ದೇನೆ.

ಕತೆಗಳನ್ನು ಕಳಿಸಿದ ಕೆಲವೇ ದಿನಗಳಲ್ಲಿ ಮುದ್ರಿಸುವ ಭರವಸೆಕೊಟ್ಟು ಅತೀ ಕಡಿಮೆ ಅವಧಿಯಲ್ಲಿ ಪುಸ್ತಕವನ್ನು ಸುಂದರವಾಗಿ ಮುದ್ರಿಸಿಕೊಟ್ಟ ಬೆಂಗಳೂರಿನ ನಿವೇದಿತ ಪ್ರಕಾಶನದ ಉಮೇಶ ನಾಗಮಂಗಲ ಇವರಿಗೆ ನಾನು ಋಣಿ. ಮುಖಪುಟ ವಿನ್ಯಾಸ ಮಾಡಿದ ಅಜಿತ್ ಕೌಂಡಿಣ್ಯ ಶಿಡ್ಲಘಟ್ಟ ಇವರಿಗೆ ಕೃತಜ್ಞತೆಗಳು ನನ್ನ ಕತೆಗಳನ್ನು ಪ್ರಕಟಿಸಿ ಬೆಂಬಲ ನೀಡಿದ ತುಷಾರ, ಪ್ರಜಾವಾಣಿ, ಹೊಸ ದಿಗಂತ, ವಿಜಯಕರ್ನಾಟಕ, ಕೆಂಡಸಂಪಿಗೆ, ಅವಧಿ, ಬುಕ್ ಬ್ರಹ್ಮ, ಕರಾವಳಿ ಮುಂಜಾವು ಪತ್ರಿಕೆಗಳಿಗೂ, ಆಕಾಶವಾಣಿ ಧಾರವಾಡ ಕೇಂದ್ರಕ್ಕೂ ನನ್ನ ಕತೆಗಳನ್ನು ಮೆಚ್ಚಿ ಬೆಂಬಲಿಸಿದ ಎಲ್ಲ ಸ್ನೇಹಿತವರ್ಗಕ್ಕೂ, ಕುಟುಂಬವರ್ಗಕ್ಕೂ..

ಪ್ರೀತಿಯ ವಂದನೆಗಳು
ನಾಗರೇಖಾ ಗಾಂವಕರ

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...