Home / ಕವನ / ಕವಿತೆ / ಹತ್ತವತಾರಗಳು ಆಗಿಹೋದರೂ

ಹತ್ತವತಾರಗಳು ಆಗಿಹೋದರೂ

ಹತ್ತವತಾರಗಳು ಆಗಿಹೋದರೂ
ಅವತಾರಗಳಿನ್ನೂ ಕೊನೆಗೊಂಡಿಲ್ಲ
ಶತಕೋಟಿ ದೇವರುಗಳು ಬಂದು ಹೋದರೂ
ದೇವರುಗಳಿನ್ನೂ ಮುಗಿದಿಲ್ಲ

ಅವತಾರದವತಾರ ಇಲ್ಲಿ ಪ್ರತಿಯೊಬ್ಬನೂ
ಯಾವ ಯಾವುದೋ ವರಾತ
ಆರಂಭಿಸಿದ ಸ್ವಯಂಚಾಲಿತ ಲೀಲೆಯ
ನಿಲ್ಲಿಸಲು ತಾನೆ ಮರೆತ

ಯುಗದ ಗಾಲಿಗಳ ಮೇಲೆ ಉರುಳುತ್ತ
ತೇರು ಬರುವುದೇನು
ಕಳೆಗಿಡ ಬೆಳೆಗಿಡ ಎಂದಿಲ್ಲದೆ ಸವರುತ್ತ
ಯಂತ್ರ ಹರಿವುದೇನು

ತೋರಣ ಕಮಾನುಗಳ
ನಿಲ್ಲಿಸುವುದೇನು
ಗಜಗಾತ್ರದ ಪಟಗಳು
ಹೂಮಾಲೆ ಕಾಮಾಲೆ
ಅಲಂಕರಿಸುವುದೇನು
ಒಂದೊಂದೂ ಕಾಮಧೇನು

ಕೆಲವೊಮ್ಮೆ ಕೆಲ ವೇಷ
ಕೆಲವೊಮ್ಮೆ ಕೆಲ ಪವಾಡ
ಕೆಲವೊಮ್ಮೆ ಸಾಮಾನ್ಯತೆಯೆ ವಿಶೇಷ
ಮುಗಿದರೂ ಮುಗಿಯದ ಯಾತರದೊ ಶೇಷ

ಗತವ ಹೊಸದಾಗಿಸುವ ಸ್ವಗತ
ತೊಟ್ಟ ಬಾಣವ ತೊಡದ ಶಪಥ
ಮುರಿದು ಕಟ್ಟುವ ಛಲ
ಕಟ್ಟಿದ್ದ ಮುರಿಯುವ ಬಲ

ನಳನಳಿಸುವೆಲೆಗಳೇ ಗಲಗಲಿಸಿ ಬೀಳುವುವೆ
ಇಂದು ಕೇಳಿದಾಕ್ರಂದನವೆ ಹಿಂದೆಯೂ ಕೇಳಿಸಿತೆ
ಅದು ಮುಂದೆಯೂ ಕೇಳುವುದೆ
ಅಥವ ಮುಂದಿನದು ಬೇರೆಯೆ

ಮುಂದಿನ ತಿರುವೇ ನಮ್ಮ ತಿರುವು
ಅಲ್ಲಿ ನಾವು ಮರೆಯಾಗುವೆವು
ಉಳಿದವರಿಗೇನು ಅರಿವು ನಮ್ಮ ಭಯವು
ಕತೆಯೊಂದೆ ಉಳಿಯುವುದು ಹೋದವರ ನೆರಳಂತೆ
ಆಮೇಲೆ ಅದುವೂ ಮಾಯವಾಗುವುದು

ಎಷ್ಟವತಾರಗಳು ಕೊನೆಗೊಂಡರೂ
ಮತ್ತವತಾರಗಳು ಬಂದೆ ಬರುವುವು
*****

Tagged:

Leave a Reply

Your email address will not be published. Required fields are marked *

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...